Saturday, January 3, 2015

ನಾ ನೋಡಿದ ಸಿನಿಮಾ : ಶಿವಂ.


ಹನ್ನೊಂದನೆ ಶತಮಾನದ ಒಂದು ಶಿವಾಲಯ. ಅದರ ದಾಳಿಗೆ ಅಂತ ಬಂದ ದಾಳಿಕೋರರನ್ನ ಎದುರಿಸೋಕೆ ಮುಂದಾಗೋದು ಆ ದೇಗುಲದ ಅರ್ಚಕ ಬಸವಣ್ಣ. ನೂರು ಜನರನ್ನು ಎದುರಿಸಿ ದೇಗುಲವನ್ನು ರಕ್ಷಿಸಿದ ಅವನನ್ನು ನಂತರ ಬಂದ ಅರಸ ಗೌರವಿಸಿ ದೇವಸ್ಥಾನವನ್ನು ಮತ್ತು ಅದರ ಸುತ್ತಲ ಜಮೀನನ್ನು ಅವನ ವಂಶಸ್ಥರಿಗೆ ಬರೆದು ಕೊಡುತ್ತಾನೆ. ಇದೇನಪ್ಪ ಉಪೇಂದ್ರನ ಸಿನಿಮಾ ಕತೆ ಹೇಳ್ತಾನೆ ಅಂದ್ಕೊಂಡ್ರೆ ಹನ್ನೊಂದ್ನೇ ಶತಮಾನಕ್ಕೆ ಕರ್ಕೊಂಡು ಹೋಗ್ತಿದಾನೆ ಅಂದ್ಕೊಂಡ್ರಾ ? ನಾ ಹೇಳ್ತಿರೋದು ಉಪೇಂದ್ರ ಅವ್ರ ಇತ್ತೀಚೆಗಿನ ಸಿನಿಮಾ ಬಗ್ಗೆಯೇ. ಬ್ರಾಹ್ಮಣ ಆಗಿ, ಬಸವಣ್ಣ ಆಗಿ, ಕೊನೆಗೆ ಹೆಸ್ರೇ ಇಲ್ಲದ ಬರಿಯ ಮೂರು ನಾಮವಾಗಿ, ನಾಮ ಅಂತಾಗಿ, ಕೊನೆಗೂ ಶಿವಂ ಅನ್ನೋ ಹೆಸ್ರಿಂದ ತೆರೆಕಂಡ ಚಿತ್ರದ ಕತೆಯ ಬಗ್ಗೆಯೇ ನಾ ಹೇಳಹೊರಟಿರೋದು.

ಸಿಂಪಲ್ಲಾಗಿ ಹೇಳಬೇಕಂದ್ರೆ ಒಂದು ಸಿಂಪಲ್ ಕತೆ. ದಂಡುಪಾಳ್ಯದ ನಿರ್ದೇಶಕ ಶ್ರೀನಿವಾಸರಾಜು ಅವ್ರು ಈ ಸಿನಿಮಾ ಮಾಡ್ತಾ ಇದಾರೆ ಅನ್ನೋ ಸುದ್ದಿ ೨೦೧೩ರಿಂದ್ಲೇ ಚಾಲ್ತಿಯಲ್ಲಿತ್ತು.ಹೆಸರ ಹೆಸ್ರಿಂದ್ಲೇ ಹಲವು ವಿವಾದಗಳಿಗೊಳಗಾದ ಈ ಸಿನಿಮಾದಲ್ಲಿ ಬಸವಣ್ಣನ ಕೈಯಲ್ಲಿ ಕತ್ತಿ ಹಿಡಿಸಿದ್ದಾರೆ ಅನ್ನೋ ಪುಕಾರೆದ್ದಿತ್ತು. ಪೋಸ್ಟರಿನಲ್ಲಿರುವಂತಹ ಕತ್ತಿಯ ದೃಶ್ಯ ಪ್ರಸಕ್ತ ಸಿನಿಮಾದಲ್ಲಿ ಎಲ್ಲೂ ಬರದಿದ್ದರೂ ಚಿತ್ರದಲ್ಲಿ ಹಿಂಸೆಯೇ ಇಲ್ಲವೆಂದಿಲ್ಲ. ದ್ವಿತೀಯಾರ್ಧದಲ್ಲಿ ಬರುವ ಹಿಂಸೆಗೆ ಸೂಕ್ತ ಕಾರಣಗಳನ್ನೂ ಕೊಡುತ್ತಾ ಹೋಗುವ ನಿರ್ದೇಶಕರು ಕೊನೆಯ ಹತ್ತು ನಿಮಿಷದ ಸನ್ನಿವೇಶ ಇಡದಿದ್ದರೆ ಸಿನಿಮಾ ಒಂದು ರೀತಿಯಲ್ಲಿ ಯಾರ ಭಾವಗಳಿಗೂ ಘಾಸಿಗೊಳಿಸದ ಸಿನಿಮಾವಾಗುತ್ತಿತ್ತಾ ಅಂತ ಸಿನಿಮಾ ನೋಡಿ ಹೊರಬರುತ್ತಿದ್ದವರ ಮಾತಷ್ಟೆ. ಅಭಿಪ್ರಾಯಭಿನ್ನತೆಗಳೇನೇ ಇರ್ಲಿ. ಒಮ್ಮೆ ನೋಡಲೇನಡ್ಡಿಯಿಲ್ಲದ ಸಿನಿಮಾ.

ಒಂದ್ಸಲವಾದ್ರೂ ನೋಡೋಕೆ ಏನಿದೆ ಸಿನಿಮಾದಲ್ಲಿ ಅಂದ್ರಾ ? ಸ್ಪೈಡರ್ ಮ್ಯಾನ್ ತರಹ ಬಸ್ಸಿನ ಮೇಲೆ ಅಡ್ಡಡ್ಡ ನಿಂತು ಶೂಟ್ ಮಾಡೋ ಉಪೇಂದ್ರ ಮತ್ತವನ ಇದೇ ತರಹದ ಕೆಲವು ಫೈಟಿಂಗುಗಳು, ಸ್ನೇಕ್ ಅವತಾರದ ರಾಗಿಣಿ, ಅಗ್ರಹಾರದ ನಾರಿಯಾಗಿ ಸಲೋನಿ, ಸಂಗೀತದ ಕಾಮಿಡಿಯಾಗಿ ಬುಲೆಟ್ ಪ್ರಕಾಶರ ಕಾಮಿಡಿಯನ್ನು ನೋಡಬಹುದು ಮೊದಲಾರ್ಧದಲ್ಲಿ. ಶ್ರೀನಿವಾಸ ಮೂರ್ತಿ ಮತ್ತು ಭವ್ಯಾ,ಶಿವರಾಮಣ್ಣ, ಶರತ್ ಲೋಹಿತಾಶ್ವ, ರವಿಶಂಕರ್ ,ಸಿಹಿ ಕಹಿ ಚಂದ್ರು, ದೊಡ್ಡಣ್ಣನಂತಹ ಪಾತ್ರಗಳ ಅಭಿನಯಕ್ಕೆ ಸೈಯನ್ನದೇ ಇರಲು ಮನಸ್ಸಾಗೋದಿಲ್ಲ. ಮೊದಲು ಕೆಲವು ಡೈಲಾಗ್ಗಳಲ್ಲಿ ಬಯ್ಗುಳಗಳ ರೂಪದಲ್ಲಿ ಒಂದು ಸಮುದಾಯದ ಮನನೋಯಿಸೋ ಪ್ರಯತ್ನವಾಗಿದ್ಯಾ ಅನ್ನೋ ಬೇಸರದಲ್ಲಿರುವಾಗ್ಲೇ ದ್ವಿತೀಯಾರ್ಧದ ಮೊದಲ ದೃಶ್ಯದಲ್ಲಿ ನಾಯಕನಿಂದ ವಿಭೂತಿಯನ್ನು ಯಾಕೆ ಲಲಾಟದ ಮೇಲೆ ಅಡ್ಡಡ್ಡವಾಗಿ ಧರಿಸಬೇಕು ಅನ್ನೋದ್ರಿಂದ, ಬಸವಣ್ಣ, ನಿಗಮ, ಆಗಮ, ಅನುಷ್ಟಾನಗಳ ಬಗ್ಗೆ, ಭಗವದ್ಗೀತೆಯ ಬಗ್ಗೆ ಬರುವ ಹತ್ತು ನಿಮಿಷದ ಪುಂಖಾನುಪುಂಕದ ಡೈಲಾಗುಗಳು ಮೊದಲ ಬೇಸರಕ್ಕೆ ತೇಪೆ ಹಚ್ಚುತ್ತವೆ. ಬರೀ ಹೊಡೆಪಡೆ ಸಿನಿಮಾ ಮಾಡದೇ ಒಂದಿಷ್ಟು ಮಾಹಿತಿಯನ್ನೂ ಕಲೆಹಾಕಿದ ನಿರ್ದೇಶಕರ ಪ್ರಯತ್ನಕ್ಕೆ ಸೈ ಅನ್ನಬೇಕಿನಿಸುತ್ತದೆ.

ಇನ್ನು ಚಿತ್ರದಲ್ಲಿ ಉಪೇಂದ್ರ ಮತ್ತು ರಾಗಿಣಿಯವರದ್ದು ದ್ವಿಪಾತ್ರ ಅಂತ ಓದೇ ಇರುತ್ತೀರಿ. ಒಂದು ಅಲೆಕ್ಸಾಂಡರ್ ಅಲಿಯಾಸ್ ಅಲೆಕ್ಸ್ ಆದ್ರೆ ಮತ್ತೊಂದು ಬಸವಣ್ಣ. ಒಂದು ಸ್ನೇಕ್ ಆದ್ರೆ ಮತ್ತೊಂದು ಮಂದಾರ. ಅವೆರಡರ ಸಂಬಂಧ ಏನೇನು ಅಂದ್ರಾ ? ಅದನ್ನು ನೀವು ಸಿನಿಮಾ ನೋಡೇ ತಿಳಿಬೇಕು. ಇನ್ನು ನಮ್ಮ ಬಿಗ್ ಬಾಸ್ ಖ್ಯಾತಿಯ ವಿನಾಯಕ್ ಜೋಷಿ, ಜೈ ಜಗದೀಶ್,  ಗೀತಾ, ಪಾಪ ಪಾಂಡುವಿನ ಚಿದಾನಂದ್,ದೃಶ್ಯದಲ್ಲಿ ರವಿಚಂದ್ರನ್ ಅವ್ರ ಅಸಿಸ್ಟಂಟ್ ಪಾತ್ರದಲ್ಲಿ, ಗಜಕೇಸರಿಯಲ್ಲಿ ಯಶ್ ಹೋದ ಹಾಡಿಯಲ್ಲಿ ಅಮೂಲ್ಯಳಿಂದ ಒದೆತ ತಿನ್ನೋ ಕಾಮಿಡಿ ದೃಶ್ಯದಲ್ಲಿ ಭಾಗವಹಿಸಿದ ಹಾಸ್ಯ ನಟ(ಅವ್ರೆಸ್ರು ಶಿವಾಜಿ ಪ್ರಭುವಾ ಅಂತ?)... ಹೀಗೆ ಅನೇಕ ಕಿರುತೆರೆ ನಟನಟಿಯರಿಗೆ ವೇದಿಕೆಯಾಗಿದೆ ಚಿತ್ರ. ಕೆಲವು ದೃಶ್ಯಗಳಲ್ಲೆಂತೂ ನಾಯಕನ ಸಹಚರನಾದ ವಿನಾಯಕ್ ಜೋಷಿಯೇ ನಾಯಕನ ರೇಂಜಿಗೆ ಫೈಟ್ ಮಾಡುವಷ್ಟು ಪ್ರೋತ್ಸಾಹವನ್ನು ನಾಯಕನನ್ನು ಬಿಟ್ಟು ಉಳಿದ ಪಾತ್ರಗಳ ಬೆಳವಣಿಗೆಗೂ ಕೊಟ್ಟಿರುವುದು ಅಚ್ಚರಿಮಿಶ್ರಿತ ಮೆಚ್ಚುಗೆಯನ್ನೂ ತರುತ್ತದೆ ಕೆಲ ಸಲ.  ಢಂ ಢಂ ಢಮರುಗ ಅನ್ನೋ ಕಲ್ಯಾಣ್ ಅವ್ರ ಹಾಡು ನೆನಪಲ್ಲುಳಿಯುತ್ತೆ. ವಿದೇಶೀ ನೆಲದ ದೃಶ್ಯಗಳು ಓಕೆ. ಅದಕ್ಕಿಂತ್ಲೂ ನಮ್ಮ ಮೇಲುಕೋಟೆ, ಮೈಸೂರ ಸುತ್ತಮುತ್ತಲ ದೃಶ್ಯಗಳು ಹೆಚ್ಚು ಖುಷಿ ಕೊಡುತ್ವೆ. ಅಲ್ಲಿಲ್ಲಿ ಒಂದಿಷ್ಟು ಐಟಂ ಸಾಂಗುಗಳು,  ಮಡಿಯುಟ್ಟ ನಾಯಕನ ಕೈಯಲ್ಲಿ ಗನ್ನು ಇವೆಲ್ಲಾ ಬೇಕಿತ್ತಾ ಫಿಲ್ಮಿಗೆ ಕೊಂಚ ಜಾಸ್ತಿಯೇ ಓವರ್ರಾಗಿಲ್ವಾ ಅಂತ್ಲೂ ಅನಿಸಿದ್ದು ಸುಳ್ಳಲ್ಲ ದ್ವಿತೀಯಾರ್ಧದಲ್ಲಿ. ಫೈಟಿಂಗೇ ಮಾಡಿಸ್ಬೇಕು ಅಂದ್ರೆ ಮೊದಲಾರ್ಧದಲ್ಲಿದ್ದಂತೆ ಇಟ್ಟಿದ್ರೆ ಆಗ್ತಿರ್ಲಿಲ್ವಾ ಅನಿಸ್ತು.end of the day ಅದು ನಿರ್ದೇಶಕರ ಸಿನಿಮಾ ಮತ್ತು ಅವರ ಕತೆ. ಅವರ ಶೈಲಿಗೆ ಸೈ ಅನ್ನಲೇ ಬೇಕು. ಅಲ್ಲಲ್ಲಿ ಬೇಸರವಾದ್ರೂ ಇದನ್ನೇ ಇಡ್ಕೊಂಡು ಗಲಾಟೆ ಮಾಡುವಷ್ಟು ರೇಂಜಿಗೆ ಸಿನಿಮಾ ಖರಾಬಾಗಿಲ್ಲ ಸಿನಿಮಾ. ಬೇರೆಲ್ಲಾ ವಿಶಯಗಳು ಹೋಗ್ಲಿ... ಕನ್ನಡ ಕತೆಗಳಿಗೆ ಬರಗಾಲ ಬಂದಿದೆಯಾ ಅನ್ನುವಷ್ಟು ರಿಮೇಕ್ ಸಿನಿಮಾಗಳನ್ನು ಮಾಡ್ತಿರೋ ಸಮಯದಲ್ಲಿ ಸ್ವಮೇಕ್ ಸಿನಿಮಾ ಮಾಡಲು ಮುಂದಾಗಿದ್ದಾರೆ ಅನ್ನೋ ಒಂದೇ ಕಾರಣಕ್ಕಾದ್ರೂ ಇದನ್ನು ಥಿಯೇಟ್ರಿಗೆ ಹೋಗಿ ನೋಡ್ಲೇ ಬೇಕು. 

3 comments:

  1. ಒಂದು ಸ್ಥೂಲ ಪರಿಚಯ ಚೆನ್ನಾಗಿ ಬರೆದಿದ್ದೀರ.. ನೋಡಬೇಕು ನೋಡಬಾರದು ಅನ್ನುವದಕ್ಕಿಂತ ಅನಿಸಿದ್ದನ್ನು ಸವಿವರವಾಗಿ ಬರೆಯುವ ಶೈಲಿ ಇಷ್ಟವಾಗಿದೆ..

    ಕನ್ನಡ ಚಿತ್ರಗಳು ಬೆಳಯಲಿ, ಉಳಿಯಲಿ ಕುಟುಂಬ ಸಮೇತ ನೋಡುವಂತ ಚಿತ್ರಗಳು ಬರಲಿ ಎಂಬ ಮನವಿ ಸದಾ ಇದ್ದೆ ಇದೆ.

    ಸೂಪರ್ ವಿಮರ್ಶೆ ಪ್ರಶಸ್ತಿ

    ReplyDelete
  2. ವಿಮರ್ಶೆ ಚೆನ್ನಾಗಿದೆ....ಧನ್ಯವಾದಗಳು .....

    ReplyDelete
  3. ಧನ್ಯವಾದಗಳು ಶ್ರೀಕಾಂತಣ್ಣ, ಸಂತೋಶ್ ಅವ್ರೆ. ಬ್ಲಾಗಿಗೆ ಸ್ವಾಗತ :-)

    ReplyDelete