Tuesday, December 22, 2015

ಟೆಕ್ಸಾಸ್ ಇನ್ಸ್ಟುಮೆಂಟ್ಸಿನಲ್ಲಿ ನಡೆದ ವಿಕಿಪೀಡಿಯಾ ಸಂಪಾದನೋತ್ಸವ ೨೦೧೫/Wikipedia editathon 2015 ಬಗ್ಗೆ ಒಂದು ವರದಿ

ದಿನ ೧:
೧.ಪರಿಚಯ
ಬಂದವರ ಮತ್ತು ಸಿ.ಪಿ ರವಿಕುಮಾರ್,ಯು.ಬಿ ಪವನಜ ಅವರ ಪರಿಚಯ:೯:೪೦
೨.ವಿಶ್ವಕೋಶದಲ್ಲಿ ಬರವಣಿಗೆಯ ಬಗ್ಗೆ ಮಾಹಿತಿ:೯:೪೫ ಇಂದ

ಮಾಹಿತಿಯ ನಿಖರತೆ,ಮಾಹಿತಿ ಸಂಗ್ರಹ, ಪಾರಿಭಾಷಿಕ ಪದಗಳು(ಏಕರೂಪತೆ,ಮಾನಕ, ಶಿಷ್ಟತೆ)

ವಿಷಯ ನಿರೂಪಣೆ ಮತ್ತು ಭಾಷೆ ಹೇಗಿರಬೇಕು ?

  • ರಂಜನೀಯವಲ್ಲದ ಭಾಷೆ
  • ಕಥಾರೂಪ, ಉಪಮೆ,ಕಾವ್ಯಮಯ ಭಾಷೆ ಸಲ್ಲದು
  • ಹೊಗಳಿಕೆ,ತೆಗಳಿಕೆ,ವಿಶೇಷಣ ಸಲ್ಲದು
  • ವ್ಯವಸ್ಠಿತ ಮಾಹಿತಿ ನಿರೂಪಣೆ
  • ಕಾವ್ಯಮಯ ಶೀರ್ಷಿಕೆ ಸಲ್ಲದು
ಕನ್ನಡ ವಿಕಿಪೀಡಿಯಾ ಬಗೆಗಿನ ಅಂಕಿ ಅಂಶ:ಸುಮಾರು ೭೬೪ ಸಂಪಾದಕರು,ಸಕ್ರಿಯ ಸಂಪಾದಕರು-೬೭, ಅತೀ ಸಕ್ರಿಯ-೩,
stats.wikimedia.org to see active, very active, top contributor etc.



ವಿಕಿಪೀಡಿಯಾ ಯಾಕೆ ಬೇಕು ? 
  • ಕನ್ನಡಿಗರಿಗೆ ಬೇಕಾದ ಮಾಹಿತಿ ಕನ್ನಡದಲ್ಲಿ ಒದಗಿದರೆ ಕನ್ನಡ ಉಳಿಯುತ್ತದೆ
  • ಪ್ರಪಂಚಜ್ಞಾನವನ್ನು ಕನ್ನಡಕ್ಕೆ  ಸುಲಭವಾಗಿ ತರುವ ಉಪಾಯ ವಿಕಿಪೀಡಿಯಾ

ವಿಕಿಪೀಡಿಯಾ ಸಂಪಾದಿಸುವುದು:
1.ಖಾತೆಯನ್ನು ತೆರೆಯುವುದು
  1. ಇರುವ ಲೇಖನಕ್ಕೆ
  • ವಿಷಯ ಸೇರಿಸುವುದು/ಉತ್ತಮಪಡಿಸುವುದು(ವ್ಯಾಕರಣ/ಭಾಷೆ ಇತ್ಯಾದಿ)
  • ಉಲ್ಲೇಖಗಳನ್ನು ಸೇರಿಸುವುದು
  • ಶೈಲಿಯನ್ನು ಬದಲಿಸುವುದು(ಬೋಲ್ಡ್,ಇಟ್ಯಾಲಿಕ್ಸ್,ಶೀರ್ಷಿಕೆ ಇತ್ಯಾದಿ)
  • ಚಿತ್ರ ಸೇರಿಸುವುದು

 2. ಹೊಸ ಲೇಖನ ಸೇರಿಸುವುದು ಲೇಖನ ಸೇರಿಸುವುದು:

ವಿಕಿಪೀಡಿಯಾಕ್ಕೆ ಏನು
ಬೇಕು
  • ವಿಶ್ವಕೋಶದ ಶೈಲಿಯಲ್ಲಿ
  • ಪ್ರಪಂಚಕ್ಕೆಲ್ಲ ಉಪಯುಕ್ತವಾಗಿರಬೇಕು
  • ವಿಜ್ಞಾನ,ತಂತ್ರಜ್ಞಾನ, ಮಾಹಿತಿ ಸಾಹಿತ್ಯ

ಬೇಡ:
  • ಬ್ಲಾಗ್ ಮಾದರಿಯ ಲೇಖನ
  • ವೈಯುಕ್ತಿಕ ಅಭಿಪ್ರಾಯ,ವಿಮರ್ಷೆ
  • ಕಥೆ,ಕವನ,ಕಾದಂಬರಿ ,ಮಹಾಕಾವ್ಯ
  • ನಿಮ್ಮ ಬಗ್ಗೆ ನೀವೇ ಬರೆಯುವುದು
  • ಲೇಖನದಲ್ಲಿ ನಿಮ್ಮ ಹೆಸರು
  • ಲೇಖನದ ಶೀರ್ಷಿಕೆಯಲ್ಲಿ ಹೆಸರಷ್ಟೇ.ವಿದ್ವಾನ್,ಡಾ ಅಂತೆಲ್ಲಾ ಬರೆಯೋ ಹಾಗಿಲ್ಲ..ಎ.ಪಿ.ಜೆ ಅಬ್ದುಲ್ ಕಲಾಂ ಅಷ್ಟೆ. ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ಅಷ್ಟೆ.

ಉತ್ತಮ ವಿಕಿಪೀಡಿಯಾ ಲೇಖನ ಹೇಗಿರಬೇಕು:
  • ಗಮನಾರ್ಹ ವಿಷಯ
  • criteria for good article page in wikipaedia
  • ಚೆನ್ನಾಗಿ ಬರೆದಿರಬೇಕು,ಸ್ಪಷ್ಟ ವಿಷಯ ನಿರೂಪಣೆ,ಶುದ್ಢ ವ್ಯಾಕರಣ
  • ಹಕ್ಕು ಸ್ವಾಮ್ಯದ ಉಲ್ಲಂಘನೆ ಆಗಿರಬಾರದು
  • ೨ಕಿಲೋಬೈಟ್ಗಿಂತ ದೊಡ್ಡದಿರಬೇಕು
  • ವಿಭಾಗಗಳು
  • ಪರಿಪೂರ್ಣ
  • ನಿಖರ ಮಾಹಿತಿ
  • ಉಲ್ಲೇಖ ಇರಲೇಬೇಕು
  • ಕೊಂಡಿಗಳು --inter wikipaedia links, interlink is must.
  • ಚಿತ್ರಗಳು:ನಾವು ತೆಗೆದಿದ್ದಾಗಿದ್ದರೆ ಅಥವಾ ೭೦ ವರ್ಷಗಳ ಹಿಂದಿನದ್ದಾಗಿದ್ದರೆ(ಅದರ ಕಾಪಿರೈಟ್ ಮುಂದುವರಿಯದಿದ್ದರೆ)

Demo:@10:45

ಉಪಯೋಗ ಏನು? :
ಹಳ್ಳಿಗಳಲ್ಲಿಯ ಮಕ್ಕಳಿಗೆ
kiwix software--> to get wikipedia category and use offline
dcert syllabus

:w: to add english wikipedia
[reference ,vijayavaani amta kotre aa tara baratte ]

libreoffice --> save as media wiki

ದಿನ ೨:
ವಿಕಿಪೀಡಿಯಾ ಪುಟಗಳ ಸೃಷ್ಟಿ ಮತ್ತು ಸಮಾರೋಪ ಸಮಾರಂಭ

Friday, December 18, 2015

how to recover your 4 GB pendrive if it is showing as 970 MB volume

Hi Friends,

If you have used your 4 GB pen drive to burn a bootable image for operating system and later that pendrive is showing as 970 MB instead of 4GB, follow below steps to recover it back to its original size

1. Right click on your computer > Manage>  Storage> Disk Management

See how much Gb is shown for your pen drive.
It might be showing space in pendrive as 970MB and remaining as unallocated space.


Right click on unallocated space, if you get format option, you can format that and merge with the other volume to get total 4 GB
If you are not getting , go the software which you used to burn bootable image into the pendrive
Eg: poweriso >tools> cleanup USB pendrive

once that is done, you will get 4GB back


Regards
Prashasti


Saturday, December 5, 2015

ನಾನೋದಿದ ಕಥಾ ಸಂಕಲನ-ಹೊಂಗೆಮರದಡಿ ನಮ್ಮ ನಿಮ್ಮ ಕತೆಗಳು

ಓದೆಂದರೆ ಸಿಲೆಬಸ್ಸು, ಬರಹವೆಂದರೆ "ಪಂಜು" ಎಂಬಂತಾಗಿ ಬಹಳ ದಿನಗಳಾಗಿತ್ತು. ಇಷ್ಟಪಟ್ಟ ಕೆಲಸ, ಮುಂದೆಂದಾದರೂ ಬೇಕಾದೀತೆಂದು ಸಾಗುತ್ತಿದ್ದ ಓದ ಮಧ್ಯದಲ್ಲಿ ಕಳೆದುಹೋದವನ ಭಾವಗಳಿಗೆ ಹೊಸ ಸ್ಪರ್ಷ ಸಿಕ್ಕು ಇಂದಿಗೆ ಒಂದು ವಾರ. ಇಂದಿಗೆ ಒಂದು ವಾರದ ಹಿಂದೆ 3k ಬಳಗದ "ಹೊಂಗೆಮರದಡಿ ನಮ್ಮ ನಿಮ್ಮ ಕತೆಗಳು" ಕಥಾ ಸಂಕಲನದ ಬಿಡುಗಡೆ ಸಮಾರಂಭ. ಹಿಂದಿನ ದಿನವೇ ಹುಟ್ಟುಹಬ್ಬದ ಸಲುವಾಗಿ ಸ್ನೇಹಿತರ ಶುಭಾಶಯಗಳಲ್ಲಿ ಮಿಂದಿದ್ದ ನನಗೆ ಅಂದು ಅವೆಲ್ಲಾ ಗೆಳೆಯರ ಮುಖತಃ ಕಂಡು ಇನ್ನೂ ಖುಷಿಯಾಗಿತ್ತು. ಅಂದಿನ ಸಂಭ್ರಮದ ಬಗೆಗಿನ ಚಿತ್ರಗಳ ನೀವೆಲ್ಲಾ ನೋಡೇ ಇರುತ್ತೀರಿ. ಹಾಗಾಗಿ ಅದರ ನೆನಪನ್ನು ಪುನರಾವರ್ತಿಸಲಿಚ್ಛಿಸದಿದ್ದರೂ ಆ ಪುಸ್ತಕವನ್ನೋದಿದ ಅನುಭವವನ್ನು ನಿಮ್ಮೆದುರು ಹಂಚಿಕೊಳ್ಳದೇ ಇರಲಾಗುತ್ತಿಲ್ಲ. ವಿಮರ್ಶೆಯೆಂದಲ್ಲವಿದು.ಠೀಕೆ ಟಿಪ್ಪಣಿಗಳೆಂದು ಖಂಡಿತಾ ಅಲ್ಲ. ಬೆಳಗ್ಗಿನ ಟ್ರಾಫಿಕ್ ಜ್ಯಾಮಲ್ಲಿ, ಶನಿವಾರದ ಸವಿಬಿಸಿಲಲ್ಲಿ ಜೊತೆಗೇ ಇದ್ದು, ಮುಗಿಯುವವರೆಗೂ ನೆಮ್ಮದಿಗೊಡದ ಕತೆಗಳ ಬಗ್ಗೆ ಹೇಳಲೇಬೇಕೆನಿಸಿದ ಮಾತುಗಳಷ್ಟೇ ಇವು.

ಕತೆಯೆನ್ನೋದು, ಅದರ ಆರಂಭ ಅಂತ್ಯಗಳೆನ್ನೋದು ಹೇಗಿರಬೇಕು? ಅದರ ಮೂಲಕ ತಾ ಹೇಳಹೊರಟ ತತ್ವವೇನಿರಬೇಕು? ಅಂತದ್ದೊಂದು ತತ್ವವಿರಲೇಬೇಕಾ ಎಂಬುದನ್ನು ನಿರ್ಧರಿಸೋ ಸಂಪೂರ್ಣ ಸ್ವಾತಂತ್ರ್ಯ ಕಥೆಗಾರನದ್ದೇ ಆಗಿದ್ದರೂ ಸಂಕಲನದಲ್ಲಿನ ಕಥೆಗಳನ್ನೋದುತ್ತಾ ಅದರ ಮೊದಲಾರ್ಧದಲ್ಲಿ ಬರೋ "ಉಪ್ಪಿನ ಸತ್ಯಾಗ್ರಹ", "ತಿರುವು", "ಕಲ್ಲು ಬೆಂಚು"ವಿನಂತ ದಾರುಣಾಂತ್ಯದ ಕಥೆಗಳಿಂದ ಮೊದಲಾರ್ಧದಲ್ಲಿ ದುಃಖಾಂತ್ಯಕ್ಕೂ ದ್ವಿತೀಯಾರ್ಧದಲ್ಲಿ ಸುಖಾಂತ್ಯದ ಕಥೆಗಳಿಗೂ ಪ್ರಾಶಸ್ತ್ಯ ಸಿಕ್ಕಂತನಿಸಿತ್ತು. ದುಃಖಾಂತ್ಯದ ಕತೆಗಳಿಗೂ ಕೊನೆಗೊಂದು ಜೀವನಪ್ರೀತಿಯ ಟಚ್ ಕೊಟ್ಟು ಜೀವನಪ್ರೀತಿಯ ಮೌಲ್ಯ ಸಾರಿದ ಪ್ರಯತ್ನಗಳು ಸಖತ್ ಇಷ್ಟವಾದವು. ಕಷ್ಟವೆಂಬೋದನ್ನು, ವೈಧವ್ಯವೆಂಬೋದನ್ನ ವಾಚ್ಯವಾಗಿ ಹೇಳದೆಯೂ ಕಪ್ಪು ಹಣೆಬೊಟ್ಟು ಮುಂತಾದವುಗಳ ಮೂಲಕ ಸೂಚ್ಯವಾಗಿ ಹೇಳುತ್ತಾ ದುಃಖದಲ್ಲೂ ಹಳೆಯ ಭಾವಗಳ ನವಿರುತನವನ್ನು ಕಟ್ಟಿಕೊಟ್ಟ "ಮುಳ್ಳು"ವಿನಂತಹ ಪ್ರಯತ್ನಗಳು ಇಷ್ಟವಾದವು. ಪುಟ್ಮಾದ, ಮಾದೇವಿಯಂತಹ ಪಾತ್ರಗಳು ಇಂದಿಗೂ ನಮ್ಮಲ್ಲಿರೋ ಸಾಮಾಜಿಕ ಅನಿಷ್ಟಗಳ, ನಮ್ಮಲ್ಲಿನ ದುರಾಸೆಗಳ ವಿಪರ್ಯಾಸದಂತೆ ಭಾಸವಾಗಿದ್ದು ಸುಳ್ಳಲ್ಲ.

ಕೆಲವು ಕಥೆಗಳಲ್ಲಿನ ಪಾತ್ರಗಳು, ಡೈಲಾಗುಗಳು ಪುಸ್ತಕವನ್ನೋದಿ ಮುಗಿಸಿ ಬದಿಗಿಟ್ರೂ ಇನ್ನೂ ನನ್ನ ಕಾಡುತ್ತಲೇ ಇದೆ. ಅದರಲ್ಲೊಂದು "ಸಾಕು ಸ್ಟೈಲು ಮಾಡಿದ್ದು" ಅನ್ನೋ "ನೆನಪುಗಳ ಮಾತೇ ಮಧುರ" ಕತೆಯಲ್ಲಿ ಬರೋ ಡೈಲಾಗು. ಇನ್ನೊಂದು ಪಾತ್ರ "ಪ್ರೀತಿ ಮಾಯೆ ಹುಷಾರು" ಕತೆಯಲ್ಲಿನ ಧೃವರಾಜ್.ಅದರಲ್ಲಿ ಬರೋ ಕಥಾನಾಯಕನಿಗಿಂತ್ಲೂ ಸಿಮ್ ಕಾರ್ಡ್ ಮಾರೋ ಧೃವರಾಜ್ ಪಾತ್ರ ಇನ್ನೂ ಕಣ್ಣಿಗೆ ಕಟ್ಟಿದಂತೆ ಕಾಡ್ತಾ ಇದೆ. ಜನ ಮನಗಳ ಮಧ್ಯೆ ದ್ವೇಷದ ದಳ್ಳುರಿ ಹತ್ತಿಸಿ ಅದರಲ್ಲೇ ತಮ್ಮ ಬೇಳೆ ಬೇಯಿಸಿಕೊಳ್ಳೋ ರಾಜಕೀಯದ ಬಗ್ಗೆ ಬರೆದಿರೋ "ಭ್ರಮೆಗಳ ಬೆನ್ನೇರಿ" ನನ್ನ ಕಣ್ಣೆದುರೇ ಘಟಿಸಿದ ಕಥಾನಕದಂತೆ, ಅಪ್ಪು-ವಿನಿಗಳ ಭೂತ ವರ್ತಮಾನಗಳಲ್ಲಿ ಜರುಗೋ "ಮತೀಯ"ಕ್ಕೆ ಪ್ರತ್ಯಕ್ಷ ಸಾಕ್ಶಿಯಾದಂತೆ ಭಾಸವಾಗಿದ್ದೂ ಸತ್ಯವೇ."ಅಪ್ಪ ಹಾಕಿದ ಹೊಂಗೆ ಮರ"ದಲ್ಲಿನ ಪುಲ್ಲಜ್ಜ, ಅಯ್ಯನೋರು,ವಿಶ್ವನಾಥ ಇಂದಿಗೂ ಹಳ್ಳಿಗಳಲ್ಲಿ ಮನೆಮಾತಾಗಿರೋ ಹಲವು ಪಾತ್ರಗಳ ನೆನಪಿಸುತ್ತಾರೆ.ಪೇಪರ್ ಪುರುಷೋತ್ತಮನ ಮೂಲಕ ಶುರುವಾಗೋ ಕಥಾನಕ "ಆಯಸ್ಸು ಕರಗೋ ಸಮಯ" ಮುಗಿಯೋ ಹೊತ್ತಿಗೆ ಕಣ್ಣೀರಾಗಿಸಿದರೆ ಸಣ್ಣ ಕಥೆಗಳಾದ "ಶಿವು", "ದೇವರ ಹೂ"ನಲ್ಲಿ ಎದುರಾಗೋ ಅನಿರೀಕ್ಷಿತ ಕ್ಲೈಮಾಕ್ಸುಗಳು ಬೆರಗು ಮೂಡಿಸುತ್ತವೆ."ಆಟಕ್ಕುಂಟು ಲೆಕ್ಕಕ್ಕಿಲ್ಲ", "ಗಾಳ", ಗಳ ಮೂಲಕ ನಿರ್ಲಕ್ಷ್ಯಕ್ಕೊಳಗಾದ ವ್ಯಕ್ತಿಯೊಳಗೆ ಮೂಡಬಹುದಾದ ದುಃಖ ದುಮ್ಮಾನಗಳು ಸ್ವಗತವಾಗಿವೆ,ಕಥೆಗಳಾಗಿವೆ.

"ಅರಳಿದ ಹೃದಯಗೀತೆ"ಯಲ್ಲಿ ಬರೋ ಶ್ರೀಕೃಷ್ಣ-ಹನುಮಂತ, ಕುಂದಾಪುರದ ಕಡೆಯ ಹಳ್ಳಿಯ ಚಿತ್ರಣ ಕಟ್ಟಿಕೊಡೋ "ಆಸೆ ನಿರಾಸೆ"ಯಲ್ಲಿನ ಸೋಮ-ನಾಗಿಯಂತಹ ಹಲವು ಜೋಡಿಗಳು ಮುದಗೊಳಿಸುತ್ತೆ. "ಐಸ್ ಕ್ರೀಂ", "ಭಾವ", "ದಿಕ್ಕು" ವಿನ ಮೂಲಕ ಬಡತನದ ಬಾಲ್ಯದ ಹಲವು ಕರಾಳಮುಖಗಳು ಎದುರಾದ್ರೆ , ಕುಸುಮಕ್ಕ, ರಮೇಶನಂತಹ ಪಾತ್ರಗಳ ಮೂಲಕ ಒಂಟಿತನದ, ಅನಾಥರ ನೋವು ಮುಖಾಮುಖಿಯಾಗುತ್ತಾ ಸಾಗುತ್ತೆ.ಮೊದಲ ಗುಕ್ಕಿಗೆ ಒಳಕ್ಕಿಳಿಯದೇ ಎರಡನೆಯ ಸಲ ಓದುವಂತೆ ಮಾಡಿದ ಕತೆ "ಮೊದಲ ಸಲ" !. ಎಲ್ಲಾ ಆವಿಷ್ಕಾರಗಳು ಎರಡು ಸಲ ಘಟಿಸುತ್ತೆ. ಮೊದಲು ನಿರ್ಮಿಸುವವನ ಮನದಲ್ಲಿ, ಮತ್ತೊಮ್ಮೆ ವಾಸ್ತವವಾಗಿ ಎನ್ನುವುದೊಂದು ಮಾತಿದೆ. ಅದೇ ತರಹ ಕೆಲವು ಘಟನೆಗಳೂ ! ಅದು ಹೇಗೆ ಅನ್ನೋ ಕುತೂಹಲವನ್ನು ಕೇಂದ್ರೀಕರಿಸಿರೋ "ಸ್ವರ್ಗದಲ್ಲಿ ನಡೆದ ಮದುವೆ" ಫ್ಲಾಷ್ ಬ್ಯಾಕಿರೋ ಸಿನಿಮಾದಂತೆ  ಆಸಕ್ತಿ ಮೂಡಿಸುತ್ತಾ ಓದಿಸಿಕೊಂಡು ಹೋಗುತ್ತೆ.

ಮೊದಲೇ ಅಂದಂತೆ ಇದು ಪುಸ್ತಕದ ಎಲ್ಲಾ ಕಥೆಗಳ ವಿಮರ್ಶೆಯಲ್ಲ, ಸಾರವೆಂತೂ ಅಲ್ಲವೇ ಅಲ್ಲ. ಪುಸ್ತಕರೂಪದಲ್ಲಿ ಸೆರೆಯಾದ ಎಲ್ಲಾ ಗೆಳೆಯರ, ಹಿರಿಯರ ಪ್ರಯತ್ನಗಳನ್ನೋದಿ ಹೊರಹೊಮ್ಮಿದ ಮೆಚ್ಚುಗೆಯ ನುಡಿಗಳಷ್ಟೇ. ೨೧೪ ಪುಟಗಳನ್ನೋದಿದ ನನ್ನ ಕಣ್ಣುಗಳಲ್ಲಿ ಸದ್ಯಕ್ಕೆ ಮೂಡಿದ ಪುಸ್ತಕದ ಝಲಕ್ಕಷ್ಟೇ ಇದು. ಹೊಂಗೆಮರದ ಬಿಂಬ ನನ್ನ ಕೈಯೊಳಗಣ ಬೊಗಸೆ ನೀರಲ್ಲಿ ಕಂಡದ್ದಷ್ಟೇ ಅಲ್ಲ.ಆ ಮರದ ಸ್ವರೂಪವರಿಯೋಕೆ ಮರದ ಬುಡಕ್ಕೇ ತೆರಳಬೇಕು,ಈ ಸಂಕಲನದ ಸವಿಯುಣ್ಣೋಕೆ ಅದನ್ನೇ ಓದಬೇಕು. ಪುಸ್ತಕದಲ್ಲಿ ಪ್ರಕಟವಾದ, ಆಗದ ಎಲ್ಲಾ ಗೆಳೆಯರಿಗೂ ಅವರ ಪ್ರಯತ್ನಕ್ಕೆ ಅಭಿನಂದಿಸುತ್ತಾ , ವೇದಿಕೆಯಾದ 3k ಗೆ ವಂದಿಸುತ್ತಾ ಸದ್ಯಕ್ಕೊಂದು ವಿರಾಮ.

Tuesday, December 1, 2015

ಕಾಲದಾಚೆಯ ಕಥೆ

ತಿರುಗುರೆಕ್ಕೆಯ ಕೆಳಗೆ ಕುಳಿತು ಬೆವೆತಿಹ ಜೀವ
ತಾಯ ಸೆರಗಿನ ಗಾಳಿ ನೆನೆಯುತಿತ್ತು
ದುಡಿತಕೊಡೆದಿಹ ಕೈಯ ಬಾಯಿ ತಲುಪದ ತುತ್ತು
ಕಂದ ಹಸಿದಿಹನೇನೊ ಎನುತಲಿತ್ತು..
ತೋ..ನಾನಾ. ತಾ..ನಾನ..ನಾನ..

ಧಗ್ಗನೆ ಎದ್ದು ಕುಳಿತ ಅವ. ಎಷ್ಟು ಸಲ ಕನಸಲ್ಲಿ ಬಂದಿತ್ತೋ ಆ ರಾಗ. ಪ್ರತೀ ಬಾರಿ ಕೇಳಿದಾಗಲೂ ಏನೋ ಒಂದು ಸಂಕಟ. ಕೆಟ್ಟ ಕನಸು ಬಿತ್ತಾ ಮಗು ಎಂಬ ಹೆತ್ತಾಕೆಯ ದನಿ ಕೇಳಿದಂತಾಯ್ತೊಮ್ಮೆ ಅಲ್ಲೇ ಎಲ್ಲೋ .ಹಿಂದೆಲ್ಲಾ ಯಕ್ಷಗಾನದ ಮಹಿಷಾಸುರನೋ, ಭೂತಕೋಲದ ದಯ್ಯವೋ ಕನಸಲ್ಲಿ ಬಂದು ಹಿಂಗೆ ಹೆದರಿ ಎದ್ದಾಗಲೆಲ್ಲಾ ತನ್ನ ತೊಡೆಯ ಮೇಲೇ ತಲೆಯಿಟ್ಟುಕೊಂಡು ತಟ್ಟಿ ಮಲಗಿಸುತ್ತಿದ್ದ ಅಬ್ಬೆ ನೆನಪಾದಳು.  ಸುತ್ತ ಕಣ್ಣು ಹಾಯಿಸಿದರೆ ಯಾರೂ ಇಲ್ಲ. ಕಣ್ಣ ಪರದೆಯಾಚೆಯ ತಾಯ ನೆನಪುಗಳು ಕಣ್ಣೀರಾಗಿ ಎದುರು ಬಂದು ಎಷ್ಟೋ ಹೊತ್ತಿನ ತನಕ ಹರಿಯುತ್ತಿದ್ದವು. ಮತ್ತೆ ಜೊತೆಯಾದ ನಿದ್ದೆಯಿಂದ ಕಣ್ಣೀರಿನ ಹರಿವು ನಿಂತಿತಾ ಅಥವಾ ಕಣ್ಣೀರಕೋಡಿಯ ಕಂಡು ತಾನೇ ಕಣ್ಣೀರಾದ ನಿದ್ರೆಯೇ ಅವನನ್ನು ಆಕ್ರಮಿಸಿತಾ ಎಂಬ ಸಂಗತಿಯನ್ನು ಕಾಲದ ರೋಧನಕ್ಕೆ ಸಾಕ್ಷಿಯಾದ ತಲೆದಿಂಬೇ ಹೇಳಬೇಕಿತ್ತು.

ಕಾಡ ಮಧ್ಯದಲ್ಲೊಂದಿಷ್ಟು ಮನೆಗಳು. ಇತ್ತೀಚೆಗೆ ಆ ಕಾಡಿಗೆ ಚಾರಣಕ್ಕೆ ಅಂತ ಬರೋರು ಶುರು ಮಾಡೋ ತನಕ ಗೌರಮ್ಮ, ಗೌರಕ್ಕ ಅಥವಾ ಗೋಲಿ ಹುಡುಗರ ಪಾಲಿನ ಗೌರಜ್ಜಿಗೆ ಪೇಟೆಯಲ್ಲಿಹ ಮಗ ತನ್ನ ನೆನೆದು ತನ್ನ ನೋಡಲು ಒಮ್ಮೆಯಾದರೂ ಬರುತ್ತಾನೇನೋ ಎಂಬ ಆಸೆಯೇ ಸೂರ್ಯೋದಯ, ಬರದಿದ್ದರೆ ಫೋನಾದ್ರೂ ಮಾಡಬಹುದಾ ಈ ವಾರದಲ್ಲಿ ಎಂಬ ನಿರೀಕ್ಷೆಯೇ ಸೂರ್ಯಾಸ್ತ.  ಅಂಟಾದ ಸೀರೆ ಸೆರಗಲ್ಲಿದ್ದ ಸಿಹಿಯನ್ನು ತೆಗೆದು ಹೊರಗೆ ಆಡುತ್ತಿದ್ದ ಹುಡುಗರಿಗೆ ಹಂಚುವಾಗ ಗೌರಮ್ಮನಿಗೆ ತನ್ನ ಮಗನ ನೆನಪು ಮತ್ತೆ ಹಸಿಯಾಗುತ್ತೆ. ಮದುವೆ ಮನೆಗೆ ಹೋಗಲಿ, ಉಪನಯನಕ್ಕೆ ಹೋಗಲಿ ತನ್ನ ಬಾಳೆಗೆ ಹಾಕಿದ ಸ್ವೀಟನ್ನೂ ತನ್ನ ಮಗನಿಗಾಯ್ತು ಅಂತ ಕಟ್ಟಿ ಮನೆಗೆ ತರುತ್ತಿದ್ದ ಗೌರಮ್ಮನಿಗೆ ಈಗೀಗ ಮನೆಗೆ ಬಂದ ಮೇಲೇ ತನ್ನ ಮಗ ತನ್ನ ಬಳಿಯಲ್ಲಿಲ್ಲ ಅನ್ನೋದು ನೆನಪಾಗುತ್ತೆ. ಕಣ್ಣಾಲಿಗಳು ನೀರಿಂದ ತುಂಬಿಹೋಗುತ್ತೆ ಎಷ್ಟೇ ಬೇಡ ಅಂದುಕೊಂಡ್ರೂ.

ಕಣ್ಣು ಹಾಯಿಸಿದತ್ತೆಲ್ಲಾ ಬೇರೆ ಬಣ್ಣವೇ ಇಲ್ಲವೇನೋ ಎಂಬಂತೆ ಆವರಿಸಿರೋ ಮರಳು. ಆ ಮರಳಗಾಡಿನಲ್ಲಿ ಇದ್ದಕ್ಕಿದ್ದಂತೆ ಒಂದಿಷ್ಟು ಆಕೃತಿಗಳು. ತನ್ನೆದುರು ಕಂಡಂತಾಗಿ ಮತ್ತೆ ಮಾಯವಾದದ್ದು ನಿಜವಾಗಿಯೂ ಆಕೃತಿಗಳಾ ಅಥವಾ ಮರೀಚಿಕೆಯಾ ? ತನ್ನ ಕಣ್ಣುಗಳೂ ತನಗೆ ಮೋಸ ಮಾಡೋಕೆ ಶುರು ಮಾಡ್ತಾ ಅಂತ ಬೇಸರವಾಯ್ತವನಿಗೆ. ಮರೀಚಿಕೆಯಾ ಅಥವಾ ನಿಜವಾಗಿಯೂ ಅಲ್ಲೇನಾದ್ರೂ ಬರ್ತಾ ಇದೆಯಾ ? ಬಂದರೂ ಇಷ್ಟು ದೂರದಲ್ಲಿರೋ ತಾನು ಅವರ ಕಣ್ಣಿಗೆ ಬಿದ್ದೇನಾ ಎಂಬ ಸಂಶಯದಿಂದ ಅವರು ದೂರವಾಗೋ ಮೊದಲು ನಾನೇ ಅತ್ತ ಸಾಗಿಬಿಟ್ಟೇನೆಂಬ ಹುಮ್ಮಸ್ಸಿನಲ್ಲಿ ಅತ್ತ ಹೆಜ್ಜೆ ಹಾಕಿದ, ಕೂಗಲೆತ್ನಿಸಿದ. ನಾಲ್ಕೇ ಹೆಜ್ಜೆ. ದೇಹ ಕುಸಿದು ಹೋಯ್ತು,ಸ್ವರ ಹೊರ ಹೊರಡಲಿಲ್ಲ.  ಊಟವಿಲ್ಲದ ಎರಡು ದಿನದ ಸುಸ್ತಿಗೆ. ಹೀಗೇ ಕಂಡು ಕಂಗೆಟ್ಟ ಅದೆಷ್ಟೋ ಮರೀಚಿಕೆಗಳ ಕಾಟಕೆ. ಕಣ್ಣೆದುರೇ ಮುಂದೆ ಸಾಗುತ್ತಾ ಮರೆಯಾಗುತ್ತಿದ್ದ ಒಂಟೆಗಳ ಸಾಲುಗಳನ್ನು ನೋಡೂ ಏನೂ ಮಾಡಲಾಗದ ನೋವು ಅವನ ಕಣ್ಣುಗಳಲ್ಲಿ ಧಾರೆಯಾಗಿ ಇಳಿಯುತ್ತಿತ್ತು.

ಅದೆಂತದೋ ಎನ್.ಜಿ.ಓ ಅಂತ ಕೆಲಸ ಮಾಡುತ್ತಿದ್ದ ಹುಡುಗ ಕಾಡ ಮಧ್ಯದಲ್ಲಿದ್ದ ತನ್ನೂರಿಗೆ ಬಂದು ಅಲ್ಲಿನ ಮನೆಮಾತೇ ಆಗಿ ಕೊನೆಗೊಂದು ದಿವಸ ತನ್ನನ್ನೇ ಮದುವೆಯಾಗುತ್ತಾನೆಂದು ಆಕೆ ಕನಸಿನಲ್ಲೂ ಎಣಿಸಿರಲಿಲ್ಲ. ಮದುವೆಯಾದ ಮೊದಲೆರೆಡು ವರ್ಷಗಳು ಸ್ವರ್ಗವೇ ಧರೆಗಿಳಿದ ಭಾವವಲ್ಲಿ. ಆಗಾಗ ಕೆಲಸಕ್ಕೆಂದು ಗಂಡ ಹೊರಹೋಗುತ್ತಿದ್ದರೂ ತನ್ನ ಎಳೆಗೂಸಿನ ನಗುವ ಹಿಂದೆ ಬೇರೆಲ್ಲಾ ನಿಶ್ಯಬ್ದಗಳೂ ಗೌಣವೆನಿಸಿಬಿಡುತ್ತಿದ್ದವು. ಆದ್ರೆ ಯಾರ ಕಣ್ಣು ಬಿತ್ತೋ ಇವರ ಮೇಲೆ. ರಾಜಸ್ಥಾನಕ್ಕೆ ತನ್ನ ಸಹಚರರೊಂದಿಗೆ ಕೆಲಸಕ್ಕೆಂದು ತೆರಳಿದ ಗಂಡ ಮರಳಲೇ ಇಲ್ಲ. ಯಾರ ಜೊತೆ ಹೋಗ್ತಾ ಇದ್ದೀಯ ? ಎಲ್ಲಿರ್ತೀಯ, ನಿನ್ನನ್ನು ಸಂಪರ್ಕಿಸೋಕೆ ಫೋನ್ ನಂಬರೇನಾದ್ರೂ ಕೊಡು ಅಂತ ಕೇಳಿದ್ರೆ ಅವನಿಗೇನಾಯ್ತು ಅಂತ ತಿಳೀಬಹುದಿತ್ತೇನೋ. ಆದ್ರೆ ಕೇಳಿರಲಿಲ್ಲವಲ್ಲಾ ಆಕೆ . ಹಿಂದೆ ಕೇಳಿದ್ದರೆ ತಾನೆ ಈಗ ಕೇಳೋಕೆ ! ಇಂದು ಬರಬಹುದು, ನಾಳೆ ಬರಬಹುದೆಂಬ ನಿರೀಕ್ಷೆಯಲ್ಲೇ ದಿನಗಳುರುಳಿದ್ವು. ತಂದೆಯೆಂಬೋ ಕಾಣದ ದೈವ ಎಂದೋ ಬರುವನೆಂಬ ನಿರೀಕ್ಷೆಯಲ್ಲೇ ಮಗು ಬೆಳೆದು ದೊಡ್ಡದಾಯ್ತು. ವಿದ್ಯೆ ಪಡೆದ ಮಗುವಿಗೀಗ ಹಳ್ಳಿಯ ಓದು ಸಾಲದಾಗಿದೆ. ಹೊಟ್ಟೆಪಾಡಿಗಾಗಿ ಪೇಟೆಯ ಹಾದಿ ಹಿಡಿಯಲೇಬೇಕಾಗಿದೆ.

ಅಂತೂ ಬೆಳಗಾಯಿತು ಏಳಪ್ಪಾ ದೊರೆ ಎನ್ನುವಂತೆ ಕಿಟಕಿಯ ಪಕ್ಕದಲ್ಲಿದ್ದ ಪಾರಿವಾಳಗಳು ಪಟ ಪಟ ರೆಕ್ಕೆ ಬಡಿಯುತ್ತಿದ್ದವು. ಯಾಕೋ ಕಣ್ಣುಬಿಡುಲಾಗುತ್ತಿಲ್ಲ ಎಂದುಕೊಂಡರೂ ತನಗಾಗಿ ಕಾಯುತ್ತಿದ್ದವರು  ನೆನಪಾಗಿ ಎದ್ದನವ. ಇವತ್ತು ಹುಷಾರಿಲ್ಲ ಎಂದು ಬಿಡಲಾ ಅಂದುಕೊಂಡ್ರೂ ನಿಜವಾಗಿಯೂ ಹುಷಾರಿಲ್ಲದೇ ತನ್ನ ಹಾದಿ ಕಾಯ್ತಾ ಇರೋ ಅದೆಷ್ಟೋ ರೋಗಿಗಳ ನೆನಪಾಗಿ ಬಚ್ಚಲಿನತ್ತ ಹೆಜ್ಜೆಯಿಟ್ಟ. ಕಷ್ಟಪಟ್ಟು ತೆರೆಸಿದ ಕಣ್ಣುಗಳಲ್ಲಿ ಉಪ್ಪು ಇದೆಯಾ, ಮಸಾಲೆಯಿದ್ಯಾ , ಚಿತ್ರಾನ್ನ ಇದ್ಯಾ ಅಂತೆಲ್ಲಾ ಜಾಹೀರಾತು ನೀಡಿ ಜನರನ್ನ ಮಂಗ ಮಾಡೋ ಪೇಸ್ಟುಗಳಿಗಿಷ್ಟು ಬೈದುಕೊಳ್ಳುತ್ತಾ ಕನ್ನಡಿಯೆದುರು ನಿಂತ. ಹೆರೆಯಹೊರಟ ಗಡ್ಡವನ್ನೇ ಮತ್ತೊಮ್ಮೆ ನೋಡಿದವನಿಗೆ ತನ್ನೂರ ಸೋಮನಗುಡ್ಡ ನೆನಪಾಯ್ತು. ಕೆದರಿದ ಕೂದಲಲ್ಲಿ ಶಾಲೆಗೆ ಹೋಗೋ ಹೊತ್ತಿಗೂ ತನ್ನೊಡನೆ ಆಟವಾಡೋಕೆ ಬರ್ತಿದ್ದ ಹಸುವಿನ ಕರು ನೆನಪಾಯ್ತು. ನಿದ್ದೆಯಿಲ್ಲದೆ ಕೆಂಪಾದ ಕಂಗಳಲ್ಲಿ ತನ್ನೂರ ಕೌಳಿ ಮಟ್ಟಿ, ಗೇರು ಹಣ್ಣುಗಳು ನೆನಪಾದ್ವು. ಛೇ, ಎಷ್ಟು ವರ್ಷಗಳಾಗಿ ಬಿಟ್ವಲ್ಲಾ ಊರುಕಡೆ ಹೋಗಿ ? ಏನು ದರಿದ್ರ ಮಳೆಯಪ್ಪಾ ಇದು ಅಂತ ಬಯ್ಯೋ ಮಳೆಯೇ ಎಷ್ಟು ಖುಷಿಕೊಡುತ್ತಿತ್ತಲ್ವಾ ಆಗ ಅನಿಸೋಕೆ ಶುರುವಾಯ್ತು. ಹಳ್ಳಿಯ, ತಾಯಿಯ ನೆನಪುಗಳು ಇವತ್ತೇ ಯಾಕಿಷ್ಟು ಹೆಚ್ಚಾಗಿ ಕಾಡ್ತಾ ಇದೆ ಅನ್ನೋ ಅವನ ಪ್ರಶ್ನೆಗೆ ಮುಂಬರುವ ಕಾಲವೇ ಉತ್ತರಿಸಬೇಕಿತ್ತು.

ತೋ...ನಾನ...ತಾ..ನಾನಾ..ನಾನ..ನೀ ಯಾರೋ, ನಾ ಯಾರೋ ಕಾಲ.. ತನ್ನ ಕೋಣೆಗೆ ಹೋಗ್ತಿದ್ದವನಿಗೆ ಈ ದನಿ ಅಲ್ಲೇ ಎಲ್ಲೋ ಕೇಳಿದಂತಾಗಿ ಒಮ್ಮೆ ಬೆಚ್ಚಿ ಬಿದ್ದ. ಸಂಶಯವೇ ಇಲ್ಲ. ಅದೇ ರಾಗ ಇದು. ತನ್ನ ಕನಸಿನಲ್ಲಿ ಬಂದು ಕಾಡುತ್ತಿದ್ದ ತಾನು ಎಂದೂ ಕೇಳದ ರಾಗಕ್ಕೆ ಸಾಹಿತ್ಯ ಬೇರೆ. ಅದನ್ನ ಯಾರೋ ಗುನುಗುತ್ತಿದ್ದಾರೆ , ಯಾರದು ಅದು ನೋಡಲೇಬೇಕೆನ್ನೋ ಕುತೂಹಲದಲ್ಲಿ ದನಿ ಬಂದ ಕೋಣೆಯತ್ತ ತಿರುಗಿದ. ನೋಡಿದ್ರೆ ರಾಜಸ್ಥಾನಿಗಳಂತೆ ಪೇಟ ಸುತ್ತಿದ್ದ ಇಬ್ಬರು. ಒಬ್ಬ ಮೈತುಂಬಾ ಬ್ಯಾಂಡೇಜ್ ಸುತ್ತಿಕೊಂಡು ಮಲಗಿದ್ರೆ ಮತ್ತೊಬ್ಬ ಒಂದು ರಾಗವ ಗುನುಗುತ್ತಿದ್ದ.ಆತನನ್ನು ನೋಡಿದ್ದೇನಾ ಎಲ್ಲಾದ್ರೂ ? ಗೊತ್ತಿಲ್ಲ. ಗುರುತಿರುವ ಮುಖದಂತೇ ಕಂಡರೂ ಎಲ್ಲೂ ನೋಡಿದ ನೆನಪಾಗುತ್ತಿಲ್ಲ. ಆದರೆ ಆ ರಾಗ ಮಾತ್ರ ನೆನಪಾಗುತ್ತೆ ಆಗಾಗ, ನೆನಪಾಗಿ ತಾಯ ನೆನಪ ತರಿಸುತ್ತೆ.. ಯಾಕೆ ? ಗೊತ್ತಿಲ್ಲ.ಯಾರಪ್ಪಾ ನೀನು ? ಈ ರಾಗ ಎಲ್ಲಿಂದ ಕಲಿತೆ ಎಂದ್ರೆ ಅವ ಇವನನ್ನೇ ದುರುಗುಟ್ಟಿ ನೋಡಿದನೊಮ್ಮೆ. ನನಗೆ ಜ್ಞಾಪಕ ಇರೋ ಸಮಯದಿಂದ ಜೊತೆಗೇ ಇರುವವ ಈತ. ಈ ಊರನ್ನು ತೋರಿಸ್ತೀನಿ , ಅದೇನೋ ಹೇಳ್ಬೇಕು ರಾಜಸ್ಥಾನದಿಂದ ಕರೆತಂದವನಿಗೆ ಇಲ್ಲೇ ಅಪಘಾತ ಆಗ್ಬೇಕೇ ? ಅವ ಬೇಗ ಹುಷಾರಾಗ್ಲಿ ಅಂತ ಅವನಿಷ್ಟದ ರಾಗ ಹಾಡ್ತಿದೀನಿ ಅಂದನವ. ಎಲ್ಲಿಯ ರಾಜಸ್ಥಾನದ ಬಾಲ್ಯದ ದೋಸ್ತಿ ಮತ್ತು ಎಲ್ಲಿಯ ಕನ್ನಡ ರಾಗ ಎಂದನಿವ ಆಶ್ಚರ್ಯದಿಂದ. ನಾ ರಾಜಸ್ಥಾನದ ಮರುಭೂಮಿಯಲ್ಲಿ ಪ್ರಜ್ಞೆಯಿಲ್ಲದೇ ಬಿದ್ದಿದ್ದೆನಂತೆ. ಎಷ್ಟು ಕಾಲವೋ ಹಾಗೇ ಬಿದ್ದಿದ್ದ ನನ್ನ ಜೀವವುಳಿಸಿದ ಪುಣ್ಯಾತ್ಮನೀತ.  ಎಚ್ಚರವಾದಾಗ ಯಾವುದೋ ಊರಿನ ಹೆಸರು, ಮುಂಚೆ ಹೇಳಿದ ರಾಗ ಬಿಟ್ರೆ ಬೇರೇನೂ ಹೇಳುತ್ತಿರಲಿಲ್ಲವಂತೆ ಕೆಲ ದಿನಗಳ ನಂತರ. ಆಮೇಲೆ ನಿಧಾನವಾಗಿ ಸುಧಾರಿಸಿಕೊಂಡೆ ಅಂತ ಹೇಳ್ತಿದ್ದ ಅವ. ಅವನನ್ನು ಕಂಡಿದ್ದೇ ನನ್ನ ನೆನಪಿನಾಳದಲ್ಲಿರೋದು. ಅದಕ್ಕಿಂತ ಮುಂಚೆಯ ನಾನ್ಯಾರು, ಎಲ್ಲಿಂದ ಬಂದೆ ಅನ್ನೋದೊಂದೂ ಗೊತ್ತಿಲ್ಲ. ಅದ್ರ ಬಗ್ಗೆ ಹೆಚ್ಚಿನದ್ದೇನಾದ್ರೂ ಹೇಳಬಹುದಾದ ವ್ಯಕ್ತಿ ಇವನೊಬ್ಬನೇ . ಈ ಊರಿಂದ ಆ ಊರಿಗೆ ಹೇಗೆ ಹೋಗೋದು ಅಂತ್ಲೂ ಗೊತ್ತಿಲ್ಲ ನನಗೆ. ಇವನನ್ನು ಉಳಿಸಿಕೊಟ್ರೆ ಮಾತ್ರ ನಾನಲ್ಲಿಗೆ ಹೋಗೋಕೆ ಸಾಧ್ಯ ಡಾಕ್ಟರ್ ಅಂತ ಅಂಗಲಾಚಿದವನ ಕಣ್ಣಂಚಲ್ಲಿ ಅವನಿಗರಿಯದಂತೆ ದುಃಖ ಹೆಪ್ಪುಗಟ್ಟಿತ್ತು.

ತಾನೊಬ್ಬ ವೈದ್ಯನಷ್ಟೇ ದೇವರಲ್ಲವೆಂದು ತಿಳಿಹೇಳಿದ್ರೂ ತನ್ನಿಂದ ಚಿಕಿತ್ಸೆ ಪಡೆದು ಗುಣಮುಖನಾಗಿದ್ದ ಸ್ನೇಹಿತನ ಕಂಡವನ ಪಾಲಿಗಿವ ದೇವರೇ ಆಗಿದ್ದ. ಇವನಿಗೆ ಅವನ ಕಂಡರೆ ಯಾರೋ ಸಂಬಂಧಿಯನ್ನು ಕಂಡ ಭಾವ, ಅವನಿಗೂ ಏನಪ್ಪಾ ಹೇಗಿದೀಯ ಎನ್ನುವ ಇವನ ಕಂಡರೆ ಏನೋ ಆತ್ಮೀಯತೆ. ಅವನಿಗೆ ಇವ ರಾಮ, ಇವನಿಗೆ ಅವ ರಾಮ.. ಎಂಬ ವಾಣಿ ನೆನಪಾಯಿತೊಮ್ಮೆ ಇವನಿಗೆ. ಇವರಿಬ್ಬರನ್ನು ಹತ್ತಿರ ಸೆಳೆದಿದ್ದ ರಾಗದ ನೆನಪಾದೊಡನೆಯೇ ಕಾಡಲ್ಲಿದ್ದ ತಾಯ ನೆನಪೂ ಆಯಿತಿವನಿಗೆ. ಅದೆಷ್ಟು ಹಾಡುಗಳನ್ನು ಹಾಡುತ್ತಿದ್ದಳವಳು ತನ್ನ ಬಾಲ್ಯದಲ್ಲಿ. ಈ ಹಾಡ ಬಗ್ಗೆ ಅವಳಿಗೆ ಏನಾದ್ರೂ ಗೊತ್ತಿರಬಹುದಾ ಎಂಬ ಆಲೋಚನೆ ಹೊಳೆಯಿತೊಮ್ಮೆ. ಇತ್ತೀಚೆಗೆ ಸಿಕ್ಕ ಇವನ ಬಾಯಲ್ಲಿ ಅಷ್ಟಿಷ್ಟು ಸಾಹಿತ್ಯ ಕೇಳಿದ್ದರೂ ತನ್ನ ಕನಸಲ್ಲಿ ಅದಕ್ಕಿಂತ ಮುಂಚಿನಿಂದಲೂ ಕಾಡುತ್ತಿದ್ದ ಅದೇ ರಾಗಕ್ಕೂ ಏನಾದ್ರೂ ಸಂಬಂಧವಿರಬಹುದಾ ಎಂಬ ಪ್ರಶ್ನೆಯನ್ನು ತನ್ನ ತಾಯೇ ಉತ್ತರಿಸಬಹುದೆಂಬ ವಿಶ್ವಾಸ ಮೂಡತೊಡಗಿತು. ಅದಕ್ಕೆ ಉತ್ತರಿಸಲಿ ಇಲ್ಲ ಉತ್ತರಿಸದೇ ಇರಲಿ, ತಾ ಸುಖವಾಗಿದ್ದು ತನ್ನ ತಾಯ ಮರೆತಂತೇ ಇರುವ ತನ್ನ ಚುಚ್ಚಿ ಕೊಲ್ಲುತ್ತಿರುವ ಆತ್ಮಸಾಕ್ಷಿಯ ಸಮಾಧಾನಕ್ಕಾದರೂ ತಾನು ಊರಿಗೆ ಹೋಗಿ ಆಕೆಯನ್ನು ನೋಡಬೇಕೆಂಬ ಕಾತುರ ಕಾಡತೊಡಗಿತವನಿಗೆ. ಎದುರಿಗೆ ಬಂದ ಪ್ರತೀ ವೃದ್ಧೆಯಲ್ಲೂ ತನ್ನ ತಾಯಿಯ ಸಂಕಟಗಳೇ ಕಂಡು ಹೊರಟೇಬಿಟ್ಟ ಊರಿನತ್ತ.

ಜೀವನದ ತಲ್ಲಣಗಳೇ ಹಾಗೆ. ಹಳ್ಳಿಯಲ್ಲಿದ್ದವನಿಗೆ ಪಟ್ಟಣದ ಥಳುಕು ಬಳುಕಿಲ್ಲ. ಅದನ್ನರಸಿ ಹೊರಟವನ ಬೆನ್ನಿಗೆ ತನ್ನ ತಂದೆ ತಾಯಿಗಳಿಲ್ಲ. ಬೆಳಕನರಸಿ ಹೊರಟ ಚಿಟ್ಟೆಗಳಿಂದ ಹಳ್ಳಿಗಳೆಲ್ಲಾ ವೃದ್ದಾಶ್ರಮಗಳಾಗಿಬಿಟ್ಟಿದೆಯಲ್ಲ ಗೌರಮ್ಮ ಅಂತಿದ್ದ ಚಾರಣಿಗನ ಬಳಿ ನೀನು ರಾಜಸ್ಥಾನಕ್ಕೇನಾದ್ರೂ ಹೋಗಿದ್ದೆಯೇನಪ್ಪಾ ಎಂದು ಕೇಳುವ ಮನಸ್ಸಾದರೂ ಸುಮ್ಮನಾದಳು. ಹೌದಂದರೆ ಏನನ್ನು ಕೇಳಿಯಾಳು ? ತನ್ನ ಗಂಡನನ್ನು ನೋಡಿದ್ದೀರಾ ಎಂದೇ ? ಆತ ಹೋಗಿ ಎಷ್ಟು ವರ್ಷವಾಯ್ತು ? ಎಲ್ಲಿದ್ದಾನೋ ? ಹೇಗಿದ್ದಾನೋ ? ಅಷ್ಟಕ್ಕೂ ರಾಜಸ್ಥಾನವನ್ನೋದೇನು ನಮ್ಮ ಸೋಮನ ಬೆಟ್ಟವೇ ? ಹುಡುಕಿದ ತಕ್ಷಣ ಸಿಗೋಕೆ ? ನಮ್ಮ ರಾಜ್ಯದಲ್ಲೇ ಇರೋ ಮಗನೇ ನನ್ನ ಕಾಣೋಕೆ ಬರದೇ ವರ್ಷವಾಗಿದೆ. ಇನ್ನು ಎಂದೋ ಹೋದ ಗಂಡ ಬರುತ್ತಾನೆಯೇ ? ಇಲ್ಲಿ ಬರೋ ಯುವಕರಿಗೆ ಮಾಡಿಕೊಡೋ ರೊಟ್ಟಿಯನ್ನ ತನ್ನ ಮಗನಿಗೇ ತಟ್ಟಿ ಕೊಡುತ್ತಾ ಇದ್ದೀನಿ ಅಂದ್ಕೋಬೇಕು. ಮುಂಚಿನಂತೆ ದುಡಿಯೋಕೆ ಆಗದೇ ಇರೋ ಈ ದಿನಗಳಲ್ಲಿ ಅವರು ಕೊಡೋ ಅಷ್ಟೋ ಇಷ್ಟೋ ದುಡ್ಡಲ್ಲೇ ಬದುಕಬೇಕು ಅಂದ್ಕೋತಲೇ ಒಂದಿಷ್ಟು ಗೋಲಿಯಾಡುವವರು ಗೌರಜ್ಜಿ ಅಂತ ಇತ್ತಲೇ ಓಡಿಬಂದರು. ಇವತ್ತು ಎಲ್ಲೂ ಹೋಗಿಲ್ಲ ಮಕ್ಳಾ , ಸಿಹಿ ಇಲ್ಲ ಅಂದ್ರೂ ಆ ಮಕ್ಕಳು ಅಲ್ಲಿ ಬಂದು ಒಂದುಷ್ಟು ಆಟವಾಡಿ, ಕೂಗಾಡಿ ಮತ್ತೆಲ್ಲೋ ಹೋದ್ರು. ಆ ಮಕ್ಕಳ ನೊಡುತ್ತಾ ಗೌರಮ್ಮನಿಗೆ ತಾನು ತನ್ನ ಮಗನನ್ನು ಮಲಗಿಸುವಾಗ ಹಾಡುತ್ತಿದ್ದ ಜೋಗುಳ ನೆನಪಾಯ್ತು
ತೋ..ನಾನಾ. ತಾ..ನಾನ..ನಾನ..
ನಾ ಯಾರೋ, ನೀ ಯಾರೋ ಕಾಲ
ಒಂದ್ ಮಾಡಿ ತಳ್ತೀಯಲ್ಲೋ ದೂರ
ಅರಿಯೆ ನಾ ಮೋಸ, ತಿರುಗಿಲ್ಲ ದೇಶ
ಕೂಸಿನ ನಗು ಕಾಪಿಡುವುದೆ ಕೆಲಸ
ಬೇಡುವೆನು ಕಾಪಾಡೋ ಈಶ..

ಇಂದಿನ ಪ್ರಸಂಗವು ನೆನಪಾಗಿ ಅವಳಿಗೇ ಅರಿವಿಲ್ಲದಂತೊಂದಿಷ್ಟು ಸಾಲುಗಳು ಅವಳ ಬಾಯಿಂದ ಹೊರಹೊಮ್ಮಿದ್ದವು.
ಬಂದೆ ಬರುವನು ತಿರುಗಿ ತೊರೆದೆನ್ನ ಪತಿರಾಯ
ತಡೆಯಾದ ಗೋಡೆಗಳ ಏಣಿ ಹುಡುಕಿ
ಕಾಂಚಾಣದಾಚೆಗೂ ಕಾಡಲೆನ್ನಯ ಪ್ರೀತಿ
ಬರುವ ಸಾಧ್ಯತೆಯುಂಟು ಮಗನು ಮರಳಿ
ಬೇಸರಿಸದಿರು ಮನವೆ ಈಶನಿಹ ನಿನಗೆಂದೆ
ಮರುಭೂಮಿಯಲು ಇರುವ ನೀರಿನಂತೆ
ಬಾಳಪಂಜರದಲ್ಲಿ ಕೊನೆಯಿಲ್ಲದಂತಲೆದು
ಸಾಯೊ ಜೀವಕೆ ಸಿಗುವ ಕೀಲಿಯಂತೆ..
ತೋ ನಾನಾ.. ತಾ.. ನಾನ.. ನಾನ..

ಆಗಷ್ಟೇ ಅಲ್ಲಿಗೆ ಬಂದ ಡಾಕ್ಟರು ಮತ್ತು ಅವನ ಜೊತೆಗೆ ಬಂದ ರಾಜಸ್ಥಾನದ ಅತಿಥಿಗಳು ಇದಕ್ಕೆ ಮೂಕ ಕೇಳುಗರಾಗಿದ್ರು. ಆ ಹಾಡು ಕೇಳುತ್ತಾ ಕೇಳುತ್ತಾ ಅದರ ಹಿಂದಿನ ಅರ್ಥ ಮತ್ತು ತಮ್ಮ ನಡುವಿನ ಸಂಬಂಧಗಳ ಯೋಚಿಸುವಷ್ಟರಲ್ಲೇ ಇವರು ಬಂದ ಅರಿವಾದ ಗೌರಮ್ಮ ಅಚ್ಚರಿಯಿಂದ ತನ್ನ ಹಾಡು ನಿಲ್ಲಿಸಿದ್ದಳು. ಆ ಹೊತ್ತಿನ ಸಂತೋಷ ಅಲ್ಲಿನ ಕಣ್ಣುಗಳಲ್ಲಿನ ಅಶ್ರುಧಾರೆಯಾಗಿ ಹರಿದಿತ್ತು.
 ಸೂಚನೆ: ಈ ಕಥೆ ವಿಜಯನೆಕ್ಟಿನ ಜನವರಿ ೨೩ ರ ಸಂಚಿಕೆ, ಪುಟ ೩೦ರಲ್ಲಿ ಪ್ರಕಟವಾಗಿದೆ

Sunday, November 22, 2015

ಹಬ್ಬಾಡೋದು, ಹಬ್ಬ ಹಾಡೋದು, ಅಂಟಿಗೆಪಿಂಟಿಗೆ ಆಚರಣೆ ಕುರಿತೊಂದಿಷ್ಟು:

ದೀಪಾವಳಿ ಅಂದ್ರೆ ಮಲೆನಾಡು ಹೆಚ್ಚಾಗಿ ನೆನಪಾಗೋದಕ್ಕೆ,ಕಾಡೋದಕ್ಕೊಂದು ಕಾರಣ ಅಲ್ಲಿನ ಅಂಟಿಗೆ ಪಿಂಟಿಗೆ,ಹಬ್ಬಾಡೋದು,ಹಬ್ಬ ಆಡೋದು ಅಂತ ಹಲವು ಹೆಸರುಗಳಿಂದ ಕರೆಯಲ್ಪಡೋ ಆಚರಣೆ. ಈ ಆಚರಣೆಯ ಬಗ್ಗೆ ನನ್ನ ಬಾಲ್ಯದಿಂದಲೂ ನಮ್ಮ ತಂದೆಯವರಿಂದ, ಅಜ್ಜ-ಅಜ್ಜಿಯ ಬಾಯಿಂದ ಕೇಳಿ ಕೇಳಿ, ಪಠ್ಯದಲ್ಲೂ ಓದಿದ್ದ ನನಗೆ ಅದನ್ನ ನೋಡ್ಲೇಬೇಕೆಂಬ ಬಯಕೆ ಕಾಡ್ತಾ ಇತ್ತು. ಆದ್ರೆ ಏನು ಮಾಡೋದು ? ನಮ್ಮೂರಲ್ಲಿ ಆ ಆಚರಣೆ ಇರಲಿಲ್ಲ. ಇದ್ದ ಹಳ್ಳಿಗಳಲ್ಲೂ ಅದು ಮರೆಯಾಗುತ್ತಾ ಬರುತ್ತಿರೋದ್ರಿಂದ ಇದನ್ನ ನೊಡೋದಂದ್ರೆ ಬರೀ ವೀಡೀಯೋಗಳಲ್ಲಿ, ರಂಗದ ಮೇಲೆ ಮಾತ್ರಾ ನೋಡೋಕಾಗೋದಾ ಅನ್ನೋ ಭಯವೂ ಕಾಡುತ್ತಿತ್ತು.ಅದಕ್ಕೇ ಹಬ್ಬಕ್ಕೆ ಒಂದಿಷ್ಟು ದಿನ ಮುಂಚೆ ಮುಖಹೊತ್ತಿಗೆಯ ಗೋಡೆಯ ಮೇಲೆ "ನಿಮ್ಮೂರಲ್ಲಿ ಅಂಟಿಗೆ-ಪಿಂಟಿಗೆ ಇದೆಯಾ " ಅಂತ ಸ್ಟೇಟಸ್ ಹಾಕಿದ್ದೆ. ಒಂದಿಷ್ಟು ಗೆಳೆಯರಿಗೆ ಮೆಸೇಜು ಮಾಡಿದ್ದೆ. ಅದರಲ್ಲಿ ಗೆಳೆಯರಾದ ವಿಶ್ವೇಶ್ವರ, ಕಾರ್ತೀಕ್, ನೀಚಡಿ ವಸಂತಣ್ಣ, ಸುಶ್ರುತ್ ಅವ್ರು, ಅರವಿಂದ ಉತ್ತರವನ್ನೂ ಇತ್ತಿದ್ರು.ಅದ್ರಲ್ಲೂ ವಸಂತಣ್ಣ,ವಿಶ್ವೇಶ್ವರ ನಮ್ಮೂರಲ್ಲಿ ಇಂಥಾ ದಿನ ಇದೆ. ನೀನು ಬರ್ಲೇ ಬೇಕು ಅಂತ ಒತ್ತಾಯವನ್ನೂ ಮಾಡಿದ್ರು. ಸರಿ ಅಂತ ಹೊರಟಿದ್ದು ವಸಂತಣ್ಣನ ಊರಾದ ಚಿಕ್ಕಬಿಲಗುಂಜಿಗೆ. ಚಿಕ್ಕಬಿಲಗುಂಜಿ ಮತ್ತು ನೀಚಡಿಯಲ್ಲಿನ ಹಬ್ಬಾಡೋರ ತಂಡಕ್ಕೆ ಕಿವಿಯಾಗೊದ್ದು, ನಾನೂ ಆ ತಂಡದೊಂದಿಗೆ ಭಾಗಿಯಾಗಿದ್ದೊಂದು ಸಖತ್ ನೆನಪು. ಆ ನೆನಪುಗಳನ್ನು ತಮ್ಮೊಟ್ಟಿಗಿಡೋ ಪ್ರಯತ್ನದಲ್ಲಿದ್ದೇನೆ. ನಾ ಕೇಳಿದ ಹಬ್ಬಾಡೋ ಹಾಡುಗಳನ್ನೆಲ್ಲಾ ರೆಕಾರ್ಡ್ ಮಾಡಿ ಗೂಗಲ್ ಡ್ರೈವಿಗೆ ಹಾಕಿಟ್ಟಾಗಿದೆ.. ಫೋಟೋಗಳೂ ಅಪ್ಲೋಡಾಗೋ ಹಾದಿಯಲ್ಲಿ..ಜೊತೆಯಾದ ನೆನಪ ಬುತ್ತಿಯೀಗ ನಿಮ್ಮ ಮುಂದೆ...
ವಸಂತಣ್ಣನ ಹಬ್ಬ ಕಳಿಸೋ ತಯಾರಿ

ಮಲೆನಾಡಿಗರಿಗೆಲ್ಲಾ ದೀಪಾವಳಿ ಅಂದ್ರೆ ಭಾರೀ ಖುಷಿ. ದೊಡ್ಡಬ್ಬ ಅಂತ್ಲೇ ಕರೆಯೋ ಇದರ ಆಚರಣೆ ಶುರುವಾಗೋದು ಭೂರಿನೀರು ತುಂಬೋ ರಾತ್ರಿಯಿಂದ. ರಾತ್ರಿಯೇ ಮನೆಯ ಹಂಡೆ,ಬಾವಿ,ಒಲೆಗಳಿಗೆಲ್ಲಾ ರಂಗೋಲಿ ಬರೆದು, ಅಳ್ಳಂಡೆಕಾಯಿಯದೋ ಮತ್ಯಾವುದೋ ಕಾಯಿಯದೋ ಎಲೆ,ಬಳ್ಳಿ ತಂದು ಕಟ್ಟಿ ಪೂಜಿಸೋದ್ರಿಂದ ಹಬ್ಬದ ಖುಷಿ ಕಳೆಗಟ್ಟಲಾರಂಭಿಸುತ್ತೆ. ಮಾರನೇ ದಿನ ಬೆಳಗ್ಗೆಯೇ ಮನೆಯ ಎಳೆಯರಿಗೆಲ್ಲಾ ಎಬ್ಬಿಸಿ ಎಣ್ಣೆ ಹಚ್ಚಿ ಕೂರಿಸೋದು ಅಂದ್ರೆ ಅಮ್ಮಂದಿರಿಗೆಲ್ಲಾ ಯುದ್ದಕ್ಕೆ ಹೊರಟ ಭಾವ. ಏ ಎಣ್ಣೆ, ಜಿಡ್ಡು, ರಾಡಿ ಅಂತ ನೂರೆಂಟು ವಸವಂತ ಮಾಡೋ ಕಿಲಾಡಿ ಮಕ್ಕಳನ್ನು ಒಂದ್ಕಡೆ ಕೂರಿಸಿ ಅವರ ತಲೆಗೆ ಎಣ್ಣೆ ತಟ್ಟಿ, ಮುಖ, ಕೈ ಕಾಲಿಗೆಲ್ಲಾ ಎಣ್ಣೆ ಬಳಿಯೋ ಹೊತ್ತಿಗೆ ಅವರ ಅಮ್ಮಂದಿರಿಗೆ ಉಸ್ಸಪ್ಪಾ ಅನಿಸದಿರಲ್ಲ. ಶರ್ಟು ಬಿಚ್ಚಿ ಕೂರಿಸಿದ ಹುಡುಗ್ರೆಲ್ಲಾ ಚಳಿ ಚಳಿ ಅಂತಾರೆ ಅಂತ ಅವರನ್ನ ಬಿಸಿಲಲ್ಲಿ ಕೂರಿಸೇ ಎಣ್ಣೆ ಹಚ್ಚೋದು. ಏ ವರ್ಷಕ್ಕೊಂದು ಸಲ ಎಣ್ಣೆ ಹಚ್ಚಿಸ್ಕೊಳ್ಬೇಕು ಕಣೋ. ಸೂರ್ಯನ ಬಿಸಿಲಲ್ಲಿ ಇದ್ರೆ ವಿಟಮಿನ್ ಡಿ ಸಿಗುತ್ತೆ ಅಂತ ಓದಿಲ್ವಾ ನೀನು ಅಂತ ಪುಸಲಾಯಿಸೋ ಈಗಿನ ಅಮ್ಮಂದಿರು ಮಕ್ಕಳಷ್ಟೇ ಅಪಡೇಟ್ ಆಗಿದ್ದಾರೆ ! ಆಚರಣೆ ಅಂತ್ಲೋ, ಇಷ್ಟಪಟ್ಟೋ ಎಣ್ಣೆ ಬಳಿಸಿಕೊಂಡದ್ದಾಯ್ತು. ಆ ಜಿಡ್ಡಿನ್ನು ತೊಳೆಯೋದೇಗಪ್ಪಾ ಅನ್ನೋದು  ಮಕ್ಕಳ ತಲೆನೋವು. ಅದಕ್ಕೇಂತ್ಲೇ ಒಲೇಲೆ ಬಿಸಿನೀರು, ಸೀಗೇಪುಡಿ ಕಾಯ್ತಾ ಇರುತ್ತಲ್ಲ. ಎಣ್ಣೆ ಹಚ್ಚಿಸಿಕೊಂಡು ಬಿಸಿಲಲ್ಲಿ ಕೂತರೂ ಬಚ್ಚಲ ಬಿಸಿನೀರು, ಸೀಗೆಕಾಯಿಯ ಸ್ಪರ್ಷ ಅನ್ನೋದು ಅದೆಷ್ಟು ಖುಷಿ ಕೊಡುತ್ತೆ ಅಂತೀರಿ.. ಏ ಅರ್ಧ ಘಂಟೆ ಆಯ್ತಲ್ಲೋ ಸ್ನಾನಕ್ಕಿಳಿದು, ಹಂಡೆಯ ನೀರೆಲ್ಲಾ ಖಾಲಿ ಮಾಡಿದ್ಯಾ ಎಂತ ಕತೆ ಅಂತ ಅಮ್ಮ ಗದರೋವರೆಗೂ ಹೊರಲೋಕದ ಪ್ರಜ್ಞೆಯೇ ಇಲ್ಲದಂತಾ ಭಾವ ಅಲ್ಲಿ !
ಸುರುಸುರು ಬತ್ತಿಯೊಂದಿಗೆ ಶಿಶಿರಣ್ಣ
ಭೂರಿನೀರು ತುಂಬೋ ರಾತ್ರಿಯ ಅಲಂಕಾರ
ಭೂರಿನೀರು ತುಂಬೋ ದಿನದ ರಾತ್ರಿ ಭೂರಿಕಳವು, ಭೂರಿಗಳವು ಅನ್ನೋದು ಕೆಲವು ಹಳ್ಳಿಗಳಲ್ಲಿರೋ ಆಚರಣೆ. ಅವತ್ತು ರಾತ್ರೆ ಏನು ಕಳುವು ಮಾಡಿದರೂ ಯಾರೂ ಏನೂ ಅನ್ನಬಾರದು ಅನ್ನೋದು ಹಳ್ಳಿಗಳಲ್ಲಿನ ವಾಡಿಕೆ. ಮುಂದಿನ ವಾರ ಇಳಿಸಿ ಮಾರಬೇಕು ಅಂತಿರೋ ಎಳನೀರೋ, ನಾಡಿದ್ದು ಹಬ್ಬಕ್ಕಾಗುತ್ತೆ ಅಂತ ಮರದಲ್ಲೇ ಬಿಟ್ಟ ಬಾಳೆಗೊನೆ, ಒಡೆಯೋಕೆ ಆಗುತ್ತೆ ಅಂತ ಹಿತ್ತಲಲ್ಲಿ ಬಿಟ್ಟ ಕುಂಬಳಕಾಯಿ ಹೀಗೆ ಹಲವಷ್ಟು ವಸ್ತುಗಳು ಬೆಳಗಾಗುವಷ್ಟರಲ್ಲಿ ಮಾಯವಾಗಿರುತ್ತೆ ಆ ದಿನ ! ಹಂಗತಾ ಮನೆ ದರೋಡೆ ಮಾಡುವಷ್ಟರ ಮಟ್ಟಿಗೆ ದರೋಡೆ ಮಾಡ್ತಾರೆ ಅಂತಲ್ಲ. ತಮಗೆಲ್ಲಾ ಬಯ್ತಿರೋ,ಹೀಯಾಳಿಸ್ತಿರೋ ಜನರ ಮನೆಯಿಂದ ಏನಾದ್ರೂ ಕದ್ದು ಅವರಿಗೊಂದು ಪಾಠ ಕಲಿಸೋ ಚೇಷ್ಟೆಯಷ್ಟೇ ಒಂದಿಷ್ಟು ಹುಡುಗರದ್ದು. ರಾತ್ರಿಯೆಲ್ಲಾ ಕದ್ದದ್ದನ್ನು ಎಲ್ಲಾ ಒಂದೆಡೆ ಸೇರಿ ತಿಂದು ಮುಗಿಸಿ ಮನೆಗೆ ಹೋಗಿ ಮಲಕ್ಕೋತಾರೆ ಅಷ್ಟೆ. ಸಾಮಾನ್ಯವಾಗಿ ಕಳುವಾಗೋದು ತಿನ್ನೋ ವಸ್ತುಗಳೇ ಆದ್ದರಿಂದ ಹುಡುಗ್ರ ಹುಡುಗುಬುದ್ದಿಗೆ ಕಳುವಾದ ಮನೆಯವ್ರೂ ಹೆಚ್ಚು ತಲೆಕೆಡಿಸಿಕೊಳ್ಳದೇ ಒಂದು ಹಿಡಿಶಾಪ ಹಾಕಿ, ನಸುನಕ್ಕು ಸುಮ್ಮನಾಗಿ ಬಿಡ್ತಾರೆ. ಯಾಕಂದ್ರೆ ಅವ್ರೂ ತಮ್ಮ ಯೌವನದಲ್ಲಿ ಇದನ್ನೆಲ್ಲಾ ಮಾಡಿದವ್ರೇ ಅಲ್ಲವೇ !

ಅದಾದ ಮೇಲೆ ನರಕಚತುರ್ದಶಿ. ಉಪರಿ ಬಂತು ಅಂತ ಕೆಲವು ಸಲ ಅವತ್ತೇ ಅಮವಾಸ್ಯೆಯ ತಿಥಿಯೂ ಬಂದುಕೊಂಡಿರುತ್ತೆ! ಮಲೆನಾಡ ಕೆಲವು ಸೀಮೆಗಳಲ್ಲಿ ಅಮವಾಸ್ಯೆಯಂದು ಗೋಪೂಜೆ,ಲಕ್ಷ್ಮೀಪೂಜೆ, ಆಯುಧಪೂಜೆಗಳಾದ್ರೆ ಕೆಲವು ಕಡೆ ಅದು ಬಲಿಪಾಡ್ಯಮಿಗೆ. ಬಲಿಪಾಡ್ಯಮಿ ಅನ್ನೋದು ವರ್ಷಕ್ಕೊಂದು ಸಲ ಬಲೀಂದ್ರ ರಾಜನು ಭೂಮಿಗಿಳಿದು ಬರುವ ದಿನ ಅಂತ ಬಲೀಂದ್ರಪೂಜೆಯನ್ನೂ ನಡೆಸುತ್ತಾರೆ. ಅಂದ ಹಾಗೆ ಈ ಎಲ್ಲಾ ಪೂಜೆಗಳನ್ನ ನವರಾತ್ರಿಯಲ್ಲಿ ಮಾಡ್ತಾರಲ್ವಾ ಅನ್ನುವವರ ಸಂದೇಹ ಪರಿಹಾರಕ್ಕೆ ಈ ಮಾಹಿತಿ. ಈ ಎಲ್ಲಾ ಪೂಜೆಗಳನ್ನ ಪೇಟೆಯಲ್ಲಿರುವಂತೆ ನವರಾತ್ರಿಗೆ ಮಾಡೋಲ್ಲವಿಲ್ಲಿ. ಅವೆಲ್ಲಾ ಆಗೋದು ದೀಪಾವಳಿಗೆ.  ನವರಾತ್ರೆಯ ಎಂಟನೇದಿನದಿಂದ ಪುಸ್ತಕಗಳನ್ನಿಟ್ಟು ಶಾರದಾಪೂಜೆ ಅಂತ ಮಾಡೋದು ಬಿಟ್ಟರೆ, ಆ ಒಂಭತ್ತು, ಹತ್ತನೇದಿನದ ಪೂಜೆಗಳೆಲ್ಲಾ ಇಲ್ಲಿ ಆಗೋದು ದೀಪಾವಳಿಗೆ. ಅದಕ್ಕೇ ದೀಪಾವಳಿಯೆನ್ನೋದು ದೊಡ್ಡಬ್ಬ.ದೀಪಾವಳಿಯಲ್ಲಿ ಗೋವುಗಳನ್ನು/ಹೋರಿಗಳನ್ನು ಬೆದರಿಸೋದು, ಅವತ್ತಿನ ರಾತ್ರಿ ಪಂಜಿನಿಂದ ಹಬ್ಬ ಕಳಿಸೋದು ಹೀಗೆ ಹತ್ತು ಹಲವು ಆಚರಣೆಗಳ ಖುಷಿಯ ಬಗ್ಗೆ ಬರೆಯುತ್ತಾ ಹೋದ್ರೆ ಒಂದೊಂದೂ ಒಂದೊಂದು ಸಂಚಿಕೆಯಾದಾವು.

ಅವುಗಳೆಲ್ಲವನ್ನೂ ಸದ್ಯಕ್ಕಲ್ಲೇ  ಬಿಟ್ಟು  ಅಂಟಿಗೆಪಿಂಟಿಗೆ ರಾತ್ರಿಯ ಕಥೆಗೆ ಬರೋಣ. ನೀಚಡಿ ಅಂದ್ರೆ ಎಲ್ಲಪ್ಪ ಅನ್ನೋರಿಗೆ ಅದು ಸಾಗರದಿಂದ ಶಿವಮೊಗ್ಗ ರಸ್ತೆಯಲ್ಲಿ ೨೨ ಕಿ.ಮೀ ದೂರದಲ್ಲಿದೆ ಅಂತನ್ನಬಹುದು. ಶಿವಮೊಗ್ಗ ರಸ್ತೆಯಲ್ಲಿ ಸಿಗೋ ಕಾಸ್ಪಾಡಿಯಿಂದ ತ್ಯಾಗರ್ತಿ ರಸ್ತೆಯಲ್ಲಿ ೭ ಕಿ.ಮೀ ಹೋದರೆ ಸಿಗೋದೆ ಚಿಕ್ಕಬಿಲಗುಂಜಿ. ಅಲ್ಲಿಂದ ಒಂದು ಕಿಮೀ ಮೇಲೆ ಹೋದರೆ ಸಿಗೋದು ನೀಚಡಿ.ಚಿಕ್ಕಬಿಲಗುಂಜಿಯ ವಸಂತಣ್ಣನ ಮನೆಯ ಹಿಂದಿನ ಹಲಸಿನ ಮರಕ್ಕೆ ನಮಸ್ಕಾರ ಮಾಡೇ ಅಂಟಿಗೆ ಪಿಂಟಿಗೆಯ ಯಾತ್ರೆ ಶುರುವಾಗೋದ್ರಿಂದ ಸರಿಯಾದ ಸಮಯಕ್ಕೆ, ಸರಿಯಾದ ಮನೆಗೆ ಹೋಗಿದ್ದು ನನ್ನ ಅದೃಷ್ಟವೇ ಸರಿ ಎಂದನಿಸಿದ್ದು ಸುಳ್ಳಲ್ಲ.
ಹಲಸಿನ ಮರದ ಬುಡದಿಂದ ಜ್ಯೋತಿಯನ್ನು ತೆಗೆದುಕೊಳ್ಳುತ್ತಿರೋ ಚಿಕ್ಕಬಿಲಗುಂಜಿಯ ಹಬ್ಬಾಡೋ ತಂಡ

ಅಂಟಿಗೆ-ಪಿಂಟಿಗೆ ಅಥವಾ ಹಬ್ಬಾಡೋ ಆಚರಣೆ ಎಲ್ಲೆಡೆ ನಶಿಸುತ್ತಾ ಬಂದಿದ್ರೂ ಇಲ್ಲಿ ಉಳಿದುಕೊಂಡಿರೋಕೆ ಮುಖ್ಯ ಕಾರಣ ಆ ಊರವರು ನಡೆಸಿಕೊಂಡು ಬಂದಿರೋ ಕಟ್ಟುಪಾಡುಗಳು ಅನಿಸುತ್ತೆ. ಅಲ್ಲಿ ಸುಮಾರು ನಲವತ್ತು ಮನೆಗಳಿವೆಯಂತೆ. ಎಲ್ಲಾ ಮನೆಗಳಿಂದಲೂ ಹಬ್ಬಾಡೋಕೆ ಕನಿಷ್ಟ ಒಬ್ಬರಾದರೂ ಬರಲೇಬೇಕಂತೆ. ಬರಲಿಲ್ಲ ಅಂದ್ರೆ ಒಂದು ಸಾವಿರ ರೂ ದಂಡ ! ದಂಡ ಅನ್ನೋದಕ್ಕಿಂತಲೂ ಹೆಚ್ಚಾಗಿ ನಮ್ಮೂರ ಆಚರಣೆ ಅನ್ನೋ ಕಾರಣಕ್ಕೆ ಊರವರೆಲ್ಲಾ ಒಟ್ಟು ಸೇರಿ ನಡೆಸಿಕೊಂಡು ಬಂದಿರೋ ಆಚರಣೆಯನ್ನ ನೋಡೋಕೆ ಖುಷಿಯಾಗುತ್ತೆ. ಊರ ಒಂದು ಹಲಸಿನ ಮರದ  ಬುಡದಲ್ಲಿ ನಂದಾದೀಪದಂತೆ ಒಂದು ದೀಪ ಹಚ್ಚಿ ಅದನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿರುತ್ತಾರೆ ಹಬ್ಬದ ಹಿಂದಿನ ದಿನ. ಹಬ್ಬದ ದಿನ ರಾತ್ರಿ ಅದೇ ಮರದ ಬುಡಕ್ಕೆ ಮತ್ತೆ ಬಂದು ಅಲ್ಲಿಂದ ತಮ್ಮ ದೀವಟಿಗೆಗಳಿಗೆ ಬೆಂಕಿ ಹಚ್ಚಿಕೊಂಡು ಹಬ್ಬದ ಹಾಡುಗಳ ಹಾಡುತ್ತಾ ಊರ ದೇವಸ್ಥಾನಕ್ಕೆ ಹೋಗುತ್ತಾರೆ.
ಊರದೇಗುಲದಲ್ಲಿ ಶ್ರೀಕೃಷ್ಣಪಾರಿಜಾತದ ಮೊದಲ ಹಾಡು
ಆಚರಣೆಯಲ್ಲಿ ಹಿರಿಯರಷ್ಟೇ ಜೋಶ್ನಿಂದ ಕಿರಿಯರೂ ಬರ್ತಿದ್ದಾರೆ ಅನ್ನೋದ್ನ ನೋಡೋಕೆ ಸಖತ್ ಖುಷಿಯಾಗುತ್ತೆ !

ಚಿಕ್ಕಬಿಲಗುಂಜಿ ಹಬ್ಬಾಡೋ ತಂಡ
 ಅಲ್ಲಿ ಹಬ್ಬದ ಹಾಡುಗಳನ್ನ ಹಾಡಿದ ನಂತರ ಊರ ಪ್ರತಿಯೊಬ್ಬರ ಮನೆಗೂ ಹಬ್ಬದ ಹಾಡುಗಳನ್ನ ಹಾಡುತ್ತಾ ಬರುತ್ತಾರೆ. ದೀಪೋಳಿಯೋ.. ದೀಪೋ ಎಂದು ಕೂಗುತ್ತಾ
ಊರಗಮದೊಡೆಯಗೆ ನನ್ನ ಪೂಜೋ ಅಂತ ಶುರುವಾಗೋ ಬಲೀಂದ್ರನ ಪೂಜೆಯ ಹಾಡಿನ ನಂತರ ಮೊದಲ ಮನೆಯುದುರು ಶುರುವಾಗೋ ಹಾಡೋ ಹೀಗೆ ಸಾಗುತ್ತೆ..(ನಾ ಕೇಳಿ ಬರೆದದ್ರಲ್ಲಿರಬಹುದಾದ ದೋಷಗಳ ಕ್ಷಮಿಸಿರೆಂಬ ಕೋರಿಕೆಯೊಂದಿಗೆ)
ಬಾಗಿಲು ಬಾಗಿಲು ಚೆಂದ, ಈ ಮನೆ ಬಾಗಿಲು ಚೆಂದ
ಬಾಗಿಲ ಮೇಲೇನೋ ಬರೆದೈತೋ ..ಶಿವ ಶಿವ
ಬಾಗಿಲ ಮೇಲೇನೋ ಬರೆದೈತೋ ಗಿಳಿರಾಮ
ಓದೇಳೋ ನಿಮ್ಮ ಹಿರಿಯರಿಗೋ ..ಶಿವ ಶಿವ
ಓದೇಳೋ ನಿಮ್ಮ ಹಿರಿಯರಿಗೇನಾದಾರೆ
ಕಾಮಾನ ದೀಪೇ ನಡೆ ಮುಂದೆ ..ಶಿವ ಶಿವ
ಕಾಮಾನ ದೀಪೇ ನಡೆ ಮುಂದೆ ಜಗುಲಿಗೆ
ಜ್ಯೋತಿಗೊಂದೆಣ್ಯ ಎರೆಬನ್ಯೋ.. ಶಿವ ಶಿವ.
ಎಣ್ಣೆ ಎರೆದಾರೆ ಪುಣ್ಯವು ನಿಮಗಾದವೊ
ಆನಂದನುಗಾಲ ಸುಖಬಾಳೋ ..ಶಿವ ಶಿವ

ಕರಿಸೀರೆಯನುಟ್ಟು ಸೆರಗ ಮುತ್ತಕಟ್ಟಿ
ಚಿಕ್ಕ ಮಾಳಿಗೆಲಿ ಸುಳಿಬಾರೋ ..ಶಿವ ಶಿವ
ಚಿಕ್ಕ ಮಾಳಿಗೆಲಿ ಸುಳಿವರೊ ಕಾಯೋ ನಿಮ್ಮ
ಕಪ್ಪಿನ ಬೆಳಕಲಿ ಮಗಳೆದ್ದೋ ..ಶಿವ ಶಿವ
ಕಪ್ಪಿನ ಬೆಳಕೆಲೆ ಮಗಳೆದ್ದು ಜೋಗುಳ ಪಾಡಿ..
ಜ್ಯೋತಿಗೊಂದೆಣ್ಣಿಯ ಎರಿಬಾರೋ ..ಶಿವ ಶಿವ
ಎಣ್ಣೆಯ ಎರೆದಾರೆ ಪುಣ್ಯವು ನಿಮಗಾದವೊ
ಆನಂದನುಗಾಲ ಸುಖಬಾಳೋ ..ಶಿವ ಶಿವ

ಕರಿಸೀರೆಯನುಟ್ಟು ಸೆರಗ ಮುತ್ತಕಟ್ಟಿ
ಮುಮ್ಮಾಳಿಗೆಯೊಳಗೆ ಸುಳಿಬಾರೋ ..ಶಿವ ಶಿವ
ಮುಮ್ಮಾಳಿಗೆಯೊಳಗೆ ಸುಳಿವರೊ ಕಾಯೋ ನಿಮ್ಮ
ಓಲೆಬೆಳಕೇಲಿ ಮಗಳೆದ್ದೋ ..ಶಿವ ಶಿವ
ಓಲೆಬೆಳಕೇಲೆ ಮಗಳೆದ್ದು ಜೋಗುಳ ಪಾಡಿ..
ಜ್ಯೋತಿಗೊಂದೆಣ್ಣೆ ಎರಿಬಾರೋ ..ಶಿವ ಶಿವ
ಎಣ್ಣೆಯ ಎರೆದಾರೆ ಪುಣ್ಯವು ನಿಮಗಾದವೊ
ಆನಂದನುಕಾಲ ಸುಖಬಾಳೋ ..ಶಿವ ಶಿವ
ಇಲ್ಲಿಗ್ಹರಹರ ಇಲ್ಲಿಗೆ ಶಿವ ಶಿವ
ಇಲ್ಲಿಗೀ ಸಂಜೆ ಪದಮುಂದೋ ಶಿವ ಶಿವ

ಹೀಗೆ ಮುನ್ನಡೆಯೋ ಹಾಡನ್ನ ನಾ ಬರಿತಾ ಹೋದ್ರೆ ಅದರ ಮಜಾ ಸಿಕ್ಕಲಿಕ್ಕಿಲ್ಲ. ಲಿಂಕಲ್ಲಿದೆ ಕೇಳ್ನೋಡಿ. ಆನಂದಿಸಿ..

ಇದೇ ರೀತಿಯ ತುಂಬಾ ಹಾಡುಗಳಿವೆ. ಎಲ್ಲಾ ಬರೆಯುತ್ತಾ ಹೋದ್ರೆ ಬೆಳಗಾದೀತು !
 
 ಚಿಕ್ಕಬಿಲಗುಂಜಿಯ ಹಾಡುಗಳನ್ನ ಕೇಳಿದ ನಂತರ ನೀಚಡಿಗೆ ಹೋದೆವು. ಅಲ್ಲಿ ಹತ್ತುವರ್ಷಗಳ ಹಿಂದೆ ಬಿಟ್ಟುಹೋದ ಪದ್ದತಿಯನ್ನು ಮತ್ತೆ ಶುರುಮಾಡೋಕೆ ಅಲ್ಲಿನ ಗ್ರಾಮಸ್ಥರು ಟೊಂಕ ಕಟ್ಟಿ ನಿಂತಿದ್ರು.ಮೊದಲ ದಿನವೇ ಆಭಾಸವಾಗಬಾರದು ಅಂತ ದಿನಾ ಅಲ್ಲಿನ ದೇವಸ್ಥಾನದಲ್ಲಿ ಪ್ರಾಕ್ಟೀಸ್ ಮಾಡ್ತಾ ಇದ್ದ ಹುಡುಗರ, ದೊಡ್ಡವರ ಜೊತೆಗೆ ನಾವೂ ಸೇರಿಕೊಂಡೆವು ! ಅಂತೂ ರಾತ್ರಿ ಹತ್ತೂಮುಕ್ಕಾಲಿಗೆ ಒಂದು ಹಂತದ ಭರವಸೆ ಬಂದ ನಂತರ ಊರಿಗೆ ಹಬ್ಬಾಡೋಕೆ ಹೊರಟು ನಿಂತಿತು ತಂಡ. ಅವರ ಜೊತೆಗೆ ನಾವೂ. ನಾ ಮೊದಲು ಹೊರಟಿದ್ದು ಆದಷ್ಟೂ ಹಾಡುಗಳ ರೆಕಾರ್ಡ್ ಮಾಡ್ಬೇಕು ಅಂತ. ಆದರೆ ಕೆಲಮನೆಗಳ ನಂತರ ನಾನೂ ನನಗರಿಯದಂತೆ ಅವರೊಳಗೊಂದು ದನಿಯಾಗಿದ್ದೆ !! ಹಬ್ಬಾಡೋದು ಅಂದ್ರೆ ಏನೇನಿರುತ್ತೆ ಅನ್ನೋರ ಕುತೂಹಲ ತಣಿಸೋಕೊಂದಿಷ್ಟು ಮಾಹಿತಿಗಳು. ಮನೆಯ ಬಾಗಿಲು ಹಾಕಿದ್ರೆ ಅದ್ರ ಬಾಗಿಲು ತೆಗಿಸೋಕೆ ಬೇರೆ ಹಾಡು, ಮನೆಯಲ್ಲೇನಾದ್ರೂ ಬಸಿರಿಯರೋ, ಬಾಣಂತಿಯರೋ ಇದ್ರೆ ಅವರನ್ನು ಹರಸೋ ಹಾಡುಗಳು, ಶ್ರೀ ಕೃಷ್ಣ ಪಾರಿಜಾತದ ಹಾಡು, ಊರ ಗೌಡನ ಮಗನ ಬಗೆಗಿನ ಹಾಡು, ರೈಲ ಹಾಡು, ಗಣಪತಿಯ ಹಾಡು ಹೀಗೆ ಹತ್ತು ಹಲವು ಹಾಡುಗಳಿವೆ. ಅದರಲ್ಲಿ ಕೆಲವೊಂದು  ಪೌರಾಣಿಕವಾದರೆ ಕೆಲವೊಂದು ಸಾಮಾಜಿಕ.

ಹೊರಡಲಣಿಯಾದ ನೀಚಡಿಯ ದೇವಸ್ಥಾನದಲ್ಲಿನ ಜ್ಯೋತಿ
ನೀಚಡಿ ದೇವಸ್ಥಾನದಿಂದ ಹೊರಡುತ್ತಿರುವ ಜ್ಯೋತಿ
ಹಬ್ಬದ ಹಾಡು ಹೇಳುತ್ತಿರುವ ನೀಚಡಿಯ ತಂಡ
ಮನೆಯಿಂದ ಮನೆಗೆ ಸಾಗಿದೆ ಹಬ್ಬಾಡುವ ತಂಡದ ಪಯಣ
ಹಬ್ಬಾಡುವವರ ದೀಪಕ್ಕೆ ಎಣ್ಣೆಯೆರೆದು, ಆ ದೀಪದಿಂದ ತಮ್ಮ ಮನೆಯ ದೀಪವನ್ನು ಹಚ್ಚಿಕೊಳ್ಳುತ್ತಿರುವ ಮನೆಯೊಡತಿ
ಮುಂದುವರೆದಿರುವ ಹಾಡು..
ಮನೆಯ ಬಾಗಿಲು ತೆಗೆಸಿದ ನಂತರ ಮನೆಯೊಡತಿ ಅಥವಾ ಮನೆಯ ಯಾವುದಾದ್ರೂ ಹೆಣ್ಣುಮಗಳು ತಮ್ಮ ಮನೆಯಿಂದ ಎಣ್ಣೆಯನ್ನು ತಂದು ದೀಪಹಿಡಿದವರ ದೀವಟಿಗೆಗೆ ಸುರಿಯುತ್ತಾರೆ. ದೀವಟಿಗೆಯ ಬೆಳಕಿಂದ ತಮ್ಮ ಮನೆಯ ದೀಪವೊಂದನ್ನು ಹಚ್ಚಿಕೊಳ್ಳುತ್ತಾರೆ. ಹಬ್ಬಾಡೋರು ಬಂದು ನಮ್ಮ ಮನೆಯ ಜ್ಯೋತಿಯನ್ನು ಬೆಳಗಿಸಿದ್ರು ಅಂದ್ರೆ ವರ್ಷವಿಡೀ ಒಳ್ಳೇದಾಗುತ್ತೆ ಅನ್ನೋ ನಂಬಿಕೆ ಮನೆಯವರದ್ದು. ಮನೆಯಲ್ಲಿ ಎರಡು ಅಥವಾ ಮೂರು ಹಾಡುಗಳನ್ನು ಹೇಳೋ ತಂಡದವರಿಗೆ ಮನೆಯವರು ಕಂಬಳಿ, ಚಾಪೆ ಹಾಸಿ ಕೂರಿಸಿ ಅವರು ಹಾಡು ಹೇಳೋ ತನಕ ಕೇಳಿ ನಂತರ ಒಂದಿಷ್ಟು ಅಕ್ಕಿ, ಸ್ವಲ್ಪ ದುಡ್ಡು, ಜೊತೆಗೆ ಕಡುಬನ್ನೋ, ಹೋಳಿಗೆಯನ್ನೋ, ಬಾಳೆ ಹಣ್ಣನ್ನೋ ಕೊಟ್ಟು ಕಳುಹಿಸುತ್ತಾರೆ. ಕೆಲವು ಮನೆಯಲ್ಲಿ ಅವಲಕ್ಕಿ, ಚಾ ಕೊಡೋದೂ ಉಂಟು ! ಆ ತರ ಕೊಟ್ಟ ಅಕ್ಕಿಯನ್ನೆಲ್ಲಾ ಒಂದು ಚೀಲಕ್ಕೆ ತುಂಬಿಸಿಕೊಂಡು ಬರೋ ಹಬ್ಬಾಡೋ ತಂಡದವರು ಕೊನೆಗೆ ಊರ ದೇವಸ್ಥಾನದ ಯಾವುದಾದರೂ ಕಾರ್ಯಕ್ಕೆ ಬಳಸುತ್ತಾರೆ. ದುಡ್ಡನ್ನೂ ಹಾಗೆಯೇ. ನಾವು ಹೋದಲ್ಲೆಲ್ಲಾ ಪೇಪರಿನಲ್ಲಿ ಸುತ್ತಿ ಕೊಟ್ಟ ಹೋಳಿಗೆಯೇ ಒಂದು ರಾಶಿಯಾಗಿ ರಾತ್ರೆ ಎರಡರ ಸುಮಾರಿಗೆ ಹೋದ ಒಂದು ಮನೆಯಲ್ಲಿ ಕೂತು ಎಲ್ಲಾ ಹಂಚಿ ತಿಂದದ್ದಾಯ್ತು. ಆ ಮನೆಯಲ್ಲೇ ನಮಗೆ ಅವಲಕ್ಕಿ, ಚಾ ಕೂಡ. ನಾ ಹಬ್ಬಾಡೋಕೆ ಬಂದವನಲ್ಲ, ನೋಡೋಕೆ ಬಂದವ ಅಂತ ಎಷ್ಟು ಹೇಳಿದ್ರೂ ಕೇಳದೆ,ತಮ್ಮಲ್ಲೇ ಒಬ್ಬನಾಗಿ ಕಂಡ ನೀಚಡಿ ಹಬ್ಬಾಡೋ ತಂಡದವರಿಗೆ ಆಭಾರಿ ನಾನು..

ಮಧ್ಯರಾತ್ರಿ ಎರಡಕ್ಕೆ ಟೀ,ಅವಲಕ್ಕಿ,ಹೋಳಿಗೆಯ ಸೌಭಾಗ್ಯ.. ಯಾರಿಗುಂಟು ಯಾರಿಗಿಲ್ಲ !
ಸಮಯ:ಬೆಳಗ್ಗೆ ೬:೨೦. ಬೆಳಕು ಹರಿದರೂ ಹಬ್ಬಾಡುವ ಜ್ಯೋತಿ ಕಂದಿಲ್ಲ. ಅವರ ಉತ್ಸಾಹವೂ ಕುಂದಿಲ್ಲ. ಇನ್ನು ಒಂದೋ ಎರಡೋ ಮನೆ ಮುಗಿಸಿ, ದೀಪವನ್ನು ಮರದ ಬಳಿಯಿಟ್ಟು ರಾತ್ರಿಯವರೆಗೆ ವಿಶ್ರಾಂತಿ ಪಡೆಯೋ ಇರಾದೆಯಲ್ಲಿರುವಂತೆ ಮುನ್ನಡೆಯುತ್ತಿರೋ ಚಿಕ್ಕಬಿಲಗುಂಜಿ ತಂಡ.

ಕೆಲವೆಡೆ ಹಬ್ಬದ ದಿನ ನಡೆದರೆ, ಕೆಲವೆಡೆ ಹಬ್ಬ ಆಗಿ ಎರಡು ಮೂರು ದಿನಗಳವರೆಗೂ ನಡೆಯುತ್ತಲೇ ಇರುತ್ತಂತೆ ! ದೊಡ್ಡ ದೊಡ್ಡ ಊರುಗಳಾದ್ರೆ ಎಲ್ಲಾ ಮನೆಗಳನ್ನೂ ಒಂದು ರಾತ್ರೆಯಲ್ಲಿ ಮುಗಿಸೋಕಾಗ್ಬೇಕಲ್ಲ ! ಚಿಕ್ಕಬಿಲಗುಂಜಿಯಲ್ಲಿದ್ದಂತೆ ಕಲವೆಡೆ ಎರಡು ಮೂರು ತಂಡಗಳನ್ನಾಗಿ ವಿಭಾಗಿಸಿಕೊಳ್ತಾರಂತೆ. ಒಂದು ಗುಂಪು ಊರ ದೇವಸ್ಥಾನದಿಂದ ಒಂದು ದಿಕ್ಕಿನಲ್ಲಿ ಹೊರಟರೆ ಮತ್ತೊಂದು ಮತ್ತೊಂದು ದಿಕ್ಕಿನಲ್ಲಿ ಹೊರಡುತ್ತೆ. ಹೊರಟ ದೀಪಗಳು ಮತ್ತೆ ಮುಖಾಮುಖಿಯಾಗುವಂತಿಲ್ಲ ಅನ್ನೋದು ಪದ್ದತಿ.ಹಾಗಾಗಿ ಯಾವುದಾದ್ರೂ ಮನೇಲಿ ಒಂದು ಗುಂಪು ಇದೆ. ಅದೇ ಹಾದಿಯಲ್ಲಿ ಮತ್ತೊಂದು ಗುಂಪು ಬರ್ತಿದೆ ಅಂತಾದ್ರೆ ಮತ್ತೊಂದು ಗುಂಪು ಮನೆಯಿಂದ ಹೊರಡೋವರೆಗೂ ಮೊದಲ ಗುಂಪು ಹೊಕ್ಕ ಮನೆಯಿಂದ ಹೊರಬರೋಲ್ಲ. ರಾತ್ರೆ ಹೊರಟ ಗುಂಪು ಬೆಳಗಾಗೋವರೆಗೂ ಹಾಡುತ್ತಲೇ ಇರುತ್ತೆ. ಬೆಳಕಾದ ತಕ್ಷಣ ಮನೆಸೇರಿ ಮಲಗಿದರೆಂದರೆ ಆ ರಾತ್ರಿ ಬಿಟ್ಟ ಮನೆಯಿಂದ ಮುಂದುವರಿಕೆ ಹಬ್ಬಾಡೋದು.. ಊರಿನೆಲ್ಲಾ ಮನೆಗಳ ಮುಗಿಸೋ ತನಕ.. ಕೆಲವೆಡೆ ಈ ತರಹ ಕೋಲಾಟದ ತಂಡಗಳೂ ಇವೆಯಂತೆ. ಇವರ ಬಾಯಿಮಾತಲ್ಲೇ ರೂಡಿಯಾಗಿರೋ ಹಾಡುಗಳನ್ನ ಸಂಗ್ರಹಿಸೋ ಪ್ರಯತ್ನ ಅಲ್ಲಲ್ಲಿ ನಡೆದಿದೆಯಾದರೂ ದಾಖಲಾಗಿದ್ದಕ್ಕಿಂತ ದಾಖಲಾಗದ್ದೇ ಹೆಚ್ಚು ಅನಿಸುತ್ತೆ ! ನಗರೀಕರಣದ ಭರಾಟೆಯಲ್ಲೂ ಇಂತಹ ಆಚರಣೆಗಳು ಇನ್ನೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದೆಯಲ್ಲಾ ಎಂದು ಖುಷಿಯಾಗುತ್ತೆ.
ಒಂದೊಳ್ಳೇ ಆಚರಣೆಗೆ ಕರೆದ ವಸಂತಣ್ಣ,ಮಹಾಲಕ್ಷ್ಮಮ್ಮ,ಶಿಶಿರಣ್ಣ ಬೆಳಬೆಳಗ್ಗೆಯೇ ಮನೆಗೆ ಹೊರಡಬೇಕೆಂದ ನನ್ನ ಗಡಿಬಿಡಿಯ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು ಹೀಗೆ..

Sunday, November 1, 2015

ಹಂಪಿ ಪ್ರವಾಸ ಕಥಾನಕ -೩: ವಿಠಲನ ನಾಡಿನಲ್ಲಿ

ಹಂಪಿ ಬಜಾರ್:
ಹಂಪಿ ವಿರೂಪಾಕ್ಷನ ದರ್ಶನ ಪಡೆದ ನಾವು ಪಕ್ಕದಲ್ಲಿದ್ದ ತುಂಗಭದ್ರೆಗೊಂದು ನಮನವೆನ್ನುತ್ತಾ ಹಂಪೆ ಬಜಾರುಗಳನ್ನಾಸಿ ವಿಠಲ ದೇಗುಲದತ್ತ ಸಾಗಿದೆವು. ಹಂಪೆ ಬಜಾರೆಂದರೆ ಜನರಿಗೆ ಅದರಲ್ಲೇನಿದೆ ? ಎಲ್ಲಾ ಊರಿನಂತೆ, ಹಂಪಿಯಲ್ಲೊಂದು ಮಾರುಕಟ್ಟೆ, ವಿಶೇಷವೇನಪ್ಪ ಅನಿಸಬಹುದು. ಶ್ರೀ ಕೃಷ್ಣ ದೇವರಾಯನ ಕಾಲದ ಮಾರುಕಟ್ಟೆ, ಮುತ್ತು ರತ್ನಗಳನ್ನಳೆದು ತೂಗುತ್ತಿದ್ದ ಬೀದಿ ಅಂದರೆ ಆಗ ಓಹ್ ಅನ್ನಬಹುದು. ಹಂಪಿಯಲ್ಲಿ  ಶ್ರೀ ಕೃಷ್ಣ ದೇಗುಲದ ಎದುರಿಗಿನ ಕೃಷ್ಣ ಬಜಾರ್, ಮಹಾನವಮಿ ದಿಬ್ಬದಿಂದ ಬ್ಯಾಂಡ್ ಟವರಿನತ್ತ ಸಾಗುವಾಗ ಸಿಗುವ ಪಾನ್ ಸುಪಾರಿ ಬಜಾರ್,ಅಚ್ಯುತರಾಯ ದೇಗುಲದ ಎದುರಿನ ಅಚ್ಯುತಪೇಟೆ ಅನ್ನೋ ಬಜಾರುಗಳಿದ್ದರೂ ಎರಡು ಅಂತಸ್ತಿನ ಸಾಲು ಸಾಲು ಕಂಬಗಳ ಹಂಪಿ ಬಜಾರಿನ ಗತ್ತೇ ಬೇರೆ. ಸದ್ಯಕ್ಕೆ ಜೀರ್ಣೋದ್ದಾರ ಕೆಲಸ ನಡೆಯುತ್ತಿದ್ದು ಅದರೊಳಗೆ ಯಾರನ್ನೂ ಬಿಡದಿದ್ದರೂ ಯಾವ ಲಿಫ್ಟು, ಕ್ರೇನುಗಳಿಲ್ಲದ ಆ ಕಾಲದಲ್ಲಿ ಎರಡಂಸ್ತಿನ ಚಪ್ಪಡಿಗಲ್ಲಿನ ಕಟ್ಟಡಗಳನ್ನು ಕಟ್ಟಿದ್ದಾದರೂ ಹೇಗೆಂಬ ವಿಸ್ಮಯ ಅದರ ಬಳಿಯಲ್ಲಿ ಸಾಗುವ ಯಾರಿಗಾದರೂ ಕಾಡೇ ಕಾಡುತ್ತೆ.

ಕ್ರಾಫ್ಟ್ ಬಜಾರ್:
ಹಂಪಿ ಬಜಾರಿನ ಇಕ್ಕೆಲಗಳ ಎರಡಂತಸ್ತಿನ ಕಟ್ಟಡಗಳ ಮಧ್ಯದ ಟಾರ ರಸ್ತೆಯಲ್ಲಿ ನೇರ ಮುಂದೆ ಸಾಗಿದರೆ ವಿಠಲ ದೇವಸ್ಥಾನಕ್ಕೆ ದಾರಿಯೆಂಬ ಬೋರ್ಡು ಕಾಣುತ್ತದೆ. ಅದರಿಂದ ನೇರ ಹೋದರೆ ಅಲ್ಲೊಂದು ಬಯಲು. ಎಡಕ್ಕೆ ಹೋದರೆ ತುಂಗಭದ್ರಾ ತಟದಲ್ಲಿ ಸಾಗಬಹುದಾದ ಕಲ್ಲ ರಸ್ತೆ. ಬಲಗಡೆಯ ಬಯಲಲ್ಲಿ ಛಾಯಾಚಿತ್ರ ಪ್ರದರ್ಶನವೆಂಬ ವೇದಿಕೆ,ಅದಕ್ಕೆ ಹಿಮ್ಮೇಳವೆನ್ನುವಂತೆ ಹಂಪೆಯ ಹಾಳುಬಿದ್ದ ಮತ್ತೊಂದು ರಚನೆ. ಕೆಲ ವರ್ಷಗಳ ಹಿಂದೆ ಪ್ರತಿದಿನವೂ, ಹಂಪಿ ಉತ್ಸವದ ಸಮಯದಲ್ಲಿನ ಸಂಜೆಗಳಲ್ಲಿ ಇಲ್ಲಿ ಛಾಯಾಚಿತ್ರ ಪ್ರದರ್ಶನ ನಡೆಯುತ್ತಿತ್ತಂತೆ. ಆದರೀಗ ನಿಂತು ಹೋಗಿ ಅಲ್ಲಿ ಹಾಳು ಸುರಿಯುತ್ತಿದೆ. ಅಲ್ಲಿದ್ದ ಫೋಕಸ್ ಲೈಟುಗಳ ಮೇಲಿದ್ದ ಧೂಳು, ಕೆತ್ತಿಟ್ಟ ಜಾಗದಲ್ಲೆಲ್ಲಾ ನಿಂತಿದ್ದ ಹಿಂದಿನ ದಿನಗಳ ಮಳೆ ನೀರು ಗತವೈಭವ ಸಾರುವಂತಿತ್ತು. ಆ ಬಯಲ ಎಡಭಾಗದಲ್ಲಿ ಹಂಪೆ ಪೋಲೀಸ್ ನಿಲ್ದಾಣ. ಅದರ ಪಕ್ಕದಲ್ಲೇ ಹಂಪೆಯ ಕಲೆಯ ಪರಿ ತೆರೆದಿಡುವಂತಹ ಕ್ರಾಫ್ಟ್ ಬಜಾರ್.
Photo exibition hall/ಛಾಯಾಚಿತ್ರ ಪ್ರದರ್ಶನ ಮಂಟಪ

ಕೆಂಪಭೂಪ ಮಾರ್ಗ:

ವಿಠಲನ ದೇಗುಲಕ್ಕೆ ದಾರಿ ಎಂಬಲ್ಲಿಂದ ಮುಂದೆ ಬಂದು ಎಡಕ್ಕೆ ಬಂದರೆ ಸಿಗುವ ಕಲ್ಲಿನ ದಾರಿಯ ಹೆಸರು ಕೆಂಪಭೂಪ ಮಾರ್ಗ. ಅದರಲ್ಲಿ ಸಾಗಿದರೆ ಮುಂದೆ ತುಂಗಭದ್ರೆಗೆ ಹತ್ತಿರ ಹತ್ತಿರವಾಗುತ್ತಾ ಮುಂದೆ ದಾರಿಯೇ ಇಲ್ಲವೇನೋ ಎಂಬತಹ ತಿರುವು ಕಾಣುತ್ತೆ. ಆ ದಡದಲ್ಲಿ ಅದೆಷ್ಟೋ ದೇವಸ್ಥಾನಗಳು.ಬಂಡೆಗಳ ಕೊರೆದು ಮಾಡಿದಂತೆ, ಬೆಂಕಿ ಕಡ್ಡಿಗಳ ಜೋಡಿಸಿದಂತೆ.. ಅದೆಷ್ಟೋ ಕಂಬಗಳ ಸಾಲು. ಅದರತ್ತ ಸಾಗುವ ಒಂದೊಂದೇ ತೆಪ್ಪಗಳಲ್ಲಿನ ಜನರನ್ನ ನೋಡ ನೋಡುತ್ತಾ ನಾವೇ ಅವರಾದಂತಹ ಭಾವ. ನಾವು ಮೊದಲ ಸಲ ಆ ತಿರುವಿನವರೆಗೆ ಹೋಗಿ ವಾಪಾಸ್ ಬಂದಿದ್ದೆವು. ಆದರೆ ಅಲ್ಲಿಂದ ಮುಂದೆ ಹೋದರೆ ಬಂಡೆಗಳ ನಡುವಿಂದ ನುಸುಳಿ ಕೋದಂಡರಾಮನ ದೇವಸ್ಥಾನದ ಪಕ್ಕ ಸಾಗುವ ದಾರಿ ಸಿಗುತ್ತದೆ ! ಶ್ರೀರಾಮ, ಲಕ್ಷ್ಮಣ, ಸೀತಾಮಾತೆ, ಸುಗ್ರೀವರಿರುವ ಅಪರೂಪದ ವಿಗ್ರಹವಿರೋ ಈ ದೇಗುಲದ ಮೇಲ್ಗಡೆಯೇ ಯಂತ್ರೋದ್ದಾರಕ ಆಂಜನೇಯನ ಗುಡಿಯಿದೆ. ಅಲ್ಲಿಂದ ಹಾಗೇ ಮುಂದೆ ಸಾಗಿದರೆ ಪುರಂದರ ಮಂಟಪ, ವಿಠಲ ದೇವಸ್ಥಾನ ಸಿಗುತ್ತದೆ.



ಕಲ್ಲ ನಾಡಲ್ಲಿ ಸಿಕ್ಕ ಕ್ರಿಸ್ಟಿ:
Ranajan, Goutham along with Christy. Lighting arrangement for photo exibition @the backstage

ಕೆಂಪಭೂಪ ಮಾರ್ಗದಲ್ಲಿ ಒಂದು ಬೃಹತ್ ಬಂಡೆ ಸಿಗುತ್ತದೆ. ಅದರ ಬಳಿ ಮನೆ ಕಟ್ಟಲಾಗದವರೆಲ್ಲಾ ಒಂದಿಷ್ಟು ಕಲ್ಲುಗಳನ್ನು ಒಂದರ ಮೇಲೆ ಒಂದರಂತಿಟ್ಟು ಮನೆ ಕಟ್ಟೋ ಭಾಗ್ಯ ಸಿಗಲಿ ಅಂತ ಹರಕೆ ಕಟ್ಟುತ್ತಾರೆ. ಅಲ್ಲಿಂದ ಮುಂದೆ ಹೋಗುವವರು ಅಲ್ಲೇ ತಮ್ಮ ಸೈಕಲ್ಲು, ಬೈಕುಗಳನ್ನು ಇಟ್ಟು ಹೋಗುತ್ತಾರೆ. ಅಲ್ಲೊಂದು ಎಳನೀರು, ಜ್ಯೂಸು, ಮಜ್ಜಿಗೆಗಳನ್ನು ಮಾರೋ ಗೂಡಂಗಡಿಯೂ ಇದೆ. ಅಲ್ಲಿಂದ ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ ಮುಂದೆ ಹೋಗಲು ಸಾಧ್ಯವೇ ಇಲ್ಲವೆಂಬ ಭ್ರಮೆ ಹುಟ್ಟಿಸೋ ತಿರುವು ಸಿಗುತ್ತೆ. ಅಲ್ಲಿಂದ ಮುಂದಿನ ಪ್ರಕೃತಿಯನ್ನು ವೀಕ್ಷಿಸಿದ ನಾವು ವಾಪಾಸ್ ಬಂಡು ಕ್ರಾಫ್ಟ್ ಬಜಾರ್ ಪಕ್ಕದ ಪೋಲೀಸ್ ಸ್ಟೇಷನ್ನಿನ ಬಳಿ ಬಂದೆವು. ಚಿತ್ರಕಲಾ ಪ್ರದರ್ಶನ ಅಂತ ಬೋರ್ಡಿದ್ದ ಜಾಗದಲ್ಲಿ ಒಬ್ಬ ಕುಳಿತಿದ್ದ ಕ್ಯಾಮೆರಾ ಹಿಡಿದು. ಚರ್ಮದ ಜಾಕೆಟ್ಟು, ಜೀನ್ಸ್ ಪ್ಯಾಂಟು, ತಲೆಗೊಂದು ಕರ್ಚೀಫು ಕಟ್ಟಿ ಕುಳಿತಿದ್ದ ಅವನನ್ನು ನೋಡಿ ಅವರ್ಯಾರೋ ಫೋಟೋಗ್ರಾಫರ್ರು, ಚಿತ್ರಕಲಾ ಪ್ರದರ್ಶನದ ಬಗ್ಗೆ  ಗೊತ್ತಿರಬಹುದು ಅಂತ ಯಾವಾಗ ನಡೆಯುತ್ತೆ ಇಲ್ಲಿನ ಪ್ರದರ್ಶನ ಅಂದೆ. ಉತ್ತರವಿಲ್ಲ. ಕಬ್ ಹೋಗಾ ಯಹಾಂ ಕಾ ಶೋ ಅಂದೆ . ಅದಕ್ಕೂ ಉತ್ತರವಿಲ್ಲ. Will there be phorographic show in the evening ಅಂದೆ. ಆವಾಗ ಉತ್ತರ ಬಂತು ನೋಡಿ ನಂಗೆ ಗೊತ್ತಿಲ್ಲ ಅಂತ. ಆಗ ನಮ್ಮ ದೃಷ್ಟಿ  ಎದುರಿಗೆ ನಿಂತಿದ್ದ ಅವನ ಬೈಕಿನ ಮೇಲೆ ಹರಿಯಿತು. ಕೊಚ್ಚಿ ಇಂದ ಲೇಹ್ ಲಡಾಕ್ ವರೆಗೆ ಹಸಿರು ಮಾರ್ಗದ ಬೈಕ್ ಯಾನ ಅಂತ ಬರೆದುಕೊಂಡಿತ್ತು. ಲೇಹ್ ಲಡಾಕ್ ಗೆ ಅಂತಲೇ ಹೋದ ನನ್ನ ಸ್ನೇಹಿತರು ಚಂಡೀಗಢದ ವರೆಗೆ ಬೈಕನ್ನು ಲಾರಿಗಳಲ್ಲಿ ತರಿಸಿಕೊಂಡು ಅಲ್ಲಿಂದ ಬೈಕಲ್ಲಿ ಹೋಗೋದನ್ನ ಕೇಳಿದ್ದೆ. ಆದರೆ ಈ ಪುಣ್ಯಾತ್ಮ ಅಖಂಡಭಾರತಯಾತ್ರೆ ಅನ್ನುವ ಪರಿಯಲ್ಲಿ ಬೈಕ್ ಯಾನ ಮಾಡೋದು ಕೇಳಿ ಅಬ್ಬಾ ಅನಿಸಿತು. ಅವರ ಹೆಸರು ಕ್ರಿಸ್ಟಿಯನ್ ಅಂತೆ. ಕೊಚ್ಚಿಯವರು. ಚೆಗುವರನ ಫುಲ್ ಫ್ಯಾನು. ಈ ಲೇಖನ ಬರೆಯೋ ಹೊತ್ತಿಗೆ ನೀವೆಲ್ಲೇ ಇರಿ ಕ್ರಿಸ್ಟಿಯನ್, ನಿಮ್ಮ ಪಯಣಕ್ಕೆ ಶುಭವಾಗಲೆಂದು ಹಾರೈಸುತ್ತಿರುತ್ತೇನೆ.

ಅಖಂಡಶಿಲೆ ಬಸವಣ್ಣ/ಏಕಶಿಲಾ ನಂದಿ:
Ekashila Nandi of Hampi

Akhandashila basavanna of hampi

ಛಾಯಾಚಿತ್ರ ಪ್ರದರ್ಶನಮಂಟಪದಿಂದ ಮುಂದೆ ಸಾಗುತ್ತಿದ್ದಂತೆ ಸಿಗೋದೇ ಏಕಶಿಲಾ ನಂದಿ. ಚಾಮುಂಡಿ ಬೆಟ್ಟ, ಬೇಲೂರು ಹಳೇಬೀಡು, ಇಕ್ಕೇರಿ, ಲೇಪಾಕ್ಷಿಗಳ ನಂದಿಯನ್ನು ನೋಡಿದವರಿಗೆ ಇಲ್ಲಿನ ನಂದಿ ವಿಶೇಷವೆನಿಸದಿದ್ದರೂ ಇಲ್ಲಿಂದಲೇ ಮುಂದಿನ ಮತಂಗಪರ್ವತದ ಮೆಟ್ಟಿಲುಗಳು ಶುರುವಾಗುವುದರಿಂದ ಇದೊಂದು ರೀತಿ ದಾರಿದೀಪ ಎಂದರೆ ತಪ್ಪಲ್ಲ. ಎಲ್ಲಿ ದಾರಿ ಕಳೆದುಹೋದರೂ ಏಕಶಿಲ ನಂದಿಯ ಹತ್ತಿರದಿಂದ ಬಂದಿದ್ದೆವು. ಅಲ್ಲಿಗೆ ಹೋಗೋದು ಹೇಗೆ ಅಂದರೆ ದಾರಿಯಲ್ಲಿ ಸಿಕ್ಕವರು ಸರಿಯಾದ ದಾರಿಯನ್ನೇ ತೋರಿಸುತ್ತಾರೆ ಅಂದರೆ ಇದರ ಕೀರ್ತಿಯ ಬಗ್ಗೆ ಯೋಚಿಸಿ ! ಒಂದು ಘಂಟೆಗಳ ಹಾರವನ್ನು ಬಿಟ್ಟರೆ ಬೇರ್ಯಾವ ಅಲಂಕಾರವನ್ನೂ ಹೊಂದಿರದ ನಂದಿಗೆ ಬಿಸಿಲು ಮಳೆಗಳಿಂದ ರಕ್ಷಿಸೋ ಕಲ್ಲ ಚಪ್ಪರವಿರುವುದೇ ಅದರ ಆಕಾರ ಶತಮಾನಗಳ ಕಾಲ ಉಳಿದುಬಂದಿರುವುದಕ್ಕೆ ಕಾರಣ ಅನಿಸುತ್ತೆ. ನಂದಿಯ ಪಕ್ಕದಲ್ಲೇ ಮೇಲೆ ಕಾಣುವ ಬೆಟ್ಟಗಳ ಸಾಲೇ ಮಾತಂಗಪರ್ವತ. ಅದರಲ್ಲೇ ಸಿಕ್ಕುವುದು ಅಚ್ಯುತರಾಯ ದೇವಸ್ಥಾನ. ಅದನ್ನು ದಾಟಿ ಹಾಗೇ ಮುಂದೆ ನಡೆದರೆ ಸಿಕ್ಕುವುದೇ ವಿಠಲ ದೇವಸ್ಥಾನ.ಮಾತಂಗಪರ್ವತದ ಬಗ್ಗೆ ಹಿಂದಿನ ಭಾಗದಲ್ಲಿ ಓದಿದ್ದೆವು. ಘಂಟೆಯ ಸದ್ದನ್ನರಸಿ ಅಚ್ಯುತರಾಯ ದೇವಸ್ಥಾನ, ವರಾಹ ದೇವಸ್ಥಾನ, ಅನಂತಶಯನನ ಕೆತ್ತನೆ, ಮಾತಂಗಪರ್ವತದ ಆಂಜನೇಯ ಮುಂತಾದ್ದನ್ನ ದರ್ಶಿಸಿದ್ದನ್ನ ಮುಂದಿನ ಭಾಗದಲ್ಲಿ ನೋಡೋಣ.

Tuesday, October 27, 2015

ಖಾಲಿ

ಕನಸ ಕಲ್ಪನೆಗಳೆಲ್ಲಾ ಕರಗಿಹೋಗಿ, ಮನದ ಭಾವಗಳೆಲ್ಲಾ ಬತ್ತಿಹೋಗಿ ಖಾಲಿತನ ಕಾಡುತ್ತಿತ್ತು. ಬರೆಯೋಣವೆಂದರೆ ಬರೆಯಲೇನನ್ನ, ಹಾಡೋಣವೆಂದರೆ ಹಾಡಲೇನನ್ನ ಅನ್ನೋ ದ್ವಂದ್ವ. ಸಖತ್ ಚೆನ್ನಾಗಿ ಬರೆದು ಅದಕ್ಕೇನಾದ್ರೂ ಪುರಸ್ಕಾರಗಳ ಸುರಿಮಳೆಯಾಗಿ ಕೊನೆಗೊಂದು ದಿನ ಅದನ್ನು ವಾಪಾಸ್ ಮಾಡಬೇಕಾಗಬಹುದೆನ್ನೋ ಭಯ ಬರೆಯಲೇ ಬಿಡುತ್ತಿರಲಿಲ್ಲ! ಹೊಸದೇನನ್ನಾದ್ರೂ ಬರೆಯೋ ಬದಲು ಬರೆದುದರ ಬಗ್ಗೆಯೇ ಮತ್ತಿನ್ನೇನ್ನಾದ್ರೂ ಬರೆಯೋಣವಾ ಅನ್ನಿಸಿತು. ವಿಶ್ವವಿದ್ಯಾಲಯಗಳಲ್ಲಿರುವ ಕೃತಿಚೌರ್ಯ ತಂತ್ರಜ್ಜಾನ ಎಲ್ಲಾ ಲೇಖಕರ, ಓದುಗರ ಬಳಿಯೂ ಸದ್ಯಕ್ಕಿಲ್ಲದೇ ನಾ ಕದ್ದಿದ್ದು ಗೊತ್ತಾಗದಿಲ್ಲದಿದ್ದರೂ ಮುಂದೊಂದು ದಿನ ಜನರ ಬಾಯಲ್ಲಿ ಛೀ, ಥೂ ಅನ್ನಿಸಿಕೊಳ್ಳೋ ಬದಲು ಅಂತಹಾ ಪ್ರಯತ್ನ ಮಾಡದೇ ಇರುವುದೇ ಒಳ್ಳೆಯದೆನಿಸಿತು. ಯಾರಿಗಾದರೂ ಒಂದಿಷ್ಟು ಬಯ್ದು  ಬಿಡಲಾ ಅನ್ನಿಸಿತೊಮ್ಮೆ. ಸಖತ್ ಸುಲಭದ ಕೆಲಸ ಅದು. ಅವರು ಆ ಅಧ್ಯಯನ ಮಾಡಿಲ್ಲ,  ಈ ಅಧ್ಯಯನ ಮಾಡಿಲ್ಲ. ಮಾಡಿಲ್ಲದೇ ಈ ಬಗ್ಗೆ ಮಾತನಾಡುತ್ತಿದ್ದಾರೆ ಅಂತ ಅವರು ಮಾತನಾಡಿದ ವಿಷಯದ ಬಗ್ಗೆ ಬಿಟ್ಟು ಅವರ ಬಗ್ಗೆಯೇ ಒಂದು ಘಂಟೆ ಮಾತಾಡಿಬಿಡಬಹುದು.  ಪುಟಗಟ್ಟಲೇ ಬರೆದೂ ಬಿಡಬಹುದು. ಅವರು ಅಧ್ಯಯನ ಮಾಡಿದ್ದಾರಾ ? ಇಲ್ಲವಾ ಅನ್ನೋದನ್ನೂ ಅಧ್ಯಯನ ಮಾಡದೇ. ಅವರ ಮಾತಲ್ಲಿನ, ಬರಹದಲ್ಲಿನ ಯಾವುದೋ ಕೆಲವು ತಪ್ಪುಗಳ ಹಿಡಿದು. ಆದರೆ ಓದೋಕೆ ಬೇಕಷ್ಟಿರುವಾಗ, ನೋಡೋಕೆ ಸಾಕಷ್ಟಿರುವಾಗ, ಕಲಿಯೋಕೆ ಆಯಸ್ಸೇ ಸಾಲದಿಷ್ಟಿರುವಾಗ ನನ್ನ, ನನ್ನೋದುವ, ನೂರಕ್ಕೆ ಒಂದು ಪ್ರತಿಶತವಷ್ಟಾದರೂ ಗೌರವವಿಟ್ಟಿರುವ, ಸ್ನೇಹ, ಸಲಿಗೆಯಿಟ್ಟಿರುವ ಜನರ ಸಮಯ ಹಾಳುಮಾಡಬೇಕೇ ಅನಿಸಿ ಆ ಪ್ರಯತ್ನವನ್ನೂ ಕೈಬಿಟ್ಟೆ. ಮೂಲೆಯಲ್ಲಿ ಗುಡ್ಡೆಬಿದ್ದಿದ್ದ ಕಾಲುಚೀಲಗಳು ನನ್ನೇ ನೋಡುತ್ತಾ ನಗುತ್ತಿದ್ದಂತನಿಸಿತು !

ಸುತ್ತಲೊಮ್ಮೆ ಕಣ್ಣಾಡಿಸಿದೆ. ತೊಳೆಯದೇ ಬಿದ್ದಿದ್ದ ಕಾಲುಚೀಲಗಳು, ಬಟ್ಟೆಗಳು ತಮ್ಮ ಅಸಹಾಯಕತೆಯನ್ನು ನೇತು ಬಿದ್ದಿದ್ದ ಮೊಳೆಯ ಮೇಲೆಯೂ, ಧೂಳು ತುಂಬಿದ್ದ ನೆಲದ ಮೇಲೆಯೋ ತೋರಿಸುವಂತಿದ್ದವು. ಅವುಗಳ ಕಡೆಗೆ ಗಮನ ಹರಿಸಿ ಅದೆಷ್ಟು ದಿನಗಳಾದವು. ಭಗವದ್ಗೀತೆ ಸುಡುವವರ, ಪುರಸ್ಕಾರಗಳ ವಾಪಾಸ್ ಮಾಡುವವರಂತಹ ಸುದ್ದಿಗಳೇ ದೇಶದ ಅತೀ ದೊಡ್ಡ ಸುದ್ಧಿಯೆಂಬಂತೆ ಅದರಲ್ಲೇ ಮೈಮರೆತು ದಿನಗಳಾಗಿ ಹೋಗಿ ಸುತ್ತಣ ವಾಸ್ತವವನ್ನು ಮರೆತ ಮೂರ್ಖತನವನ್ನು ನೆನಪಿಸುತ್ತಿತ್ತವು ! ಅಮ್ಮಾ ಅಮ್ಮಾ, ನಂಗೆ ಶಾಲಾ ಸ್ಪರ್ಧೆಯಲ್ಲಿ ಬಹುಮಾನ ಬರಲಿಲ್ಲ ಅಂತ ಅಳುತ್ತಾ ಬಂದ ಮಗುವಿಗೆ ಸ್ಪರ್ಧಾ ಮನೋಭಾವವನ್ನು ತುಂಬಬೇಕಾದ ತಾಯಿ ಆ ಮಗುವನ್ನು ಹೊತ್ತು ಯಾವುದಾದರೂ ಪುರಸ್ಕಾರ ಕೊಡೋ ಮಂಡಳಿಗೆ ಕರೆದುಕೊಂಡು ಹೋಗೋ ದಿನಗಳು ಬಂದರೆ ಅಚ್ಚರಿಯಿಲ್ಲವೇನೋ ಅನಿಸಿತು ! ಹೇಗಿದ್ದರೂ ವಾಪಾಸ್ ಮಾಡಿದ ಪುರಸ್ಕಾರಗಳಿರುತ್ತದೆಯಲ್ಲ. ಆ ಪುರಸ್ಕಾರಗಳಲ್ಲಿ ಒಂದನ್ನು ಪಡೆದ ಮಗುವಿನ ಅಳುವಾದರೂ ನಿಂತೀತೇನೋ ! 

ತೀರಾ ಅಸಂಬದ್ದವೆನಿಸುತ್ತಿದೆಯಾ ಕಲ್ಪನೆ ? ನಿಮಗಿತ್ತ ಗೌರವಗಳು, ಪುರಸ್ಕಾರ ಯಾವುದೋ ಒಂದು ಮಂಡಳಿ, ಸಂಸ್ಥೆ ಕೊಟ್ಟದ್ದೇ ಇರಬಹುದು. ಆದರೆ ಅದರ ಹಿಂದಿನ ಪ್ರೀತಿ, ಸಂತೋಷಗಳು ಆ ಸಂಸ್ಥೆಯ ಸ್ವತ್ತಲ್ಲ. ಇಡೀ ನಾಡಿನದು, ದೇಶದ್ದು. ಕಂಬಾರರಿಗೆ ಜ್ಞಾನಪೀಠ ಬಂತು ಅಂದಾಗ, ಭೈರಪ್ಪನವರಿಗೆ ಸರಸ್ವತಿ ಸನ್ಮಾನ್ ಸಿಕ್ಕಿತು ಅಂದಾಗ ರಾಜ್ಯಕ್ಕೆ ರಾಜ್ಯವೇ ಖುಷಿ ಪಟ್ಟಿದ್ದಿದೆ. ವಿಚಾರಧಾರೆಗಳಲ್ಲಿ ಎಡಬಲಗಳೆಂಬ ಬೇಧವಿರಬಹುದು, ನವ್ಯ, ನವೀನ, ಬಂಡಾಯಗಳೆಂಬ ಭಿನ್ನ ಪಂಥಗಳೇ ಇರಬಹುದು. ಅದೇನೇ ಇದ್ದರೂ ಭೈರಪ್ಪನವರ ಮಂದ್ರ ಓದಿದವರು ಯು.ಆರ್. ಅನಂತಮೂರ್ತಿಯವರ ಭವ, ಸಂಸ್ಕಾರಗಳನ್ನು ಓದಬಾರದೆಂದೇನಿಲ್ಲ! ಲೇಖಕನ ಸಾರ್ವಜನಿಕ ಜೀವನದ ನಿಲುವುಗಳು ಇಷ್ಟವಾಗದ ಕಾರಣಕ್ಕೆ ಅವನ ಸಾಹಿತ್ಯವನ್ನೇ ದ್ವೇಷಿಸಬೇಕಂತಲೂ, ಅವನ ಸಾಹಿತ್ಯದಲ್ಲಿನ ಅಂಶಗಳು ಇಷ್ಟವಾಗದಿದ್ದ ಮಾತ್ರಕ್ಕೆ ಅವ ನಿಜಜೀವನದಲ್ಲೂ ಖಳನಾಗಬೇಕಂತಿಲ್ಲ. ಲೇಖಕನ ನಿಲುವುಗಳ, ಪೂರ್ವಾಪರಗಳ ಯೋಚಿಸದೇ ಬರೀ ಅವರ ಸಾಹಿತ್ಯವನ್ನೇ ಪ್ರೀತಿಸೋ ಅದೆಷ್ಟೋ ಜನರ ಪ್ರೀತಿಯ ಮೂರ್ತರೂಪ ಆಯಾ ಸಾಹಿತಿಗೆ ಸಿಕ್ಕ ಪುರಸ್ಕಾರಗಳು ! ಅಂತಹ ಪುರಸ್ಕಾರವನ್ನು ವಾಪಾಸ್ ಮಾಡುತ್ತಾರೆಂದರೆ ಅದು ನಾಡಿನ ಜನ ಅವರ ಮೇಲಿಟ್ಟ ಪ್ರೀತಿಯನ್ನು ಧಿಕ್ಕರಿಸಿದಂತಲ್ಲವೇ ? 

ಪ್ರತಿಭಟನೆ ಅವರವರ ಹಕ್ಕು. ಪ್ರತಿಭಟಿಸೋ ಸಲುವಾಗಿ ತೋಚಿದ್ದ ಗೀಚಬಹುದು.ಬಾಯಿಗೆ ಬಂದ ಹೇಳಿಕೆಯನ್ನೂ ಕೊಡಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯದ ಯುಗವಲ್ಲವೇ ಇದು ! ಯಾಕೆ ವಾಪಾಸ್ ಅಂದರೆ ನಿರ್ಲಿಪ್ತ ಸರ್ಕಾರದ ವಿರುದ್ದ. ಕಲುಷಿತ ಸಮಾಜದ ವಿರುದ್ದ, ಲೇಟಾಗುತ್ತಿರುವ ಪೋಲೀಸ್ ಕಾರ್ಯವಿಧಾನದ ವಿರುದ್ದ, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದ ವಿರುದ್ದ.ಹೀಗೆ ಹಲವಾರು ಕಾರಣಗಳು. ಯಾವ ಕಾರಣ ?ರಾಜಕಾರಣ ?  ಯಾವ ಸರ್ಕಾರ ? ರಾಜ್ಯ ಸರ್ಕಾರವಾ ? ಕೇಂದ್ರವಾ ? ಇಲ್ಲಾ ಹೋಲ್ ಸೇಲ್ ಎಲ್ಲಾ ಸರ್ಕಾರಗಳಾ ? ಭಿನ್ನ ಭಿನ್ನ ಉತ್ತರಗಳಿಲ್ಲಿ. ಟಿಪ್ಪು ಸುಲ್ತಾನನ ಕೃತಿಯ ಬಗ್ಗೆ, ತುಘಲಕ್ಕಿನ ಬಗ್ಗೆ ಪತ್ರಿಕೆಗಳಲ್ಲಿ ಚರ್ಚೆಯಾದಾಗ ಶುರುವಾದ ಉದ್ದೇಶವನ್ನೇ ಮರೆತು ವ್ಯಕ್ತಿಯ ವೈಯುಕ್ತಿಕ ವಿಚಾರಗಳ ಮಟ್ಟದವರೆಗೂ ಎದ್ದೂ ಬಿದ್ದು ಚರ್ಚೆಯಾಯಿತು. ಅದೇ ಪರಿ, ಈ ಬಾರಿಯೂ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಖಂಡಿಸಿ ಪತ್ರಿಕೆಗಳಲ್ಲಿ ಚರ್ಚೆ, ಟಿವಿಗಳಲ್ಲಿ ಚರ್ಚೆ, ಸ್ವಾತಂತ್ರ್ಯ ಉದ್ಯಾನದಲ್ಲಿ ಒಂದು ಪ್ರತಿಭಟನೆ, ಒಂದು ರ್ಯಾಲಿ ? ಸಾಹಿತಿಗಳು, ಹಂಗೆಲ್ಲಾ ಬೀದಿಗಳಿದು ಪ್ರತಿಭಟಿಸೋಲ್ಲವಪ್ಪ. ನಮ್ಮದೇನಿದ್ದರೂ ಮೂಖ ಪ್ರತಿಭಟನೆ , ಪ್ರಚಾರಪ್ರಿಯರಲ್ಲ ನಾವು ಅನ್ನುವಂತಹ ಧೋರಣೆ. ಸರಿ, ಪುರಸ್ಕಾರ ವಾಪಾಸ್ ಮಾಡೋದು ವೈಯುಕ್ತಿಕ ತೀರ್ಮಾನ ಪ್ರತಿಭಟನೆ ಅಂದುಕೊಂಡರೂ ಅದರ ಬಗ್ಗೆ ಪತ್ರಿಕೆಗಳಲ್ಲಿ ಬರೋ ಫೋಟೋಗಳನ್ನೂ, ಸುದ್ದಿಗಳನ್ನೂ ಹಾಕಬೇಡಿ ಅಂತ ವಿನಂತಿಸಿಕೊಳ್ಳಬಹುದಲ್ಲಾ ! ಪ್ರಚಾರ ಬೇಡ ಬೇಡ ಎಂದೇ ಪ್ರಚಾರ ಗಿಟ್ಟಿಸೋ ಪರಿಯೇ ಇದು ಎಂದೂ ಒಮ್ಮೊಮ್ಮೆ ಅನುಮಾನ ಹುಟ್ಟುತ್ತೆ ಈ ನಡುವಳಿಕೆಗಳಿಂದ. ನನಗೆ ದಕ್ಕಿದ ಪುರಸ್ಕಾರ ಸಮಸ್ತ ಕನ್ನಡಿಗರಿಗೆ ಸಿಕ್ಕ ಸನ್ಮಾನ ಅಂತ ಹೇಳಿಕೊಳ್ಳೋ ಸಾಹಿತಿ ಅದರ ವಾಪಾಸ್ ಮಾಡೋದರಿಂದ ಆ ಸಮಸ್ತ ಕನ್ನಡಿಗರಿರೂ ತನಗಾದಷ್ಟೇ ನೋವುಂಟಾಗುತ್ತೆ ಅಂತ ಅರಿಯೋಲ್ಲವೇಕೆ ? ಪ್ರಪಂಚದಲ್ಲಿರೋ ಬುದ್ದಿಯೆಲ್ಲಾ ತಮ್ಮಲ್ಲೇ ಇದೆ ಎಂದುಕೊಳ್ಳೋ ಬು.ಜೀಗಳಿಗೆ ಬುದ್ದಿ ಹೇಳುವಷ್ಟು ಬುದ್ದಿ ಯಾರಲ್ಲೂ ಇಲ್ಲ ಬಿಡಿ!

 ಕಾವೇರಿ ನೀರಲ್ಲಿ ರಾಜ್ಯಕ್ಕೆ ಅನ್ಯಾಯವಾಯಿತೆಂದಾಗ, ರೈತರು ಫಸಲಿಲ್ಲದೇ, ಬೆಳೆದಿದ್ದಕ್ಕೆ ಬೆಲೆ ಸಿಗದೇ ಸಾಲು ಸಾಲು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ ಸರ್ಕಾರಗಳ ನಿರ್ಲಕ್ಷ್ಯವನ್ನು ಖಂಡಿಸಿ ವಾಪಾಸ್ ಚಳುವಳಿ ನಡೆಯಿತೇ ? ಧಕ್ಷ ಅಧಿಕಾರಿಗಳ ಹಠಾತ್ ವರ್ಗಾವರ್ಗಿ ನಡೆದಾಗ, ಹತ್ಯೆಯೇ ನಡೆದಾಗ ? ಅದರ ವಿರುದ್ದ ಜನಸಾಮಾನ್ಯರೇ ಧಂಗೆಯೆದ್ದಿದ್ದರೂ ಸಾಹಿತಿಗಳು ?. ಸಾಹಿತಿಯೊಬ್ಬ ತನ್ನ ಪಾಡಿಗೆ ತಾನು ಬರೆಯುತ್ತಾ ಇರುತ್ತಾನಪ್ಪಾ. ಸಮಾಜದ ಆಗುಹೋಗುಗಳಿಗೂ ಅವನಿಗೂ ಸಂಬಂಧ ಇರಲೇಬೇಕಂತಿಲ್ಲ !  ಪ್ರವಾಹ ಪರಿಹಾರ ನಿಧಿಗಳಿಗೆ ಸಂಗ್ರಹ ನಡೆಯುತ್ತಿದ್ದಾಗ , ರಕ್ತದಾನ ಶಿಬಿರಗಳು ನಡೆದಾಗ ಅದನ್ನ ಬೆಂಬಲಿಸಿ ? ಊಹೂಂ. ಸಾಹಿತಿಗಳು ತೆರೆ ಮರೆಯಲ್ಲಿರುತ್ತಾರಪ್ಪಾ. ಪತ್ರಿಕೆಗಳ ಮುಖಪಟದಲ್ಲಿ ಫೋಟೋ ಬಂದರೆ ಮಾತ್ರ ನಿಮಗೆ ಗೊತ್ತಾಗುತ್ತೆ. ಬಾರದಿದ್ದ ಮಾತ್ರಕ್ಕೆ ಸಾಹಿತಿಗಳು ಏನೂ ಮಾಡುತ್ತಿಲ್ಲವೆಂದೇ ? ಅವೆಲ್ಲಾ ಹೋಗಲಿ. ಸಾಹಿತ್ಯ ಕ್ಷೇತ್ರಕ್ಕೇ ಸಂಬಂಧವಿಲ್ಲದ ಘಟನೆಗಳು ಅಂದುಕೊಳ್ಳೋಣ.  ಹಿಂದೆ ಖ್ಯಾತ ಸಾಹಿತಿಯೋರ್ವರ ಮನೆಯ ಮೇಲೆ ಕಲ್ಲುಗಳು ಬೀಳುತ್ತಿದ್ದರೆ, ಅವರ ಮೇಲೆ ಧಾಳಿಗಳು ನಡೆಯುತ್ತಿದ್ದರೆ ಅದನ್ನು ವಿರೋಧಿಸಿ ಈ ಪರಿಯ ವಾಪಾಸ್ ಚಳುವಳಿಗಳು ನಡೆದಿದ್ದವಾ ? ಬಾಂಗ್ಲಾ ಮೂಲದ ಬ್ಲಾಗರ್ಗಳನ್ನ ಮತಾಂಧ ಐಸಿಸ್ ಉಗ್ರರು ಕೊಲ್ಲುತ್ತಿದ್ದರೆ ಅದನ್ನು ವಿರೋಧಿಸಿ ಈ ವಾಪಾಸ್ ಚಳುವಳಿ ನಡೆಯಿತೆ ? ಈ ವರ್ಷವೇ ಮೂರ್ನಾಲ್ಕು ಲೇಖಕರನ್ನು ಕೊಂದದ್ದು ಒಂದಿಷ್ಟು ಪತ್ರಿಕೆಗಳಲ್ಲಿ ಮೂಲೆಯೊಂದರ ಸುದ್ದಿಯಾಯಿತಷ್ಟೆ. ಅಷ್ಟಕ್ಕೂ ಪ್ರಪಂಚದಲ್ಲಿ ಎಲ್ಲೋ ನಡೆದ ಘಟನಾವಳಿಗಳಿಗೆ ನಾವ್ಯಾಕೆ ತಲೆಕೆಡಿಸಿಕೊಳ್ಳಬೇಕು ಬಿಡಿ !

ತುಂಬಿದ ಕೊಡ ತುಳುಕುವುದಿಲ್ಲ ಅನ್ನೋ ಗಾದೆಯೇ ಇದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಖಾಲಿಯಾಗದ ಮನಸ್ಸು ಬೆಳೆಯೋದಿಲ್ಲ ಅಂತಲೂ ಗಾದೆ ಸೃಷ್ಠಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಇಂಗ್ಲೀಷಿನಲ್ಲಿ ವಿಶ್ವದಾದ್ಯಂತ ಬರೀತಾರೆ, ಹಿಂದಿಯಲ್ಲಿ ಭಾರತದಾದ್ಯಂತ ಬರೀತಾರೆ. ಅಲ್ಲೆಲ್ಲೂ ಇಲ್ಲದಷ್ಟು ಗುದ್ದಾಟಗಳು ಕನ್ನಡದಲ್ಯಾಕೆ ಅಂತ ಗೆಳೆಯರು ಪ್ರಶ್ನಿಸಿದಾಗ ನಿರುತ್ತರ ನಾನು. ವಿಶ್ವದಲ್ಲೆಲ್ಲಿಯೂ ಇಲ್ಲದ ವಾಪಾಸ್ ಚಳುವಳಿ ಭಾರತದಲ್ಲಿ ಮಾತ್ರ ಯಾಕೆ ನಡೀತಿದೆ ? ಇಲ್ಲಿನ ಸರ್ಕಾರ ವಿಶ್ವದಲ್ಲೇ ಅತ್ಯಂತ ಹೆಚ್ಚು ಸೋಂಬೇರಿ, ನಿದ್ದೆ ಮಾಡೋ ಸರ್ಕಾರವೇ ಅಂತ ಯಾರಾದರೂ ಪ್ರಶ್ನಿಸಿದರೆ ತಲೆತಗ್ಗಿಸಬೇಕಾಗುತ್ತದೆ. ಏನೋ, ಬರೀತೀಯಂತೆ ನೀನು, ಹಂಗಾದ್ರೆ ನೀನೂ ಒಬ್ಬ ಸಾಹಿತಿ ಅಂತಾಯ್ತು ಅಂತ ಪರಭಾಷಾ ಗೆಳೆಯರು ಹೇಳಿದ್ರೆ ಹೇ, ಖಂಡಿತಾ ಇಲ್ಲಪ್ಪ. ಸುಮ್ನೆ ಎಲ್ಲಾದ್ರೂ ಒಂದಿಷ್ಟು ಗೀಚುತ್ತಿರುತ್ತೇನೆ ಅಂತ ತಪ್ಪಿಸಿಕೊಳ್ಳಬೇಕಾದ ಪರಿಸ್ಥಿತಿಯೂ ಬಂದಿದೆ. ಅಷ್ಟಕ್ಕೂ ವಾಪಾಸ್ ಚಳುವಳಿಯ ಮುಂದಾಳತ್ವ ವಹಿಸಿರುವ ಬು.ಜೀಗಳ ಬಗ್ಗೆ ವಿಮರ್ಷೆ ಮಾಡುವಷ್ಟು ಅಧ್ಯಯನ, ಅರ್ಹತೆ ಖಂಡಿತಾ ನನ್ನಲ್ಲಿಲ್ಲ ಬಿಡಿ !

ಪರಸ್ಪರರೆಡೆಗಿನ ಅಸೂಹೆ, ಅಸಹಿಷ್ಣುತೆಯೇ ನಮ್ಮಲ್ಲಿನ ಅದೆಷ್ಟೋ ಕಚ್ಚಾಟಗಳಿಗೆ ಕಾರಣವಲ್ಲವಾ ಎಂದನಿಸುತ್ತೆ ಎಷ್ಟೋ ಸಲ. ನಾ ಸರಿ ಅನ್ನೋದು ಸರಿ. ಆದ್ರೆ ಅವನೂ ಸರಿಯಾಗಿರಬಹುದಲ್ವಾ ಅಂತ್ಯಾಕೆ ಯೋಚಿಸೋದಿಲ್ಲ ನಾವು. ನಾವು ಸದಾ ನಮ್ಮ ಆಲೋಚನಾ ಸಮುದ್ರದಲ್ಲೇ ಮುಳುಗಿ ಹೋಗಿರುತ್ತೇವೆ. ಹೊರಗಿನದಕ್ಕೆ ಜಾಗವಿಲ್ಲವಿಲ್ಲಿ. ಒಂಥರಾ ಸದಾ ತುಂಬಿದ ಹೊಟ್ಟೆಯ ಜೀವನ. ಕಣ್ಣು ಕಟ್ಟಿದ ಕುದುರೆಯಂತೆ ತನ್ನ ಕಣ್ಣೆದುರಿಗಿದ್ದದ್ದು ಮಾತ್ರವೇ ಸತ್ಯವೆಂಬ ಭ್ರಮೆಯಲ್ಲಿ ಅತ್ತಲೇ ನಮ್ಮ ನಾಗಾಲೋಟ. ಆದರೆ ಒಂದಂತೂ ಸತ್ಯ. ಅದೊಂದೇ ಸತ್ಯ ಅಂತಲ್ಲ ! ಹೊಟ್ಟೆ ಖಾಲಿಯಾಗದೇ ಹಸಿವಾಗೋದಿಲ್ಲ, ಹಸಿವಾಗದೇ ನಾವು ಹೊಟ್ಟೆಗಾಗಿನ ಒದ್ದಾಟ, ದುಡಿಮೆ ನಡೆಸೋದಿಲ್ಲ. ಒಂದಲ್ಲ ಒಂದು ರೀತಿಯ ದುಡಿಮೆಯಿಲ್ಲದ ಖಾಲಿ ಜೀವನವನ್ನು ಕಲ್ಪಿಸಿಕೊಳ್ಳೋದಕ್ಕೂ ಆಗೋದಿಲ್ಲ..ಇತ್ಯಾದಿ, ಇತ್ಯಾದಿ.ಅದೇ ತರಹ ಪೂರ್ವಾಗ್ರಹಗಳಿಂದ ಪೀಡಿತ ಮನ. ನಾನು ಇವರದ್ದನ್ನು ಮಾತ್ರವೇ ಓದುತ್ತೇನೆ , ಉಳಿದವರದ್ದೆಲ್ಲಾ ಠೀಕಿಸುತ್ತೇನೆ ಅಂತ ಮುಂಚೆಯೇ ನಿರ್ಧರಿಸಿಕೊಳ್ಳೋ ಮನಕ್ಕೆ ಹೊಸತನಕ್ಕೆ ತುಡಿಯೋಕೆ ಯಾವತ್ತೂ ಸಾಧ್ಯವಾಗೋದಿಲ್ಲ. ಕಾಲ ಕ್ರಮೇಣ ಅದೇ ಏಕತಾನತೆ ಕಾಡೋಕೆ ಶುರುವಾಗುತ್ತೆ. ಕನಸುಗಳೆಲ್ಲಾ ಖಾಲಿಯಾದ ಹಾಗೆ, ಭಾವನೆಗಳೆಲ್ಲಾ ಬತ್ತಿ ಹೋದ ಹಾಗೆ !

ಮಣ್ಣಾದ ಸಾಕ್ಸಿಗೆ, ಬಟ್ಟೆಗಳಿಗೆ ಸೋಪು ನೀರು ಹೇಗೆ ಒಂದು ಹೊಸ ಜೀವ ಕೊಡತ್ತೋ ಹಾಗೇ ನಮ್ಮ ಮನದ ಭಾವಗಳೂ ಸಹ. ಒಂದಿಷ್ಟು ಹಳೆಯ ಕೊಳೆಗಳನ್ನು, ದ್ವೇಷ, ಸಿಟ್ಟು ಅಸೂಹೆಗಳನ್ನ ನಮ್ಮಲ್ಲಿಂದ ಹೊರದಬ್ಬೋ ತನಕ ಹೊಸತನಕ್ಕೆ ಜಾಗವಿಲ್ಲವಿಲ್ಲಿ.  ಹಿಮಾಲಯದಲ್ಲೇನಿದೆ ಬೋರು ? ಬರೀ ಬಿಳೀ ಮುದ್ದೆಗಳು, ಬರೀ ಮರುಭೂಮಿ , ಎಲ್ಲೋ ಒಂದಿಷ್ಟು ಹಸಿರಷ್ಟೇ ಅಂತ ಬೇಸರಿಸೋ ಮನಕ್ಕೇ ಹೊಸತನದ ತುಡಿತ ಹತ್ತಿದಾಗ  ಬೆಳಗ್ಗೆ ಪೇಪರ್ ಟೌನ್ ಅನ್ನೋ ಇಂಗ್ಲೀಷು, ಮಧ್ಯಾಹ್ನ ತೆಲುಗಿನ ರುದ್ರಮಾ ದೇವಿ, ಸಂಜೆ ಹಿಂದಿಯ ಜಜ್ಬಾ ಚಿತ್ರ ನೋಡಿದೆ ಅಂತ ತನ್ನ ಪಾಡಿಗೆ ಒಂದು ಸ್ಟೇಟಸ್ ಹಾಕಿಕೊಳ್ಳೋ ಹುಡುಗನೊಬ್ಬನ ಸ್ಟೇಟಸ್ಸೂ ಆಕರ್ಷಕವೆನಿಸುತ್ತೆ. ಅಲ್ಲೊಂದು ಸಾಧ್ಯತೆಗಳ ಸೌಧವಿರಬಹುದಾ ಅನಿಸುತ್ತೆ. ಹರುಕು ಕಾಲುಚೀಲವೂ ಒಂದು ಹೊಸ ಕತೆ ಹೇಳತೊಡಗುತ್ತೆ. ಅದಿಲ್ಲದಿದ್ದರೆ ಕತ್ತೆತ್ತಿದತ್ತೆಲ್ಲ ಖಾಲಿಯೋ ಖಾಲಿ. 

Saturday, October 10, 2015

ಹಂಪಿ ಪ್ರವಾಸ ಕಥಾನಕ -೨: ವಿರೂಪಾಕ್ಷನ ಸನ್ನಿಧಿಯಲ್ಲಿ

ವಿರೂಪಾಕ್ಷನ ಸನ್ನಿಧಿಯಲ್ಲಿ:

ಹೋಗೋದು ಹೇಗೆ?
ಹಂಪಿಗೆ ಹೋಗಬೇಕೆನ್ನೋ ಭಾವ ಬಹುದಿನಗಳಿಂದ ಕಾಡುತ್ತಿತ್ತು. ಅವರು ಬರೋಲ್ಲ, ಇವರು ಬರೋಲ್ಲ ಅಂತ ಅದೆಷ್ಟೋ ಸಲ ಕ್ಯಾನ್ಸಲ್ ಆದ ಪ್ಲಾನಿಗೆ ಬೇಸತ್ತು ಈ ಸಲ ಯಾರೂ ಬರದಿದ್ದರೆ ನಾನೊಬ್ಬನಾನರೂ ಹೋಗೇ ಬರುತ್ತೇನೆಂಬ ಭಂಡ ಧೈರ್ಯ ಮಾಡಿದವನಿಗೆ ಜೊತೆಯಾದವರು ಇನ್ನಿಬ್ರು, ಹಂಪೆ ಎಕ್ಸ್ ಪ್ರೆಸ್ ರೈಲಲ್ಲಿ ಹೋಗ್ಬೋದು, ನೇರ ಬಸ್ಸಲ್ಲಿ ಹೋಗ್ಬೋದು ಎಂಬೆಲ್ಲಾ ಪ್ಲಾನುಗಳು ಸರಿ.ಆದರೆ ಅವೆಲ್ಲಾ ತಿಂಗಳ ಮುಂಚೆ ಹೊರಡೋ ಪ್ಲಾನಿರೋರಿಗೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಹೊರಡಬೇಕೆನ್ನುವವರಿಗೂ ಬರುತ್ತೇನೆ, ಬರೋಲ್ಲವೆನ್ನುತ್ತಾ ಪ್ಲಾನನ್ನು ಸಂದಿಗ್ದದಲ್ಲಿಟ್ಟಿದ್ದ ಅನೇಕ ಗೆಳೆಯರಿದ್ದ ನಮ್ಮ ಪ್ಲಾನಿಗೆ ಸಾಥಿಯಾಗಿದ್ದು ಹೊಸಪೇಟೆ ಬಸ್ಸುಗಳೇ. ಹಂಪಿಯಿಂದ ಹೊಸಪೇಟೆಗೆ ಅರ್ಧ ಘಂಟೆಯ ಪಯಣ, ಹೊಸಪೇಟೆಗೆ ಬೆಂಗಳೂರಿಂದ ಸಖತ್ ಬಸ್ಸುಗಳಿವೆ ಎಂಬ ಮಾಹಿತಿ ಪಡೆದಿದ್ದ ನಮ್ಮ ಗ್ಯಾಂಗ್ ಹೊರಟಿದ್ದು ಹೊಸಪೇಟೆಗೆ.

9 Storied entrance of the Virupaksha temple, Hampi

ಉಳಿಯೋದೆಲ್ಲಿ?
ಬೆಂಗಳೂರಿಂದ ರಾತ್ರೆ ಹನ್ನೊಂದೂಕಾಲರ VRL ಬಸ್ಸಿಗೆ ಹೊರಟ ನಾವು ಹೊಸಪೇಟೆ ತಲುಪೋ ಹೊತ್ತಿಗೆ ಬೆಳಗ್ಗಿನ ಆರೂಕಾಲು. ಹೊಸಪೇಟೆಯ ಕೊನೆಯ ನಿಲ್ದಾಣ ಬಸ್ಟಾಂಡ್ ಬಳಿ ಇಳಿಯುತ್ತಿದ್ದಂತೇ ಹರಿಪ್ರಿಯಾ ಲಾಡ್ಜ್, ಸ್ವಾತಿ ಲಾಡ್ಜ್, ಶ್ಯಾನ್ ಭಾಗ್ ಲಾಡ್ಜ್, ಪೈ ಇಂಟರ್ ನ್ಯಾಷನಲ್ ಮುಂತಾದ ಲಾಡ್ಜಗಳು ಸಿಗುತ್ತೆ. ಅದರಲ್ಲಿ ಹರಿಪ್ರಿಯಾ ಚೀಪ್ ಅಂಡ್ ಬೆಸ್ಟ್ ಅಂತ ಬಸ್ಸಿನಲ್ಲಿ ಸಿಕ್ಕವರೊಬ್ಬರು ಹೇಳಿದ್ರು. ಹಾಗೇ  ಬೆಳಗ್ಗೆ ಹರಿಪ್ರಿಯಾಕ್ಕೆ ತೆರಳಿದ ನಾವು ಅಲ್ಲಿನ ಪ್ರಸಿದ್ಧ ಶ್ಯಾನ್ ಭಾಗ್ ಹೋಟೆಲಿನಲ್ಲಿ ಬೆಳಗ್ಗಿನ ಉಪಹಾರ ಮುಗಿಸಿ ಹಂಪೆ ದರ್ಶನಕ್ಕೆ ತೆರಳಿದೆವು. ಇಲ್ಲಿನವರ ಪ್ರಕಾರ ಬೆಳಗ್ಗಿನ ಉಪಾಹಾರ ಅಂದ್ರೆ ಶ್ಯಾನ್ ಭಾಗ್. ಮಧ್ಯಾಹ್ನದ/ರಾತ್ರೆಯ ಊಟ ಅಂದರೆ ಸ್ವಾತಿ ಡೆಲಿಕಸಿ, ಉತ್ತರ್ ಭಾರತೀಯ ತಿನಿಸುಗಳ ಐಸ್ ಲ್ಯಾಂಡ್ ಅಥವಾ ಪೈ ಇಂಟರನ್ಯಾಷನಲ್. ಉತ್ತರ ಕರ್ನಾಟಕದ ಊಟ ಇಷ್ಟ ಪಡೋರಾದ್ರೆ ಐಸ್ ಲ್ಯಾಂಡ್ ಪಕ್ಕದಲ್ಲೇ ಇರೋ ಶ್ರೀ ಭುವನೇಶ್ವರಿ ಖಾನಾವಳಿಗೆ ತೆರಳಬಹುದು. ಪೇಟೆಯಿಡೀ ತಿರುಗುಬೇಕೆನ್ನುವವರಿಗೆ ಇನ್ನಷ್ಟು ಆಯ್ಕೆಗಳು ಸಿಕ್ಕಬಹುದು :-)
Goravankas of Hampi

ಹೊಸಪೇಟೆಯಿಂದ ಹಂಪೆಗೆ ಹೋಗೋದು ಹೇಗೆ ?
ಹೊಸಪೇಟೆಯಿಂದ ಹಂಪೆಗೆ ಪ್ರತೀ ಹದಿನೈದು ನಿಮಿಷಕ್ಕೆ ಬಸ್ಸುಗಳಿವೆ(ಬೆಳಗ್ಗಿನಿಂದ ಸಂಜೆ ಏಳೂವರೆವರೆಗೆ). ೧೨ ಕಿ.ಮೀ ಗಳ ಈ ದಾರಿಗೆ ತಲಾ ೧೩ ರ ಚಾರ್ಚು. ಹೊಸಪೇಟೆಯಿಂದ ಹೊಸಪೇಟೆಗೆ ಹೋಗೋಕೆ ಎರಡು ದಾರಿಗಳಿವೆ. ಒಂದು ಕಡ್ಡಿ ರಾಂಪುರ ಮಾರ್ಗ. ಮತ್ತೊಂದು ಕಮಲಾಪುರ ಮಾರ್ಗ. ಹಂಪಿಗೆ ಬೇಗ ತಲುಪಬೇಕೆನ್ನುವವರು ಕಡ್ಡಿ ರಾಂಪುರ ಮಾರ್ಗದಲ್ಲಿ ಪಯಣಿಸಬಹುದು. ಅದರಲ್ಲಿ ೧೩ರೂ ಚಾರ್ಚ್ ಕೊಟ್ಟು ಪಯಣಿಸುವವರಿಗೆ ಎದುರಾಗೋ ಹಂಪಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಕಡ್ಡಿ ರಾಂ ಪುರ ಸ್ಟಾಪಿನ ಪಕ್ಕದಲ್ಲೇ ಇರುವ ಮಹಮದೇನ್ ಗೋರಿಗಳು. ಸ್ವಂತ ಗಾಡಿಯಲ್ಲಿ ಅಥವಾ ಹೊಸಪೇಟೆಯಿಂದಲೇ ಗಾಡಿ ತಗೊಂಡು ಬರುವವರು ಇಲ್ಲೊಂದು ಮಿನಿ ಸ್ಟಾಪ್ ಕೊಟ್ಟು ಗೋರಿ ಮತ್ತಿತರ ರಚನೆಗಳನ್ನು ನೋಡಿ ಮುಂದೆ ಸಾಗಬಹುದು. ಅಲ್ಲಿಂದ ಮತ್ತೆ ಬಸ್ಸು ಹತ್ತಿ ಮುಂದೆ ಸಾಗುವವರಿಗೆ ನಂತರ ಸಿಗೋ ನೋಡಲರ್ಹ ಸ್ಥಳ ಸಾಸಿವೆ ಕಾಳು ಗಣೇಶ ಸ್ಟಾಪು. ಅಲ್ಲಿನ ಸಾಸಿವೆ ಕಾಳು ಗಣೇಶ, ಕಡಲೇ ಕಾಳು ಗಣೇಶ ಮತ್ತು ಹೇಮಕೂಟ ಪರ್ವತದಲ್ಲಿನ ಮೂವತ್ಮೂರು ಇತರ ದೇವಸ್ಥಾನಗಳನ್ನು ನೋಡೋ ಹೊತ್ತಿಗೆ ಕೆಳಗಿನ ವಿರೂಪಾಕ್ಷ ದೇಗುಲದ ಎತ್ತರದ ಪ್ರವೇಶದ್ವಾರಗಳು ಕಾಣುತ್ತವೆ. ಅಲ್ಲಿಂದ ಇಳಿದರೆ ಸಿಗುವುದೇ ಹಂಪಿಯ ವಿರೂಪಾಕ್ಷ. ಹೊಸಪೇಟೆಯಿಂದ ಹಂಪೆಗೆ ಟೆಂಪೋಗಳು ಹೋಗುತ್ತವಾದರೂ ಹಂಪಿ ಬಸ್ ನಿಲ್ದಾಣದಿಂದ ಹೊರಡೋ ವಿಜಯ ರಥ ಬಸ್ಸುಗಳೇ ಹೆಚ್ಚು ಚೀಪು ಮತ್ತು ಆರಾಮಕರ.

ಕಮಲಾಪುರ ಮಾರ್ಗದಲ್ಲಿ ಬರುವವರಿಗೆ ಹಂಪೆಗೆ ೧೪ ರೂ ಚಾರ್ಚ್. ಇದು ಸ್ವಲ್ಪ ದೂರದ ಮಾರ್ಗ ಸಹಾ. ಮಧ್ಯಾಹ್ನದ ಹೊತ್ತಿಗೆ ಈ ಮಾರ್ಗದಲ್ಲಿ  ಬಂದರೆ  ದಾರೂಜಿ ಕರಡಿಧಾಮಕ್ಕೆ ಹೋಗಬಹುದು. ಅಲ್ಲಿನ ವೀಕ್ಷಣಾ ಸಮಯ ಮಧ್ಯಾಹ್ನ ೨ ರಿಂದ ಸಂಜೆ ಆರರವರೆಗೆ ಮಾತ್ರ. ಅತ್ತ ಹೋಗದೇ ಸೀದಾ ಹಂಪೆಯತ್ತ ಬರುವವರಿಗೆ ಮೊದಲು ಸ್ವಾಗತಿಸೋದು ಸರಸ್ವತೀ ಮಂದಿರ, ಚಂದ್ರಶೇಖರ ದೇವಸ್ಥಾನ ಮತ್ತು ಅಷ್ಟಭುಜ ಸ್ನಾನದ ಕೊಳ. ಅದನ್ನು ನೋಡಿ ಮತ್ತೆ ರಸ್ತೆಗೆ ಬಂದು ಮುಂದೆ ಸಾಗಿದರೆ ರಸ್ತೆಯ ಪಕ್ಕದಲ್ಲೇ ಅಷ್ಟಭುಜ ನೀರಿನ ಸಂಗ್ರಹಾಗಾರ(octagonal water pavillion) ಸಿಗುತ್ತದೆ.ಮುಂದೆ ಸಾಗಿದರೆ ಸಿಗುವುದೇ ರಾಣಿಯರ ಸ್ನಾನದ ಕೊಳಗಳು ಮತ್ತು ಮಹಾನವಮಿ ದಿಬ್ಬ. ರಸ್ತೆಯಲ್ಲಿ ಸಾಗಲಿಚ್ಚಿಸದವರು ಸರಸ್ವತೀ ಮಂದಿರದ ಪಕ್ಕದಲ್ಲಿರುವ  ಕಾಲು ಹಾದಿಯ ಹಿಡಿದೂ ಸ್ನಾನದ ಕೊಳದತ್ತ ಅಥವಾ ಮಹಾನವಮಿ ದಿಬ್ಬದತ್ತ ಸಾಗಬಹುದು. ಅದನ್ನು ನೋಡಿ ಮುಂದೆ ಬರುವವರಿಗೆ ಸಿಗುವುದು ಭೂಮ್ಯಂತರ್ಗತ ಪ್ರಸನ್ನ ವಿರೂಪಾಕ್ಷ ದೇವಸ್ಥಾನ(underground temple). ಅದನ್ನು ನೋಡಿ ಮುಂದೆ ಸಾಗುವಾಗ ಸಿಗೋ ಒಂದು ಏರಿನಲ್ಲಿ ಎಡಕ್ಕೆ ನೋಡಿದರೆ ಕಾಣುವುದೇ ಅಕ್ಕತಂಗಿ ಗುಂಡುಗಳು. ಅಲ್ಲಿಂದ ಮುಂದೆ ಸಾಗಿದರೆ ಉದ್ಧಾನವೀರಭದ್ರ ಸ್ವಾಮಿ ದೇವಸ್ಥಾನ ಮತ್ತು ಪಕ್ಕದಲ್ಲೇ ಇರುವ ಚಂಡಿಕೇಶ್ವರ ದೇವಸ್ಥಾನ.  ಮೇಲೆ ಹೇಳಿದ ನೀರಿನ ಸಂಗ್ರಹಾಲಯ, ಅಕ್ಕ-ತಂಗಿ ಗುಂಡು ಬಿಟ್ಟು ಬೇರೆಲ್ಲಾ ಸ್ಥಳಗಳಲ್ಲೂ ಹೊಸಪೇಟೆಯಿಂದ ಕಮಲಾಪುರದ ಮೇಲೆ ಬರೋ ವಿಜಯರಥ ಬಸ್ಸುಗಳು ನಿಲ್ಲಿಸುತ್ತವೆ. ಚಂಡಿಕೇಶ್ವರನ ದೇಗುಲದಿಂದ ಮುಂದೆ ಕೆಲವೇ ನಿಮಿಷಗಳ ನಡೆಯೋ ಹಾದಿಯಲ್ಲಿ ಸಿಗುವುದು ಹಂಪಿಯ ಜಗದ್ವಿಖ್ಯಾತ ಲಕ್ಷ್ಮೀ ನರಸಿಂಹ . ಅದರ ಪಕ್ಕದಲ್ಲೇ ಬಡವೀ ಲಿಂಗ, ಅರಮನೆಯ ಪ್ರಾಕಾರಗಳ ಅವಶೇಷಗಳನ್ನು ಕಾಣಬಹುದು. ಅಲ್ಲಿಂದ ಮುಂದೆ ಸಾಗಿದರೆ ಸಿಕ್ಕುವುದೇ ಶ್ರೀ ಕೃಷ್ಣ ದೇವಾಲಯ. ಅದರೆದುರಿನ ಶ್ರೀ ಕೃಷ್ಣಬಜಾರ್ ಮತ್ತು ಲೋಕಪಾವನಿ ಕೊಳ/ಪುಷ್ಕರಿಣಿ. ನಂತರ ಈ ರಸ್ತೆ ಸಾಸಿವೆ ಕಾಳು ಗಣೇಶ ನಿಲ್ದಾಣದಲ್ಲಿ ಕಡ್ಡಿ ರಾಂಪುರದಿಂದ ಬರುವ ರಸ್ತೆಗೆ ಸೇರುತ್ತದೆ. ಪ್ರತೀ ದೇಗುಲಗಳ ವಿವರಗಳನ್ನ,ಹಂಪಿಯ ಉಳಿದ ದೇವಸ್ಥಾನಗಳ ಮಾಹಿತಿಯನ್ನ ನಂತರ ನೋಡೋಣ. ಮೊದಲು ಹಂಪಿಯ ವಿರೂಪಾಕ್ಷನ ಸನ್ನಿಧಿಗೆ ಭೇಟಿ ಕೊಡೋಣ.
Entrance to Virupaksha temple

ಹಂಪಿ ತಿರುಗೋದೇಗೆ ?
ಹಂಪಿಗೆ ಬರೋರೆಲ್ಲಾ ಮೊದಲು ವಿರೂಪಾಕ್ಷನ ದರ್ಶನ ಪಡೆದೇ ನಂತರ ಉಳಿದ ಜಾಗಗಳಿಗೆ ತೆರಳೋದು ಸಾಮಾನ್ಯ. ಹಂಪಿ ಬಸ್ ನಿಲ್ದಾಣದಲ್ಲಿ ಇಳಿಯೋರಿಗೆ ಎದುರಲ್ಲೇ ವಿರೂಪಾಕ್ಷನ ಗೋಪುರಗಳು ಕಾಣಸಿಗುತ್ತೆ. ವಿರೂಪಾಕ್ಷನ ದರ್ಶನ ಪಡೆದೇ ಮುಂದಿನ ಪ್ಲಾನ್ ಮಾಡೋಣವೆಂಬ ಇರಾದೆಯಿದ್ದರೂ ಅಲ್ಲಿನ ಆಟೋಗಳು ಅಲ್ಲಿಗೆ ಸುತ್ತಿಸುತ್ತೇವೆ, ಇಲ್ಲಿಗೆ ಕರೆದುಕೊಂಡು ಹೋಗುತ್ತೇವೆ, ನಡೆದುಕೊಂಡು ಹೋಗೋದು ಅಸಾಧ್ಯ. ಇಲ್ಲಿ ನೋಡೋ ಸ್ಥಳಗಳನ್ನೆಲ್ಲಾ ನೋಡೋಕೆ ೨೫ ಕಿ.ಮೀ ಗಿಂತಲೂ ಹೆಚ್ಚಾಗುತ್ತೆ, ನಮ್ಮ ಆಟೋದಲ್ಲಿ ಬರೀ ಒಂಭೈನೂರು ಮಾತ್ರ ಅಂತ ನಂಬಿಸೋಕೆ ಬರುತ್ತಾರೆ. ಎರಡು ದಿನ ಅಲ್ಲೇ ಇದ್ದು ಸುತ್ತಿ ನೋಡಿದ ನಮ್ಮ ಅನುಭವದ ಪ್ರಕಾರ ಇವೆಲ್ಲಾ ಶುದ್ಧ ಸುಳ್ಳು ಮತ್ತು ವ್ಯಾಪಾರೀ ತಂತ್ರಗಳಷ್ಟೇ. ಹಂಪೆಯ ಎಲ್ಲಾ ಸ್ಥಳಗಳನ್ನು ಕಾಲ್ನಡಿಗೆಯಲ್ಲಿ ಅಥವಾ ಸೈಕಲ್ಲಿನಲ್ಲಿ ಎರಡು ಅಥವಾ ಮೂರು ದಿನಗಳಲ್ಲಿ ನೋಡಿ ಮುಗಿಸಬಹುದು. ಆದ್ದರಿಂದ ಪ್ರಕೃತಿಯನ್ನು ಸಹಜವಾಗಿ ಸವಿಯೋ ಇರಾದೆಯಿದ್ದರೆ, ನಿಮ್ಮದೇ ಆರಾಮದಲ್ಲಿ  ಹಂಪೆಯನ್ನು ನೋಡೋ ಇರಾದೆಯಿದ್ದರೆ ಯಾವ ಆಟೋದವರ ಸಹವಾಸಕ್ಕೂ ಹೋಗದೇ ವಿರೂಪಾಕ್ಷನ ದೇಗುಲದತ್ತೆ ನಡೆಯಿರಿ. ಆದರೆ ಅಲ್ಲಿ ಸಿಗೋ ಹಂಪಿ ಎಂಬೋ ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿರುವ ಹಂಪಿಯ ಮ್ಯಾಪ್ ಇರೋ ಪುಸ್ತಕವನ್ನು ತೆಗೆದುಕೊಳ್ಳಿ. ಸ್ಥಳಗಳ ಬಗ್ಗೆ ಮಾಹಿತಿಯನ್ನೂ ಹೊಂದಿರೋ ಆ ಮಿನಿ ಗೈಡ್ ಪ್ರವಾಸದುದ್ದಕ್ಕೂ ನೆರವಾಗುತ್ತದೆ.ವಿರೂಪಾಕ್ಷನ ದೇಗುಲಕ್ಕೆ ಸಾಗೋ ದಾರಿಯಲ್ಲಿ ಬಲಭಾಗದಲ್ಲಿ ಸಾರ್ವಜನಿಕ ಶೌಚಾಲಯ ಅನ್ನೋ ಬೋರ್ಡ್ ಕಾಣುತ್ತೆ. ಅದರ ಪಕ್ಕದಲ್ಲಿ ಬಾಡಿಗೆ ಸೈಕಲ್ಲುಗಳು ಸಿಗುತ್ತೆ. ಒಂದರ ದಿನದ ಬಾಡಿಗೆ ನೂರು ರೂ. ಸಂಜೆ ಆರು ಆರೂವರೆಯವರೆಗೂ ಈ ಸೈಕಲ್ಲುಗಳಲ್ಲಿ ಸುತ್ತಬಹುದು. ಎಲ್ಲಾದ್ರೂ ಪಂಕ್ಚರ್ರಾದರೆ ಫೋನ್ ಮಾಡಿ ಬಂದು ಸರಿ ಮಾಡಿ ಕೊಡುತ್ತೇವೆ ಎನ್ನೋ ಇವರ ಫೋನ್ ನಂಬರ್ ಇಸ್ಕೊಂಡಿರಿ ! ನಮ್ಮ ಪಯಣದಲ್ಲಿ ಎಲ್ಲೂ ಪಂಕ್ಚರ್ರಾಗದಿದ್ರೂ , ಹೆಚ್ಚಿನ ಸ್ಥಳಗಳಿಗೆಲ್ಲಾ ನಡೆದೇ ಹೋಗಬಹುದಾದಂತಹ ಶಾರ್ಟ್ ಕಟ್ಗಳಿದ್ರೂ ನಿಮ್ಮ ಪಯಣದಲ್ಲಿ ಬೇಕಾಗಬಹುದು. ನೀವು ಸೈಕಲ್ ತಗೊಂಡು ಪರಾರಿಯಾಗೋಲ್ಲ ಎನ್ನುವ ದಾಖಲೆಗೆ ಇವರು ಯಾವುದಾದ್ರೂ ದಾಖಲೆಯ ಜೆರಾಕ್ಸ್ ಅಥವಾ ಒರಿಜಿನಲ್ ಕೇಳುತ್ತಾರೆ. ನಮ್ಮ ಮೂರು ಜನರ ದಾಖಲೆಗಾಗಿ ನನ್ನ ಬಳಿಯಿದ್ದ ವೋಟರ್ ಕಾರ್ಡನ್ನೇ ಕೊಟ್ಟು ಮುಂದೆ ಸಾಗಿದ್ವಿ. ವಿರೂಪಾಕ್ಷನ ದೇಗುಲ ದಾಟಿ ಪಕ್ಕದ ತುಂಗಭದ್ರೆಯನ್ನು ಹತ್ತು ರೂ ನೀಡಿದರೆ ದಾಟಿಸೋ ಬೋಟಿನಲ್ಲಿ ದಾಟಿದರೆ ಆಚೆ ದಡದಲ್ಲಿರೋ ಆಂಜನಾದ್ರಿ, ಲಕ್ಷ್ಮೀ ದೇಗುಲ, ಪಂಪಾ ಸರೋವರ, ದುರ್ಗಾ ಮಂದಿರ, ಆನೇಗುಂದಿ, ಚಿಂತಾಮಣಿಗಳನ್ನ ನೋಡಬಹುದು. ಆಚೆ ದಡದಲ್ಲಿ ಇವುಗಳನ್ನೆಲ್ಲಾ ತೋರಿಸೋಕೆ ಆಟೋದವರು ಆರು ನೂರು ಕೇಳುತ್ತಾರೆ. ಬೈಕಲ್ಲಿ ಹೋಗೋದಾದರೆ ಬೈಕಿಗೆ ಇನ್ನೂರೈವತ್ತು. ಪೆಟ್ರೋಲ್ ನೀವೇ ಹಾಕಿಸಿಕೊಳ್ಳಬೇಕು.ಈಚೆ ದಡದಲ್ಲಿ ಪಡೆದ ಸೈಕಲ್ಲುಗಳಿದ್ದರೆ ಅದರಲ್ಲೇ ಇವನ್ನು ದರ್ಶಿಸಬಹುದು. ಹಂಪೆಗೆ ಹೋಗೋದೇಗೆ ಅನ್ನೋ ಪೂರ್ವ ಕತೆಗಳ, ಉಳಿದ ಸ್ಥಳಗಳ ಬಗೆಗಿನ ಮಾಹಿತಿಗೆ ಮುಂಚೆ ನೇರವಾಗಿ ಎದುರಿಗೇ ಸಾಗೋ ವಿರೋಪಾಕ್ಷನ ಸನ್ನಿಧಿಗೆ ಸಾಗೋಣ

ದೇಗುಲದ ಪ್ರವೇಶದ್ವಾರದ ಬಳಿಯಿರುವ ಕಲ್ಲಿನ ಮಂಟಪ
ಈ ಬೋರ್ಡ್ ನೆನಪಿಟ್ಟುಕೊಂಡರೆ ಕಲ್ಲಿನ ಮಂಟಪವನ್ನು ಹುಡುಕೋದು ಸುಲಭ

ಹಂಪಿ ವಿರೂಪಾಕ್ಷ:
ಏಳನೇ ಶತಮಾನದಿಂದ ಪೂಜಿಸಲ್ಪಡುತ್ತಿರುವ ಈ ದೇಗುಲಕ್ಕೆ ಚಾಲುಕ್ಯ, ಹೊಯ್ಸಳ, ವಿಜಯನಗರದ ಕಾಲದಲ್ಲಿ ಅಷ್ಟಿಷ್ಟು ಬದಲಾವಣೆಗಳಾಗಿವೆ ಎನ್ನುತ್ತದೆ ಇತಿಹಾಸ. ಒಂಭತ್ತು ಅಂತಸ್ತುಗಳ ಬೃಹತ್ ಪ್ರವೇಶದ್ವಾರವನ್ನು ದಾಟಿ ಮುನ್ನಡೆದರೆ ವಿರೂಪಾಕ್ಷ ದೇಗುಲದ ಅಂಗಳಕ್ಕೆ ಸಾಗುತ್ತೇವೆ. ಅಲ್ಲಿನ ಎಡಭಾಗದಲ್ಲಿ ಅಡಿಗೆ ಮನೆಗೆ ಸಾಗುವ ದಾರಿ ಎನ್ನುವ ಬೋರ್ಡಿರೋ ಕಂಬದ ಮಂಟಪ ಸಿಗುತ್ತದೆ. ಕಂಬದ ಮಂಟಪದಲ್ಲಿರೋ ರಚನೆಗಳನ್ನು ನೋಡುತ್ತಾ ಮುಂದೆ ಸಾಗಿದರೆ ಹಿಂದೆ ಅಡಿಗೆ ಮನೆಗೆ, ಆನೆಗಳ ಲಾಯಕ್ಕೆ ಸಾಗಬಹುದಿತ್ತಂತೆ. ಈಗ ಬೀಗ ಹಾಕಿರೋ ಆ ದ್ವಾರದ ಬದಲು ಆನೆಗಳ ಲಾಯಕ್ಕೆ ಮತ್ತೊಂದು ದಾರಿಯಿಂದ ಸಾಗಬಹುದು. ಕಂಬಗಳ ಮಂಟಪಗಳ ರಚನೆಯನ್ನು ಆನಂದಿಸಿ ಮತ್ತೆ ವಾಪಾಸ್ ಬಂದರೆ ಪ್ರವಾಸಿ ಮಾಹಿತಿ ಕೇಂದ್ರ ಸಿಗುತ್ತದೆ. ಅದರ ಪಕ್ಕದಲ್ಲೇ ಇದೆ ದೇಗುಲದ ಪ್ರವೇಶ ದ್ವಾರ. ಅಲ್ಲಿನ ಪ್ರವೇಶ ಶುಲ್ಕ ತಲಾ ಎರಡು ರೂ. ಸ್ಥಿರ ಚಿತ್ರಗಳನ್ನು ತೆಗೆಯೋ ಕ್ಯಾಮೆರಾಕ್ಕೆ ೫೦ ಮತ್ತು ವಿಡೀಯೋ ಕ್ಯಾಮೆರಾಕ್ಕೆ ೫೦೦ ರೂ ಪ್ರವೇಶ ಶುಲ್ಕ. ಪಕ್ಕದಲ್ಲೇ ಇರೋ ಚಪ್ಪಲಿ ಸ್ಟಾಂಡಲ್ಲಿ ಚಪ್ಪಲಿಯಿಟ್ಟು ಒಳನಡೆದರೆ ದೇಗುಲದ ಪ್ರಾಂಗಣ ಎದುರಾಗುತ್ತೆ.
 
ಅಲ್ಲಿನ ಬಸವಣ್ಣನ ಮಂಟಪವನ್ನು ದಾಟಿ ಮುನ್ನಡೆದರೆ ಮತ್ತೊಂದು ಮಂಟಪ ಸಿಗುತ್ತದೆ. ಅದರಲ್ಲಿರುವ ರಚನೆಗಳ ಜೊತೆಗೆ ಅದರ ಮೇಲ್ಛಾವಣಿಯಲ್ಲಿರುವ ಪೈಂಟಿಗುಗಳನ್ನ ನೋಡಲು ಮರೆಯದಿರಿ.ನವಗ್ರಹಗಳ ಮತ್ತು ರಾಜಸಭೆಯ ಮನಮೋಹಕ ಪೈಂಟಿಗುಗಳನ್ನು ತಲೆಯೆತ್ತಿ ನೋಡದ ಅದೆಷ್ಟೋ ಜನ ಮಿಸ್ ಮಾಡಿಕೊಳ್ಳುತ್ತಾರೆ ! ಅಲ್ಲಿಂದ ಮುಂದೆ ಸಾಗಿದರೆ ವಿರೂಪಾಕ್ಷನ ಸನ್ನಿಧಿ. ಅಕ್ಕಪಕ್ಕದಲ್ಲಿ ಇನ್ನೂ ಅನೇಕ ದೇಗುಲಗಳನ್ನು ಕಾಣಬಹುದು. ಎಡಭಾಗದಲ್ಲಿನ ಮೆಟ್ಟಿಲುಗಳ ಹತ್ತಿ ಸಾಗಿದರೆ ಆನೆಲಾಯ ಮತ್ತು ಅಂದಿನ ಅಡಿಗೆ ಮನೆಗೆ ಭೇಟಿಯಿಡಬಹುದು.
Navagraha painting
Rajasabha painting

ವಿರೂಪಾಕ್ಷ ದೇಗುಲದ ಸುತ್ತಣ ಪ್ರಾಂಗಣದಲ್ಲಿ ರಾಮಾಯಣ,ಮಹಾಭಾರತ ಮತ್ತಿತರ ಪೌರಾಣಿಕ ಕೆತ್ತನೆಗಳಿವೆ. ವಿರೂಪಾಕ್ಷ ದೇಗುಲವನ್ನು ದರ್ಶಿಸಿದವರು ಅದೇ ಆವರಣದಲ್ಲಿರುವ ಶ್ರೀ ಲಕ್ಷ್ಮೀದೇವಿ, ಶಾರದಾ ದೇವಿ, ಮಹಿಷಾಸುರ ಮರ್ಧಿನಿ, ವಿದ್ಯಾರಣ್ಯ ಸ್ವಾಮಿ, ಪಂಪಾ ದೇವಿ, ಚಂಡಿಕೇಶ್ವರ, ಪಂಪಾದೇವಿ, ಭುವನೇಶ್ವರಿ ದೇವಿ, ಚಂಡಿಕೇಶ್ವರ ದೇವರ ದರ್ಶನವನ್ನು ಪಡೆಯಬಹುದು. ಅಲ್ಲೇ ಮೇಲೆ ಸಾಗಿದರೆ ದೇಗುಲ ಗೋಪುರದ ಉಲ್ಟಾ ಛಾಯೆಯನ್ನು ನೋಡಬಹುದು ! pin hole camera technology ಅನ್ನು ಅಂದೇ ಅಳವಡಿಸಿದ ನಮ್ಮ ಹಿರಿಯರ ಕೌಶಲ್ಯವನ್ನು ಮೆಚ್ಚಬೇಕಾದ್ದೆ. ನೋಡುವ ಕಣ್ಣುಗಳಲ್ಲಿ ಉಲ್ಟಾ ಛಾಯೆಯನ್ನು ಕಾಣಬಹುದಾದರೂ ಕತ್ತಲ ಆವರಣದಲ್ಲಿರುವ ಅದರ ಛಾಯಾಚಿತ್ರವನ್ನು ತೆಗೆಯೋದು ಕಷ್ಟಕರ. ಕ್ಯಾಮರಾದಲ್ಲಿ ಫ್ಲಾಷ್ ಹಾಕಿದ್ರೆ ಆ ಜಾಗವೇನೋ ಕಾಣುತ್ತೆ. ಆದ್ರೆ ಛಾಯೆಯ ಅನುಭವ ಸಿಗೋಲ್ಲ! ಆದರೂ ಆ ಜಾಗದ ಅನುಭವವನ್ನು ಚಿತ್ರದಲ್ಲಿ ಕಟ್ಟಿಕೊಡೋಕೆ ಪ್ರಯತ್ನಿಸಿದ್ದೀನಿ. ಅಲ್ಲಿಗೆ ಹೋದವರು ಆ ಜಾಗವನ್ನು ನೋಡೋಕೆ ಖಂಡಿತಾ ಮರೆಯದಿರಿ ಎನ್ನೋ ವಿನಂತಿಯೊಂದಿಗೆ :-)
ದೇಗುಲದ ಸುತ್ತಲ ಪ್ರದಕ್ಷಿಣಾ ಪಥ. ಇಲ್ಲಿನ ಪ್ರತಿ ಕಲ್ಲೂ ಕಥೆ ಹೇಳೀತು
One of the guide explaining children about inverted image of big gopuram

Scluptures which withstood the attacks of attacker and  the test of time since centuries !

ಹಾಗೇ ಮೇಲೆ ಸಾಗಿದರೆ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಹಕ್ಕಬುಕ್ಕರ ಗುರುಗಳಾದ ವಿದ್ಯಾರಣ್ಯರು ತಪಸ್ಸಿಗೆ ಕುಳಿತ ಜಾಗ, ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಮಹಾಸಂಸ್ಥಾನ ಮಠ ಸಿಗುತ್ತದೆ. ಅಲ್ಲಿಂದ ಕೆಳಬಂದರೆ ಪಕ್ಕದಲ್ಲಿರೋ ಕೆರೆಗೆ ಸಾಗೋ ಹಾದಿಯಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ, ಶ್ರೀ ಶಂಕರೇಶ್ವರ, ಶ್ರೀ ಚಾಮುಂಡೇಶ್ವರಿ, ರತ್ನ ಗರ್ಭ ಗಣಪತಿ ದೇಗುಲಗಳು ಕಾಣಸಿಗುತ್ತದೆ.
Lake next to Virupaksha temple. Both entrance to the temple are visible at the edges
ಇಲ್ಲಿನ ಪ್ರತೀ ಶಿಲ್ಪಕ್ಕೂ ಗೈಡುಗಳು ಒಂದೊಂದು ಕಥೆ ಹೇಳುತ್ತಾರೆ. ಉದಾಹರಣೆಗೆ ಇಲ್ಲಿನ ದ್ವಾರದಲ್ಲಿ ಸಿಗೋ ಮೂರು ತಲೆಯ ಅಪರೂಪದ ನಂದಿ ಭೂತ, ವರ್ತಮಾನ, ಭವಿಷ್ಯಗಳ ಸಂಕೇತವಂತೆ. ದಾಳಿಗೆ ತುತ್ತಾಗಿ ಅಸ್ಪಷ್ಟವಾಗಿರೋ ಅದರ ಮೂರನೇ ಮುಖ ನಮ್ಮ ಅಸ್ಪಷ್ಟ ಭವಿಷ್ಯದ ಸಂಕೇತವಂತೆ ! ಹೇಳುತ್ತಾ ಹೊರಟರೆ ಅದೇ ಒಂದು ಕಾದಂಬರಿಯಾದೀತು !

3 headed Nandi at the entrance
to temple from the side of Lake


Ganesha, Karthikeya, Airavata at the same wall
Single headed nandi and other scriptures at the other door

ಸದ್ಯ ಜೀರ್ಣೋದ್ದಾರ ನಡೆಯುತ್ತಿರುವ ಕೆರೆಯನ್ನು ದಾಟಿ ಮುನ್ನಡೆದರೆ ತುಂಗಭದ್ರಾ ತಟ ಸಿಗುತ್ತದೆ. ಇಲ್ಲಿನ ನೀರಿನಲ್ಲಿ ಅದೆಷ್ಟೋ ಶಿವಲಿಂಗಗಳನ್ನು, ಬಸವನ ಕೆತ್ತನೆಗಳನ್ನು ಕಾಣಬಹುದು. ಪುಣ್ಯಸ್ನಾನಕ್ಕೆ ಬಂದಿರೋ ಯಾತ್ರಾರ್ಥಿಗಳು ಒಂದೆಡೆಯಾದರೆ ನದಿಯಾಚೆಯ ಬಂಡೆಗಳ, ಅವುಗಳ ಮಧ್ಯದ ದೇಗುಲಗಳ ಸವಿಯನ್ನು ಸವಿಯೋಕೆ ಬಂದಿರೋ ಪ್ರವಾಸಿಗಳ ಗುಂಪು ಮತ್ತೊಂದೆಡೆ. 
One of the Nandi @the river Tungabhadra
View of the Mantapa and one of the river crossings
 ಮುಂದಿನ ಕತೆಯನ್ನು ಮುಂದಿನ ಭಾಗದಲ್ಲಿ ನೋಡೋಣ  ..
ಮುಂದಿನ ಭಾಗದಲ್ಲಿ :ವಿಠಲನ ನಾಡಿನಲ್ಲೊಂದಿಷ್ಟು ಅಲೆದಾಟ

Wednesday, October 7, 2015

ಹಂಪಿ ಪ್ರವಾಸ ಕಥಾನಕ -೧: ನಾಡ ಭಾಷೆ, ಇತಿಹಾಸವೂ ನಮ್ಮ ಅಭಿಮಾನಶೂನ್ಯತೆಯು

ಅಪಾರ ಕೀರ್ತಿಯಿಂದ ಮೆರೆವ ದಿವ್ಯ ನಾಡಿದು, ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು.ಅಪಾರ ಕೀರ್ತಿಯೇ.. ಮಯೂರ ಚಿತ್ರದ ಈ ಹಾಡು, ಅದಕೆ ಹಿಮ್ಮೇಳವೆಂಬಂತೆ ನಾಗೋ ಕುದುರೆಯ ಪುಟಿತದ ಟಕ್, ಟಕ್, ಟಕ್ ಎಂಬ ಸದ್ದೂ ನಿಮ್ಮೆಲ್ಲರ ಮನಸ್ಸಲ್ಲೊಂದು ಭದ್ರ ಸ್ಥಾನ ಪಡೆದಿರಬಹುದು. ಚಾಲುಕ್ಯ, ಹೊಯ್ಸಳ, ವಿಜಯನಗರ, ಕೆಳದಿ ಸಾಮ್ರಾಜ್ಯ ಹೀಗೆ ಇಲ್ಲಿನ ನೆಲವಾಳಿದ ರಾಜರೆಲ್ಲಾ ಕಲೆ, ಸಂಸ್ಕೃತಿ, ಭಾಷೆಯ ಬೆಳವಣಿಗೆಗೆ ಕೊಟ್ಟ ಪ್ರೋತ್ಸಾಹದ ಪರಿಯನ್ನು ನಮ್ಮ ಸುತ್ತೆಲ್ಲಾ ಈಗಲೂ ಕಾಣಬಹುದು, ಹೆಮ್ಮೆಪಡಬಹುದು. ಭಾಷೆ, ಜಾತಿ, ಧರ್ಮವೆಂಬ ಯಾದ ಬೇಧವೂ ಇಲ್ಲದೇ ಬಂದವರಿಗೆಲ್ಲಾ ಆಶ್ರಯವೀಯೋ ತಾಯಿ ಭಾರತಿಯ ಗುಣವನ್ನು ಚಾಚೂ ತಪ್ಪದೆ ಪಾಲಿಸಿದ ಕನ್ನಡಾಂಬೆಯ ನಾಡ ಕಲೆ, ಸಂಸ್ಕೃತಿಯಲ್ಲಿ ಹೊರನಾಡಿನ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯೂ ಅನೇಕ. ಆದರೆ ಕಲೆ, ಭಾಷೆಗಳ ಬೆಳವಣಿಗೆಯ ರಾಜರಾಳ್ವಿಕೆಯ ದಿನಗಳನ್ನೂ, ಈ ದಿನಗಳನ್ನೂ ಹೋಲಿಸಿ ನೋಡಿದಾಗ ಅನೇಕ ಕಡೆಗಳಲ್ಲಿ ಬೇಸರವಾಗುತ್ತದೆ. ನಮ್ಮ ನಾಡ ನುಡಿ, ಇತಿಹಾಸದ ಬಗ್ಗೆ ಇಷ್ಟೊಂದು ಅಭಿಮಾನಶೂನ್ಯರಾದೆವಾ ನಾವು ಅನಿಸಿಬಿಡುತ್ತದೆ.

ಪ್ರಸಂಗ ೧:
ಹಂಪೆಗೆ ಹೋದವರೆಲ್ಲಾ ಅಂಜನಾದ್ರಿಪರ್ವತ ಎಂಬ ಹೆಸರನ್ನು ಕೇಳಿಯೇ ಇರುತ್ತಾರೆ. ರಾಮಾಯಣದ ಕಿಷ್ಕಿಂದೆ ಇದುವೇ ಎಂದು ಹೇಳೋ, ಪುರಾಣಪುರುಷ ಭಜರಂಗಬಲಿ ಇಲ್ಲೇ ಜನಿಸಿದ್ದಾನೆಂದು ಹೇಳೋ ಈ ಅಂಜನಾದ್ರಿಗೆ ಹಂಪೆಗೆ ಹೋದ ಬಹುತೇಕರು ಹೋಗಿಯೇ ಇರುತ್ತಾರೆ. ತುಂಗಭದ್ರೆಯ ಆಚೆ ದಡದಲ್ಲಿರೋ ಅಂಜನಾದ್ರಿ ಪರ್ವತಕ್ಕೆ ಭೇಟಿ ಕೊಡೋ ಸಲುವಾಗಿಯೇ ಹತ್ತು ರೂ ನೀಡಿದರೆ ದಾಟಿಸೋ ಬೋಟಿನಲ್ಲಿ ತುಂಗಭದ್ರೆಯ ದಾಟಿ, ಅಲ್ಲಿಂದ ಇನ್ನೂರೈವತ್ತಕ್ಕೆ ಒಂದರಂತೆ ಬೈಕನ್ನೋ, ನಾನ್ನೂರರಿಂದ ಆರ್ನೂರವರೆಗೆ ಕೊಟ್ಟು ಆಟೋವನ್ನೋ, ನೂರಕ್ಕೊಂದರಂತೆ ಸಿಗೋ ಸೈಕಲ್ಲನ್ನೋ ಪಡೆದು ಅಂಜನಾದ್ರಿ, ಪಂಪಾಸರೋವರ, ಲಕ್ಷ್ಮೀ ದೇಗುಲ, ಆನೆಗುಂದಿ, ಚಿಂತಾಮಣಿ ಮೊದಲಾದ ಸ್ಥಳಗಳನ್ನು ದರ್ಶಿಸೋದು ರೂಢಿ.
Entrance of Anjanadri temple having information about the place

 ಅಂಜನಾದ್ರಿ:
ಹುಲಿಗಿ ಕ್ಷೇತ್ರ ಮುಂತಾದವನ್ನು ದರ್ಶಿಸೋ ಅಭಿಲಾಶೆಯುಳ್ಳವರೂ ಗಂಗಾವತಿಗೆ ಸಾಗೋ ಈ ರಸ್ತೆಯಲ್ಲಿ ಬಂದು ಅಂಜನಾದ್ರಿಯನ್ನು ಗಮನಿಸಿರುತ್ತಾರೆ. ಹನುಮಂತನ ತಾಯಿ ಅಂಜನಾದೇವಿಯ ಹೆಸರಿನಲ್ಲಿರುವ ಈ ಪರ್ವತದ ಆರು ನೂರು ಚಿಲ್ಲರೆ ಮೆಟ್ಟಿಲು ಹತ್ತಿ ಕೇಸರಿವರ್ಣದ ಆಂಜನೇಯನ , ಪಕ್ಕದಲ್ಲೇ ಇರುವ ಅಂಜನಾದೇವಿಯ ಗುಡಿಯ ದರ್ಶನವನ್ನು ಪಡೆಯುವುದು, ಬೆಟ್ಟದ ಮೇಲಿಂದ ಸುತ್ತಣ ಹಂಪಿಯ ವಿಹಂಗಮ ನೋಟವನ್ನು ಸವಿಯೋದೇ ಒಂದು ಖುಷಿಯ ಅನುಭವ. ಹಂಪೆ ಕರ್ನಾಟಕದಲ್ಲಿರುವುದರಿಂದ ಹನುಮಂತ ಕನ್ನಡದವನೇ ಎಂದು ನಾವೆಲ್ಲಾ ಖುಷಿಯಿಂದ ಬೀಗಬಹುದಾದ ಜಾಗಕ್ಕೆ ಭೇಟಿ ಕೊಡುವ ಅವಕಾಶವನ್ನು ಯಾರು ತಾನೇ ತಪ್ಪಿಸಿಕೊಳ್ಳುತ್ತಾರೆ ? ಉರಿಬಿಸಿಲಿನಲ್ಲಿ ಬೆಟ್ಟ ಹತ್ತಿ ಬಂದ ಭಕ್ತರ ಸಲುವಾಗಿಯೇ ಇಲ್ಲಿನ ದೇಗುಲದವರು ನಡೆಸುತ್ತಿರುವ ಅನ್ನದಾನದ ಬಗ್ಗೆ ಒಳ್ಳೆಯ ಮಾತನಾಡದೇ ಇರಲು ಮನಸ್ಸಾಗೋದಿಲ್ಲ. ಅನ್ನ, ದಾಲನ್ನು ಪ್ರಸಾದ ಅಂತ ವಿತರಿಸೋ ಇಲ್ಲಿಯ ಪರಂಪರೆಯ ಬಗ್ಗೆ ಸ್ಥಳೀಕರೊಬ್ಬರ ಮಾತಲ್ಲೇ ಹೇಳೋದಾದ್ರೆ ಇದು ಪ್ರಸಾದ ರೀ, ಊಟ ಅಲ್ಲ. 
Anjanadri temple
View from the top of Anjanaadri

 ಆದರೆ ಇಲ್ಲಿನ ಅರ್ಚಕರು ಮಾತಾಡೋದು, ಪೂಜೆ ಮಾಡೋದು, ಇಲ್ಲಿನ ಭೋಜನಶಾಲೆಯಲ್ಲಿ ಆಂಜನೇಯನ ಪರಾಕ್ರಮಗಳ ಸಾರೋ ಸಾಲು ಚಿತ್ರಗಳ ಬರಹವಿರೋದು ಕನ್ನಡದಲ್ಲಲ್ಲ !

Painting giving the date of birth of Lord Hanuman


Bhojanashale of Anjanadri temple decorated with paintings related to hanuman chalisa
 ಗುಜರಾತಿ, ಬಿಹಾರಿ, ಮರಾಠಿ.. ಹೀಗೆ ಉತ್ತರದ ಬೇರೆ ಬೇರೆ ಭಾಗಗಳಿಂದ ಬಂದ ಅರ್ಚಕರು ಪೂಜೆಗೆ ಓದೋದು ಅವಧಿ ಭಾಷೆಯಲ್ಲಿರುವ ತುಲಸೀದಾಸ ವಿರಚಿತ ಹನುಮಾನ್ ಚಾಲೀಸವನ್ನ. ಇಲ್ಲಿಗೆ ಬರೋ ಭಕ್ತರಲ್ಲಿ ಉತ್ತರಭಾರತದವರ ಸಂಖ್ಯೆಯೂ ಗಮನಾರ್ಹವಾಗಿಯೇ ಇದೆ ಎನ್ನಬಹುದಾದರೂ ನಮ್ಮ ನಾಡಲ್ಲಿ ನಮ್ಮದಲ್ಲದ ಭಾಷೆಯಲ್ಲಿನ ಆಚರಣೆಗಳು ನನ್ನ  ಕೊಂಚ ವಿಚಲಿತನಾಗಿಸಿದ್ದು ಸುಳ್ಳಲ್ಲ. ನಾಡ ಹಲವು ಭಾಗಗಳಲ್ಲಿ ಸಂಸ್ಕೃತದ ಮಂತ್ರಗಳಲ್ಲಿ ಅರ್ಚನೆ ನಡೆಸುವುದು ತಪ್ಪಾಗದಿದ್ದರೆ ಇಲ್ಲಿನ ಕನ್ನಡೇತರ ಭಾಷೆ ಹೇಗೆ ತಪ್ಪಾಗುತ್ತೆ ಎಂಬ ಸಂದೇಹವಿರೋ ಅನೇಕ ಮಿತ್ರರಿಗಾಗಿ ಒಂದು ಮಾಹಿತಿ. ಅರ್ಚನೆ ಸಂಸ್ಕೃತದಲ್ಲಾದರೂ ಅರ್ಚಕರು ಸಂಬೋಧಿಸೋದು ಕನ್ನಡದಲ್ಲೇ. ಮಂದಿರದ ಬೋರ್ಡುಗಳಿಂದ, ಸೇವಾ ವಿವರಗಳವರೆಗೆ ಎಲ್ಲಾ ಮಾಹಿತಿಯ ಪ್ರಧಾನ ಭಾಷೆ ಕನ್ನಡ ! ನಿಮ್ಮಲ್ಲಿ ಕೆಲವರು ಕೋಲಾರದ ಅನೇಕ ದೇಗುಲಗಳಲ್ಲಿ, ಅಷ್ಟೇಕೆ ಬೆಂಗಳೂರ ಹಲವು ದೇಗುಲಗಳಲ್ಲೇ ತೆಲುಗಿನಲ್ಲಿ ಅರ್ಚನೆ ನಡೆಸುತ್ತಾರೆ ಭಟ್ಟರು, ಅದರಲ್ಲಿ ಇದೇನು ಮಹಾ ಎನ್ನಬಹುದು . ಮಹಾನ್ ಏನೂ ಇಲ್ಲ ಬಿಡಿ. ಎಲ್ಲರನ್ನೂ ಬರಮಾಡಿಕೊಳ್ಳೋ ಭರದಲ್ಲಿ ನಮ್ಮತನವ ಮರೆಯೋದೂ ಒಂದು ದೊಡ್ಡ ಗುಣವೇ ಬಿಡಿ ! ಅಂಜನಾದ್ರಿಯ ಅರ್ಚಕರಿಂದ ಸಿಬ್ಬಂದಿಯವರೆಗೆ ಎಲ್ಲರಿಗೂ ಕನ್ನಡ ಬರುವುದೂ, ಇಲ್ಲಿನ ಹಲ ಬೋರ್ಡುಗಳು ಕನ್ನಡದಲ್ಲೇ ಇರುವ ಬಗ್ಗೆ ಸದ್ಯಕ್ಕಂತೂ ಹೆಮ್ಮೆ ಪಟ್ಟುಕೊಳ್ಳಬಹುದು ನಾವು ! 
Information board at the entrance of Anjanadri indicating the entry to the temple is absolutely free

Sideview of Anjanadri temple


ಪ್ರಸಂಗ ೨:
ಅಂಜನಾದ್ರಿಯ ದರ್ಶನದ ನಂತರ ನಾವು ಭೇಟಿ ಕೊಟ್ಟಿದ್ದು ಪಂಪಾ ಸರೋವರ ಮತ್ತು ಲಕ್ಷ್ಮೀ ಮಂದಿರಕ್ಕೆ. ಈ ಕ್ಷೇತ್ರಕ್ಕೆ ಹೆಸರು ಬಂದ ಕಾರಣವೇನೆಂದು ಸ್ವಲ್ಪ ಕೆದಕಿದಾಗ ಸಿಕ್ಕ ಮಾಹಿತಿಯ ಪ್ರಕಾರ ಈ ಸ್ಥಳಕ್ಕೆ ಹೆಸರಿಟ್ಟ ಹಿರಿಮೆ  ಸ್ಕಂದಪುರಾಣದಲ್ಲಿ ಬರುವ ಪಂಪಾಮಹಾತ್ಮೆಗೆ ಸಲ್ಲುತ್ತದೆ. ಅದರ ಪ್ರಕಾರ ಬ್ರಹ್ಮನ ಮಗಳಾದ ಪಂಪಾದೇವಿಯು ಹೇಮಕೂಟದಿಂದ ಅರ್ಧಕ್ರೋಶದಷ್ಟು ಉತ್ತರಕ್ಕಿರುವ ವಿಪ್ರಕೂಟ ಎಂಬ ಪರ್ವತದ ಬಳಿಯ ಪಂಪಾಸರೋವರದ ಬಳಿ ಉಗ್ರ ತಪಸ್ಸನ್ನಾಚರಿಸುತ್ತಾಳೆ. ಅವಳ ತಪಸ್ಸಿಗೆ ಮೆಚ್ಚಿದ ಶಿವನು ಪ್ರತ್ಯಕ್ಷನಾಗುತ್ತಾನೆ. ಅವಳ ಇಚ್ಚೆಯ ಮೇರೆಗೆ ಅವಳನ್ನು ವಿವಾಹವಾಗಿ ಹಂಪಿಯಲ್ಲಿ ವಿರೂಪಾಕ್ಷನಾಗಿದ್ದವನು ಇಲ್ಲಿ ಪಂಪಾಪತಿ ಎನಿಸಿಕೊಳ್ಳುತ್ತಾನೆ. ಒಂದು ಕ್ರೋಶ ಅಂದರೆ ಸುಮಾರು ನಾಲ್ಕು ಕಿ.ಮೀ. ಅರ್ಧಕ್ರೋಶ ಅಂದರೆ ಸುಮಾರು ೨.ಕಿ.ಮೀ. 
Hampi to Pampa sarovara distance as seen in google map

ಆ ಮಾಹಿತಿಯನ್ನು ಈಗಿನ ಗೂಗಲ್ ದೂರದೊಂದಿಗೆ ತಾಳೆ ಹಾಕೋದಾದರೆ ವಿರೂಪಾಪುರಗಡ್ಡಿಯ ಮೂಲಕ ತುಂಗಭದ್ರೆಯನ್ನು ದಾಟಿ ಮುನ್ನಡೆಯುವವರಿಗೆ ಪಂಪಾ ಸರೋವರಕ್ಕಿರುವ ದೂರ ಸರಿ ಸುಮಾರು ಅಷ್ಟೇ ! ಈಗಿನ ದಾರಿ ಸ್ವಲ್ಪ ಸುತ್ತಿ ಬಳಸಿ ಸಾಗುತ್ತದಾದರೂ ಹಿಂದೆ ಸರಿ ಸುಮಾರು ೨.ಕಿ.ಮೀ ದೂರದೊಂದು ಶಾರ್ಟ್ ಕಟ್ ಇದ್ದಿರಬಹುದಾದ ಸಾಧ್ಯತೆ ಇಲ್ಲದಿಲ್ಲ.  ನಂತರ ಬರೋ ರಾಮಾಯಣ ಪ್ರಸಂಗದಲ್ಲೂ ಈ ಸ್ಥಳ ತಳುಕು ಹಾಕಿಕೊಳ್ಳುತ್ತದೆ. ಶಬರಿ ರಾಮನಿಗಾಗಿ ಕಾಯುತ್ತಿದ್ದ ಜಾಗವೆಂದು ಪ್ರಸಿದ್ದಿ ಪಡೆದ ಶಬರಿ ಗುಹೆಯೂ ಇಲ್ಲಿದೆ.
Shabari Ashrama

 ಅಂದು ಶಬರಿ ಶ್ರೀರಾಮನಿಗೆ ಒಳ್ಳೆಯ ಹಣ್ಣುಗಳನ್ನೇ ಕೊಡಬೇಕು ಅಂತ ಕಚ್ಚಿ ನೋಡಿ ಕೊಟ್ಟ ಬೋರೆ ಹಣ್ಣುಗಳು ಶ್ರೀರಾಮ, ಲಕ್ಷ್ಮಣರ ಹಸಿವೆಯನ್ನು ನೀಗಿಸಿದಂತೆಯೂ ಇಂದಿಗೂ ಇಲ್ಲಿ ನಡೆಯೂ ಮಧ್ಯಾಹ್ನದ ಅನ್ನ ಸಂತರ್ಪಣೆ ಭಕ್ತರ ಹಸಿವೆಯನ್ನು ನೀಗಿಸುತ್ತಿರುವುದು ಸುಳ್ಳಲ್ಲ.  ಶ್ರೀ ರಾಮನ ಪಾದುಕೆಯಿರೋ ಸಣ್ಣ, ಶಬರಿಯ ಪಾದುಕೆಗಳಿರೋ ಗುಹೆಯೆಂದು ಸ್ಥಳೀಯರು ನಂಬೋ ಈ ಸ್ಥಳ ಅನೇಕರ ಪಾಲಿನ ಪುಣ್ಯ ಸ್ಥಳ, ಯಾತ್ರಾ ಸ್ಥಳ. ಇಲ್ಲಿ ಮತ್ತೆ ಹಿಂದಿಯ ರಾಜ್ಯಭಾರ. ಬಂದ ಭಕ್ತರಿಗೆ ಆಪ್ ಕಹಾ ಸೇ ಹೋ ? ರಾಜಸ್ಥಾನ್. ರಾಜಸ್ಥಾನ್ ಮೇ ಕಹಾಂ ಎಂದೇ ಸಂಬೋಧಿಸೋ ಭಟ್ಟರ ನುಡಿ ಮತ್ತೆ ಕಸಿವಿಸಿಯನ್ನುಂಟು ಮಾಡಿದ್ದು ಸುಳ್ಳಲ್ಲ. ಹಿಂದಿನಂತೆಯೇ ಇಲ್ಲಿನ ಲಿಪಿ ದೇವನಾಗರಿನಲ್ಲಿ, ಬರುವವರ ಸಂಭಾಷಣೆ ಕನ್ನಡೇತರ ಭಾಷೆಗಳಲ್ಲಿ ! ಇದು ಸಂರಕ್ಷಿತ ಸ್ಮಾರಕ ಅನ್ನೋ ಪುರಾತತ್ವ ಇಲಾಖೆಯ ಬೋರ್ಡು ಪ್ರವೇಶಕ್ಕೆ ಮುಂಚೆ ಸಿಗುತ್ತೆ ಅನ್ನೋದನ್ನ ಬಿಟ್ಟರೆ ಇಲ್ಲಿನ ಸ್ಥಳ ಮಹಿಮೆಯನ್ನು ಸಾರೋ ಒಂದು ಬೋರ್ಡೂ ಇಲ್ಲವಿಲ್ಲಿ. ಪೂರ್ಣ ಹಸಿರುಗಟ್ಟಿ, ಕೊಳೆಯಿಂದ ರಾರಾಜಿಸುತ್ತಿರೋ ಪಂಪಾ ಸರೋವರದ ಸ್ಥಿತಿಯ ಬಗ್ಗೆಯೂ ಬೇಸರವಾಗದೇ ಇರಲಿಲ್ಲ. ನಮಾಮಿ ಗಂಗೆ ಎಂಬ ಹೆಸರಿನಲ್ಲಿ ಗಂಗೆಯ ಶುದ್ದೀಕರಣಕ್ಕೆ ನಡೆಯುತ್ತಿರೋ ಪ್ರಯತ್ನಗಳ ಬಗ್ಗೆ, ಯಮುನೆಯ ಶುಚಿತ್ವಕ್ಕೆ ಅಲ್ಲಿನ ಸರ್ಕಾರ ಕೈಗೊಳ್ಳುತ್ತಿರೋ ಕ್ರಮದ ಬಗ್ಗೆ ಓದೋ ನಾವು ನಮ್ಮಲ್ಲೇ ಇರೋ ಪಂಪಾಸರೋವರದಂತಹ ಸ್ಥಳಗಳ ಬಗ್ಗೆ ಗಮನಹರಿಸೋಲ್ಲವೇಕೆ ? ಹಂಪೆಯಲ್ಲಿನ ವಿರೂಪಾಕ್ಷ ದೇಗುಲದ ಪುಷ್ಕರಿಣಿಯ ಜೀರ್ಣೋದ್ದಾರದ ಕೆಲಸ ನಡೆಯುತ್ತಿರೋ ಪರಿಯಲ್ಲೇ ಹಂಪಿಯಲ್ಲಿನ ಅದೆಷ್ಟೋ ಹಸಿರುಗಟ್ಟಿದ ಪುಷ್ಕರಿಣಿಗಳ ಸ್ವಚ್ಛತೆಯ, ಸಂರಕ್ಷಣೆಯ ಕೆಲಸವೂ ಶೀರ್ಘವಾಗಿ ನಡೆಯಬೇಕಾದ ಅನಿವಾರ್ಯತೆಯಿದೆ.

Sri Rama Paduke

ಪ್ರಸಂಗ ೩:
ಪಂಪಾಕ್ಷೇತ್ರದ ನಂತರ ನಾವು ಸಾಗಿದ್ದು ದುರ್ಗಾದೇವಿ ಮಂದಿರಕ್ಕೆ. ರಾಮಯಣದ ಕಿಷ್ಕಿಂದಾಕಾಂಡದಲ್ಲಿ ಬರೋ ವಾಲಿಯ ಗುಹೆಯೂ ಇಲ್ಲಿರೋದಿಂದ ಈ ಬೆಟ್ಟಕ್ಕೆ ವಾಲಿ ಪರ್ವತವೆಂದೂ, ಕಿಷ್ಕಿಂದ ಕ್ಷೇತ್ರವೆಂದೂ ಕರೆಯಲಾಗುತ್ತದೆ. ಇಲ್ಲೂ ಕೆಲವು ಬೋರ್ಡುಗಳು, ಕನ್ನಡವಿಲ್ಲದ ತೆಲುಗು ಹಿಂದಿಗಳಲ್ಲಿದ್ದರೂ ಇಲ್ಲಿನ ಪರಿಸ್ಥಿತಿ ಹಿಂದಿನೆರಡು ಸ್ಥಳಗಳಿಗಿಂತ ಪರವಾಗಿಲ್ಲ. ಶರನ್ನವರಾತ್ರಿಯ ಉತ್ಸವಕ್ಕೆ ಸಜ್ಜಾಗುತ್ತಿದ್ದ ಇಲ್ಲಿನ ಶ್ರೀ ದುರ್ಗಾಮಾತಾ ಭೋಜನಶಾಲೆ ದುರ್ಗಾದೇವಿಯ ಮಂದಿರದ ಬಲಭಾಗಕ್ಕೆ(ನಮ್ಮ ಎಡಭಾಗಕ್ಕೆ) ಗಣಪತಿ ದೇಗುಲದತ್ತ ಸಾಗುತ್ತಿದ್ದ ನಮ್ಮನ್ನು ಸ್ವಾಗತಿಸಿತು. ಪುಣ್ಯ ಕ್ಷೇತ್ರಗಳೆಂದರೆ ವ್ಯಾಪಾರವೆನ್ನೋ ಪರಿಸ್ಥಿತಿಯಿರೋ ಅನೇಕ ಸ್ಥಳಗಳಿಗೆ ಹೋಲಿಸಿದರೆ ಬಂದ ಭಕ್ತಾದಿಗಳ ದಾನದಿಂದಲೇ ನಡೆಯುತ್ತಿರೋ ಈ ದೇಗುಲಗಳ ಅನ್ನದಾನ ಸೇವೆ ಈ ನಾಡ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದ್ದು ಸುಳ್ಳಲ್ಲ.


ಹಾಗೇ ಮುಂದೆ ಸಾಗಿದರೆ ಒಂದು ಊರಿನ, ಕೋಟೆಯ ಪ್ರವೇಶದ್ವಾರವಾಗಿದ್ದಿರಬಹುದಾದಂತ ರಚನೆ. ಭಾಗಶಃ ಬಿದ್ದುಹೋಗಿರೋ ಅದನ್ನು ದಾಟಿ ಮುಂದೆ ಹೋದವರಿಗೆ ಬಲಭಾಗದಲ್ಲಿ ಎತ್ತರೆತ್ತರದ ಬಂಡೆಗಳು, ಎಡಭಾಗದಲ್ಲೊಂದು ಬೃಂದಾವನ ಕಾಣಸಿಗುತ್ತೆ. 
Entrace towards vali guhe

ಅದನ್ನು ದಾಟಿ ಮುಂದೆ ಸಾಗಿದವರಿಗೆ ಬಲಭಾಗದಲ್ಲಿ ವಾಲಿಗುಹೆ, ಗಣಪತಿ ದೇವಸ್ಥಾನ, ಶಿವಾಲಯ ಎಂಬ ಬೋರ್ಡು ಕಾಣುತ್ತದೆ. ರಾಮಾಯಣವನ್ನೋದಿದವರಿಗೆ ವಾಲಿ, ಸುಗ್ರೀವ, ದುಂದುಭಿ ಮತ್ತು ಮಾತಂಗಮುನಿಯ ಶಾಪದ ಬಗ್ಗೆ ತಿಳಿದಿರುತ್ತದೆ. ಕಿಷ್ಕಿಂಧಾ ಕಾಂಡದಲ್ಲಿ ಬರೋ ವಿವರಣೆಯ ಪ್ರಕಾರ ದುಂಧುಬಿ ಎಂಬ ರಕ್ಕಸನನ್ನು ಕೊಂದ ವಾಲಿ ಆ ಶವವನ್ನು ಎತ್ತಿ ಎಸೆದಿರುತ್ತಾನೆ. ಆ ಶವ ದೂರದಲ್ಲಿ ಯಜ್ಞಗಯ್ಯುತ್ತಿರೋ ಮತಂಗ ಮುನಿಯ ಯಜ್ಞಕುಂಡದಲ್ಲಿ ಹೋಗಿ ಬಿದ್ದಿರುತ್ತದೆ. ಆಗ ಮತಂಗಮುನಿ ಈ ಕೆಲಸವನ್ನು ಮಾಡಿದವನು ಯಾವನೇ ಆಗಿರಲಿ, ಅವನು ಈ ಪ್ರದೇಶಕ್ಕೆ ಕಾಲಿಟ್ಟರೆ ಅವನ ತಲೆ ಹೋಳಾಗಲಿ ಎಂದು ಶಾಪವೀಯುತ್ತಾನೆ. ನಂತರದಲ್ಲಿ ಮಾಯಾವಿ ಎಂಬ ರಕ್ಕಸ ವಾಲಿಯನ್ನು ಕೆಣಕಿ ಒಂದು ಗುಹೆಯನ್ನು ಹೊಕ್ಕಿರುತ್ತಾನೆ. ಅವನನ್ನು ಕೊಲ್ಲಲು ಹೋದ ವಾಲಿ ತಿಂಗಳಾನುಗಟ್ಟಲೆ ಆದರೂ ಬಾರದೇ, ಆ ಗುಹೆಯಿಂದ ರಕ್ತ ಹೊರಗೆ ಬರಲು ವಾಲಿ ಸತ್ತಿರಬಹುದೆಂಬ ಭೀತಿಯಿಂದ , ವಾಲಿಯನ್ನು ಕೊಂದ ರಕ್ಕಸ ಹೊರಗೆ ಬಾರದಿರಲೆಂದು ಆ ಗುಹೆಗೆ ದೊಡ್ಡ ಬಂಡೆಯನ್ನು ಮುಚ್ಚಿದ ಸುಗ್ರೀವನು ರಾಜ್ಯಕ್ಕೆ ಮರಳುತ್ತಾನೆ. ತಿಂಗಳಾನುಗಟ್ಟಲೆ ಕಳೆದರೂ ಬಾರದ ಅಣ್ಣನ ಪರವಾಗಿ ರಾಜ್ಯವಾಳಲು ಪ್ರಾರಂಭಿಸುತ್ತಾನೆ. ನಂತರ ಆ ಬಂಡೆಯನ್ನೊಡೆದು ಹೊರಬರೋ ವಾಲಿ, ತಮ್ಮನ ಬಗ್ಗೆ ತಪ್ಪಾಗಿ ತಿಳಿದು ಅವನನ್ನು ರಾಜ್ಯದಿಂದ ಹೊರಹಾಕುತ್ತಾನೆ. ಅಣ್ಣನಿಂದ ಜೀವವುಳಿಸಿಕೊಳ್ಳಲು ಸುಗ್ರೀವನು ಇದೇ ಮಾತಂಗಪರ್ವತದ ತಪ್ಪಲಿನಲ್ಲಿ ಬಂದು ನೆಲೆಸುತ್ತಾನೆ. 


at Vali Guhe
ಹಂಪಿಯ ಪಕ್ಕದಲ್ಲಿರೋ ಏಕಶಿಲಾ ನಂದಿಯ ಪಕ್ಕದಿಂದ ಶುರುವಾಗೋ ಮಾತಂಗಪರ್ವತಕ್ಕೂ , ಕಿಷ್ಕಿಂದೆಯ ಈ ಗುಹೆಗೂ ಹೆಚ್ಚಿನ ದೂರವೇನಿಲ್ಲ ! ಆದರೆ ಈ ಗುಹೆ ವಾಲಿ ದುಂದುಭಿಯ ಸಹೋದರ ಮಾಯಾವಿಯನ್ನು ಕೊಂದ ಗುಹೆಯೋ ಅಥವಾ ವಾಲಿ ವಾಸವಿದ್ದ ಗುಹೆಯೋ ಎಂಬುದರ ಬಗ್ಗೆ ಸ್ಥಳೀಕರಲ್ಲಿ ಮಾಹಿತಿ ಸಿಕ್ಕಲಿಲ್ಲ. ನಮ್ಮ ಇತಿಹಾಸದ ಬಗ್ಗೆ ನಮಗೇ ಇಲ್ಲದಿರುವ ಪ್ರಜ್ಞೆ, ಅಭಿಮಾನಶೂನ್ಯತೆ ಬೇಸರ ತರಿಸದೇ ಇದ್ದೀತೆ ?




ಪ್ರಸಂಗ ೪:
ಹಂಪಿಯ ಸಾಸಿವೆಕಾಳು ಗಣೇಶನ ದೇಗುಲದಿಂದ ಕೆಳಗೆ ಸಾಗೋ, ಉಗ್ರ ನರಸಿಂಹನ ದೇಗುಲದತ್ತ ಕರೆದೊಯ್ಯೋ ರಸ್ತೆಯಲ್ಲಿ ಮೊದಲಿಗೆ ಸಿಕ್ಕಿದ್ದು ಶ್ರೀಕೃಷ್ಣ ದೇಗುಲ, ಕೆಳಗೆ ಕಾಣಿಸೋ ಕೃಷ್ಣ ಬಜಾರು ಮತ್ತು ಲೋಕಪಾವನಿ ಕೊಳ ಅಥವಾ ಪುಷ್ಕರಿಣಿ.  ಶ್ರೀ ಕೃಷ್ಣದೇವರಾಯನ ಸರಿಸುಮಾರಿನಲ್ಲಿ ಬಹುಪಾಲು ಆಂಧ್ರ, ತೆಲಂಗಾಣ ಮತ್ತು ಪೂರಾ ಒಡಿಸ್ಸಾ, ಇಂದಿನ ಪಶ್ಚಿಮ ಬಂಗಾಳ, ಜಾರಖಂಡ, ಛತ್ತೀಸ್ಗಡವನ್ನು ಆಳುತ್ತಿದ್ದುದು ಕಳಿಂಗದ ರಾಜ ಗಜಪತಿ ಪ್ರತಾಪ ರುದ್ರ ದೇವ.  ವಿಜಯನಗರ ಸೇನೆ ೧೫೧೨ರಲ್ಲಿ ಕಳಿಂಗ ರಾಜ್ಯಕ್ಕೆ ಸೇರಿದ್ದ ಉದಯಗಿರಿ ಕೋಟೆಗೆ ಮುತ್ತಿಗೆ ಹಾಕುತ್ತದೆ. ಅಲ್ಲಿ ವರ್ಷದ ತನಕದ ಯುದ್ದದಲ್ಲಿ ಹಸಿವೆಯಿಂದ ಕಳಿಂಗ ಸೇನೆ ಕಾಲ್ಕೀಳುತ್ತದೆ. ನಂತರ ಕೊಂಡವೀಡುರಾಜುವಿನಲ್ಲಿ ವಿಜಯನಗರ ಸೇನೆಯನ್ನು ಮುಖಾಮುಖಿಯಾಗೋ ಕಳಿಂಗ ಸೇನೆಯ ಮೇಲೆ ದಾಳಿಗಯ್ದ ವಿಜಯನಗರದ ತಿಮ್ಮರಸು ರಾಜಕುವರ ವೀರಭದ್ರನನ್ನು ಸೆರೆಹಿಡಿಯುತ್ತಾನೆ. ನಂತರ ತನ್ನ ಪುತ್ರಿ ರಾಜಕುಮಾರಿ ಅನ್ನಪೂರ್ಣ ದೇವಿಯನ್ನು, ಶ್ರೀಕೃಷ್ಣದೇವರಾಯನಿಗೆ ಮದುವೆ ಮಾಡಿಕೊಟ್ಟು ಶಾಂತಿ ಒಪ್ಪಂದವನ್ನು ಸಹಿಹಾಕೋ ವಿಜಯನಗರ, ಕಳಿಂಗಗಳೆಂಬ ರಾಜ್ಯಗಳಿಗೆ ಕೃಷ್ಣೆ ಗಡಿಯಾಗುತ್ತಾಳೆ.  ಶ್ರೀಕೃಷ್ಣ ದೇವರಾಯನು ಕಳಿಂಗದ ಗಜಪತಿಯ ಮೇಲಿನ ವಿಜಯದ ಸವಿನೆನಪಿಗೆ ೧೫೧೩ರಲ್ಲಿ ಉದಯಗಿರಿಯಿಂದ ತಂದ ಬಾಲಕೃಷ್ಣನ ವಿಗ್ರಹಕ್ಕೆ ಪ್ರಸಕ್ತ ಕೃಷ್ಣದೇಗುಲವನ್ನು ನಿರ್ಮಿಸುತ್ತಾನೆ ಎನ್ನುತ್ತದೆ ಇತಿಹಾಸ. ದ್ವಾರದಲ್ಲೇ ಶ್ರೀಕೃಷ್ಣದೇವರಾಯನ ಬರಹ ಎಂದು ಇಲ್ಲಿನ ಗೈಡುಗಳು ಪರಿಚಯಿಸೋ ಹಳೆಗನ್ನಡ ಲಿಪಿಯಿದೆ.ಒಳಗಿನ ದೇಗುಲದಲ್ಲಿ ದಶಾವತಾರ, ಭಾಗವತದ ಕೆತ್ತನೆಗಳಿವೆ. ಈ ಲಿಪಿಯನ್ನು ನೋಡಿ This is a mix of kannada, telugu ಅಂತ ಪರಿಚಯಿಸುತ್ತಿದ್ದರು ಒಬ್ಬರು ಅಲ್ಲಿ ಬಂದ ಹೊಸಬರಿಗೆ. It is halekannada, old form of kannada ಅಂದೆ. ಹಾಂ. ಸರಿ ಸರಿ ಅಂತ ಪೆಚ್ಚುಮೋರೆಯ ನಗುವನ್ನಿತ್ತ ಅವರು ಮುಂದೆ ಹೋದರು. ಅಷ್ಟರಲ್ಲೇ ಎದುರಾದ ಹಳೆಗನ್ನಡ ಲಿಪಿಯಲ್ಲಿ ಏನಿದೆ ?ಓದ್ತಿರಾ ಅಂತ ಸ್ಥಳೀಯ ಗೈಡೊಬ್ಬರಿಗೆ ವಿದೇಶಿಯರೊಬ್ಬರು ಕುತೂಹಲದಿಂದ ಪ್ರಶ್ನಿಸಿದರು. ಇಲ್ಲಿನ ಅಕ್ಷರಗಳು ಕೂಡಿಕೊಂಡಿದೆ , ನಾವು ಬರೆಯುವ ಹಾಗಿಲ್ಲ ಹಾಗಾಗಿ ಅದನ್ನು ಓದಲಾಗೋಲ್ಲ ಅಂತ ಪಿಳ್ಳೆ ನೆವ ಕೊಟ್ಟ ಆ ಪುಣ್ಯಾತ್ಮ ಅವರನ್ನು ಮುಂದೆ ಸಾಗಹಾಕಿದ. ನಮ್ಮ ಇತಿಹಾಸದ ಭಾಗವೇ ಆಗಿರೋ ಹಳೆಗನ್ನಡ ಲಿಪಿಯನ್ನು ಓದಲು ಬರೋಲ್ಲ ಅನ್ನೋದು ನಮಗೆಲ್ಲಾ ಅವಮಾನವಾಗಬೇಕಾದ ಸಂಗತಿಯಲ್ಲದೇ ಇನ್ನೇನು ?  ನಮ್ಮ ಇತಿಹಾಸದ ಬಗ್ಗೆ ಹೆಮ್ಮೆಯಿಲ್ಲದ, ಐತಿಹಾಸಿಕ ಸ್ಥಳಗಳಲ್ಲಿರೋ ಬರಹಗಳಲ್ಲಿ ಶಾಲಿವಾಹನ ಶಕೆ, ಶ್ರೀ, ರ, ಮ, ಯ ಮುಂತಾದ ಅಕ್ಷರಗಳನ್ನಾದರೂ ಓದಲು ಪ್ರಯತ್ನಿಸದ ನಮಗೆ ಆ ಸ್ಥಳಗಳಿಗೆ ಬರೋ ವಿದೇಶೀಯರ ಅರೆಬರೆ ಬಟ್ಟೆಗಳೊಂದೇ ಕಾಣುವಂತಾಗಿರೋದು ವಿಪರ್ಯಾಸ.

Remains of Garbhagruha @ Saraswati temple, hampi

ಇನ್ನಿತರ ಅದೆಷ್ಟೋ ಪ್ರಸಂಗಗಳು :
ಹಂಪಿಗೆ ಹೊಸಪೇಟೆಯಿಂದ ಬರುವವರು ಕಮಲಾಪುರದ ಮೇಲೆ ಅಥವಾ ಕಡ್ಡಿರಾಂಪುರದ ಮೇಲೆ ತೆರಳಬಹುದು ಅನ್ನೋದು ಅಲ್ಲಿಗೆ ಅಲ್ಲಿನ ಸಾಮಾನ್ಯ ಸಾರಿಗೆ ವಿಜಯರಥರಲ್ಲಿ ೧೩ ರೂ ಕೊಟ್ಟು ಸಾಗಿದವರಿಗೆ ತಿಳಿದಿದ್ದೇ. ಕಮಲಾಪುರ ಮಾರ್ಗದಲ್ಲಿ ಸಾಗುವಾಗ ಮೊದಲು ಸಿಗೋದು ಸರಸ್ವತಿ ಮಂದಿರ, ಚಂದ್ರಶೇಖರ ಮಂದಿರ ಮತ್ತು ಅಷ್ಟಭುಜ ಸ್ನಾನದ ಕೊಳಗಳೆಂಬ ಅಮೋಘ ರಚನೆಗಳು. ಅಲ್ಲಿನ ಚಂದ್ರಶೇಖರ ದೇಗುಲದ ಎದುರು ಮಾಹಿತಿಫಲಕವಿದ್ದ ಕುರುಹಿನ ಬೋರ್ಡಿದೆಯಾದರೂ ಅದರಲ್ಲಿ ಮಾಹಿತಿಯಿಲ್ಲ. ಏನಣ್ಣ ಇದು ಎಂದು ಅಲ್ಲಿಗೆ ನಮ್ಮನ್ನ ಕರೆದೊಯ್ದಿದ್ದ ಆಟೋ ಚಾಲಕನಿಗೆ ಕೇಳಿದರೆ ಇಲ್ಲಿನ ಜನ ಹಂಗೇ ಸಾರ್. ಅಲ್ಯುಮಿನಿಯಂದು ಅಂತ ಇಲ್ಲಿನ ಫಲಕವನ್ನೂ ಬಿಟ್ಟಿಲ್ಲ ಅಂತಾ ಇದ್ದರೆ ನನಗೆ ಎದೆ ಧಸಕ್ಕಂತಾ ಇತ್ತು. ಇಲ್ಲೊಂದೇ ಅಲ್ಲ, ಹಂಪಿಯ ವಿರೂಪಾಕ್ಷ ದೇಗುಲವನ್ನು ಹೊರತುಪಡಿಸಿ ಗುಡ್ಡ ಬೆಟ್ಟಗಳಲ್ಲಿ ಕಣ್ಣು ಹಾಯಿಸಿದತ್ತೆಲ್ಲಾ ಕಾಣೋ ಅಸಂಖ್ಯಾತ ದೇಗುಲಗಳ ಗರ್ಭಗೃಹದಲ್ಲಿ ಕಾಣಸಿಕ್ಕಿದ್ದು  ಖಾಲಿ ಪಾಣಿ ಪೀಠವಷ್ಟೆ. ಅಲ್ಲಲ್ಲಿ ಬಿದ್ದುಹೋಗಿರೋ ಆ ದೇಗುಲಗಳಲ್ಲಿದ್ದ ಪೂಜಾ ವಿಗ್ರಹಗಳೆಲ್ಲಾ ಎಲ್ಲಿ ಹೋದವು ?  ಅಲ್ಲಿನ ಮೂಲೆ ಮೂಲೆಗಳೆಲ್ಲಾ ಖಾಲಿ ಖಾಲಿಯಾಗಿ ಬಾವಲಿಗಳ ಹಿಕ್ಕೆಗಳಿಗೆ, ಜೇಡರ ಬಲೆಗಳಿಗೆ, ಬ್ಯಾಟರಿಯಿಲ್ಲದೆ ಒಳಗೆ ಹೆಜ್ಜೆಯಿಕ್ಕಲೂ ಹೆದರಿಕೆ ಹುಟ್ಟಿಸೋ ಸ್ಥಿತಿಯಲ್ಲಿರೋದು ಏಕೆ ಅನ್ನೋ ಪ್ರಶ್ನೆಗಳು ಇಲ್ಲಿಗೆ ಭೇಟಿ ಕೊಡೋ ಯಾರಿಗಾದರೂ ಕಾಡದೇ ಇರೋಲ್ಲ. ಹಂಪಿಯಲ್ಲೇ ಎಲ್ಲೇ ಹಾದಿ ತಪ್ಪಿ ನಡೆದರೂ ಒಂದು ಕಿ.ಮೀ ಸಾಗೋ ಹೊತ್ತಿಗೆ ಯಾವುದಾದರೂ ಪಾಳು ಬಿದ್ದ ಗುಡಿಯೋ, ಗೋಪುರವೋ, ಕಂಬದ ಸಾಲೋ, ಪುಷ್ಕರಿಣಿಯೋ ಸಿಗೋದ್ರಲ್ಲಿ ಸಂಶಯವಿಲ್ಲ ! ಅದೆಷ್ಟೋ ಗುಡಿಗಳೆದುರು ಸಂರಕ್ಷಿತ ಸ್ಮಾರಕ ಎನ್ನುವ ಬೋರ್ಡಿದೆಯಾದರೂ ಅದ್ಯಾವ ಗುಡಿ, ಅದರ ಇತಿಹಾಸವೇನೆಂಬ ಕನಿಷ್ಟ ಮಾಹಿತಿಯೂ ಇಲ್ಲವೆನ್ನೋದು ಬೇಸರದ ಸಂಗತಿ. ಎದುರಿಗೋರೋ ಮುರಿದು ಬಿದ್ದ ನಂದಿಧ್ವಜವೋ, ಗರುಡಗಂಬದ ಮೇಲೆ , ಒಳಗಿನ ಒಂದಿಷ್ಟು ಮೂರ್ತಿಗಳ ಆಧಾರದ ಮೇಲೆ ಇದು ಶೈವ, ವೈಷ್ಣವ ದೇಗುಲವೆಂದು ವಿಂಗಡಿಸಬಹುದೇ ಹೊರತು ಅದರ ಬಗೆಗಿನ ಹೆಚ್ಚಿನ ಮಾಹಿತಿಯರಿಯೋದು ಜನ ಸಾಮಾನ್ಯನ ಪಾಲಿಗೆ ಪ್ರಯಾಸದಾಯಕವೇ. ಸಾಲದ್ದಕ್ಕೆ ಮುಖ್ಯ ದೇಗುಲಗಳತ್ತಲೇ ರೌಂಡ್ ಹೊಡೆಸೋ ಗೈಡುಗಳು ಸ್ಮಶಾನ ಭೈರವಿ ಎಂಬ ಹೊಯ್ಸಳ ಶೈಲಿಯ ದೇಗುಲಗಳಲ್ಲಿ ಅತೀ ಸಾಮಾನ್ಯವಾದ ಶಿಲ್ಪವನ್ನು ಇದು ಪಾತಾಳ ಭೈರವ ಎಂಬ ಪುರುಷ ಶಿಲ್ಪ ಎಂಬ ತಪ್ಪು ಮಾಹಿತಿ ಕೊಡ್ತಾ ಇದ್ದರೆ ಅದು ಯಾರ ತಪ್ಪು ? ಇತಿಹಾಸದ ಬಗೆಗಿನ ಅವಜ್ಞೆಯಿರೋ ಗೈಡುಗಳದೇ ಅಥವಾ ಇತಿಹಾಸವನ್ನು ಹಂತ ಹಂತವಾಗಿ ನಿರ್ಲಕ್ಷಿಸುತ್ತಾ ಬಂದಿರೋ ನಮ್ಮೆಲ್ಲರದೇ ? ಹಂಪಿಯ ಪುರಂದರ ಮಂಟಪದಲ್ಲೋ, ಏಕಶಿಲಾ ನಂದಿಯತ್ತ ಸಾಗೋ ದಾರಿಯಲ್ಲಿ ಎಡತಿರುವು ಪಡೆದು ನದಿಯತ್ತ ಸಾಗೋ ಕೆಂಪಭೂಪ ಮಾರ್ಗದಲ್ಲೋ ಸಾಗಿ ತುಂಗಭದ್ರೆಯ ಆಚೆಯ ದಡದತ್ತ ಕಣ್ಣು ಹಾಯಿಸಿದರೆ ಅಸಂಖ್ಯ ಕಲ್ಲ ಕಂಬಗಳು, ದೇಗುಲಗಳ ಪಳೆಯುಳಿಕೆಗಳು ಕಾಣಸಿಗುತ್ತೆ. ಅದೆಷ್ಟೋ ದೇಗುಲಗಳ ಗರ್ಭಗೃಹದಲ್ಲಿರೋ ಮೂರ್ತಿಗಳನ್ನ ಬಿಡಿ, ಆ ಗರ್ಭಗೃಹಕ್ಕಿದ್ದ ಕಳಸಗಳೂ ಇಲ್ಲದೇ ಅವೆಲ್ಲಾ ಬೆಳಕಿಂಡಿಗಳಾಗಿದೆ. ಶ್ರೀ ಮಂಜುನಾಥ ಸಿನಿಮಾದಲ್ಲಿ ಸೌಂದರ್ಯ ಶಿವನ ಮೇಲೆ ಪುಷ್ಪಾರ್ಚನೆಗಯ್ದ ಶೂಟಿಂಗ್ ನಡೆದ ಜಾಗವೆಂಬೋ ಕಾರಣಕ್ಕೋ ಮತ್ಯಾವ ಕಾರಣಕ್ಕೋ ಬಡವಿ ಲಿಂಗ ಮತ್ತದರ ಪಕ್ಕದಲ್ಲಿದ ಜಗದ್ವಿಖ್ಯಾತ ಲಕ್ಷ್ಮೀ ನರಸಿಂಹನ ಪ್ರಾಗಂಣ ಸ್ವಲ್ಪ ಶುಚಿಯಾಗಿದೆಯಾದರೂ ಉಳಿದ ದೇಗುಲಗಳ ಬಗ್ಗೆ ಈ ಮಾತು ಹೇಳುವಂತಿಲ್ಲ. ಉದ್ದಾನ ರಾಮಸ್ವಾಮಿ ದೇಗುಲದ ಪಕ್ಕದಲ್ಲಿರೋ ಚಂಡಿಕೇಶ್ವರನಿಗೆ ಹಗಲು, ರಾತ್ರಿಗಳೆನ್ನದೇ ಎಲ್ಲಾ ಸಮಯದಲ್ಲೂ ಬೀಗಯೋಗವಾದರೆ , ಅದಕ್ಕಿಂತ ಮುಂಚೆ ಸಿಗೋ ಭೂಗತ ಶಿವಾಲಯದಲ್ಲಿ ಗರ್ಭಗೃಹದವರೆಗೂ ನಿಂತ ಸುಮಾರು ಒಂದೂವರೆ ಅಡಿ ಮಳೆ ನೀರು !  ಆ ಮಳೆ ನೀರಲ್ಲಿ ಮೀನುಗಳು, ಕಪ್ಪೆಗಳು ಸಂಸಾರ ಹೂಡಿ ಈಜುತ್ತಾ ಇದ್ದರೆ ಪ್ರಯಾಸಪಟ್ಟು ಗರ್ಭಗೃಹದವರೆಗೆ ಆ ನೀರಲ್ಲೇ ಹೋಗಿಬಂದ ನಮಗೆ ಇತಿಹಾಸದ ಪುಟಗಳ ಕಣ್ಣೀರೇ ಈ ರೀತಿ ನಿಂತ ನೀರಾಗಿರಬಹುದೇ ಎಂಬ ಅನುಮಾನ ಒಮ್ಮೆ ಕಾಡಿದ್ದರೆ ಅದರಲ್ಲಿ ಅಚ್ಚರಿಯೇನಿರಲಿಲ್ಲ !  
underground shiva temple@Hampi


ಪ್ರಶಸ್ತಿ
೪-ಅಕ್ಟೋಬರ್, ೨೦೧೫
ಬೆಂಗಳೂರು

ಮುಂದಿನ ಭಾಗ:ವಿರೂಪಾಕ್ಷನ ಸನ್ನಿಧಿಯಲ್ಲಿ