Thursday, January 22, 2015

ಮುನ್ನೂರರ ಪುಳಕದಲ್ಲೊಂದು ಹಾಯ್ಕದ ನೆನಪು:

ಇದರೊಂದಿಗೆ ಬ್ಲಾಗಿಗೆ ಮುನ್ನೂರು ಪೋಸ್ಟುಗಳು ತುಂಬ್ತಿರುವಂತಹ ಸಂಭ್ರಮ.  ಇದೇ ಸಂದರ್ಭದಲ್ಲಿ ಬ್ಲಾಗಿಗೆ ೩೦,೦೦೦ ಭೇಟಿಗಳು ದಕ್ಕಿದ್ದೂ ಒಂದು ಕಾಕತಾಳೀಯವೇ ಅನಿಸುತ್ತೆ. ಬ್ಲಾಗಲ್ಲಿ ಬರೆಯೋಕೆ ಶುರು ಮಾಡಿದ ನಾಲ್ಕು ಚಿಲ್ರೆ ವರ್ಷಗಳಲ್ಲಿ ಮುನ್ನೂರರ ಗಡಿಯಲ್ಲಿ ಬಂದು ನಿಂತಿರುವ ಹಿಂದೆ ಅನೇಕರ ಬೆನ್ನು ತಟ್ಟುವಿಕೆ ಇದೆ. ಪ್ರತೀ ಬರಹವನ್ನೂ ಮೆಚ್ಚೋ, ಸರಿಯಿಲ್ಲದಿದ್ದಾಗ ಮೆಸೇಜ್ ಮಾಡೋ, ಸಿಕ್ಕಾಗ್ಲೋ ಎಚ್ಚರಿಸೋ ಬ್ಲಾಗ್ ಲೋಕದ ಗೆಳೆಯರು ಒಂದೆಡೆಯಾದ್ರೆ ಸುಮ್ಮನೆ ಓದಿಕೊಂಡು ಹೋಗೋ ಅನಾಮಧೇಯ ಗೆಳೆಯರು ಎಷ್ಟೋ. ಶಿವಮೊಗ್ಗೆಯ ಜೂನಿಯರ್ ಒಬ್ಬರ ಮನೆಗೆ ಹೋಗಿದ್ದಾಗ ಅಲ್ಲಿ ಅವರಮ್ಮ ನನ್ನ ಬ್ಲಾಗಿನಲ್ಲಿದ್ದ ಕನ್ನಡ ಲಿಪಿಯಲ್ಲಿ ಬರೆಯೋ ಕಿಂಡಿಯ ಬಗ್ಗೆ, ಪೋಸ್ಟುಗಳ ಬಗ್ಗೆ ಮಾತಾಡಿದಾಗ ಒಮ್ಮೆ ಸಖತ್ ಆಶ್ಚರ್ಯ ಆಗಿತ್ತು. ಆ ಜೂನಿಯರ್ ಯಾವತ್ತೂ ಬ್ಲಾಗಲ್ಲಿ ಬಂದು ಕಾಮೆಂಟ್ ಹಾಕಿದವರಲ್ಲ. ಯಾರೂ ಓದ್ತಿಲ್ಲ ಅಂತ ಏನೇನೂ ಬರೆಯಲಾಗೋಲ್ಲ. ಗಮನಿಸ್ತಾ ಇರೋ ಇಂತಾ ಅದೆಷ್ಟೋ ಕಣ್ಣುಗಳಿರತ್ವೆ ಅನ್ನೋ ಮನವರಿಕೆಯಾಗಿತ್ತವತ್ತು. ಮೊನ್ನೆ ಫೇಸ್ಬುಕ್ಕಿನಲ್ಲಿ ಮಾತಿಗೆ ಸಿಕ್ಕ ಗೆಳೆಯನ ಮಾತುಗಳಲ್ಲಿ ಪೋಸ್ಟುಗಳ ಪ್ರಸ್ತಾಪ ಆದಾಗ್ಲೂ ಇಂತದೇ ಅನುಭವ. ಹೆಚ್ಚಾಗಿ ಸೊಂಬೇರಿತನದಿಂದ, ಚೆನ್ನಾಗಿದೆ ಅಂತ ಅಂದುಕೊಂಡ ಪೋಸ್ಟುಗಳಿಗೆ ಒಂದೂ ಕಾಮೆಂಟ್ ಸಿಕ್ಕಿಲ್ಲವೆಂಬ ಬೇಸರದಲ್ಲಿ ಇನ್ನು ಬರೆಯುವುದೇ ಇಲ್ಲವೆಂಬ ನಿರಾಸೆಯಲ್ಲಿದ್ದ ಶುರುವಿನ ದಿನಗಳಲ್ಲಿ ಬೆನ್ನುತಟ್ಟಿದ ಅನಿರೀಕ್ಷಿತವಾಗಿ ಬ್ಲಾಗಿಗೆ ಭೇಟಿಕೊಟ್ಟು ಅಥವಾ ಹೀಗೆಲ್ಲೋ ಭೇಟಿಯಾಗಿ ಆಡೋ ಅವರ ಮಾತುಗಳೇ ಮತ್ತೆ ಮತ್ತೆ ಬರೆಯುತ್ತಿರಲು ಸ್ಪೂರ್ತಿ. ಆ ಪಂಥ, ಈ ಪಂಥಗಳೆಂಬ ಬೇಧವಿಲ್ಲದೇ,  ಕಾವ್ಯ, ಗದ್ಯಗಳಲ್ಲಿ ಇದನ್ನೇ ಬರೆಯಬೇಕೆಂಬ ಪೂರ್ವಾಗ್ರಹಗಳಿಲ್ಲದೆ ತೋಚಿದ್ದ ಗೀಚುತ್ತಾ ಹೋಗಿದ್ದೇನೆ. ಅನಿಸಿದ್ದಕ್ಕೆ ಪದಗಳ ರೂಪ ಕೊಡುತ್ತಾ ಹೋಗಿದ್ದೇನೆ. ಅದ್ರೂ ಕೆಲ ಚಿಂತನೆಗಳು ಬರಹವಾಗದೆ ಕನಸಾಗೇ ಉಳಿದುಬಿಡುತ್ತೆ. ಆ ತರ ಬರೆಯೋ ಮುಂಚೆ ಇನ್ನೊಂದಿಷ್ಟು ಅಧ್ಯಯನ ಬೇಕಿತ್ತು, ಇನ್ನೂ ಗಟ್ಟಿಗೊಳ್ಳಬೇಕಿತ್ತು ಬರಹ, ಅದನ್ನ ಬರಿ, ಇದನ್ನ ಬರಿ, ಅದನ್ಯಾಕೆ ಬರೆದಿಲ್ಲ ಅಂತ ಎಚ್ಚರಿಸುತ್ತಾ , ಬೆನ್ನುತಟ್ಟುತ್ತಾ ಬಂದಿರೋ ಓದುಗ ಮಿತ್ರರಿಗೆಲ್ಲಾ ಮತ್ತೊಮ್ಮೆ ವಂದಿಸುತ್ತಾ  ಹಿಂದಿನ ವರ್ಷ ಬರೀ ಕನಸಾಗಿದ್ದ ಚಿಂತನೆಯೊಂದಕ್ಕೆ ಬರಹದ ರೂಪ ಕೊಡೋ ಪ್ರಯತ್ನವೇ ಇದು.

ಈ ಸಲದ ನವೆಂಬರ್ ಒಂಥರಾ ನೆನಪಿನಲ್ಲಿಟ್ಟುಕೊಳ್ಳುವಂತಹ ತಿಂಗ್ಳಾಗಿತ್ತು. ಕಂಪೆನಿಯ ಕನ್ನಡ ಹಬ್ಬದ ಸ್ಪರ್ಧೆಯಲ್ಲಿ ಭಾಗವಹಿಸೋಕೆ ಹೋದ ನನಗೆ ಕನ್ನಡ ಹಬ್ಬದ ಸಭಾ ಕಾರ್ಯಕ್ರಮದ  ನಿರೂಪಕನಾಗೋ ಗೌರವ ಸಿಕ್ತು. ನನ್ನ ಮತ್ತು ನಮ್ಮ ತಂಡಗಳಿಗೆ ಅಂತ ಮೂರ್ಮೂರು ಬಹುಮಾನಗಳು ಅರಸಿ ಬಂದ್ವು. ಹುಟ್ಟಿದಬ್ಬದ ಖುಷಿಯ ಜೊತೆ ೩k ಅವ್ರು ನಡೆಸಿದ್ದ ಕಥಾ ಸ್ಪರ್ಧೆಯಲ್ಲೂ ದ್ವಿತೀಯ ಬಹುಮಾನ ಬಂತು. ೩೦ನೇ ತಾರೀಖು ನಡೆದ ಆ ಬನ್ನಿ ಕಲಿಯೋಣ ಕಮ್ಮಟದ ಬಗ್ಗೆ ಬರಿಬೇಕು ಅಂತ ತುಂಬಾ ಅಂದ್ಕೊಂಡ್ರೂ ಬೇರ್ಬೇರೆ ಕೆಲಸಗಳ ನಡುವೆ ಅದ್ನ ಮರ್ತೇ ಹೋಗಿದ್ದ ನನಗೆ ಅದ್ನ ನೆನಪಿಸಿದ್ದು ಜಯಪ್ರಕಾಶ್ ಅಥವಾ ಜೇಪಿಯಣ್ಣ. ನಿನ್ನೆ ಅವ್ರತ್ರ ಸೋಬೇರಿ ಸುಬ್ಬಪ್ಪ ಅಂತ ಬಿರುದಾಂಕಿತನಾಗದಿದ್ರೆ ಬಹುಷಃ ಈ ಬರಹ ತಮ್ಮ ಓದಿಗೆ ಖಂಡಿತಾ ಸಿಗ್ತಿರಲಿಲ್ಲವೇನೋ. ಅಂದು ಜೊತೆಯಾದ ಮೋಹನ್ ಕೊಳ್ಳೇಗಾಲ, ಸತೀಶ,ಮಲ್ಲೇಶ್, ಬೋರ್ಜಗಿ ಅವ್ರು,ಬದ್ರಿ ಭಾಯ್, ರವಿ ಸಾರ್, ಬಾಲಣ್ಣ, ಚಿನ್ಮಯ, ರೂಪಕ್ಕ, ನಂದಿನಿ, ಅನುಪಮಾ ಹೆಗಡೆ, ಪ್ರದೀಪ್ ರಾವ್, ಪ್ರಮೋದ್, ಮಹೇಶ್ ಮೂರ್ತಿ, ಅರುಣ್ ಶೃಂಗೇರಿ, ನೂತನ್ ಮುಂತಾದ ಹಿರಿ ಕಿರಿಯ ಗೆಳೆಯರನ್ನೆಲ್ಲಾ ಮತ್ತೊಮ್ಮೆ ನೆನಪಿಸಿಕೊಳ್ಳುತ್ತಾ ಅಂದಿನ ನೆನಪುಗಳಿಗೆ ಮತ್ತೊಮ್ಮೆ ದನಿಯಾಗೋಕೆ ಪ್ರಯತ್ನಿಸುತ್ತಿದ್ದೇನೆ. ಅಂದಿದ್ದಿದು ಎರಡು ಘೋಷ್ಠಿಗಳು. ಮೊದಲನೆಯದು ಶ್ರೀ ರಾಘವೇಂದ್ರ ಜೋಷಿಯವರ ಹಾಯ್ಕಗಳ ಬಗ್ಗೆಯಾದ್ರೆ ಎರಡನೆಯದು ಮಂಜುನಾಥ ಕೊಳ್ಳೇಗಾಲ ಅವರ ಪದ್ಯ,ಗದ್ಯ ಮತ್ತು ಓದುವಿಕೆಯ ಬಗೆಗಿನ ಘೋಷ್ಠಿ. ಅದರಲ್ಲಿ ಮೊದಲ ವಿಷಯದ ಬಗ್ಗೆ ಇಲ್ಲಿ ಹೆಚ್ಚು ಬರೆಯೋಕೆ ಪ್ರಯತ್ನಿಸ್ತೇನೆ.

ಹಾಯ್ಕ ಅಂದರೇನು ?
ಅಪರಿಚಿತ ಉಚ್ಚಾರಣೆ or Pronounciation.
ಜಪಾನೀಸ್ ಕಾವ್ಯ ಪ್ರಕಾರವಾದ ಇದು ಮೂರು ಸಾಲಿನ ಪದ್ಯ. ೫,೭,೫ ಎಂಬುದು ಇದರ ಸಾಮಾನ್ಯ ನಿಯಮ.
ಅಂದ್ರೆ ಮೊದಲ ಸಾಲಲ್ಲಿ ಐದು ಅಕ್ಷರ. ಎರಡನೆಯದರಲ್ಲಿ ಏಳು ಮತ್ತು ಮೂರನೇಯದರಲ್ಲಿ ಮತ್ತೆ ಐದು ಅಕ್ಷರಗಳಿರಬೇಕು.

 ಸರಿಗಮಪ -   ೫
ಸರಿಗಮಪದನಿ -೭
 ಸರಿಗಮಪ -   ೫


ಉದಾ:
೧) ನಿನ್ನ ನಗೆಹೂ
ಮೊ(ಮಾ?)ಲೆಯ ಚೆಲ್ಲಿಬಿಡು
ಹೂಮರವೇಕೆ ?

೨)ಹಾಯ್ಕ ಗೊತ್ತಿಲ್ಲ
ಆದ್ರೂ ಬರಿತೇನೆ
ಉಳೀಬೇಕಲ್ಲ ?

ಇದರಲ್ಲಿ ಮೊದಲೆರಡರಲ್ಲಿ ನಿಯಮಗಳಿವೆ. ಆದ್ರೂ ಅವು ಹಾಯ್ಕಗಳಲ್ಲ. ಯಾಕೆಂದ್ರೆ ಹಾಯ್ಕ ಅನ್ನೋದು
ಲೌಕಿಕ ಗಣಿತದ ಲೆಕ್ಕಾಚಾರ ಮತ್ತು ದೈವಿಕ ಮೋಹ
ಮತ್ತೆ ೫,೭,೫ ಅನ್ನೋದು ಅಕ್ಷರಗಳಲ್ಲ. ಅದು syllable ಅಥವಾ ಉಚ್ಚಾರಣೆ

ಉದಾ:
Love-->ಇಲ್ಲ್ಲಿ ನಾಲ್ಕು ಅಕ್ಷರ. ಆದ್ರೆ ಲವ್ ಅನ್ನೋದ್ರೆ ೨ ಉಚ್ಚಾರಣೆ ಇದೆ. "ಕಣ್" ಎನ್ನೋದು ಒಂದು ಉಚ್ಚಾರಣೆ. ವ್ಯಂಜನವಿದ್ರೆ ಎರಡು ಉಚ್ಚಾರಣೆ ಅಂತ ಸಾಮಾನ್ಯವಾಗಿ ಹೇಳಬಹುದು.
ಬಂಪರ್ --> ೨ syllable. ಬಂಪರು-->3 syllable
1 syllable= ಒಂದು ಉಚ್ಚಾರಣೆಗೆ ತೆಗೆದುಕೊಳ್ಳೋ ಸಮಯ
ಅನುಸ್ವಾರ, ಚಿಹ್ನೆ(ಒತ್ತಕ್ಷರ), ದೀರ್ಘ ಚಿಹ್ನೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳೋದಿಲ್ಲ.
ನಿನ್ನ = 2 syllable

ಇಲ್ಲಿಯವರೆಗೆ ಹಾಯ್ಕಗಳ ಲಕ್ಷಣಗಳನ್ನು ಮತ್ತು ಯಾವುದು ಹಾಯ್ಕ, ಯಾವುದಲ್ಲ ಅಂತ ನೋಡಿದ್ವಿ. ಈಗ ಹಾಯ್ಕ ರಚನೆಗೆ ಇರುವ ನಿಯಮಗಳನ್ನು ನೋಡೋಣ

ನಿಯಮ ೧:
ನಿಸರ್ಗ/ಪ್ರಕೃತಿಯಲ್ಲಿ ನಡೆಯೋ ಘಟನೆಗಳನ್ನು ಮೋಹಕ ಬೆರಗಿನಿಂದ ದಾಖಲಿಸುವುದು
(ಅದರಲ್ಲಿ ನಮ್ಮ ಪಾತ್ರ ಏನಿಲ್ಲ)
ತಾನು ಆ ಘಟನೆಯಲ್ಲಿ ಭಾಗಿಯಾಗೋಲ್ಲ. ದೂರ ನಿಂತು ನೋಡೋದಷ್ಟೆ
ಉದಾ:
೩)ಬೇಸಿಗೆಯ ಒಂದು ರಾತ್ರಿ
ಬಾಯಾರಿದ ನಕ್ಷತ್ರಗಳು
ಬಾವಿಗಿಳಿದಿವೆ

೪)ಹತ್ತಿಯ ಹೊಲದಲ್ಲಿ ನಿಂತಾಗ
ಮನಸು ಹೇಳಿತು
ಬಿತ್ತಿದರೆ
ಚಂದಿರನನ್ನೇ ಬಿತ್ತಬೇಕು

(ಇವೆರಡದಲ್ಲೂ ೫,೭,೫ ರ ನಿಯಮ ಪಾಲನೆಯಾಗಿಲ್ಲ. ಆದ್ರೆ ನೈಸರ್ಗಿಕ ಪ್ರಕ್ರಿಯೆಯನ್ನು ದಾಖಲಿಸೋ ಅವಕಾಶವಿದೆ)

ನಿಯಮ ೨: Experience the moment, Freeze it, get mesmarized yourself, extend it. but don't explain
ಹಾಯ್ಕವೆನ್ನೋದು ಬರೀ ಕವಿತೆಯಲ್ಲ. ಅದೊಂದು ಸ್ತಬ್ದ ಚಿತ್ರ.

ಉದಾ: ಅಪ್ಪ ಮಗುವನ್ನು ಗಾಳಿಯಲ್ಲಿ ಹಾರಿಸಿ ಹಿಡಿಯುತ್ತಿದ್ದಾನೆ. ಮಗುವಿಗೆ ಕೆಲ ಹಾರುವಿಕೆಗಳ ನಂತರ ಅಪ್ಪ ತನ್ನ ಹಿಡಿಯುತ್ತಾನೆ ಎಂಬ ಅರಿವಾಗಿದೆ. ಮಗು ಅದನ್ನು ಆನಂದಿಸುತ್ತಾ ಕೇಕೆ ಹಾಕುತ್ತಿದೆ. ಗಾಳಿಯಲ್ಲಿನ ಮಗುವಿನ ನಗುವಿನ ಒಂದು ಕ್ಷಣವನ್ನು ಫೋಟೋ ತೆಗೆದ್ರೆ ಇರುವಂತಹ ಸನ್ನಿವೇಶ ಹಾಯ್ಕ !

೫)ಚಂದಿರನನ್ನೇ
ಛೇದಿಸುವ ಕಲೆ
ಈ ಕಪ್ಪೆಗೆ
ಯಾರು ಕಲಿಸಿದರಪ್ಪಾ ?

( ಕೊಳದಲ್ಲಿದ್ದ ಚಂದ್ರನ ಪ್ರತಿಬಿಂಬದ ಮೇಲೆ ಜಿಗಿದ ಕಪ್ಪೆಯ ಬಗ್ಗೆ ಬರೆದ ಒಂದು ಜಪಾನೀ ಹಾಯ್ಕು)

೬)ಸುರಂಗದಲ್ಲಿ
ಹರಿದುಹೋದ
ರೈಲಿನ ರಭಸಕ್ಕೆ
ಎಳೆಗರಿಯೊಂದು
ಚಿತ್ತಭ್ರಮಣೆಗೊಳಗಾಗಿದೆ


೭)ನೀರಿಗೆಂದು ಬಂದ ನಾರಿಯರು
ಚಂದಿರನಿಗೆ ಮೋಹಿತರು
ಇಲ್ಲೀಗೆ ನೂರು ಕೊಡಗಳಲ್ಲಿ
ನೂರು ಚಂದಿರ


ನಿಯಮ ೩:ನೋಟ/ಕಾಣ್ಕೆ : ಒಂದು ಬೆಳವಣಿಗೆಯನ್ನು ಇನ್ನೊಂದರ ಜೊತೆಗೆ ಸಂಪರ್ಕಿಸುವುದು
ಪ್ರತೀ ನೋಟಕ್ಕೂ ಒಂದು ಕಾಣ್ಕೆಯಿರುತ್ತೆ. ದೈವಿಕ ಸ್ಪರ್ಷವಿರುತ್ತೆ. ಇದ್ದರೆ ಅದು ಹಾಯ್ಕ
ರೂಪಕಗಳ ಮೂಲಕ ಹೇಳೋದು.  ಇಲ್ಲಿ ೨ ಭಾಗವಿರುತ್ತೆ. ಒಂದನ್ನು ಮತ್ತೊಂದಕ್ಕೆ connect ಮಾಡೋದು
ಉದಾ:
೮)ಪ್ರಾರ್ಥನೆಗೆಂದು
ಬಂದ ಸಂತನ ಕೈ
ಹಿಂಜರಿದಿದೆ;
ದೇಗುಲದ
ಘಂಟೆ ಮೇಲೆ
ಚಿಟ್ಟೆಯೊಂದು 
ನಿದ್ದೆ ಹೋಗಿದೆ


೯)ಆಹ್ ಎಂಥಾ
ಸಂಜೆಯಿದು
ಮಂದಿರದ ಘಂಟೆಗಳೆಲ್ಲಾ
ಸ್ಥಬ್ಧವಾಗುತ್ತಿದ್ದಂತೆಯೇ
ತೋಟದ ಹೂಗಳ ಪರಿಮಳಕ್ಕೆ
ನವಚೇತನ ಬಂದಂತಿದೆ


ನಿಮಯಗಳನ್ನು ಪಾಲಿಸಿ ರಚಿಸೋದಾದ್ರೆ:
೧೦) ಕತ್ತಲ ಹಾದಿ - ೫
ಪೋರನಿಗೆ ಹಾಡೊಂದೆ-೭
ಆಪದ್ಬಾಂಧವ -೫

(ಇಲ್ಲಿ ಬೆಳಕಹಾದಿ ಅಂತನೂ ಮಾಡಬಹುದು ಮೂರನೆಯ ಸಾಲನ್ನ. ಆದ್ರೆ ಅಲ್ಲಿ punch ಇರಲ್ಲ ಅನ್ನೋದು ಬಿಟ್ರೆ ನಿಯಮಗಳ ಪ್ರಕಾರ ಅಲ್ಲಿ ತಪ್ಪೇನಿಲ್ಲ)

ಇದಲ್ಲದೇ ಇನೊಂದಿಷ್ಟು ಹೆಚ್ಚುವರಿ ನಿಮಯಗಳಿವೆ:
* ಸರಳವಾಗಿರಿ, ಸಹಜವಾಗಿರಿ, ಗುಣವಾಚಕಗಳನ್ನು ಬಳಸದಿರಿ
* ಋತುಮಾನಕ್ಕೆ ತಕ್ಕಂತಿರಲಿ
* ಕುತೂಹಲವಿರಲಿ, ನಿರ್ಮಲವಾದ ಮನಸ್ಥಿತಿಯಿರಲಿ(ಆದ್ರೆ ಅದನ್ನೇ ಜೀವಮಾನವಿಡೀ ಬಳಸ್ತೀನಿ ಅಂದ್ರೆ ಸಂತನಾಗಿಬಿಡುವ ಅಪಾಯವೂ ಇದೆ)
*ಪ್ರೀತಿಯಿರಲಿ. ದ್ವೇಷಾಸೂಯೆ, ಋಣಾತ್ಮಕ ಭಾವಗಳಿದ್ದಾಗ ಅದು ಹಾಯ್ಕವಲ್ಲ.

ಇಲ್ಲಿ ಬಂದ ಸಾಲುಗಳೆಲ್ಲಾ ಶ್ರೀ ರಾಘವೇಂದ್ರ ಜೋಷಿಯವರದು ಕಿವಿಯಾದ ನಾನು ಈಗ ಪದಗಳ ಮೂಲಕ ಅವಕ್ಕೆ ಮತ್ತೊಂದು ರೂಪ ಕೊಡುತ್ತಿದ್ದೇನಷ್ಟೆ. ಇದರ ನಂತರ ಮೂಡಿಬಂದ ಶ್ರೀ ಮಂಜುನಾಥ ಕೊಳ್ಳೇಗಾಲರವರ ಕವನ ಸೃಷ್ಠಿಯ ಬಗ್ಗೆ, ಓದಿಕೊಳ್ಳೋದು ಮತ್ತು ಓದುವುದರ ವ್ಯತ್ಯಾಸಗಳ ಬಗ್ಗೆ, ವಿವಿಧ ಕವನ ಪ್ರಕಾರಗಳ, ಗದ್ಯಗಳ ಪರಿಚಯಾತ್ಮಕ ಗೋಷ್ಟಿ ಓದುವಿಕೆಗೆ ನಮ್ಮನ್ನ ಮತ್ತೆ ಮತ್ತೆ ಸೆಳೆಯುವಂತಿತ್ತು.ಕಾರ್ಯಕ್ರಮ ಮುಗಿದು ಒಂದು ತಿಂಗಳ ಮೇಲಾದ್ರೂ ಅದು ನಿನ್ನೆ ಮೊನ್ನೆ ನಡೆದಂತಹ ಭಾವ. ಒಂದು ಸುಂದರ ದಿನಕ್ಕೆ ಕಾರಣವಾದ 3k ಗೊಂದು ವಂದನೆಯೆನ್ನುತ್ತಾ, ಇಲ್ಲಿ ಬಿಟ್ಟು ಹೋಗಿರುವ ಹೆಸರುಗಳಿಗಾಗಿ ಆ ಸ್ನೇಹಿತರ ಕ್ಷಮೆಯಾಚಿಸುತ್ತಾ ವಿರಮಿಸುತ್ತಿದ್ದೇನೆ.

ಇಂತಿ,
ನಿಮ್ಮೊಲುಮೆಯ ಪ್ರಶಸ್ತಿ

7 comments:

  1. 300....congrats...innu hege baritha iru..nav odtha irtivi..
    indu haykagala bagge mahiti siktu. dhanyavadagalu

    ReplyDelete
  2. ನಾನೂ ಅಂದು ಹಾಜರಿದ್ದೆ ಗೆಳೆಯ.
    ಕಾವ್ಯ ಪ್ರಕಾರದ ಬಾಲಕನಾದ ನಾನು ಇನ್ನೂ ಹಾಯ್ಕು ಪ್ರಕಾರ ಕಲಿಯಬೇಕಿದೆ.
    ಧನ್ಯವಾದಗಳು.

    ReplyDelete
  3. ಮುನ್ನೂರು ಪೋಸ್ಟುಗಳು ಮುಮ್ಮಡಿಯಾಗಲಿ. ಶುಭಾಶಯಗಳು.

    ReplyDelete
  4. Congratulations, khushiyaythu Prashasthi :)
    Matte, haiku bagge hanchikondiddu mattashtu santasavaagide.... idanna tamma appaneyondige 3Kyalli hanchikollona, ellarigoo odi tiliyaloo anukoolavaagutte.

    ReplyDelete
  5. ಮೆಚ್ಚಿದ ಜಯಪ್ರಕಾಶಣ್ಣ, ರೂಪಕ್ಕ, ಬದ್ರಿ ಭಾಯ್ಗೆ ಧನ್ಯವಾದಗಳು.
    ಅಗತ್ಯವಾಗಿ ಹಂಚಿಕೊಳ್ಳಬಹುದು ರೂಪಕ್ಕ, ಇದು ನಿಮ್ಮದೇ ಕಾರ್ಯಕ್ರಮದ ಬಗ್ಗೆ ನನ್ನದೊಂದು ಚಿಕ್ಕ ಅನಿಸಿಕೆಯಷ್ಟೆ. ಅದನ್ನು ಹಂಚಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ

    ReplyDelete
  6. ಅಭಿನಂದನೆಗಳು ,ಮುಂದೆ ಸಾಗಿ ಪ್ರಶಸ್ತಿ. ಬ್ಲಾಗ್ , ಪಂಜು ಎಲ್ಲೆಡೆಯೂ ಚಂದಕ್ಕೆ ಬರೆಯುತ್ತಿದ್ದೀರಿ .

    ReplyDelete