Saturday, October 10, 2015

ಹಂಪಿ ಪ್ರವಾಸ ಕಥಾನಕ -೨: ವಿರೂಪಾಕ್ಷನ ಸನ್ನಿಧಿಯಲ್ಲಿ

ವಿರೂಪಾಕ್ಷನ ಸನ್ನಿಧಿಯಲ್ಲಿ:

ಹೋಗೋದು ಹೇಗೆ?
ಹಂಪಿಗೆ ಹೋಗಬೇಕೆನ್ನೋ ಭಾವ ಬಹುದಿನಗಳಿಂದ ಕಾಡುತ್ತಿತ್ತು. ಅವರು ಬರೋಲ್ಲ, ಇವರು ಬರೋಲ್ಲ ಅಂತ ಅದೆಷ್ಟೋ ಸಲ ಕ್ಯಾನ್ಸಲ್ ಆದ ಪ್ಲಾನಿಗೆ ಬೇಸತ್ತು ಈ ಸಲ ಯಾರೂ ಬರದಿದ್ದರೆ ನಾನೊಬ್ಬನಾನರೂ ಹೋಗೇ ಬರುತ್ತೇನೆಂಬ ಭಂಡ ಧೈರ್ಯ ಮಾಡಿದವನಿಗೆ ಜೊತೆಯಾದವರು ಇನ್ನಿಬ್ರು, ಹಂಪೆ ಎಕ್ಸ್ ಪ್ರೆಸ್ ರೈಲಲ್ಲಿ ಹೋಗ್ಬೋದು, ನೇರ ಬಸ್ಸಲ್ಲಿ ಹೋಗ್ಬೋದು ಎಂಬೆಲ್ಲಾ ಪ್ಲಾನುಗಳು ಸರಿ.ಆದರೆ ಅವೆಲ್ಲಾ ತಿಂಗಳ ಮುಂಚೆ ಹೊರಡೋ ಪ್ಲಾನಿರೋರಿಗೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಹೊರಡಬೇಕೆನ್ನುವವರಿಗೂ ಬರುತ್ತೇನೆ, ಬರೋಲ್ಲವೆನ್ನುತ್ತಾ ಪ್ಲಾನನ್ನು ಸಂದಿಗ್ದದಲ್ಲಿಟ್ಟಿದ್ದ ಅನೇಕ ಗೆಳೆಯರಿದ್ದ ನಮ್ಮ ಪ್ಲಾನಿಗೆ ಸಾಥಿಯಾಗಿದ್ದು ಹೊಸಪೇಟೆ ಬಸ್ಸುಗಳೇ. ಹಂಪಿಯಿಂದ ಹೊಸಪೇಟೆಗೆ ಅರ್ಧ ಘಂಟೆಯ ಪಯಣ, ಹೊಸಪೇಟೆಗೆ ಬೆಂಗಳೂರಿಂದ ಸಖತ್ ಬಸ್ಸುಗಳಿವೆ ಎಂಬ ಮಾಹಿತಿ ಪಡೆದಿದ್ದ ನಮ್ಮ ಗ್ಯಾಂಗ್ ಹೊರಟಿದ್ದು ಹೊಸಪೇಟೆಗೆ.

9 Storied entrance of the Virupaksha temple, Hampi

ಉಳಿಯೋದೆಲ್ಲಿ?
ಬೆಂಗಳೂರಿಂದ ರಾತ್ರೆ ಹನ್ನೊಂದೂಕಾಲರ VRL ಬಸ್ಸಿಗೆ ಹೊರಟ ನಾವು ಹೊಸಪೇಟೆ ತಲುಪೋ ಹೊತ್ತಿಗೆ ಬೆಳಗ್ಗಿನ ಆರೂಕಾಲು. ಹೊಸಪೇಟೆಯ ಕೊನೆಯ ನಿಲ್ದಾಣ ಬಸ್ಟಾಂಡ್ ಬಳಿ ಇಳಿಯುತ್ತಿದ್ದಂತೇ ಹರಿಪ್ರಿಯಾ ಲಾಡ್ಜ್, ಸ್ವಾತಿ ಲಾಡ್ಜ್, ಶ್ಯಾನ್ ಭಾಗ್ ಲಾಡ್ಜ್, ಪೈ ಇಂಟರ್ ನ್ಯಾಷನಲ್ ಮುಂತಾದ ಲಾಡ್ಜಗಳು ಸಿಗುತ್ತೆ. ಅದರಲ್ಲಿ ಹರಿಪ್ರಿಯಾ ಚೀಪ್ ಅಂಡ್ ಬೆಸ್ಟ್ ಅಂತ ಬಸ್ಸಿನಲ್ಲಿ ಸಿಕ್ಕವರೊಬ್ಬರು ಹೇಳಿದ್ರು. ಹಾಗೇ  ಬೆಳಗ್ಗೆ ಹರಿಪ್ರಿಯಾಕ್ಕೆ ತೆರಳಿದ ನಾವು ಅಲ್ಲಿನ ಪ್ರಸಿದ್ಧ ಶ್ಯಾನ್ ಭಾಗ್ ಹೋಟೆಲಿನಲ್ಲಿ ಬೆಳಗ್ಗಿನ ಉಪಹಾರ ಮುಗಿಸಿ ಹಂಪೆ ದರ್ಶನಕ್ಕೆ ತೆರಳಿದೆವು. ಇಲ್ಲಿನವರ ಪ್ರಕಾರ ಬೆಳಗ್ಗಿನ ಉಪಾಹಾರ ಅಂದ್ರೆ ಶ್ಯಾನ್ ಭಾಗ್. ಮಧ್ಯಾಹ್ನದ/ರಾತ್ರೆಯ ಊಟ ಅಂದರೆ ಸ್ವಾತಿ ಡೆಲಿಕಸಿ, ಉತ್ತರ್ ಭಾರತೀಯ ತಿನಿಸುಗಳ ಐಸ್ ಲ್ಯಾಂಡ್ ಅಥವಾ ಪೈ ಇಂಟರನ್ಯಾಷನಲ್. ಉತ್ತರ ಕರ್ನಾಟಕದ ಊಟ ಇಷ್ಟ ಪಡೋರಾದ್ರೆ ಐಸ್ ಲ್ಯಾಂಡ್ ಪಕ್ಕದಲ್ಲೇ ಇರೋ ಶ್ರೀ ಭುವನೇಶ್ವರಿ ಖಾನಾವಳಿಗೆ ತೆರಳಬಹುದು. ಪೇಟೆಯಿಡೀ ತಿರುಗುಬೇಕೆನ್ನುವವರಿಗೆ ಇನ್ನಷ್ಟು ಆಯ್ಕೆಗಳು ಸಿಕ್ಕಬಹುದು :-)
Goravankas of Hampi

ಹೊಸಪೇಟೆಯಿಂದ ಹಂಪೆಗೆ ಹೋಗೋದು ಹೇಗೆ ?
ಹೊಸಪೇಟೆಯಿಂದ ಹಂಪೆಗೆ ಪ್ರತೀ ಹದಿನೈದು ನಿಮಿಷಕ್ಕೆ ಬಸ್ಸುಗಳಿವೆ(ಬೆಳಗ್ಗಿನಿಂದ ಸಂಜೆ ಏಳೂವರೆವರೆಗೆ). ೧೨ ಕಿ.ಮೀ ಗಳ ಈ ದಾರಿಗೆ ತಲಾ ೧೩ ರ ಚಾರ್ಚು. ಹೊಸಪೇಟೆಯಿಂದ ಹೊಸಪೇಟೆಗೆ ಹೋಗೋಕೆ ಎರಡು ದಾರಿಗಳಿವೆ. ಒಂದು ಕಡ್ಡಿ ರಾಂಪುರ ಮಾರ್ಗ. ಮತ್ತೊಂದು ಕಮಲಾಪುರ ಮಾರ್ಗ. ಹಂಪಿಗೆ ಬೇಗ ತಲುಪಬೇಕೆನ್ನುವವರು ಕಡ್ಡಿ ರಾಂಪುರ ಮಾರ್ಗದಲ್ಲಿ ಪಯಣಿಸಬಹುದು. ಅದರಲ್ಲಿ ೧೩ರೂ ಚಾರ್ಚ್ ಕೊಟ್ಟು ಪಯಣಿಸುವವರಿಗೆ ಎದುರಾಗೋ ಹಂಪಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಕಡ್ಡಿ ರಾಂ ಪುರ ಸ್ಟಾಪಿನ ಪಕ್ಕದಲ್ಲೇ ಇರುವ ಮಹಮದೇನ್ ಗೋರಿಗಳು. ಸ್ವಂತ ಗಾಡಿಯಲ್ಲಿ ಅಥವಾ ಹೊಸಪೇಟೆಯಿಂದಲೇ ಗಾಡಿ ತಗೊಂಡು ಬರುವವರು ಇಲ್ಲೊಂದು ಮಿನಿ ಸ್ಟಾಪ್ ಕೊಟ್ಟು ಗೋರಿ ಮತ್ತಿತರ ರಚನೆಗಳನ್ನು ನೋಡಿ ಮುಂದೆ ಸಾಗಬಹುದು. ಅಲ್ಲಿಂದ ಮತ್ತೆ ಬಸ್ಸು ಹತ್ತಿ ಮುಂದೆ ಸಾಗುವವರಿಗೆ ನಂತರ ಸಿಗೋ ನೋಡಲರ್ಹ ಸ್ಥಳ ಸಾಸಿವೆ ಕಾಳು ಗಣೇಶ ಸ್ಟಾಪು. ಅಲ್ಲಿನ ಸಾಸಿವೆ ಕಾಳು ಗಣೇಶ, ಕಡಲೇ ಕಾಳು ಗಣೇಶ ಮತ್ತು ಹೇಮಕೂಟ ಪರ್ವತದಲ್ಲಿನ ಮೂವತ್ಮೂರು ಇತರ ದೇವಸ್ಥಾನಗಳನ್ನು ನೋಡೋ ಹೊತ್ತಿಗೆ ಕೆಳಗಿನ ವಿರೂಪಾಕ್ಷ ದೇಗುಲದ ಎತ್ತರದ ಪ್ರವೇಶದ್ವಾರಗಳು ಕಾಣುತ್ತವೆ. ಅಲ್ಲಿಂದ ಇಳಿದರೆ ಸಿಗುವುದೇ ಹಂಪಿಯ ವಿರೂಪಾಕ್ಷ. ಹೊಸಪೇಟೆಯಿಂದ ಹಂಪೆಗೆ ಟೆಂಪೋಗಳು ಹೋಗುತ್ತವಾದರೂ ಹಂಪಿ ಬಸ್ ನಿಲ್ದಾಣದಿಂದ ಹೊರಡೋ ವಿಜಯ ರಥ ಬಸ್ಸುಗಳೇ ಹೆಚ್ಚು ಚೀಪು ಮತ್ತು ಆರಾಮಕರ.

ಕಮಲಾಪುರ ಮಾರ್ಗದಲ್ಲಿ ಬರುವವರಿಗೆ ಹಂಪೆಗೆ ೧೪ ರೂ ಚಾರ್ಚ್. ಇದು ಸ್ವಲ್ಪ ದೂರದ ಮಾರ್ಗ ಸಹಾ. ಮಧ್ಯಾಹ್ನದ ಹೊತ್ತಿಗೆ ಈ ಮಾರ್ಗದಲ್ಲಿ  ಬಂದರೆ  ದಾರೂಜಿ ಕರಡಿಧಾಮಕ್ಕೆ ಹೋಗಬಹುದು. ಅಲ್ಲಿನ ವೀಕ್ಷಣಾ ಸಮಯ ಮಧ್ಯಾಹ್ನ ೨ ರಿಂದ ಸಂಜೆ ಆರರವರೆಗೆ ಮಾತ್ರ. ಅತ್ತ ಹೋಗದೇ ಸೀದಾ ಹಂಪೆಯತ್ತ ಬರುವವರಿಗೆ ಮೊದಲು ಸ್ವಾಗತಿಸೋದು ಸರಸ್ವತೀ ಮಂದಿರ, ಚಂದ್ರಶೇಖರ ದೇವಸ್ಥಾನ ಮತ್ತು ಅಷ್ಟಭುಜ ಸ್ನಾನದ ಕೊಳ. ಅದನ್ನು ನೋಡಿ ಮತ್ತೆ ರಸ್ತೆಗೆ ಬಂದು ಮುಂದೆ ಸಾಗಿದರೆ ರಸ್ತೆಯ ಪಕ್ಕದಲ್ಲೇ ಅಷ್ಟಭುಜ ನೀರಿನ ಸಂಗ್ರಹಾಗಾರ(octagonal water pavillion) ಸಿಗುತ್ತದೆ.ಮುಂದೆ ಸಾಗಿದರೆ ಸಿಗುವುದೇ ರಾಣಿಯರ ಸ್ನಾನದ ಕೊಳಗಳು ಮತ್ತು ಮಹಾನವಮಿ ದಿಬ್ಬ. ರಸ್ತೆಯಲ್ಲಿ ಸಾಗಲಿಚ್ಚಿಸದವರು ಸರಸ್ವತೀ ಮಂದಿರದ ಪಕ್ಕದಲ್ಲಿರುವ  ಕಾಲು ಹಾದಿಯ ಹಿಡಿದೂ ಸ್ನಾನದ ಕೊಳದತ್ತ ಅಥವಾ ಮಹಾನವಮಿ ದಿಬ್ಬದತ್ತ ಸಾಗಬಹುದು. ಅದನ್ನು ನೋಡಿ ಮುಂದೆ ಬರುವವರಿಗೆ ಸಿಗುವುದು ಭೂಮ್ಯಂತರ್ಗತ ಪ್ರಸನ್ನ ವಿರೂಪಾಕ್ಷ ದೇವಸ್ಥಾನ(underground temple). ಅದನ್ನು ನೋಡಿ ಮುಂದೆ ಸಾಗುವಾಗ ಸಿಗೋ ಒಂದು ಏರಿನಲ್ಲಿ ಎಡಕ್ಕೆ ನೋಡಿದರೆ ಕಾಣುವುದೇ ಅಕ್ಕತಂಗಿ ಗುಂಡುಗಳು. ಅಲ್ಲಿಂದ ಮುಂದೆ ಸಾಗಿದರೆ ಉದ್ಧಾನವೀರಭದ್ರ ಸ್ವಾಮಿ ದೇವಸ್ಥಾನ ಮತ್ತು ಪಕ್ಕದಲ್ಲೇ ಇರುವ ಚಂಡಿಕೇಶ್ವರ ದೇವಸ್ಥಾನ.  ಮೇಲೆ ಹೇಳಿದ ನೀರಿನ ಸಂಗ್ರಹಾಲಯ, ಅಕ್ಕ-ತಂಗಿ ಗುಂಡು ಬಿಟ್ಟು ಬೇರೆಲ್ಲಾ ಸ್ಥಳಗಳಲ್ಲೂ ಹೊಸಪೇಟೆಯಿಂದ ಕಮಲಾಪುರದ ಮೇಲೆ ಬರೋ ವಿಜಯರಥ ಬಸ್ಸುಗಳು ನಿಲ್ಲಿಸುತ್ತವೆ. ಚಂಡಿಕೇಶ್ವರನ ದೇಗುಲದಿಂದ ಮುಂದೆ ಕೆಲವೇ ನಿಮಿಷಗಳ ನಡೆಯೋ ಹಾದಿಯಲ್ಲಿ ಸಿಗುವುದು ಹಂಪಿಯ ಜಗದ್ವಿಖ್ಯಾತ ಲಕ್ಷ್ಮೀ ನರಸಿಂಹ . ಅದರ ಪಕ್ಕದಲ್ಲೇ ಬಡವೀ ಲಿಂಗ, ಅರಮನೆಯ ಪ್ರಾಕಾರಗಳ ಅವಶೇಷಗಳನ್ನು ಕಾಣಬಹುದು. ಅಲ್ಲಿಂದ ಮುಂದೆ ಸಾಗಿದರೆ ಸಿಕ್ಕುವುದೇ ಶ್ರೀ ಕೃಷ್ಣ ದೇವಾಲಯ. ಅದರೆದುರಿನ ಶ್ರೀ ಕೃಷ್ಣಬಜಾರ್ ಮತ್ತು ಲೋಕಪಾವನಿ ಕೊಳ/ಪುಷ್ಕರಿಣಿ. ನಂತರ ಈ ರಸ್ತೆ ಸಾಸಿವೆ ಕಾಳು ಗಣೇಶ ನಿಲ್ದಾಣದಲ್ಲಿ ಕಡ್ಡಿ ರಾಂಪುರದಿಂದ ಬರುವ ರಸ್ತೆಗೆ ಸೇರುತ್ತದೆ. ಪ್ರತೀ ದೇಗುಲಗಳ ವಿವರಗಳನ್ನ,ಹಂಪಿಯ ಉಳಿದ ದೇವಸ್ಥಾನಗಳ ಮಾಹಿತಿಯನ್ನ ನಂತರ ನೋಡೋಣ. ಮೊದಲು ಹಂಪಿಯ ವಿರೂಪಾಕ್ಷನ ಸನ್ನಿಧಿಗೆ ಭೇಟಿ ಕೊಡೋಣ.
Entrance to Virupaksha temple

ಹಂಪಿ ತಿರುಗೋದೇಗೆ ?
ಹಂಪಿಗೆ ಬರೋರೆಲ್ಲಾ ಮೊದಲು ವಿರೂಪಾಕ್ಷನ ದರ್ಶನ ಪಡೆದೇ ನಂತರ ಉಳಿದ ಜಾಗಗಳಿಗೆ ತೆರಳೋದು ಸಾಮಾನ್ಯ. ಹಂಪಿ ಬಸ್ ನಿಲ್ದಾಣದಲ್ಲಿ ಇಳಿಯೋರಿಗೆ ಎದುರಲ್ಲೇ ವಿರೂಪಾಕ್ಷನ ಗೋಪುರಗಳು ಕಾಣಸಿಗುತ್ತೆ. ವಿರೂಪಾಕ್ಷನ ದರ್ಶನ ಪಡೆದೇ ಮುಂದಿನ ಪ್ಲಾನ್ ಮಾಡೋಣವೆಂಬ ಇರಾದೆಯಿದ್ದರೂ ಅಲ್ಲಿನ ಆಟೋಗಳು ಅಲ್ಲಿಗೆ ಸುತ್ತಿಸುತ್ತೇವೆ, ಇಲ್ಲಿಗೆ ಕರೆದುಕೊಂಡು ಹೋಗುತ್ತೇವೆ, ನಡೆದುಕೊಂಡು ಹೋಗೋದು ಅಸಾಧ್ಯ. ಇಲ್ಲಿ ನೋಡೋ ಸ್ಥಳಗಳನ್ನೆಲ್ಲಾ ನೋಡೋಕೆ ೨೫ ಕಿ.ಮೀ ಗಿಂತಲೂ ಹೆಚ್ಚಾಗುತ್ತೆ, ನಮ್ಮ ಆಟೋದಲ್ಲಿ ಬರೀ ಒಂಭೈನೂರು ಮಾತ್ರ ಅಂತ ನಂಬಿಸೋಕೆ ಬರುತ್ತಾರೆ. ಎರಡು ದಿನ ಅಲ್ಲೇ ಇದ್ದು ಸುತ್ತಿ ನೋಡಿದ ನಮ್ಮ ಅನುಭವದ ಪ್ರಕಾರ ಇವೆಲ್ಲಾ ಶುದ್ಧ ಸುಳ್ಳು ಮತ್ತು ವ್ಯಾಪಾರೀ ತಂತ್ರಗಳಷ್ಟೇ. ಹಂಪೆಯ ಎಲ್ಲಾ ಸ್ಥಳಗಳನ್ನು ಕಾಲ್ನಡಿಗೆಯಲ್ಲಿ ಅಥವಾ ಸೈಕಲ್ಲಿನಲ್ಲಿ ಎರಡು ಅಥವಾ ಮೂರು ದಿನಗಳಲ್ಲಿ ನೋಡಿ ಮುಗಿಸಬಹುದು. ಆದ್ದರಿಂದ ಪ್ರಕೃತಿಯನ್ನು ಸಹಜವಾಗಿ ಸವಿಯೋ ಇರಾದೆಯಿದ್ದರೆ, ನಿಮ್ಮದೇ ಆರಾಮದಲ್ಲಿ  ಹಂಪೆಯನ್ನು ನೋಡೋ ಇರಾದೆಯಿದ್ದರೆ ಯಾವ ಆಟೋದವರ ಸಹವಾಸಕ್ಕೂ ಹೋಗದೇ ವಿರೂಪಾಕ್ಷನ ದೇಗುಲದತ್ತೆ ನಡೆಯಿರಿ. ಆದರೆ ಅಲ್ಲಿ ಸಿಗೋ ಹಂಪಿ ಎಂಬೋ ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿರುವ ಹಂಪಿಯ ಮ್ಯಾಪ್ ಇರೋ ಪುಸ್ತಕವನ್ನು ತೆಗೆದುಕೊಳ್ಳಿ. ಸ್ಥಳಗಳ ಬಗ್ಗೆ ಮಾಹಿತಿಯನ್ನೂ ಹೊಂದಿರೋ ಆ ಮಿನಿ ಗೈಡ್ ಪ್ರವಾಸದುದ್ದಕ್ಕೂ ನೆರವಾಗುತ್ತದೆ.ವಿರೂಪಾಕ್ಷನ ದೇಗುಲಕ್ಕೆ ಸಾಗೋ ದಾರಿಯಲ್ಲಿ ಬಲಭಾಗದಲ್ಲಿ ಸಾರ್ವಜನಿಕ ಶೌಚಾಲಯ ಅನ್ನೋ ಬೋರ್ಡ್ ಕಾಣುತ್ತೆ. ಅದರ ಪಕ್ಕದಲ್ಲಿ ಬಾಡಿಗೆ ಸೈಕಲ್ಲುಗಳು ಸಿಗುತ್ತೆ. ಒಂದರ ದಿನದ ಬಾಡಿಗೆ ನೂರು ರೂ. ಸಂಜೆ ಆರು ಆರೂವರೆಯವರೆಗೂ ಈ ಸೈಕಲ್ಲುಗಳಲ್ಲಿ ಸುತ್ತಬಹುದು. ಎಲ್ಲಾದ್ರೂ ಪಂಕ್ಚರ್ರಾದರೆ ಫೋನ್ ಮಾಡಿ ಬಂದು ಸರಿ ಮಾಡಿ ಕೊಡುತ್ತೇವೆ ಎನ್ನೋ ಇವರ ಫೋನ್ ನಂಬರ್ ಇಸ್ಕೊಂಡಿರಿ ! ನಮ್ಮ ಪಯಣದಲ್ಲಿ ಎಲ್ಲೂ ಪಂಕ್ಚರ್ರಾಗದಿದ್ರೂ , ಹೆಚ್ಚಿನ ಸ್ಥಳಗಳಿಗೆಲ್ಲಾ ನಡೆದೇ ಹೋಗಬಹುದಾದಂತಹ ಶಾರ್ಟ್ ಕಟ್ಗಳಿದ್ರೂ ನಿಮ್ಮ ಪಯಣದಲ್ಲಿ ಬೇಕಾಗಬಹುದು. ನೀವು ಸೈಕಲ್ ತಗೊಂಡು ಪರಾರಿಯಾಗೋಲ್ಲ ಎನ್ನುವ ದಾಖಲೆಗೆ ಇವರು ಯಾವುದಾದ್ರೂ ದಾಖಲೆಯ ಜೆರಾಕ್ಸ್ ಅಥವಾ ಒರಿಜಿನಲ್ ಕೇಳುತ್ತಾರೆ. ನಮ್ಮ ಮೂರು ಜನರ ದಾಖಲೆಗಾಗಿ ನನ್ನ ಬಳಿಯಿದ್ದ ವೋಟರ್ ಕಾರ್ಡನ್ನೇ ಕೊಟ್ಟು ಮುಂದೆ ಸಾಗಿದ್ವಿ. ವಿರೂಪಾಕ್ಷನ ದೇಗುಲ ದಾಟಿ ಪಕ್ಕದ ತುಂಗಭದ್ರೆಯನ್ನು ಹತ್ತು ರೂ ನೀಡಿದರೆ ದಾಟಿಸೋ ಬೋಟಿನಲ್ಲಿ ದಾಟಿದರೆ ಆಚೆ ದಡದಲ್ಲಿರೋ ಆಂಜನಾದ್ರಿ, ಲಕ್ಷ್ಮೀ ದೇಗುಲ, ಪಂಪಾ ಸರೋವರ, ದುರ್ಗಾ ಮಂದಿರ, ಆನೇಗುಂದಿ, ಚಿಂತಾಮಣಿಗಳನ್ನ ನೋಡಬಹುದು. ಆಚೆ ದಡದಲ್ಲಿ ಇವುಗಳನ್ನೆಲ್ಲಾ ತೋರಿಸೋಕೆ ಆಟೋದವರು ಆರು ನೂರು ಕೇಳುತ್ತಾರೆ. ಬೈಕಲ್ಲಿ ಹೋಗೋದಾದರೆ ಬೈಕಿಗೆ ಇನ್ನೂರೈವತ್ತು. ಪೆಟ್ರೋಲ್ ನೀವೇ ಹಾಕಿಸಿಕೊಳ್ಳಬೇಕು.ಈಚೆ ದಡದಲ್ಲಿ ಪಡೆದ ಸೈಕಲ್ಲುಗಳಿದ್ದರೆ ಅದರಲ್ಲೇ ಇವನ್ನು ದರ್ಶಿಸಬಹುದು. ಹಂಪೆಗೆ ಹೋಗೋದೇಗೆ ಅನ್ನೋ ಪೂರ್ವ ಕತೆಗಳ, ಉಳಿದ ಸ್ಥಳಗಳ ಬಗೆಗಿನ ಮಾಹಿತಿಗೆ ಮುಂಚೆ ನೇರವಾಗಿ ಎದುರಿಗೇ ಸಾಗೋ ವಿರೋಪಾಕ್ಷನ ಸನ್ನಿಧಿಗೆ ಸಾಗೋಣ

ದೇಗುಲದ ಪ್ರವೇಶದ್ವಾರದ ಬಳಿಯಿರುವ ಕಲ್ಲಿನ ಮಂಟಪ
ಈ ಬೋರ್ಡ್ ನೆನಪಿಟ್ಟುಕೊಂಡರೆ ಕಲ್ಲಿನ ಮಂಟಪವನ್ನು ಹುಡುಕೋದು ಸುಲಭ

ಹಂಪಿ ವಿರೂಪಾಕ್ಷ:
ಏಳನೇ ಶತಮಾನದಿಂದ ಪೂಜಿಸಲ್ಪಡುತ್ತಿರುವ ಈ ದೇಗುಲಕ್ಕೆ ಚಾಲುಕ್ಯ, ಹೊಯ್ಸಳ, ವಿಜಯನಗರದ ಕಾಲದಲ್ಲಿ ಅಷ್ಟಿಷ್ಟು ಬದಲಾವಣೆಗಳಾಗಿವೆ ಎನ್ನುತ್ತದೆ ಇತಿಹಾಸ. ಒಂಭತ್ತು ಅಂತಸ್ತುಗಳ ಬೃಹತ್ ಪ್ರವೇಶದ್ವಾರವನ್ನು ದಾಟಿ ಮುನ್ನಡೆದರೆ ವಿರೂಪಾಕ್ಷ ದೇಗುಲದ ಅಂಗಳಕ್ಕೆ ಸಾಗುತ್ತೇವೆ. ಅಲ್ಲಿನ ಎಡಭಾಗದಲ್ಲಿ ಅಡಿಗೆ ಮನೆಗೆ ಸಾಗುವ ದಾರಿ ಎನ್ನುವ ಬೋರ್ಡಿರೋ ಕಂಬದ ಮಂಟಪ ಸಿಗುತ್ತದೆ. ಕಂಬದ ಮಂಟಪದಲ್ಲಿರೋ ರಚನೆಗಳನ್ನು ನೋಡುತ್ತಾ ಮುಂದೆ ಸಾಗಿದರೆ ಹಿಂದೆ ಅಡಿಗೆ ಮನೆಗೆ, ಆನೆಗಳ ಲಾಯಕ್ಕೆ ಸಾಗಬಹುದಿತ್ತಂತೆ. ಈಗ ಬೀಗ ಹಾಕಿರೋ ಆ ದ್ವಾರದ ಬದಲು ಆನೆಗಳ ಲಾಯಕ್ಕೆ ಮತ್ತೊಂದು ದಾರಿಯಿಂದ ಸಾಗಬಹುದು. ಕಂಬಗಳ ಮಂಟಪಗಳ ರಚನೆಯನ್ನು ಆನಂದಿಸಿ ಮತ್ತೆ ವಾಪಾಸ್ ಬಂದರೆ ಪ್ರವಾಸಿ ಮಾಹಿತಿ ಕೇಂದ್ರ ಸಿಗುತ್ತದೆ. ಅದರ ಪಕ್ಕದಲ್ಲೇ ಇದೆ ದೇಗುಲದ ಪ್ರವೇಶ ದ್ವಾರ. ಅಲ್ಲಿನ ಪ್ರವೇಶ ಶುಲ್ಕ ತಲಾ ಎರಡು ರೂ. ಸ್ಥಿರ ಚಿತ್ರಗಳನ್ನು ತೆಗೆಯೋ ಕ್ಯಾಮೆರಾಕ್ಕೆ ೫೦ ಮತ್ತು ವಿಡೀಯೋ ಕ್ಯಾಮೆರಾಕ್ಕೆ ೫೦೦ ರೂ ಪ್ರವೇಶ ಶುಲ್ಕ. ಪಕ್ಕದಲ್ಲೇ ಇರೋ ಚಪ್ಪಲಿ ಸ್ಟಾಂಡಲ್ಲಿ ಚಪ್ಪಲಿಯಿಟ್ಟು ಒಳನಡೆದರೆ ದೇಗುಲದ ಪ್ರಾಂಗಣ ಎದುರಾಗುತ್ತೆ.
 
ಅಲ್ಲಿನ ಬಸವಣ್ಣನ ಮಂಟಪವನ್ನು ದಾಟಿ ಮುನ್ನಡೆದರೆ ಮತ್ತೊಂದು ಮಂಟಪ ಸಿಗುತ್ತದೆ. ಅದರಲ್ಲಿರುವ ರಚನೆಗಳ ಜೊತೆಗೆ ಅದರ ಮೇಲ್ಛಾವಣಿಯಲ್ಲಿರುವ ಪೈಂಟಿಗುಗಳನ್ನ ನೋಡಲು ಮರೆಯದಿರಿ.ನವಗ್ರಹಗಳ ಮತ್ತು ರಾಜಸಭೆಯ ಮನಮೋಹಕ ಪೈಂಟಿಗುಗಳನ್ನು ತಲೆಯೆತ್ತಿ ನೋಡದ ಅದೆಷ್ಟೋ ಜನ ಮಿಸ್ ಮಾಡಿಕೊಳ್ಳುತ್ತಾರೆ ! ಅಲ್ಲಿಂದ ಮುಂದೆ ಸಾಗಿದರೆ ವಿರೂಪಾಕ್ಷನ ಸನ್ನಿಧಿ. ಅಕ್ಕಪಕ್ಕದಲ್ಲಿ ಇನ್ನೂ ಅನೇಕ ದೇಗುಲಗಳನ್ನು ಕಾಣಬಹುದು. ಎಡಭಾಗದಲ್ಲಿನ ಮೆಟ್ಟಿಲುಗಳ ಹತ್ತಿ ಸಾಗಿದರೆ ಆನೆಲಾಯ ಮತ್ತು ಅಂದಿನ ಅಡಿಗೆ ಮನೆಗೆ ಭೇಟಿಯಿಡಬಹುದು.
Navagraha painting
Rajasabha painting

ವಿರೂಪಾಕ್ಷ ದೇಗುಲದ ಸುತ್ತಣ ಪ್ರಾಂಗಣದಲ್ಲಿ ರಾಮಾಯಣ,ಮಹಾಭಾರತ ಮತ್ತಿತರ ಪೌರಾಣಿಕ ಕೆತ್ತನೆಗಳಿವೆ. ವಿರೂಪಾಕ್ಷ ದೇಗುಲವನ್ನು ದರ್ಶಿಸಿದವರು ಅದೇ ಆವರಣದಲ್ಲಿರುವ ಶ್ರೀ ಲಕ್ಷ್ಮೀದೇವಿ, ಶಾರದಾ ದೇವಿ, ಮಹಿಷಾಸುರ ಮರ್ಧಿನಿ, ವಿದ್ಯಾರಣ್ಯ ಸ್ವಾಮಿ, ಪಂಪಾ ದೇವಿ, ಚಂಡಿಕೇಶ್ವರ, ಪಂಪಾದೇವಿ, ಭುವನೇಶ್ವರಿ ದೇವಿ, ಚಂಡಿಕೇಶ್ವರ ದೇವರ ದರ್ಶನವನ್ನು ಪಡೆಯಬಹುದು. ಅಲ್ಲೇ ಮೇಲೆ ಸಾಗಿದರೆ ದೇಗುಲ ಗೋಪುರದ ಉಲ್ಟಾ ಛಾಯೆಯನ್ನು ನೋಡಬಹುದು ! pin hole camera technology ಅನ್ನು ಅಂದೇ ಅಳವಡಿಸಿದ ನಮ್ಮ ಹಿರಿಯರ ಕೌಶಲ್ಯವನ್ನು ಮೆಚ್ಚಬೇಕಾದ್ದೆ. ನೋಡುವ ಕಣ್ಣುಗಳಲ್ಲಿ ಉಲ್ಟಾ ಛಾಯೆಯನ್ನು ಕಾಣಬಹುದಾದರೂ ಕತ್ತಲ ಆವರಣದಲ್ಲಿರುವ ಅದರ ಛಾಯಾಚಿತ್ರವನ್ನು ತೆಗೆಯೋದು ಕಷ್ಟಕರ. ಕ್ಯಾಮರಾದಲ್ಲಿ ಫ್ಲಾಷ್ ಹಾಕಿದ್ರೆ ಆ ಜಾಗವೇನೋ ಕಾಣುತ್ತೆ. ಆದ್ರೆ ಛಾಯೆಯ ಅನುಭವ ಸಿಗೋಲ್ಲ! ಆದರೂ ಆ ಜಾಗದ ಅನುಭವವನ್ನು ಚಿತ್ರದಲ್ಲಿ ಕಟ್ಟಿಕೊಡೋಕೆ ಪ್ರಯತ್ನಿಸಿದ್ದೀನಿ. ಅಲ್ಲಿಗೆ ಹೋದವರು ಆ ಜಾಗವನ್ನು ನೋಡೋಕೆ ಖಂಡಿತಾ ಮರೆಯದಿರಿ ಎನ್ನೋ ವಿನಂತಿಯೊಂದಿಗೆ :-)
ದೇಗುಲದ ಸುತ್ತಲ ಪ್ರದಕ್ಷಿಣಾ ಪಥ. ಇಲ್ಲಿನ ಪ್ರತಿ ಕಲ್ಲೂ ಕಥೆ ಹೇಳೀತು
One of the guide explaining children about inverted image of big gopuram

Scluptures which withstood the attacks of attacker and  the test of time since centuries !

ಹಾಗೇ ಮೇಲೆ ಸಾಗಿದರೆ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ಹಕ್ಕಬುಕ್ಕರ ಗುರುಗಳಾದ ವಿದ್ಯಾರಣ್ಯರು ತಪಸ್ಸಿಗೆ ಕುಳಿತ ಜಾಗ, ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಮಹಾಸಂಸ್ಥಾನ ಮಠ ಸಿಗುತ್ತದೆ. ಅಲ್ಲಿಂದ ಕೆಳಬಂದರೆ ಪಕ್ಕದಲ್ಲಿರೋ ಕೆರೆಗೆ ಸಾಗೋ ಹಾದಿಯಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ, ಶ್ರೀ ಶಂಕರೇಶ್ವರ, ಶ್ರೀ ಚಾಮುಂಡೇಶ್ವರಿ, ರತ್ನ ಗರ್ಭ ಗಣಪತಿ ದೇಗುಲಗಳು ಕಾಣಸಿಗುತ್ತದೆ.
Lake next to Virupaksha temple. Both entrance to the temple are visible at the edges
ಇಲ್ಲಿನ ಪ್ರತೀ ಶಿಲ್ಪಕ್ಕೂ ಗೈಡುಗಳು ಒಂದೊಂದು ಕಥೆ ಹೇಳುತ್ತಾರೆ. ಉದಾಹರಣೆಗೆ ಇಲ್ಲಿನ ದ್ವಾರದಲ್ಲಿ ಸಿಗೋ ಮೂರು ತಲೆಯ ಅಪರೂಪದ ನಂದಿ ಭೂತ, ವರ್ತಮಾನ, ಭವಿಷ್ಯಗಳ ಸಂಕೇತವಂತೆ. ದಾಳಿಗೆ ತುತ್ತಾಗಿ ಅಸ್ಪಷ್ಟವಾಗಿರೋ ಅದರ ಮೂರನೇ ಮುಖ ನಮ್ಮ ಅಸ್ಪಷ್ಟ ಭವಿಷ್ಯದ ಸಂಕೇತವಂತೆ ! ಹೇಳುತ್ತಾ ಹೊರಟರೆ ಅದೇ ಒಂದು ಕಾದಂಬರಿಯಾದೀತು !

3 headed Nandi at the entrance
to temple from the side of Lake


Ganesha, Karthikeya, Airavata at the same wall
Single headed nandi and other scriptures at the other door

ಸದ್ಯ ಜೀರ್ಣೋದ್ದಾರ ನಡೆಯುತ್ತಿರುವ ಕೆರೆಯನ್ನು ದಾಟಿ ಮುನ್ನಡೆದರೆ ತುಂಗಭದ್ರಾ ತಟ ಸಿಗುತ್ತದೆ. ಇಲ್ಲಿನ ನೀರಿನಲ್ಲಿ ಅದೆಷ್ಟೋ ಶಿವಲಿಂಗಗಳನ್ನು, ಬಸವನ ಕೆತ್ತನೆಗಳನ್ನು ಕಾಣಬಹುದು. ಪುಣ್ಯಸ್ನಾನಕ್ಕೆ ಬಂದಿರೋ ಯಾತ್ರಾರ್ಥಿಗಳು ಒಂದೆಡೆಯಾದರೆ ನದಿಯಾಚೆಯ ಬಂಡೆಗಳ, ಅವುಗಳ ಮಧ್ಯದ ದೇಗುಲಗಳ ಸವಿಯನ್ನು ಸವಿಯೋಕೆ ಬಂದಿರೋ ಪ್ರವಾಸಿಗಳ ಗುಂಪು ಮತ್ತೊಂದೆಡೆ. 
One of the Nandi @the river Tungabhadra
View of the Mantapa and one of the river crossings
 ಮುಂದಿನ ಕತೆಯನ್ನು ಮುಂದಿನ ಭಾಗದಲ್ಲಿ ನೋಡೋಣ  ..
ಮುಂದಿನ ಭಾಗದಲ್ಲಿ :ವಿಠಲನ ನಾಡಿನಲ್ಲೊಂದಿಷ್ಟು ಅಲೆದಾಟ

2 comments: