Sunday, October 4, 2015

ಕೆಂಪುಕೋಟೆಯ ಮೇಲಿಂದ ತಿರಂಗದ ಕೆಳಗಿಂದ ಕಂಡ ಕನಸಗಳ ಕುರಿತು:

ಕೆಂಪುಕೋಟೆಯ ಮೇಲಿಂದ ತಿರಂಗದ ಕೆಳಗಿಂದ ಕಂಡ ಕನಸಗಳ ಕುರಿತು:

ಇಂದು ಆಗಸ್ಟ್ ಹದಿನೈದು. ಭಾರತಕ್ಕೆ ಸ್ವಾತಂತ್ರ್ಯ ಬಂದು ೬೮ ವರ್ಷ ತುಂಬಿದ ಅಥವಾ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ೬೯ ನೇ ದಿನ. ರಜೆಯೆಂದು ಹೊದ್ದು ಮಲಗೋ ಬದಲು ಬೆಳಗಾಗೆದ್ದು ಟಿ.ವಿಯ ಮುಂದೆ ಪ್ರತ್ಯಕ್ಷನಾಗಿ ಕೆಂಪುಕೋಟೆಯ ಮೇಲೆ ನಮ್ಮ ಹೆಮ್ಮೆಯ  ತ್ರಿವರ್ಣ ಧ್ವಜ ರಾರಾಜಿಸುವ ಗಳಿಗೆಗಾಗಿ ಕಾಯೋದು ಈ ದೇಶದ ಅದೆಷ್ಟೋ ಕೋಟಿ ಜನರಲ್ಲೊಬ್ಬ ನಾನು. ಬಿಳಿಬಿಳಿಯ ಸಮವಸ್ತ್ರ ತೊಟ್ಟು ಕೈಗೊಂದು ತ್ರಿವರ್ಣದ ಬ್ಯಾಂಡೋ ಜೇಬಿಗೊಂದು ತ್ರಿವರ್ಣದ ಪಿನ್ನೋ ಚುಚ್ಚಿಕೊಂಡು ಬೋಲೋ ಭಾರತ್ ಮಾತಾ ಕೀ ಜೈ ಎನ್ನುತ್ತಾ ಶಾಲಾ ಮಾರ್ಚ್ ಫಾಸ್ಟ್ ಮಾಡುತ್ತಿದ್ದ ದಿನಗಳ ನೆನಪು ಮತ್ತೆ ಕಾಡಿ ಆ ಕಾಲಕ್ಕೆ ಮರಳೋ ಸಾಧ್ಯತೆಯಿದ್ದರೆ ಎಷ್ಟು ಚೆನ್ನಾಗಿರ್ತಿತ್ತಲ್ವಾ ಎಂದು ಎಷ್ಟೋ ಸಲ ಅನಿಸುವಂತೆ ಮಾಡೋದು ಆ ದಿನಗಳಲ್ಲೂ ಶಾಲೆಗೆ ಓಡೋ ಮುಂಚೆ ಹಣುಕುತ್ತಿದ್ದ ಕೆಂಪು ಕೋಟೆಯ ದೃಶ್ಯಗಳೇ.  ಆ ದಿನಗಳಲ್ಲೇ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನ ಮಾಡೋ ರಾಷ್ಟ್ರಪತಿಗಳ ಭಾಷಣವನ್ನು ತದೇಕಚಿತ್ತದಿಂದ ಕೇಳೋ ಅಭ್ಯಾಸ ಮೂಡಿಸಿದ್ದರು ಮನೆಯಲ್ಲಿ. ಆಗ ರಾಷ್ಟ್ರಪತಿಗಳಾಗಿದ್ದ ಕೆ.ಆರ್ ನಾರಾಯಣನ್, ಡಾ| ಎ.ಪಿ,ಜೆ ಅಬ್ದುಲ್ ಕಲಾಂ ಅವರ ಭಾಷಣವನ್ನು ಕೇಳೋದಂದ್ರೆ ಎಲ್ಲಿಲ್ಲದ ಖುಷಿ. ದೇಶ ಕಾಯೋ ಯೋಧನಿಂದ ಜೀವಕೆ ಆಧಾರವಾಗೋ ರೈತನವರೆಗೆ ಎಲ್ಲರನ್ನೂ ಮಾನ್ಯ ರಾಷ್ಟ್ರಪತಿಗಳು ಸಂಬೋಧಿಸುತ್ತಿದ್ದರೆ ವಾವ್ ! ಎಂತಾ ಭಾಷಣ. ಎಷ್ಟು ಚೆನ್ನಾಗಿ ಹೇಳಿದ್ದಾರೆ ಅಂತ ಖುಷಿ ಪಡುತ್ತಿದ್ದೆವು. ಮಾರನೇ ದಿನ ಶಾಲೆಗೆ ಬೆಳಬೆಳಗ್ಗೆಯೇ ಹೋದರೂ ಅಲ್ಲಿಂದ ಬಂದು ಪ್ರಧಾನಿಗಳು ಏನೆಂದರು ಅಂತ ಆಮೇಲೆ ವಾಹಿನಿಗಳಲ್ಲಿ ಬರುತ್ತಿದ್ದ ವರದಿಗಳನ್ನು ನೋಡುತ್ತಿದ್ದೆವು. ಅದೆಷ್ಟು ಅರ್ಥವಾಯಿತೋ, ಬುದ್ದಿ ಬೆಳೆಯಿತೋ ಅನ್ನುವುದಕ್ಕಿಂತ ದೇಶದ ಮಹೋನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ನಮ್ಮನ್ನುದ್ದೇಶಿಸಿ ಮಾತನಾಡಿದ್ದ ಕೇಳೋದೇ ಏನೋ ಒಂತರ ಖುಷಿ ಕೊಡುತ್ತಿತ್ತು.

ಏಳೂವರೆಗೆ ಧ್ವಜಾರೋಹಣ ನೆರವೇರಿಸಿ ಒಂದೂವರೆ ಘಂಟೆಗಳಷ್ಟು ದೀರ್ಘಕಾಲ ಮಾತನಾಡಿದ ಪ್ರಧಾನಮಂತ್ರಿ ಮೋದೀಜಿಯವರ ಇಂದಿನ ಭಾಷಣದಲ್ಲಿ ಕಂಡ ಕನಸುಗಳೆಷ್ಟೋ. ಒಂದೂವರೆ ವರ್ಷದ ಸಾಧನೆಗೆ ನೆರವಾದ ೧೨೫ ಕೋಟಿ ಜನರನ್ನು "ಟೀಂ ಇಂಡಿಯಾ" ಎಂದೇ ಸಂಬೋಧಿಸಿದಾಗ ಸಿಕ್ಕ ಕರತಾಡನಗಳೆಷ್ಟೋ. ಪ್ರಧಾನಮಂತ್ರಿಗಳ ಭಾಷಣವನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೇ ನೋಡಿದ ಒಬ್ಬ ಜನ ಸಾಮಾನ್ಯನ ಅಭಿಪ್ರಯಗಳನ್ನು ಕ್ರೋಢೀಕರಿಸಲು ಮಾಡಿದ ಪ್ರಯತ್ನವೇ ಈ ಲೇಖನ.

ಧರ್ಮ, ಜಾತಿಗಳೆಂಬ ವಿಷವನ್ನು ಪ್ರಗತಿಯೆಂಬ ಅಮೃತದಿಂದ ತೊಡೆದುಹಾಕೋಣವೆಂಬ ಕರೆಯೊಂದಿಗೆ ಸ್ವಾತಂತ್ರ್ಯದಿನದ ಭಾಷಣವನ್ನು ಪ್ರಾರಂಭಿಸಿದ ಪ್ರಧಾನಿಗಳ ಈ ವರ್ಷದ ಭಾಷಣದ ಮುಖ್ಯಾಂಶಗಳೆಂದರೆ
೧)ಪ್ರಧಾನಮಂತ್ರಿ ಜನ ಧನ ಯೋಜನೆ:
ಪ್ರಜಾಪ್ರಭುತ್ವ ಅಂದ್ರೆ ಭ್ರಷ್ಟರ ಕೂಟ. ಶ್ರೀಮಂತನಾಗಿದ್ದವ ಇನ್ನೂ ಶ್ರೀಮಂತನಾಗುತ್ತಲೇ ಹೋಗುತ್ತಾನೆ ಬಡವನಾದವ ಕಡು ಬಡತನದೆಡೆಗೆ ತಳ್ಳಲ್ಪಡುತ್ತಾನೆ ಎಂಬುದು ಹಲವರ ಅಂಬೋಣ. ಸರಕಾರ ಏನೇ ತಿಪ್ಪರಲಾಗ ಹಾಕಿದರೂ ಅವರು ಮಾಡೋ ಯೋಜನೆಗಳು ದೇಶದ ೧೨೫ ಕೋಟಿ ಜನಸಂಖ್ಯೆಗೆ ಯಾವ ಲೆಕ್ಕಕ್ಕೂ ಸಾಕಾಗದೇ ಹೋಗುತ್ತೆ ಅನ್ನೋದು ಇಲ್ಲಿಯವರೆತೆ ಕಂಡ ದುರಂತ. ಸರ್ಕಾರದ ಯೋಜನೆಗಳ ಫಲ ಜನಸಾಮಾನ್ಯನ ಕೈಗೆ ತಲುಪೋದ್ರೊಳಗೆ ನೂರಾರು ಮಧ್ಯವರ್ತಿಗಳ ಹೊಟ್ಟೆ ತುಂಬೋದೇ ಇದಕ್ಕೆ ಕಾರಣವಾಗಿತ್ತು. ದೇಶದ ಪ್ರತೀ ಪ್ರಜೆಯ ಹೆಸರಲ್ಲೊಂದು ಖಾತೆ ಇದ್ದರೆ ? ಅವರ ಖಾತೆಗೆ ಸರ್ಕಾರದ ಯೋಜನೆಗಳ ಹಣ ನೇರವಾಗಿ ತಲುಪುವಂತಿದ್ರೆ ? ಅದಕ್ಕೆ ಅಂತಲೇ ಪ್ರಧಾನಮಂತ್ರಿಗಳು ಕರೆಕೊಟ್ಟದ್ದು ಪ್ರಧಾನಮಂತ್ರಿ ಜನಧನ ಯೋಜನೆಯ ಸಾಕಾರಕ್ಕೆ. ದೇಶದ ದಟ್ಟದರಿದ್ರನೂ ಖಾತೆ ಹೊಂದಬೇಕೆಂಬ ಆಸೆ ಸರಿ . ಆದ್ರೆ ಈಗಿರುವಂತೆ ಇನ್ನೂರೈವತ್ತೋ ಐನೂರೋ ಠೇವಣಿ ಇಡೋದು ಅವರಿಗೆ ಸಾಧ್ಯವಿಲ್ಲದ ಮಾತು. ಯಾವುದೇ ಠೇವಣಿಯಿಲ್ಲದ ಖಾತೆ ತೆರೆಯೋ ಅವಕಾಶ ಕೊಟ್ಟರೆ ? ಬ್ಯಾಂಕುಗಳಿಗೆ ಕಾಗದ ವೆಚ್ಚವಾದರೆ ಆಗಲಿ ಆದ್ರೆ ಎಲ್ಲರ ಬಳಿಯಲ್ಲೂ ಖಾತೆಯಿರಲೆಂಬ ಕಾಳಜಿಯಿಂದ ಶುರುವಾದ ಯೋಜನೆಯಿಂದ ಈಗಾಗಲೇ ೨೦೦೦೦ ಕೋಟಿ ಸಂಗ್ರಹವಾಗಿದೆಯಂತೆ. ಪ್ರಧಾನಮಂತ್ರಿಗಳ ಮಾತಲ್ಲೇ ಹೇಳೋದಾದ್ರೆ ದೇಶದ ಬಡವರ ಈ ಶ್ರೀಮಂತಿಕೆಗೆ ಶತ ಶತ ಪ್ರಣಾಮಗಳು. ಅಷ್ಟು ಜನ ಖಾತೆ ತೆರೆಯಲು ನೆರವಾದ ಬ್ಯಾಕುಗಳ ಸಿಬ್ಬಂದಿಗಳಿಗೂ ಹೃದಯಪೂರ್ವಕ ನಮನಗಳು.

೨)ಜೀವವುಳಿಸೋ ವಿಮೆ ಮತ್ತು ಮಾನವುಳಿಸೋ ಸ್ವಚ್ಛ ಭಾರತ:
ತಿಂಗಳಿಗೆ ೧ ರೂನಂತೆ ವರ್ಷಕ್ಕೆ ೧೨ ರೂ ಕಟ್ಟೋ ಸುರಕ್ಷಾ ವಿಮೆ ಯೋಜನೆಯಿಂದ ಅಪಘಾತಗಳಲ್ಲಿ ೨ ಲಕ್ಷದವರೆಗೆ ಪರಿಹಾರ ಸಿಕ್ಕರೆ , ದಿನಕ್ಕೆ ತೊಂಭತ್ತು ಪೈಸೆ ಅಥವಾ ವರ್ಷಕ್ಕೆ ೩೩೦ ರೂಗಳ ಪ್ರೀಮಿಯಂ ಕಟ್ಟಬೇಕಾದ ಜೀವನ ಜ್ಯೋತಿ ವಿಮೆ ಯೋಜನೆಗಳ ಪ್ರಯೋಜನ ದೇಶದ ಕಡುಬಡವನಿಗೂ ವಿಮೆಯ ಸುರಕ್ಷೆ ಒದಗಿಸೋ ಮಹತ್ವಾಕಾಂಕ್ಷೆಯದ್ದು. ಗಲ್ಲಿಗಲ್ಲಿಗಳು, ಹಳ್ಳಿಹಳ್ಳಿಗಳು ಸ್ವಚ್ಛವಾದರೆ ದೇಶ ಸ್ವಚ್ಛವಾಗುತ್ತೆಂಬ ಪರಿಕಲ್ಪನೆಗೆ ಸಾಥಿಯಾದ, ಜನ ಜಾಗೃತಿ ಮೂಡಿಸಿದ ಎಲ್ಲಾ ರಾಜಕಾರಣಿಗಳು, ಸೆಲೆಬ್ರಿಟಿಗಳು, ಶ್ರೀಸಾಮಾನ್ಯರಿಗೆ, ಮಾಧ್ಯಮಗಳಿಗೆ  ಪ್ರಧಾನಿಗಳ 
ಮಾತಲ್ಲೇ ಹೇಳುವುದಾದರೆ ಹೃತ್ಪೂರ್ವಕ ಧನ್ಯವಾದಗಳು. ನಂತರ ಮತ್ತೊಮ್ಮೆ ಸ್ವಚ್ಚತೆಯ ಬಗ್ಗೆ ಪ್ರಸ್ತಾಪಿಸೋ ಪ್ರಧಾನಿಗಳ ಕನಸಿನಂತೆ ಪ್ರತೀ ಶಾಲೆಗೂ , ಪ್ರತೀ ಮನೆಗೂ ಶೌಚಾಲಯ ಸಿಕ್ಕರೆ ಮುಂದೆ ಬರುತ್ತಿರುವ ಮಹಾತ್ಮಾ ಗಾಂಧೀಜಿಯವರ ನೂರೈವತ್ತನೇ ಹುಟ್ಟುಹಬ್ಬಕ್ಕೆ ಅದಕ್ಕಿಂದ ಉತ್ತಮ ಕೊಡುಗೆ ಬೇರೊಂದಿರಲಾರದೇನೋ. 

೩)ಕಾರ್ಮಿಕರ ಪೆಹಚಾನ್ ಪತ್ರ: ಒಬ್ಬ ಕಾರ್ಮಿಕ ಒಂದು ಕಂಪೆನಿಯಿಂದ ಇನ್ನೊಂದಕ್ಕೆ, ಒಂದು ಜಾಗದಿಂದ ಮತ್ತೊಂದಕ್ಕೆ ಹೋದಾಗ ಅವನ ಸಂಬಳದಿಂದ ಕಟ್ಟಾಗಿದ್ದ ಪಿ,ಎಫ್ಗಳಲ್ಲಿನ ಎಷ್ಟೋ ಭಾಗ ಅವರಿಗೆ ಸಿಕ್ಕದೇ ಸರ್ಕಾರದ ಖಜಾನೆಗಳಲ್ಲಿ ಕೊಳೆಯುತ್ತಿತ್ತು. ಪ್ರತಿಯೊಬ್ಬನಿಗೂ ಒಂದು ಪೆಹಚಾನ್ ಪತ್ರ ಕೊಟ್ಟರೆ ಅವ ಎಲ್ಲೇ ಹೋದರೂ ಅವನ ಹೆಸರಲ್ಲಿರೋ ಹಣ ಅವನಿಗೇ ದಕ್ಕುವ ಯೋಜನೆಯಿಂದ ಸರ್ಕಾರದ ಖಜಾನೆಗಳಲ್ಲಿ ಹಣ ಕೊಳೆಯೋ ಪ್ರಮೇಯ ಬರೋಲ್ಲ, ಜನಸಾಮಾನ್ಯನ ಬೆವರ ಹಣವೂ ವ್ಯರ್ಥವಾಗೋಲ್ಲ ಎಂಬ ಪರಿಕಲ್ಪನೆ ಸಾಕಾರವಾಗ್ತಿರೋದ ನೋಡೋದೇ ಒಂದು ಖುಷಿ


೪)ಕನ್ಫ್ಯೂಸಿಂಗ್ ಕಾನೂನುಗಳಿಗೆ ಕಂಟಕ:
ವಿಷಯಕ್ಕೊಂದು ಕಾನೂನು. ಅದಕ್ಕೆ ವ್ಯತಿರಿಕ್ತವಾದ ಮತ್ತೊಂದು ಪರಿಚ್ಛೇದ. ಈ ನ್ಯಾಯವ್ಯವಸ್ಥೆಯ ದುರುಪಯೋಗ ಪಡಿಸಿಕೊಳ್ಳುತ್ತಲೇ ನ್ಯಾಯಾ ವ್ಯವಸ್ಥೆಯ ಸಮಯ ಹಾಳು ಮಾಡಲಾಗುತ್ತಿದೆ. ಈ ತರದ ನಲವತ್ತು ಕಾನೂನುಗಳ ಹೊಡೆದು ಹಾಕಿ ೩ ಅಂಶಗಳ ಸರಳ ನಿಯಮವನ್ನು ತಂದ ಉದಾಹರಣೆಯನ್ನು ಕೊಟ್ಟ ಪ್ರಧಾನಿಗಳ ನಡೆಯಂತಹ ಕ್ರಮಗಳು ಇನ್ನಷ್ಟು ನಡೆಯಬೇಕಿದೆ.

೫)ಭ್ರಷ್ಟಾಚಾರ ನಿರ್ಮೂಲನೆ ಮತ್ತು ಪಹಲ್:
ಅನಿಲದ ಸಿಲಿಂಡರ್ಗಳ ಮೇಲಿನ ಸಬ್ಸಿಡಿಯನ್ನು ಜನರ ಖಾತೆಗೇ ತಲುಪಿಸುವ ಯೋಜನೆ ಪಹಲ್. ಇದರಿಂದ ಮಧ್ಯ ಇರುತ್ತಿದ್ದ ಅದೆಷ್ಟೋ ಮಧ್ಯವರ್ತಿಗಳ ಕಾಟ, ಭ್ರಷ್ಟಾಚಾರಕ್ಕೊಂದು ವಿರಾಮವಿಟ್ಟಂತಾಗಿದೆ. ಭ್ರಷ್ಟಾಚಾರ ನಿರ್ವಹಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ಪ್ರಧಾನಿಗಳ ಮಾತಲ್ಲೇ ಹೇಳೋದಾದ್ರೆ ಭ್ರಷ್ಟಾಚಾರವೆನ್ನೋದು ಮನೆಯನ್ನೇ ಆವರಿಸಿಕೊಂಡಿರುವ ಕೀಟಗಳ ಸಮೂಹದಂತೆ. ಅದನ್ನು ಕೊಲ್ಲಲು ಎಲ್ಲೋ ಒಂದೆಡೆ ಔಷಧಿ ಹೊಡೆದರೆ ಸಾಲದು. ಪ್ರತೀ ಇಂಚಿಂಚಿಗೂ ಇಂಜೆಕ್ಷನ್ನಿನಂತೆ ಔಷಧಿ ಕೊಡಬೇಕು. ಕೋಟಿ ಕೋಟಿ ಜನರ ಪ್ರಯತ್ನದಿಂದಲೇ ಈ ೧೨೫ ಕೋಟಿ ಜನರ ಕಾಡುತ್ತಿರುವ ಭ್ರಷ್ಟಾಚಾರ ತೊಲಗೋಕೆ ಸಾಧ್ಯ !  ಸೂಜಿಯನ್ನು ಕಳೆದುಕೊಂಡಲ್ಲೇ ಹುಡುಕು ಎಂಬಂತಹಾ ಸತ್ಯವಾದ ಮಾತಿದು ! ಮತ್ತೊಂದು ಸಂದರ್ಭದಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗಳೇ ಪ್ರಸ್ಥಾಪಿಸುವಂತೆ ಹಿಂದಿನ ವರ್ಷ ಸಿ.ಬಿ.ಐ ಬಳಿ ಇದ್ದ ಪ್ರಕರಣಗಳ ಸಂಖ್ಯೆ ೮೦೦. ಈ ವರ್ಷ ಅದು ೧೬೦೦. ಭ್ರಷ್ಟರು ಯಾರೇ ಇದ್ದರೂ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದೆಂಬ ಅವರ ಮಾತುಗಳು ಜನ ಸಾಮಾನ್ಯನಲ್ಲಿ ನ್ಯಾಯದ ಬಗೆಗೆ ಅಳಿಸುತ್ತಿರುವ ಭರವಸೆಯನ್ನು ಉಳಿಸಬೇಕಿದೆ. ಅವರೇ ಹೇಳುವಂತೆ ಭ್ರಷ್ಟಾಚಾರ ನಿರ್ವಹಣೆಯ ಕ್ರಮಗಳು ಒಂದಿಷ್ಟು ಕಹಿ ಪರಿಣಾಮ ಉಂಟು ಮಾಡಬಹುದು. ಆದ್ರೆ ಖಾಯಿಲೆಯನ್ನೋದು ಭಯಂಕಾರವಾಗಿದ್ದಾಗ ಅದರ ಇಂಜೆಕ್ಷನ್ನಿನಲ್ಲಿ ಅಡ್ಡಪರಿಣಾಮಗಳಿದ್ದರೂ ಅದನ್ನು ಮರೆತು ಅದರಿಂದಾಗೋ ಲಾಭಗಳ ಬಗ್ಗೆಯೇ ಯೋಚಿಸಬೇಕಾಗುತ್ತೆ. ದೇಶದಲ್ಲಿ ಅದೆಷ್ಟೋ ಸ್ಥಿತಿವಂತರಿದ್ದಾರೆ. ಎಲ್ಲೋ ಹೊರಗಡೆ ಹೋದಾಗ ತಿಂಡಿಗೆಂದೇ ಐನೂರೂ ಏಳ್ನೂರೂ ಖರ್ಚು ಮಾಡೋ ಇವರಿಗೆ ಅಷ್ಟೇ ಮೊತ್ತದ ಅನಿಲದ ಸಬ್ಸಿಡಿ ಕೈ ಬಿಡಲು ಸಾಧ್ಯವಿಲ್ಲವೇ ಎಂಬ ಪ್ರಧಾನಿಗಳ ಪ್ರಶೆಯಲ್ಲಿ ಸತ್ಯವಿಲ್ಲದಿಲ್ಲ. ರಾಜಕಾರಣಿಗಳು ಅಧಿವೇಶನ ನಡೆಯದಿದ್ದರೂ ಪಡೆಯೋ ತಮ್ಮ ಸಂಬಳ, ಭತ್ಯೆಗಳನ್ನು ಬಿಡುತ್ತಾರೆಯೇ ಎಂಬ ವಿರೋಧಿಗಳ ಕುಹಕದ ಬಗ್ಗೆ ಆಮೇಲೆ ಮಾತಾಡೋಕೆ ಎಂದೂ ಸಮಯವಿದ್ದೇ ಇರುವುದರಿಂದ ಸದ್ಯಕ್ಕೆ ಈ ರಾಜಕೀಯವಾದಗಳನ್ನು, ಪೂರ್ವಾಗ್ರಹಗಳನ್ನು ಬದಿಗಿಟ್ಟು ನೋಡಿದರೆ ಇಲ್ಲಿಯವರೆಗೆ ಈ ತರಹ ಸಬ್ಸಿಡಿಯನ್ನು ಮರಳಿಸಿದ ೨೦ ಲಕ್ಷ ಜನರ ಬಗ್ಗೆ ಹೆಮ್ಮೆಯಾಗದೇ ಇರದು. ಈ ತರಹ ಸಬ್ಸಿಡಿಯನ್ನು ಮರಳಿಸಿದರೆ ಏನಾಗುತ್ತೆ ಅನ್ನೋದು ಮುಂದಿನ ಪ್ರಶ್ನೆ. ಆ ದುಡ್ಡಲ್ಲಿ ಹಳ್ಳಿಗಳ ಮೂಲೆಗಳಲ್ಲಿ ಹೊಗೆಯ ಗೂಡುಗಳಲ್ಲಿ, ಕಮರುತ್ತಿರುವ ಕನಸುಗಳ ಮಧ್ಯೆ ಅಡುಗೆ ಮಾಡುತ್ತಿರೋ ಬಡವರಿಗೆ ಗ್ಯಾಸ್ ಸಿಲಿಂಡರುಗಳನ್ನ  ತಲುಪಿಸಬೇಕೆಂಬುದು ಸದ್ಯದ ಕನಸು. ಅದು ಎಷ್ಟರಮಟ್ಟಿಗೆ ನನಸಾಗುತ್ತೆಂಬೋ ಪ್ರಶ್ನೆ ಕಾಡುತ್ತಿದ್ದರೂ ಪರಿಕಲ್ಪನೆಯೆಂತೂ ಚಂದದ್ದೇ.

೬)ಕಲ್ಲಿದ್ದಲಿನಿಂದ ಹೋದ ಮಾನ ಎಫ್.ಎಂ ಹರಾಜಿಂದ ಮರಳೀತೆ ? 
ಕಲ್ಲಿದ್ದಲು, ೨ಜಿ ಗಳ ಹರಾಜಿನಲ್ಲಿ ಕೋಟ್ಯಾಂತರ ರೂಗಳ ಅವ್ಯವಹಾರ ನಡೆದ ಕಹಿ ನೆನಪು ಇನ್ನೂ ಮಾಸದ ಹೊತ್ತಲ್ಲೇ ಈ ತರಹದ ಪ್ರಸಂಗಗಳು ಮರಳಿಸದೇ ಇರುವಂತೆ ನೋಡಿಕೊಳ್ಳಬೇಕಾದ, ಪಾರದರ್ಶಕತೆಯನ್ನು ತರಬೇಕಾದ ಅನಿವಾರ್ಯತೆಯನ್ನು ನೆನಪಿಸುತ್ತಲೇ ಸದ್ಯ ನಡೆಯುತ್ತಿರುವ ಎಫ್.ಎಂ ತರಗಾಂತರಗಳ ಹರಾಜಿನಲ್ಲಿ ಹರಿದುಬರುತ್ತಿರುವ ಕೋಟ್ಯಾಂತರ ರೂಗಳನ್ನು ಸ್ಮರಿಸಿದರು.

೭)ಕಾರ್ಖಾನೆಗಳಿಗೆ ಅವುಗಳ ಹತ್ತಿರವಿರುವ ಸೌಕರ್ಯಗಳ ಸಂಪರ್ಕ:
ಕಡಲತಡಿಯಲ್ಲಿರುವ ಕಾರ್ಖಾನೆಗಳಿಗೆ ದೇಶದ ಮತ್ತೆಲ್ಲಿಂದಲೋ ಇಂಧನ. ಇನ್ನೆಲ್ಲೋ ಇರುವ ಕಾರ್ಖಾನೆಗೆ ಕಡಲತಡಿಯಿಂದ ಇಂಧನ. ಪಕ್ಕದಲ್ಲೇ ಇದ್ದರೂ ಬಳಸಿಕೊಳ್ಳಲಾಗದ ಅನಿವಾರ್ಯತೆ ಸೃಷ್ಠಿಸಿದ ಮಧ್ಯವರ್ತಿಗಳಿಂದ ಸರ್ಕಾರಕ್ಕೆ ವರ್ಷಕ್ಕೆ ಆಗುತ್ತಿದ್ದ ನಷ್ಟ ೧೧೦೦೦ ಕೋಟಿ. ಕೇಳಿದ ಯಾರಿಗಾದರೂ ಸಿಟ್ಟೆಬ್ಬಿಸೋ ಈ ಕ್ರಮವನ್ನು ಕಿತ್ತುಹಾಕಲು, ಸ್ಥಳೀಯ ಇಂಧನಗಳ ಬಳಸಿಕೊಳ್ಳಲು ಅವಕಾಶ ಕೊಡಲು ಮುಂದಾಗಿರೋ ಸರಕಾರದ ಕ್ರಮ ಅಭಿನಂದನಾರ್ಹವೇ.

೮)ರೈತರ ಬಳಿಗೆ ರಸಗೊಬ್ಬರ:
ರೈತರಿಗೆ ಬೇಕಾದ ಯೂರಿಯಾವನ್ನು ಅವರಿಗೆ ತಲುಪಿಸೋಕೆ ಅದೆಷ್ಟೋ ಮಧ್ಯವರ್ತಿಗಳು. ಸುಲಿಗೆ ಮಾಡೋ ಕಾರ್ಖಾನೆಗಳು. ಇದನ್ನು ತಡೆಯೋಕೆ ಮುಂದಾಗಿರೋ ಸರ್ಕಾರದ ಕ್ರಮ, ಕೃಷಿ ಕಲ್ಯಾಣ ಇಲಾಖೆಯೆಂದು ಬದಲಾಗುತ್ತಿರುವ ಕೃಷಿ ಇಲಾಖೆಯಂತಹ ಕ್ರಮಗಳು ರೈತನ ಮೊಗದಲ್ಲಿ ಮಂದಹಾಸ ಮೂಡಿಸಲಿದೆಯೇ ಎಂಬುದು ಕಾದು ನೋಡಬೇಕಾದ ವಿಚಾರವೇ ಆದರೂ ಒಂದಿಷ್ಟು ನಿರೀಕ್ಷೆಗಳ ಹುಟ್ಟಿಸಿದ್ದೆಂತೂ ಹೌದು.

೯)ಹಳ್ಳಿಹಳ್ಳಿಗೂ ಹರಿಯಲಿದೆ ಕರೆಂಟ್:
ದೇಶದಲ್ಲಿ ವಿದ್ಯುತ್ ಸಂಪರ್ಕವಿಲ್ಲದ ಹಳ್ಳಿಗಳ ಸಂಖ್ಯೆ ಅಂದಾಜು ೧೮,೫೦೦. ಅವಕ್ಕೆಲ್ಲಾ ಮುಂದಿನ ಸಾವಿರ ದಿನಗಳ ಒಳಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆನ್ನೋ ಕನಸಿಗೆ ರಾಜ್ಯ ಸರ್ಕಾರಗಳ ಸಹಕಾರ ಕೋರಿರುವ ಪ್ರಧಾನಿಗಳ ಮಾತು ಕಾರ್ಯರೂಪಕ್ಕೆ ಬರುವ ನಿರೀಕ್ಷೆಗಳು ಗರಿಗೆದರತೊಡಗಿದೆ.

೧೦)ಆದಿವಾಸಿಗಳಿಗೆ ಆರು ಸಾವಿರ ಕೋಟಿಯ ಸಹಾಯ:
ದೇಶದ ಬಾಕ್ಸೈಟು, ಕಲ್ಲಿದ್ದಲು ಮುಂತಾದ ಅದಿರುಗಳು ಬರುತ್ತಿರೋದು ಎಲ್ಲಿಂದ ? ನೈರುತ್ಯ ರಾಜ್ಯಗಳಿಂದ. ಆದಿವಾಸಿಗಳ ನಾಡಿಂದ. ಆದರೆ ಅವರಿಗೆ ಸಿಗುತ್ತಿರುವ ಪ್ರಯೋಜನಗಳು ? ಸದ್ಯಕ್ಕೆಂತೂ ನಿರಾಸೆ ಮೂಡಿಸೋ ಈ ಪರಿಸ್ಥಿತಿಯ ಸುಧಾರಣೆಗೆಂತಲೇ ೬೦೦೦ ಕೋಟಿ ರೂಗಳ ಕೊಡುಗೆ ನೀಡುವ ಭರವಸೆ ಈ ಸ್ವಾತಂತ್ರ್ಯ ದಿನದಂದು.

೧೧)ಸ್ಟಾರ್ಟಪ್ ಇಂಡಿಯಾ, ಸ್ಟಾಂಡಪ್ ಇಂಡಿಯಾ :
ದೇಶದಲ್ಲಿ ಒಂದೂಕಾಲು ಲಕ್ಷ ಬ್ಯಾಂಕುಗಳಿವೆ. ಆ ಬ್ಯಾಂಕುಗಳಲ್ಲಿ ಕನಿಷ್ಟ ಒಬ್ಬೊಬ್ಬ ದಲಿತನಿಗೋ, ಆದಿವಾಸಿಗೋ ತನ್ನದೇ ಒಂದು ಸ್ವಂತ ಉದ್ಯಮ ಸ್ಥಾಪಿಸೋಕೆ ಸಾಲ ಕೊಟ್ಟರೆ ? ಅವರಿಂದ ಮೂರ್ನಾಲ್ಕು ಜನಕ್ಕೆ, ಅವರಿಂದ ಇನ್ನಷ್ಟು ಜನಕ್ಕೆ ಅಂತ ಕೆಲಸ ಸಿಕ್ಕಿ ನಿರುದ್ಯೋಗದ ಸಮಸ್ಯೆಗಳು.. ದೂರದ ದಿನವೆನಿಸಿದರೂ ಕಲ್ಪನೆಯೆಂತೂ ಕ್ರಾಂತಿಕಾರಕವೇ !. ಅದೇ ತರ ಪ್ರತೀ ಬ್ಯಾಂಕುಗಳಿಂದ ಕನಿಷ್ಟ ಒಬ್ಬ ಮಹಿಳೆಗೆ ಇದೇ ತರಹದ ಸ್ವಂತ ಉದ್ಯಮಕ್ಕೆ ಸಾಲ ಕೊಡಿಸೋ ಪರಿಕಲ್ಪನೆ !

೧೨)ಇಂಟರ್ ವ್ಯೂಗಳ ಎತ್ತಾಕಿ !:
ಒಂದು ಕೆಲಸದ ಇಂಟರ್ವ್ಯುಗೆ ಅಂತ ಮಿಜೋರಂನಿಂದ ಮುಂಬಯಿಗೆ ದಿನಗಟ್ಟಲೇ ಪಯಣಿಸುವ, ಯಾರ್ಯಾರದೋ ಶಿಪಾರಸ್ಸಿಗೆ ಅಲೆಯೋ ಪರಿಸ್ಥಿತಿ ಬಂದೊದಗಿದೆ ಪ್ರತಿಭಾವಂತ ಯುವಕರದ್ದು. ಪ್ರತಿಭೆಯ ಮೇಲೆಯೇ ಕೆಲಸ ಕೊಡುವ, ಅಂತರ್ಜಾಲದ ಮೂಲಕ ಪರೀಕ್ಷೆಗಳನ್ನು ನಡೆಸೋ ಮೂಲಕ ಈ ಅಲೆದಾಟಕ್ಕೊಂದು, ಶಿಫಾರಸ್ಸುಗಳ, ಪಕ್ಷಪಾತಗಳಿಗೊಂದು ಕೊನೆಕಾಣಿಸೋ ಕನಸು ನನಸಾದರೆ ಅದಕ್ಕಿಂತ ಖುಷಿಯ ದಿನ ಇರಲಿಕ್ಕಿಲ್ಲ

೧೩)ಸಮಾನ ಶ್ರೇಣಿ, ಸಮಾನ ವೇತನ ಬೇಡಿಕೆಗೆ ತಾತ್ವಿಕ ಒಪ್ಪಿಗೆ:
ದೇಶದ ಗಡಿಕಾದ ನಿವೃತ್ತ ಯೋಧರ ಬಹುದಿನಗಳ ಬೇಡಿಕೆಯಾಗಿದ್ದ ಸಮಾನ ಶ್ರೇಣಿ, ಸಮಾನ ವೇತನಕ್ಕೆ ಕೊನೆಗೂ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಇಷ್ಟು ದಿನಗಳ ತನಕ ಈ ಬಗ್ಗೆ ಮೌನ ವಹಿಸಿದ್ದ ಸರ್ಕಾರ ಈ ಬಗೆಗಿನ ಮಾತುಕತೆಗಳು ಮುಂದಿನ ಹಂತಕ್ಕೆ ತೆರಳಿರುವುದರ ಬಗ್ಗೆ ತಿಳಿಸುತ್ತಿದ್ದರೆ ಅಲ್ಲೇ ಕೂತಿದ್ದ ಯೋಧರ ಮುಖದಲ್ಲೊಮ್ಮೆ ಹಾದುಹೋದ ಮಂದಹಾಸ.

೧೪)೭೫ನೇ ಸ್ವಾತಂತ್ರ್ಯೋತ್ಸವಕ್ಕೊಂದು ಪ್ರತಿಜ್ಞೆ:
ಪ್ರತೀ ಹಳ್ಳಿಯೂ ೭೫ನೇ ಸ್ವಾತಂತ್ರ್ಯೋತ್ಸವದೊಳಗಾಗಿ ತನ್ನ ಅಭಿವೃದ್ಧಿಗಾಗಿ, ತನ್ಮೂಲಕ ದೇಶದ ಅಭಿವೃದ್ಧಿಗಾಗಿ ಏನಾದ್ರೂ ಕಾಣಿಕೆ ನೀಡೋ ಬಗ್ಗೆ, ಪ್ರತೀ ನಾಗರೀಕನೂ ದೇಶಕ್ಕಾಗಿ ಏನಾದ್ರೂ ಕ್ರಮ ಕೈಗೊಳ್ಳೋ ಬಗ್ಗೆ ಸಂಕಲ್ಪ ಕೈಗೊಳ್ಳಲು ಪ್ರಧಾನಿ ಕರೆ ಕೊಟ್ಟರು. ಮಾಡುತ್ತೇವೆ, ನೋಡೋಣ, ಆಗುತ್ತೆ ಎಂಬ ಭರವಸೆಗಳನ್ನು ಕೊಡುತ್ತಲೇ ಕಾಲ ತಳ್ಳೋದಲ್ಲ. ಮಾಡಬೇಕಾದ ಕಾಲವಿದು ಎಂಬ ಮಾತುಗಳಲ್ಲಿ, ಕಲ್ಲಿದ್ದಲು ಎಂದರೇ ವಿರೋಧಿಗಳು ರಾಜಕೀಯದ ಮಾತಾಡುತ್ತಾರೆ ಎಂದರೂ ಆ ಮಾತುಗಳಲ್ಲಿ, ತಾವೇ ಕಾಯಿಲೆಯಿಂದಿದ್ದರೂ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಕಾಯಿಲೆಯ ಔಷಧದ ಬಗ್ಗೆ ಮಾತಾಡುತ್ತಾರೆ ಎಂಬ ಮಾತುಗಳಲ್ಲೂ ವಿರೋಧಿಗಳಿಗೆ ರಾಜಕೀಯದ ವಾಸನೆ ಕಂಡರೆ ಅಚ್ಚರಿಯಿಲ್ಲ. ವಿರೋಧಿಗಳಿರೋದೇ ವಿರೋಧಿಸಲಿಕ್ಕೆ ಎಂಬುದು ಧ್ವಂಸವಾದ ಹದಿನೇಳು ದಿನದ ಸಂಸತ್ ಕಲಾಪದಲ್ಲಿ, ಅದಕ್ಕಾಗಿ ನಷ್ಟವಾದ ೧೪೪ ಕೋಟಿ ರೂಗಳಲ್ಲಿ, ಅದರ ಬಗ್ಗೆ ತೀರ್ವ ಬೇಸರ ವ್ಯಕ್ತ ಪಡಿಸಿದ ಮಾನ್ಯ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿಯವರ ಮಾತಿನಿಂದಲೂ ಕಂಡುಬರುತ್ತೆ. ಮಾನ್ಯ ವಾಜಪೇಯಿಯವರಿಂದ ಮನಮೋಹನರವರೆಗೆ, ಅವರಿಂದ ಮೋದಿಯವರವರೆಗೆ ಭಾರತ ಸಾಗಿಬಂದ ಅಭಿವೃದ್ಧಿಯ ಹಾದಿಯನ್ನು, ಪ್ರಧಾನಮಂತ್ರಿಗಳ ಭಾಷಣವನ್ನು ಪಕ್ಷಗಳ ಕೊಳಕು ರಾಜಕೀಯಕ್ಕಿಂತಲೂ ಎಷ್ಟೋ ಮೇಲಿಟ್ಟು , ಪೂರ್ವಾಗ್ರಹವಿಲ್ಲದೇ ನೋಡುವ ಮನಸ್ಥಿತಿಯನ್ನು ಬೆಳೆಸಿಕೊಂಡರೆ ಮಾತ್ರ ಕೆಂಪುಕೋಟೆಯ ಮೇಲೆ, ತಿರಂಗಾದ ಕೆಳಗೆ ಕಂಡ ಕನಸುಗಳು ನಮ್ಮ ಮನದಲ್ಲೂ ಮೂಡೀತು. ಮೊದಲ ಬಾರಿಗೆ ಮೈನಸ್ಸಿನಲ್ಲಿ ಸಾಗುತ್ತಿರುವ ಬೆಯೆಯೇರಿಕೆಯ ಬಗ್ಗೆ, ಸೃಷ್ಟಿಯಾಗುತ್ತಿರುವ ಉದ್ಯೋಗಗಳ ಬಗ್ಗೆ,ಒಟ್ಟಿನಲ್ಲಿ ನಮ್ಮ ದೇಶದ ಬಗ್ಗೆಯೇ ಹೆಮ್ಮೆಯೂ,  ಇಲ್ಲಿಗೇನಾದರೂ ಮಾಡಬೇಕೆನ್ನುವ ತುಡಿತವೂ ಹುಟ್ಟೀತು.
ಸಮಸ್ತ ಓದುಗ ಮಿತ್ರರಿಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರುತ್ತಾ

ನಿಮ್ಮೊಲವಿನ ಪ್ರಶಸ್ತಿ
೧೫-೮-೨೦೧೫

No comments:

Post a Comment