Saturday, August 23, 2014

ಭವ, ಸಂಸ್ಕಾರಗಳ ಸಾಗರದಲ್ಲಿ ಮುಳುಗಿದ ಮೂರ್ತಿಗಳ ಬಗ್ಗೆ..

ಕೇರಳದಲ್ಲಿ ೧೦೦% ಶೈಕ್ಷಣಿಕ ಮಟ್ಟ ತರಲು ಶ್ರಮಿಸಿದ ವಿಶ್ವವಿದ್ಯಾಲಯದ ಆಗಿನ ಕುಲಪತಿಗಳಾಗಿದ್ದೋರು ಯಾರು ಗೊತ್ತೆ ? ನಿನ್ನೆ ಅಸ್ತಂಗಿಸಿದ ಯು.ಆರ್ ! ಸಾಗರದ ನೀನಾಸಂಗೆ ನಾಟಕ ನೋಡಲು ಹೋದಾಗ  ಯು.ಆರ್ ಸಿಕ್ಕಿದ್ರು ಕಣೋ ಅಂತ ಪ್ರಪಂಚವೇ ಕೈಗೆ ಸಿಕ್ಕಷ್ಟು ಖುಷಿ ಪಡುತ್ತಿದ್ದ ನಮ್ಮೂರ ಜನರಿರಬಹುದು , ಮೈಸೂರಿನ ನನ್ನ ದೊಡ್ಡಪ್ಪನ ಕಾಲದಲ್ಲಾಗಿರಬಹುದು ಒಂದು ಹವಾ ಅಂತನೇ ಹಬ್ಬಿಸಿದವರು ಯು.ಆರ್. ಮೆಚ್ಚುಗೆ, ನಿರಾಕರಣಗಳೆನ್ನೋದನ್ನ ಸಾಹಿತ್ಯಿಕ ದೃಷ್ಟಿಯಲ್ಲಿಟ್ಟು , ತೀರಾ ವೈಯುಕ್ತಿಕವಾಗಿಸಿಕೊಳ್ಳದೇ ನೋಡಿದರೆ ಒಂಥರಾ ವಿಭಿನ್ನವಾಗೇ ಕಾಣಬಹುದಾದ ಕೃತಿಗಳು ಭವ ಮತ್ತು ಸಂಸ್ಕಾರ. ಕೃತಿಗಳಲ್ಲಿ ಇಷ್ಟವಾದೋರು ತುಘಲಕ್ ಬಗೆಗಿನ, ಟಿಪ್ಪುಸುಲ್ತಾನ್ ಬಗೆಗಿನ, ಕೆಂಪೇಗೌಡರಿಂದ ಇಂದಿನ ರಾಜಕಾರಣಿಗಳ ಬಗೆಗಿನ ತಮ್ಮ ವೈಯುಕ್ತಿಕ ನಿಲುವುಗಳಿಂದ ಅನಾವಶ್ಯಕ ವಿವಾದಗಳನ್ನು ಕಟ್ಟಿಕೊಂಡರೇ ? ಅವರಂತಹ ಮಹಾನ್ ವ್ಯಕ್ತಿಗಳ ಬಗ್ಗೆ ವಿಮರ್ಶಿಸುವಷ್ಟು ಓದಾಗಲಿ, ಅರಿವಾಗಲಿ ನನಗಂತೂ ಇಲ್ಲ.

ಹೂಂ. ಇನ್ನೊಂದಂಶ ಇಲ್ಲಿ. ಭೈರಪ್ಪನವರನ್ನ ಇಷ್ಟಪಡೋರು ಅನಂತಮೂರ್ತಿಗಳನ್ನ ದ್ವೇಷಿಸಬೇಕು ಅಥವಾ ಮೂರ್ತಿಗಳನ್ನ ಇಷ್ಟಪಡೋರು ಭೈರಪ್ಪನವರನ್ನ ತೆಗಳಬೇಕನ್ನೋ ನಿಲುವುಗಳು ಯಾಕೆ ಬರತ್ವೋ ಗೊತ್ತಿಲ್ಲ. ಇಬ್ಬರಲ್ಲೂ ಕೆಲವು ಕೃತಿಗಳು ಇಷ್ಟವಾಗಿವೆ. ಕೆಲವು ಬೇಸರ ತರಿಸಿವೆ. ನಿಲುವುಗಳು, ಸಂಘರ್ಷಗಳು ಅನ್ನೋದು ಸಾಹಿತ್ಯಿಕವಾಗಿರಲಿ. ಆ ಮೂಲಕ ಇನ್ನಷ್ಟು ಗಟ್ಟಿ ಕೃತಿಗಳು ಹೊರಬರಲೆಂಬ ಆಶಯವಷ್ಟೆ. ಅವರ ಬಗ್ಗೆ ವಿಮರ್ಶಿಸುವಷ್ಟು ದೊಡ್ಡವರು ನಾವಾಗಿರದಿದ್ದರೂ ಅವರ ಹೆಸರಲ್ಲಿ, ಅವರ ನಿಲುವುಗಳ ಹೆಸರಲ್ಲಿ ಜನ ಜನಗಳ ಮಧ್ಯೆ, ಮನ ಮನಗಳ ಮಧ್ಯೆ ಕಿತ್ತಾಟಗಳೇರ್ಪಡೋದನ್ನ ನೋಡೋಕೆ ಹಿಂಸೆಯಾಗುತ್ತೆ ಅಷ್ಟೆ :-(

ಆ ಪಂಥ, ಈ ಪಂಥಗಳೆಂಬ ಗೋಜಿಗೆ ಹೋಗದೇ ಬರೆದುಕೊಂಡು ಹೋದ ಪೂಚಂತೆ ಅವರಂತೆ ಇರಲು ಎಲ್ಲರಿಗೂ ಆಗದೇ ಇರಬಹುದು.. ಆದರೂ ಸಾಹಿತ್ಯಿಕ ವಿಭಿನ್ನ ನಿಲುವುಗಳನ್ನು ತಮ್ಮ ಕೃತಿಗಳಲ್ಲಿ ತೋರಿಸಿದರೆ ಚೆನ್ನವೋ ಅಥವಾ ಒಡೆದು ಹೋಗುತ್ತಿರುವ ಮನಗಳ ಮಧ್ಯೆ ಇನ್ನೊಂದಿಷ್ಟು ಪಂಥಗಳ ಗೋಡೆ ಕಟ್ಟಿ ಒಡೆದು ತಮ್ಮ ಗೆಲುವ ಮೆರೆಯೋದ್ರಲ್ಲಿ ಖುಷಿಪಡೋದ್ರಲ್ಲೋ ಗೊತ್ತಿಲ್ಲ. ವೈಚಾರಿಕತೆ, ವೈಜ್ನಾನಿಕತೆ ಅನ್ನೋದು ಸಾಮಾನ್ಯನೊಬ್ಬನಿಗೆ ಅರ್ಥವಾಗದಷ್ಟು ನಿಗೂಢವೇ ಆಗಿರಬೇಕಾ ? ಗಡ್ಡಬಿಟ್ಟು, ಹೆಗಲಿಗೊಂದು ಜೋಳಿಗೆ ತೊಟ್ಟು ಕಂಡದ್ದೆಲ್ಲಾ ಖಂಡಿಸುವವನೊಬ್ಬನನ್ನೇ ಬುದ್ದಿಜೀವಿ ಅಂದುಕೊಳ್ಳಬೇಕಾ ಗೊತ್ತಿಲ್ಲ. ಪೂರ್ವದಲ್ಲೂ , ಪಶ್ಚಿಮದಲ್ಲೂ ಒಳ್ಳೆಯ ಅಂಶಗಳಿದ್ದೇ ಇರುತ್ತೆ. ಸರಿಯಿಲ್ಲದ್ದು ಯಾಕೆ ಅಂತ ಮನವರಿಸಿ. ವಿಷಯಗಳಿಲ್ಲದೇ ವಾದ ಮಾಡುವವರ ಮುಲಾಜಿಲ್ಲದೇ ಖಂಡಿಸಿ. ಆದ್ರೆ ಆ ಖಂಡನೆಯ ಹಿಂದೊಂದು ಬಲವಾದ ಪ್ರತಿವಾದವಿರಲಿ. ವಸ್ತು ವಿಷಯಗಳ ಸಂಗ್ರಹವಿರಲಿ. ಈ ವಾದ-ಪ್ರತಿವಾದಗಳು ನಮ್ಮ ನಡುವಿನ ಬೇಧಗಳ ಮರೆಸಿ ತಪ್ಪ ತಿದ್ದಿ ಮಸಿಹಿಡಿದ ಚಿನ್ನಕ್ಕೊಂದು ಸಾಣೆ ಹಿಡಿಯುವಂತೆ, ಕೊಳೆಯಾದ ಆಭರಣವ ಸ್ವಚ್ಛಗೊಳಿಸುವಂತಿರಲಿ. ಮನ ಮನದ ಕಿತ್ತಾಟವ ಹೆಚ್ಚದಿರಲಿ, ವೈಚಾರಿಕತೆ ಅನ್ನೋ ದೀಪ ಬೆಂಕಿಯಾಗಿ ನಮ್ಮತನವನ್ನೋದ ಕೊಲ್ಲದಿರಲಿ ಅನ್ನೋ ಭಾವವಷ್ಟೇ.. ನಿಲುವುಗಳಲ್ಲಿ ವೈರುಧ್ಯಗಳಿದ್ದೇ ಇರುತ್ತೆ. ನನಗೆ ಸರಿಯೆನಿಸಿದ್ದು ನಿಮಗನಿಸದೇ ಇರಬಹುದು. ಆದರೆ ಈ ಸಂಘರ್ಷವನ್ನೋದು ವೈಯುಕ್ತಿಕ ಟೀಕೆಗಳ ಮಟ್ಟಕ್ಕೆ, ಒಬ್ಬರನ್ನೊಬ್ಬರು ತುಳಿದರೇನೆ ಅದು ಸಾಹಿತ್ಯದ ಮೇಲುಗೈ ಅನ್ನೋ ತರದ ಆಲೋಚನೆಗಳು ಕಾಡಿಬಿಡುತ್ವೆ ಕೆಲ ಸಲ.ಮೊದಲೇ ಅಂದಂತೆ ಇವರ ಬಗ್ಗೆ ವಿಮರ್ಶಿಸುವಷ್ಟು ಓದಾಗಲಿ, ಪ್ರಬುದ್ದತೆಯಾಗಲೀ ನನಗಿಲ್ಲ. ಖಾಲಿಯಾದ ಬುದ್ದಿಯಿಂದ ಒಂದಷ್ಟು ಶೂನ್ಯ ಸೃಷ್ಟಿಯಾಗಿದ್ದಂತೂ ಹೌದೆನ್ನೋ ಭಾವದಲ್ಲೊಂದು ವಿರಾಮ..

8 comments:

  1. critical insider ಅನಂತಮೂರ್ತಿಗಳ ಬಗ್ಗೆ ಒಳ್ಳೆಯ ನುಡಿನಮನ.

    ReplyDelete
    Replies
    1. ಧನ್ಯವಾದಗಳು ಬದ್ರಿ ಭಾಯ್ :-)

      Delete
  2. Replies
    1. ಧನ್ಯವಾದಗಳು ವತ್ಸಣ್ಣ..ನಿನ್ನೀ ಬೆನ್ನು ತಟ್ಟುವಿಕೆಗೊಂದು ಧ.ವಾ

      Delete
  3. ನಂಗೂ ಇಷ್ಟ ಆತು ನಿನ್ನ ಬರಹ.... ಒಬ್ಬರ ನಿಲುವನ್ನು/ ವಾದವನ್ನು ಇನ್ನೊಬ್ಬ ತನ್ನ ಪ್ರತಿವಾದದೊಂದಿಗೆ ಖಂಡಿಸಬಹುದೇ ವಿನಃ ಅವರನ್ನು (ವಾದಿಯನ್ನು) ತುಳಿದು ಸಾಯಿಸಬೇಕೆನ್ನುವ ನಿಲುವು ನಿಜಕ್ಕೂ ಖಂಡನೀಯ....!
    ಅವರು ಸತ್ತರೆಂದು ಪಟಾಕಿ ಸಿಡಿಸಿ ಸಂಭ್ರಮಿಸಿ ತೀರ ವಿಕಟಾಟ್ಟಹಾಸ ಮೆರೆದ ಮಂದಿಯಲ್ಲಿ ಒಬ್ಬರಿಗಾದರೂ ಅವರಷ್ಟು ಜ್ನಾನವಿದೆಯೇ...?!?

    ReplyDelete
    Replies
    1. ಧ.ವಾ ಕಾವ್ಯಕ್ಕ.. ಖಂಡಿಸೋರಿಗೆಲ್ಲಾ ಮೂಲ ವ್ಯಕ್ತಿಯ ಯೋಗ್ಯತೆ ಇರಕ್ಕು ಅಂತ ಇದ್ದಿದ್ರೆ ಈ ಜಗತ್ತಲ್ಲಿ ಇಷ್ಟೆಲ್ಲಾ ಜಗಳಗಳು , ವಿವಾದಗಳು ಆಗ್ತನೇ ಇರ್ಲೆ ಅನುಸ್ತು ..!!

      Delete
  4. ಸಮಕಾಲೀನ ಬರಹ ಪ್ರಶಸ್ತಿ..
    ಸಾಹಿತ್ಯಿಕವಾದ ವೈರುಧ್ಯಗಳು, ಪಂಥೀಯ ವಾದಗಳು ವೈಯುಕ್ತಿಕ ಮಟ್ಟಕ್ಕೆ ತಿರುಗಿರುವುದು ದುರದೃಷ್ಟಕರ. ಒಬ್ಬರನ್ನೊಬ್ಬರು ತೆಗಳುವ ಹೊಗಳುವ ಭರದಲ್ಲಿ ಆರೋಗ್ಯಕರ ಚರ್ಚೆಗೆ ಎಡೆಯೇ ಸಿಗುತ್ತಿಲ್ಲಾ..

    ಯು ಆರ್ ಸಾಧನೆಗಳು ಅವರ ರಾಜಕೀಯ ನಿಲುವುಗಳ ವಿರುದ್ಧ ಸಾರಿದ ಸಮರದ ಅಲೆಯಲ್ಲಿ ಕೊಚ್ಚಿ ಹೋಗಿರುವುದು ದುಃಖಕರ..


    ReplyDelete
    Replies
    1. ಧನ್ಯವಾದ ಸುಷ್ಮಕ್ಕ... ಸುಮಾರ್ ದಿನ ಆದ್ಮೇಲಿನ ನಿನ್ನ ಬ್ಲಾಗ್ ಭೇಟಿ ಮತ್ತು ಮೆಚ್ಚುಗೆ ಖುಷಿ ಕೊಡ್ತು :-) ಬರ್ತಾ ಇರು

      Delete