Thursday, October 6, 2011

ಅಗಲಿದ ಚೇತನಗಳಿಗೆ ನಮನ


ಬೆಳಗ್ಗೆ ಎಂದಿನಂತೆ fb ಗೆ ಬರ್ತಿದ್ದಂತೆಯೇ ಕಂಡ ಮೊದಲ ಪೋಸ್ಟು.. "ಮತ್ತೂರು ಕೃಷ್ಣಮೂರ್ತಿಗಳು,ಸ್ಟೀಪ್ ಜಾಬ್ಸ್ ಆತ್ಮಕ್ಕೆ ಶಾಂತಿ ಸಿಗಲಿ.." ವಿಜಯದಶಮಿಯ ದಿನವೆಂದರೆ ಕೆಟ್ಟದ್ದರ ಒಳ್ಳೆಯದರ ವಿಜಯದ ಸಂಕೇತವೆಂಸು ಪ್ರತೀತಿ.ಆದರೆ ಅಂದೇ ಇಬ್ಬರು ಅಪ್ರತಿಮ ಸಾಧಕರ ಸಾವಿನ ಸುದ್ದಿ ಕೇಳುವಂತಾಯಿತಲ್ಲ ವಿಧಿಯೇ ಅನಿಸ್ತು.. ಸುದ್ದಿ ಸುಳ್ಳಾಗಿರಬಹುದೇ ಅನ್ನೋ ಮನದ ಮೂಲೆಯ ಆಸೆಯಿಂದ ಒಮ್ಮೇ ನೆಟ್ಟಲ್ಲಿ ಹುಡುಕಿದೆ.. ಅದರ ತುಂಬೆಲ್ಲಾ ಸ್ಟೀವ್ ಜಾಬ್ಸನದೇ ಸುದ್ದಿ.. ಮತ್ತೂರು ಕೃಷ್ಣಮೂರ್ತಿಗಳ ಸುದ್ದಿ ತಿಳಿಯಲು ಮತ್ತೂರು ಗೆಳೆಯನಿಗೆ ಸಂದೇಶ ಕಳಿಸಾಯಿತು..ಎಲ್ಲೆಲ್ಲೂ ಬರೀ ಬೇಸರದ ಪೋಸ್ಟುಗಳು.. ಯಾಹೂ, ibn, times news ಹೀಗೆ ಎಲ್ಲೆಲ್ಲೂ ಸ್ಟೀವ್ ಜಾಬ್ಸ್ ಮರಣದ ವಾರ್ತೆ, fb, google + ಹೀಗೆ ಸಾಮಾಜಿಕ ತಾಣಗಳಲ್ಲೂ ಅವರಿಗೆ ನೆನಪಿನ ಕಂಬನಿ, ಫೋಟೋಗಳು, ವೀಡಿಯೋಗಳು,ಕೊಂಡಿಗಳು, ಅವರ ppt ಗಳು, ನುಡಿಮುತ್ತುಗಳು.. ಹೀಗೆ ಏನುಂಟು.. ಏನಿಲ್ಲ.. ಆ ಎರಡೂ ಮಹಾಚೇತನಗಳಿಗೆ ನನ್ನದೂ ಒಂದು ಈ ಮೂಲಕ ಪದಾಂಜಲಿ

ನೆನಪುಗಳು ಹಿಂದೆ ಜೀಕ್ತಾ ಜೀಕ್ತಾ ಸುಮಾರು ಎರಡೂವರೆ ವರ್ಷದಷ್ಟು ಹಿಂದಕ್ಕೆ ಹೋಗಿವೆ. ವರ್ಷ ppt ಮಾಡೋದು ಹೇಗೆ ಅಂತ ಸ್ಟೀವ್ ಜಾಬ್ಸನ ನೋಡಿ ಕಲೀರಿ ಅಂತ ನಮ್ಮ ಕಾಲೇಜಿನ ಪ್ರೊಫೆಸರ್ ಹೇಳಿದ್ರು . ದೊಡ್ಡ ಪರದೆ, ಅದರ ಮುಂದೆ ಕಿರಿದಾದ ಮನುಷ್ಯ. ಪರದೆಗೆ ಹೊಂದೋ ಕಪ್ಪು ಬಣ್ಣದ ಬಟ್ಟೆ.. ಪರದೆಯ ಮೇಲೆ ಜಾಬ್ಸ್ ಹೇಳುತ್ತಿದ್ದಂತೆಯೇ ಮೂಡುತ್ತಿದ್ದ ದೃಶ್ಯಗಳು.. ವಾಕ್ಯಗಳು.. ಅದೂ ತೀರಾ ಬೇಕಾಗುವಂತದ್ದು ಮಾತ್ರ.. ಆಪಲ್ ಅಂತ ಜಾಬ್ಸ್ ಪರದೆಯ ಮುಂದೆ ಕೈನೀಡಿದರೆ ಅವನ ಕೈಮೇಲೆ ನಿಖರವಾಗಿ ಬಂದು ಕೂರುತ್ತಿದ್ದ ಸೇಬಿನ ಚಿತ್ರ.. ಎಂತಾ ನಿಖರತೆ, ಪ್ರತೀ ಸಲವೂ ಎಷ್ಟೊಂದು ಪೂರ್ವತಯಾರಿ.. ಎಲ್ಲವೂ ಮೇಳೈಸಿ ಅವನ ಪ್ರಸ್ತುತಿಯನ್ನು ನೋಡೋದು ಒಂದು ರಸಕಾವ್ಯದಂತೆ ಭಾಸವಾಗುತ್ತಿತ್ತು.. ಹಾಗೆ ನೋಡನೋಡುತ್ತಲೆ ನನ್ನ ಪಾಲಿಗೊಬ್ಬ ನಾಯಕನಾಗಿದ್ದ ಸ್ಟೀವ್ ಜಾಬ್ಸ್.



 
೧೯೫೫ ರಲ್ಲಿ ಜನಿಸಿದ ಸ್ಟೀವ್ ಜಾಬ್ಸ್ ಪ್ರಖ್ಯಾತರಾಗಿದ್ದು ಅವರ ವಿಶಿಷ್ಟ ಪ್ರಸ್ತುತಪಡಿಸುವ ಶೈಲಿಗೆ, ಅವರು ಸ್ಥಾಪಿಸಿದ ಆಪಲ್ ಗೆ. ಐಪೋಡ್, ಐಪ್ಯಾಡ್,, ಐಟ್ಯೂನ್, ಆಪಲ್ ಆಪರೇಟಿಂಗ್ ಸಿಸ್ಟಮ್, ಆಪಲ್ ಮಾಕ್ ಕಂಪ್ಯೂಟರಗಳು, ನೋಟ್ ಬುಕ್.. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಉಳ್ಳವರ ಆಸ್ತಿ, ಸಂಶೋಧಕರ ಸಹಾಯಕ ಅಷ್ಟೇ ಆಗಿದ್ದ ಕಂಪ್ಯೂಟರ್ ತಂತ್ರಜ್ನಾನವನ್ನು ಜನಸಾಮಾನ್ಯರ ಬಳಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಆಪಲ್ ಹೆಸರು ಕೇಳಿರದ (ಯುವ)ಕಂಪ್ಯೂಟರ್ ಬಳಕೆದಾರರೇ ಇಲ್ಲವೆಂದರೆ ಅತಿಶಯೋಕ್ತಿಯಾಗಲಾರದೇನೊ ಅನ್ನುವಷ್ಟರ ಮಟ್ಟಿಗೆ ನಮಗೆಲ್ಲಾ ಆಪಲ್ ಹವಾ ಹಬ್ಬಿಸಿದ ಮಹಾಶಯ ಈ ಸ್ಟೀವ್ ಜಾಬ್ಸ್. ಇನ್ನು ಈತನ ಪ್ರಸ್ತುತಪಡಿಸುವ ಶೈಲಿ(presentation style) ಗೆ ನಾನಂತೂ ಮರುಳಾಗಿ ಹೋಗಿದ್ದೆ.ಅವನ ಬಗ್ಗೆ ಹಲವಾರು ದಂತಕಥೆಗಳಿವೆ.ಜೀವನದ ರೀತಿಯೂ ಸ್ಪೂರ್ತಿದಾಯಕ. ಪ್ರಸ್ತುತಿ ಅಂದ ಹಾಗೆ ಅವರ ೧೯೭೪ರ ಆಪಲನ್ನು ಗ್ರಾಹಕರಿಗೆ ಪರಿಚಯಿಸಿದ ರೀತಿಯ ಬಗ್ಗೆ ಓದಿದ್ದು ನೆನಪಾಗುತ್ತಿದೆ.. ಜನವರಿ ೨೪, ೧೯೭೪.. ದೊಡ್ಡ ವೇದಿಕೆ. ಮಧ್ಯೆ ನಿಂತ ಸ್ಟೀವ್ ಜಾಬ್ಸ್. ತನ್ನ ಆಪಲ್ ಕಂಪ್ಯೂಟರ್ ಇಂಕ್ ಅನ್ನು ಅವರಿಗೆ ಪರಿಚಯಿಸೋದು ಅವನ ಉದ್ದೇಶ. ಅವನು ತಂದಿದ್ದು ಒಂದು ಸಣ್ಣ ಚೀಲ.. ನೀವು ನೋಡಿದ್ದನ್ನು ನಂಬಲೇಬೇಕು ಇಂದು ಎಂದ ಜಾಬ್ಸ್..ಅಲ್ಲದೇ ಇದರ(ಕಂಪ್ಯೂಟರ್ ನ) ಶಕ್ತಿಯೆಲ್ಲವೂ ಈಗಿನ ibm ಕಂಪ್ಯೂಟರ್ ಡಬ್ಬಿಯ ೧/೩ ರಷ್ಟು ಸಣ್ಣ ಸ್ಥಳದಲ್ಲಿ. ಹೇಳಿದ್ದು ಸಾಕು ನೀವೆ ನೋಡುವಿರಂತೆ.. ಮುಂದೆ ಪರದೆಯ ಮೇಲೆ ಮೂಡೋ ಚಿತ್ರಗಳೆಲ್ಲಾ ಚೀಲದೊಳಗೆ ಇರೋದ್ರಿಂದ ಆಗುತ್ತೆ ಅಂದ..ಸರಿ, ಅಲ್ಲೇ ಪಕ್ಕದಲ್ಲಿಟ್ಟಿದ್ದ ಚೀಲದಿಂದ ತಾನು ಪ್ರಸ್ತುತ ಪಡಿಸಬೇಕಾಗಿದ್ದ ಪೆಟ್ಟಿಗೆ ತೆರೀತಾನೆ. ಅದಕ್ಕೊಂದು ಡಿಸ್ಕ್ ಹಾಕಿ(ಆಗೆಲ್ಲಾ ಈಗಿನಂತೆ ಪೆನ್ ಡ್ರೈವು, ಪ್ಲಾಷ್ ಡ್ರೈವುಗಳು ಇರಲಿಲ್ಲವಲ್ಲ..)ಅದನ್ನು ಚಾಲು ಮಾಡಿದ. "chariots of fire" ಚಿತ್ರದ ದೃಶ್ಯಗಳು ಮೂಡಲಾರಂಭಿಸಿತು.. spread sheet ನಲ್ಲಿ ಕಟ್ಟಡಗಳ ದೃಶ್ಯಗಳು, ಚೆದುರಂಗದ ಆಟ, ಮಾಕ್ ಬಗ್ಗೆ ಕನಸು ಕಾಣ್ತಿರೋ ಸ್ಟೀವ್ ಜಾಬ್ಸನದೇ ಚಿತ್ರಗಳು ಮೂಡಲಾರಂಭಿಸಿತು.. ಆ ಕಾಲಕ್ಕೆ ಆ ಸಣ್ಣ ಯಂತ್ರದ ಅಷ್ಟೆಲ್ಲಾ ಕೆಲಸಗಳು ಪವಾಡದಂತೆಯೇ ಕಂಡಿರಲು ಸಾಕು.. ಅದು ಇಲ್ಲಿಗೇ ಮುಗಿಯಲಿಲ್ಲ. ಆ ಕಂಪ್ಯೂಟರ್ ಮಾತನಾಡಲಾರಂಭಿಸಿತು.. "ಹಲೋ, ನಾನು ಮಾಸಿಂಟೋಶ್.. (ಮ್ಯಾಕ್). ಆ ಚೀಲದಿಂದ ಹೊರಬರೋಕೆ ಖುಶಿ ಆಗ್ತಾ ಇದೆ. ನನ್ನ ತಂದೆಗೆ ಸಮಾನನಾದ ಈ ವ್ಯಕ್ತಿ, ಸ್ಟೀವ್ ಜಾಬ್ಸ್ ನನ್ನ ನಿಮಗೆ ಪರಿಚಯಿಸಲು ಹೆಮ್ಮೆ ಆಗ್ತಾ ಇದೆ..".. ಪ್ರಚಂಡ ಕರತಾಡನ.. ಹಲ್ಲುಬಿಟ್ಟು ನಗದೇ ಇರಲು ಅವನು ಎಷ್ಟು ಪ್ರಯತ್ನ ಪಟ್ಟರೂ ವಿಜಯದ ಆ ಮಂದಹಾಸ ತುಟಿ ದಾಟಿಯೇ ಬಿಟ್ಟಿತು.. ಭವಿಷ್ಯಕ್ಕೆ ಹೊಸ ರೂಪ ಕೊಡೋ ನಾಯಕನ ಆಗಮನದ ಸಂತಸದಲ್ಲಿ.. 



 ಕಂಪೆನಿಯಂದರೆ ಅದು ಒಬ್ಬ ಸೂಪರಮ್ಯಾನ್ ಕಟ್ಟಿ ಬೆಳೆಸಿ, ಎಲ್ಲ ಕೆಲಸ ಪೂರೈಸೋ ಮ್ಯಾಜಿಕ್ ಅಲ್ಲ. ಅಲ್ಲಿ ಸಾವಿರಾರು ಜನರ ಶ್ರಮ ಇದೆ. ಆದರೆ ibm, microsoft ಗಳ ಮಧ್ಯೆ ತನ್ನದೇ ಒಂದು ಕಂಪೆನಿ ಕಟ್ಟಿ. ಬೆಳೆಸಿ ಮೊದಲ ಸ್ಥಾನಕ್ಕೆ ಏರಿಸುವುದು ಹುಡುಗಾಟವಲ್ಲ. ನಮಗೇನು ಬೇಕೆಂಬುದನ್ನು ನಮಗಿಂತ ಮೊದಲೇ ಅರಿತ ಮಹಾನುಭಾವ ಜಾಬ್ಸ್.. ಕಿವಿಯಿಂದ ವೈರು ಹರಿದುಬರೋದು ಒಂದು ಫ್ಯಾಷನ್ ಆಗತ್ತೆ ಅಂತ ಈಗ ೨೦ ವರ್ಷದ ಹಿಂದೆ ಊಹಿಸೊಕ್ಕೆ ಸಾಧ್ಯನಾ? ಒಮ್ಮೆ ಆಪಲನಿಂದ ಹೊರಬಂದಿದ್ದ ಜಾಬ್ಸ ಬರುವಾಗ ಹೊಸ ಕನಸು ತಂದರು. ಕೇವಲ ತಂತ್ರಜ್ನಾನಕ್ಕೆ ಸೀಮಿತವಾಗಿದ್ದ ಅದನ್ನು media ಕ್ಕೂ ವಿಸ್ತರಿಸಿದರು. ಮೊದಲು ಕಂಪೆನಿ , ಆಮೇಲೆ ನಾನು ಅನ್ನೋ ಅವರ ಮನೋಭಾವ ಆದರ್ಶಪ್ರಾಯ. ಅದಕ್ಕೇ ಅವರ ppt ದೊಡ್ಡದಾಗಿ ಪರದೆಯ ಮುಂದೆ ಇರುತ್ತೆ, ಮುಂದಿರೋ ಜಾಬ್ಸ್ ವಾಮನಮೂರ್ತಿಯಂತೆ.. ಕಿತ್ತು ತಿನ್ನೋ ಕ್ಯಾನ್ಸರ್ ಜಾಬ್ಸನ ಜೀವನವನ್ನು ಕೆಲ ವರ್ಷಗಳ ಹಿಂದೆಯೇ ಕಿತ್ತು ತಿನ್ನೋದರಲ್ಲಿತ್ತು.. ಅದರ ವಿರುದ್ದ ಹೋರಾಡಿ ಇಷ್ಟು ವರ್ಷ ಜಯಿಸಿದ ಹೋರಾಟಗಾರ ಆತ. . ಕೊನೆಗೂ ವಿಧಿ ಬರಹವನ್ನು ಮೀರಲಾಗಲಿಲ್ಲ.. ಅದೇ ಕ್ಯಾನ್ಸರ್ ಅವರನ್ನು ಬಲಿ ತೆಗೆದುಕೊಂಡಿತು.. ಭಾರತದ ಮೂಲೆಯಲ್ಲಿರುವ ನಮ್ಮಂತಹ ಯುವಕರ ಬಗೆಗೆ ನಿಮಗೆ ಗೊತ್ತಿರದೇ ಇರಬಹುದು ಜಾಬ್ಸ್.. ಆದರೆ ನಿಮ್ಮ ಬಗ್ಗೆ ನಮಗೆ ಬಹಳ ಗೊತ್ತು.. ಹಲವು ಸ್ಪೂರ್ತಿ ನೀಡಿದ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ಭಗವಂತನಲ್ಲಿ ಬೇಡುತ್ತೇನೆ.. ಸ್ಟೀವ್ ಜಾಬ್ಸ್ ಬಗ್ಗೆ ಶ್ರದ್ದಾಂಜಲಿ ಕಳಿಸುವವರು rememberingsteavejobs@apple.com ಗೆ ಕಳಿಸಬಹುದು ಅಂತ ಆಪಲ್ ತನ್ನ ವೆಬ್ ಸೈಟಲ್ಲಿ ಹೇಳಿದೆ..
ಮತ್ತೂರು ಕೃಷ್ಣಮೂರ್ತಿಗಳು ಜ್ನಾನವೃದ್ದರು. ವಯೋವೃದ್ದರು. ಅವರ ಬಗ್ಗೆ ಮೊದಲೇ ಬರೆದರೆ ಮುಂದಿನದು ಸ್ವಾರಸ್ಯ ಕಳೆದುಕೊಳ್ಳಬಹುದು ಅಂತ ಆಮೇಲೆ ಬರೆದಿದ್ದೇನೆ.. ತಪ್ಪಾಗಿದ್ದರೆ ಕ್ಷಮಿಸಿ. ಇವರು ಪ್ರಖ್ಯಾತ ಗಮಕ ಗಾಯನ ವಿದ್ವಾಂಸರು, ಬೆಂಗಳೂರಿನ ಭಾರತೀಯ ವಿದ್ಯಾಭವನದ ಮುಖ್ಯಸ್ಥರಾಗಿದ್ದವರು.ಪದ್ಮಶ್ರೀಯಂತಹ ಪ್ರಶಸ್ತಿ ಪುರಸ್ಕೃತರು.. ಇನ್ನು ಇನ್ನಿತರೆ ಬಿರುದು ಸನ್ಮಾನಗಳಿಗೆ ಲೆಕ್ಕವೇ ಇಲ್ಲ.. .ಅವರ ಕರ್ನಾಟಕ ಭಾಗವತ ಕಂಸವಧೆಯನ್ನು ಕೆಳಗಿನ ಕೊಂಡಿಯಲ್ಲಿ ತಾವು ವೀಕ್ಷಿಸಬಹುದು. www.youtube.com/watch?v=L-BqA9yp_kU.. ನಮ್ಮ ಶಿವಮೊಗ್ಗ ಜಿಲ್ಲೆಯವರೇ ಆದ ಇವರ ನಿಧನದಿಂದ ಗಮಕ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ಬಗ್ಗೆಯೂ ಎಷ್ಟು ಬರೆದರೂ ಕಡಿಮೆಯೇ.. ನಿಮ್ಮ ಅಪ್ರತಿಮ ಸಾಧನೆಗೆ ಮತ್ತೊಮ್ಮೆ ನಮನಗಳು ಗುರುವರ್ಯ..
 

No comments:

Post a Comment