Sunday, February 7, 2016

ಹಂಪಿ ಪ್ರವಾಸ ಕಥಾನಕ-೪ ಅಚ್ಯುತನ ಅರಸುತ್ತಾ

ಅಚ್ಯುತರಾಯ ದೇವಾಲಯ, ವಿಠಲ ದೇವಾಲಯ, ಮಾತಂಗಪರ್ವತಕ್ಕೆ ದಾರಿ ತೋರೋ ಮಾರ್ಗದರ್ಶಿ ಫಲಕ ಏಕಶಿಲಾ ನಂದಿಯ ಬುಡದಲ್ಲಿ ಕಾಣುತ್ತಿತ್ತು. ರಾಮಾಯಣದಲ್ಲಿ ಬರೋ ಮಾತಂಗಪರ್ವತ(ಹಂಪಿ ಕಥಾನಕದ ಮೊದಲಭಾಗದಲ್ಲಿ ಹೇಳಿದಂತೆ)ಇದೇ ಎಂದು ಓದಿದ್ದ ನಾವು ಅದಕ್ಕೆ ಭೇಟಿ ನೀಡಬೇಕೆಂಬ ಆಸೆಯಿಂದ ಅತ್ತ ಹೆಜ್ಜೆ ಹಾಕಿದೆವು.ಮೂರು ದಿನವಾದ್ರೂ ಇಲ್ಲಿರೋ ಜಾಗಗಳನ್ನೆಲ್ಲಾ ಸುತ್ತೇ ಹೋಗಬೇಕೆಂದು ಬಂದಿದ್ದ ನಮಗೆದುರಾಗಿದ್ದೊಂದು ಪ್ರವೇಶದ್ವಾರ.ಕ್ರೇನುಗಳಿಲ್ಲದ ಕಾಲದಲ್ಲಿ ಆ ಪಾಟಿ ಭಾರದ ಕಲ್ಲುಗಳನ್ನು ಅಷ್ಟು ಮೇಲಕ್ಕೆ ಸಾಗಿಸಿ ಎರಡಂಸ್ತಿನ ಪ್ರವೇಶದ್ವಾರಗಳನ್ನು, ಹಜಾರಗಳನ್ನು ಕರಾರುವಕ್ಕಾಗಿ ಕಟ್ಟಿದ್ದಾದರೂ ಹೇಗೆಂದು ಕುತೂಹಲ ಮೂಡಿಸೋ ಇಂಥಾ ದ್ವಾರಗಳು, ಕಮಾನುಗಳು ಸುತ್ತಾಟದುದ್ದಕ್ಕೂ ಸಿಗುತ್ತಲೇ ಹೋದವು ಎಂಬುದು ಆಮೇಲಿನ ಮಾತು ಬಿಡಿ. ತನ್ನ ತಾರಸಿಯ ಮೇಲೆಲ್ಲಾ ಹುಲ್ಲು ಬೆಳೆದುಕೊಂಡರೂ , ಶತಮಾನಗಳ ಗಾಳಿ ಮಳೆಗಳೆದುರು ಯಾವ ರಕ್ಷಣೆಯಿರದಿದ್ದರೂ ಅಚಲವಾಗಿ ನಿಂತಿದ್ದ ಆ ದ್ವಾರ ನಮ್ಮ ಅದೆಷ್ಟೋ ಸಾವಿರ ಜನಕ್ಕೆ ಕೋರಿದಂತೆ ನಮಗೂ ತನ್ನ ನಗುವಿನ ಸ್ವಾಗತ ಕೋರುತ್ತಿತ್ತಾ ಎಂದೆನಿಸಿದ್ದು ಸುಳ್ಳಲ್ಲ.
Anjaneya on the way to Matanga hill


ಆಂಜನೇಯ ಮತ್ತು ಅನಂತಶನನನ ಮಡಿಲಲ್ಲಿ:
ಮೊದಲು ಅಗಲವಾಗಿದ್ದ ಮೆಟ್ಟಿಲುಗಳ ಹಾದಿ ಕಿರಿದಾಗುತ್ತಾ ಸಾಗಿದಂತೆ ನಾವು ಬಂದ ಹಾದಿ ಸರಿಯಾದ್ದಾ ಅನ್ನೋ ಅನುಮಾನ ಕಾಡೋಕೆ ಶುರುವಾಯ್ತು. ಹತ್ತಿದಂತೆಲ್ಲಾ ಮೆಟ್ಟಿಲುಗಳು, ಕಂಡಲ್ಲೆಲ್ಲಾ ಕಲ್ಲು. ನಡೆದಲ್ಲೆಲ್ಲಾ ಸಿಗುತ್ತಿದ್ದ ಸವೆದ ಹಾದಿ ! ಸವೆದಿದ್ದರಲ್ಲೇ ಹೆಚ್ಚು ಸವೆದ ಹಾದಿಯನ್ನು ಹುಡುಕಿ ನಡೆದಾಗ ಮೊದಲು ಸಿಕ್ಕಿದ್ದೊಂದು ಆಂಜನೇಯನ ಗುಡಿ. ಪಕ್ಕದಲ್ಲೇ ಬಂಡೆಯ ಮೇಲೊಂದು ಅನಂತಶಯನನ ಕೆತ್ತನೆ. ಗುಡಿಯೆಂದರೆ ಎಲ್ಲಿಂದಲೋ ತಂದ ಮೂರ್ತಿಯನ್ನು ಸ್ಥಾಪಿಸಿದ ಸ್ಥಾನವಲ್ಲ. ಅಲ್ಲೇ ಹಿಂದಿದ್ದ ಬಂಡೆಯಲ್ಲಿ ಕೆತ್ತಿದ ಆಂಜನೇಯನ ಆಕಾರಕ್ಕೆ ಕೆಂಪು, ಪಿಂಕು ಕಪ್ಪು ಬಣ್ಣಗಳ ಲೇಪವದು.ಮಲ್ಲಿಗೆ,ನಿತ್ಯಪುಷ್ಪ, ದಾಸವಾಳಗಳ ಅಲಂಕಾರದಲ್ಲಿ ಬೆಳಗುತ್ತಿದ್ದ ಆಂಜನೇಯನನ್ನು ನೋಡಿ ಮುಂದಡಿಯಿಟ್ಟ ನಮಗೆ ಆ ಮಾರ್ಗಸೂಚಿಯಲ್ಲಿ ಆಂಜನೇಯನನ ಬಗ್ಗೆ ಬರೆದಿರಲಿಲ್ಲವಲ್ಲಾ.   ದಾರಿ ತಪ್ಪಿ ಬಂದ ದಿಕ್ಕಾ ಇದು ಅನಿಸ್ತೊಮ್ಮೆ. ಬಂಡೆಯಲ್ಲಿ ಕೊರೆದದ್ದು ಅನಂತಶಯನನೇ ಹೊರತು ವಿಠಲನಲ್ಲ. ಹಾಗಾಗಿ ಖಚಿತವಾಗಿ ವಿಠಲನ ದೇಗುಲದ ದಾರಿಯಲ್ಲವಾ ಇದು ಅನಿಸಿತು. ಅಷ್ಟರಲ್ಲಿ ಎಲ್ಲೋ ಘಂಟೆಯ ಸದ್ದು ಕೇಳಿದಂತೆ ! ಅಂದ್ರೆ ಹತ್ತಿರದಲ್ಲೇ ಯಾವುದೋ ದೇವಸ್ಥಾನ ಇದೆ ಅಂತಾಯ್ತು ! ಮಾತಂಗಪರ್ವತ ಅಂತ ಇತ್ತಲೇ ದಾರಿ ತೋರಿರೋದ್ರಿಂದ ಇದು ಖಚಿತವಾಗಿ ಮಾತಂಗಪರ್ವತವೇ.ಅದರಲ್ಲಿದ್ದ ದೇಗುಲಗಳು ಮುಂದೆ ಸಿಗಬಹುದೆಂಬ ಭರವಸೆಯಲ್ಲಿ ಮುಂದೆ ಕಾಣುತ್ತಿದ್ದ ಹಾದಿಯಲ್ಲಿ ಬೆಟ್ಟವನ್ನಿಳಿಯತೊಡಗಿದೆವು.
ಅಚ್ಯುತರಾಯ ದೇಗುಲ:
View of Achutaraya temple complex from a distance

ತುಸು ಹಾದಿ ಸವೆಸುವಷ್ಟರಲ್ಲಿ ಅನತಿ ದೂರದಲ್ಲೊಂದು ದೇಗುಲ ಸಮುಚ್ಛಯವಿದ್ದಂತೆ ತೋರಿತು. ಎರಡಂತಸ್ತಿನ ಎರಡು ಪ್ರವೇಶದ್ವಾರಗಳ ಹೊಂದಿದ್ದ ದೇಗುಲ ಪ್ರಾಂಗಣ ಕಾಣಿಸುತ್ತಿದ್ದಂತೆ ನಾವು ನಡೆದ ಹಾದಿ ತಪ್ಪಲ್ಲ, ಸರಿಯಾದ ಹಾದಿಯಲ್ಲೇ ಬರುತ್ತಿದ್ದೇವೆಂಬ ಭರವಸೆ ಮೂಡಿತು. ಅದೇ ಹಾದಿಯಲ್ಲಿ ಚುರುಕಾಗಿ ಕೆಳಗಿಳಿದ ನಮಗೆ ಇಬ್ಬರು ಮಹಿಳೆಯರು ದೇಗುಲ ಪ್ರದಕ್ಷಿಣೆ ಮಾಡಿ ಹೊರಹೋಗುತ್ತಿದ್ದಂತೆ ಕಾಣಿಸ್ತು.  ದೇವಸ್ಥಾನದ ಸುತ್ತ ಕಬ್ಬಿಣದ ಬೇಲಿ. ಈ ದಾರಿಯಲ್ಲಿ ಬಂದವರು ಸುತ್ತಿ ಬಳಸಿ ಮತ್ತೊಂದು ಪ್ರವೇಶದ್ವಾರದಿಂದ ಬರೋದನ್ನ ತಪ್ಪಿಸಲು ಅನುಕೂಲ ಮಾಡಿಕೊಡುವಂತಹ ಶಾರ್ಟಕಟ್ ಒಂದು ಕಾಣಿಸಿ ಅದರಲ್ಲೇ ಕೆಳಗಿಳಿದ ನಾವು ದೇಗುಲದತ್ತ ಧಾವಿಸಿದೆವು. ದೂರದಿಂದ ಕಂಡಂತೆ ಆ ದೇಗುಲಕ್ಕೆ ಇದ್ದಿದ್ದು ಎರಡೇ ಪ್ರವೇಶದ್ವಾರಗಳಲ್ಲ ! ಅವಕ್ಕಿದ್ದಿದ್ದು ಎರಡು ಅಂತಸ್ತೂ ಅಲ್ಲ ! ಉತ್ತರ,ಪೂರ್ವ,ಪಶ್ಚಿಮಗಳಿಂದ ಅದಕ್ಕೆ ಪ್ರವೇಶಿಸೋ ಸಾಧ್ಯತೆಗಳಿತ್ತು. ದೇಗುಲದ ಎಡಭಾಗದಲ್ಲಿದ್ದ(ಪಶ್ಚಿಮ ದ್ವಾರ) ಪ್ರವೇಶದ್ವಾರವೇ ಮೂರಂತಿಸ್ತಿನದು ! ಪೂರ್ಣ ಕಲ್ಲಿನಿಂದ ಮಾಡಿದ ಮೊದಲಂತಸ್ತು ಇನ್ನೂ ಭದ್ರವಾಗಿದೆಯಾದರೂ ಗಾರೆಯಿಂದ ಮಾಡಿದ ಎರಡನೇ ಮತ್ತು ಮೂರನೇ ಅಂತಸ್ತುಗಳು ಕಾಲನ ಧಾಳಿಗೆ ಕರಗಿಹೋಗುತ್ತಾ ರಕ್ಷಣೆಗೆ ಮೊರೆಯಿಡುತ್ತಿರುವಂತೆ ಭಾಸವಾಗುತ್ತದೆ. ಅದನ್ನು ಬಳಸಿ ಒಳಸಾಗಿದ ನಾವು ಅಚ್ಯುತನ ದೇಗುಲ ಇದೆನಾ ಅಂತ ಕೇಳಬೇಕು ಅಂದುಕೊಂಡಿದ್ದರೂ ದೂರದಿಂದ ಕಂಡ ಮಹಿಳೆಯರು ಅಲ್ಲಿ ಸಿಕ್ಕಲೇ ಇಲ್ಲ. ತಮ್ಮ ಬುತ್ತಿಗಂಟುಗಳನ್ನ ಅಲ್ಲೇ ಇಟ್ಟಿದ್ದ ಆ ಕೆಲಸದವರು ಎಲ್ಲೋ ಮಾಯವಾಗಿದ್ದರು ! ಆದರೆ ನಂತರ ಹೊರಗೆ ಸಿಕ್ಕ ಮಾಹಿತಿಫಲಕ ಇದೇ ಅಚ್ಯುತರಾಯ ದೇಗುಲವೆಂಬುದನ್ನ ಪುಷ್ಠೀಕರಿಸಿತು ಬಿಡಿ.

ಇತಿಹಾಸ:
ಮಾತಂಗ ಪರ್ವತದ ಪಶ್ಚಿಮ ತಪ್ಪಲಿನಲ್ಲಿರೋ ಈ ದೇಗುಲಕ್ಕೆ ಶಾಸನಗಳಲ್ಲಿ ತಿರುವೆಂಗಳನಾಥ ಎಂಬ ಉಲ್ಲೇಖವಿದೆಯಂತೆ. ಉತ್ತರಾಭಿವುಖವಾಗಿರೋ ಈ ದೇಗುಲವನ್ನು ವಿಜಯನಗರದ ಅರಸು ಅಚ್ಯುತರಾಯನ ಕಾಲದಲ್ಲಿದ್ದ ಮಹಾಮಂಡಳೇಶ್ವರ ಹಿರಿಯ ತಿರುಮಲರಾಜ ೧೫೩೪ರಲ್ಲಿ ಕಟ್ಟಿಸಿದನಂತೆ.ವಿಜಯನಗರದ ಅರಸರಲ್ಲಿ ಹೆಸರುಗಳ ಪುನರಾವರ್ತನೆ ತುಂಬಾ ಇದೆಯಾದ್ದರಿಂದ ಅವರ ವಂಶಾವಳಿಯ ಫಲಕ ಮತ್ತು ಇಲ್ಲಿ ಪ್ರಸ್ಥಾಪಿಸಲಾಗಿರೋ ಅಚ್ಯುತರಾಯನ ಆಳ್ವಿಕೆಯ ಅವಧಿ ಕ್ರಿ.ಶ ೧೫೨೯ ರಿಂದ ೧೫೪೨ ಎಂಬುದು ದೇಗುಲದ ಕಾಲನಿರ್ಣಯಕ್ಕೆ ಇನ್ನಷ್ಟು ಸಹಕರಿಸಬಹುದು.
ಈ ಸಂಕೀರ್ಣಕ್ಕೆ ಎರಡು ಪ್ರಾಕಾರಗಳಿದ್ದು ಒಳ ಪ್ರಾಂಗಣದ ಮಧ್ಯದಲ್ಲಿ ಅಚ್ಯುತರಾಯ ದೇಗುಲವಿದೆ. 

ವಾಸ್ತವ:
ಅಲ್ಲಿನ ಪರಿಸರವನ್ನು ಗಮನಿಸುತ್ತಿದ್ದ ನಮಗೆ ಅಚ್ಚರಿಮೂಡಿಸಿದ್ದು ದೇಗುಲದ ಮುಖ್ಯ ಪ್ರವೇಶದ್ವಾರ. ವಿಠಲನ ದೇಗುಲದ ಕಡೆಯಿಂದ(ಉತ್ತರದಿಂದ) ಅಚ್ಯುತರಾಯ ದೇಗುಲಕ್ಕೆ ಬರೋ ಪ್ರಮುಖ ಪ್ರವೇಶದ್ವಾರಗಳಿವೆ. ಅದರಲ್ಲಿ ದೇಗುಲ ಪರಿಸರದ ಒಳಾಂಗಣದಲ್ಲಿರೋ ಐದಂತಸ್ತಿನ ಪ್ರವೇಶದ್ವಾರ ಥಟ್ಟನೆ ಗಮನ ಸೆಳೆಯುತ್ತೆ. ಗಾಳಿ ಮಳೆಗಳ ಪ್ರಭಾವಕ್ಕೆ ಐದನೇ ಅಂತಸ್ತು ಅರ್ಧ ಕುಸಿದಿದ್ದರೂ ತನ್ನ ಕೆಳಗಿನ ಅಂತಸ್ತುಗಳು ಪೂರ್ಣ ಕುಸಿಯದಂತೆ ಕಾಯೋ ಛತ್ರಿಯಾಗಿದೆ ಅದು. ದೇಗುಲವೆಂದರೆ ಒಂದು ಮಹಡಿಯ ದೇಗುಲಗಳು ಎಲ್ಲೆಡೆ ಸಾಮಾನ್ಯ. ಆದರೆ ಇಲ್ಲಿ ಹಾಗಲ್ಲ. ಅಚ್ಯುತರಾಯ ದೇಗುಲದ ಎರಡನೇ ಮಹಡಿಯಲ್ಲಿದ್ದ ಗಾರೆಯ ರಚನೆಗಳು ಅಲ್ಲೋ ಇಲ್ಲೋ ಒಂದಿಷ್ಟು ಉಳಿದುಕೊಂಡು ದೇಗುಲಕ್ಕೆ ಎರಡು ಮಹಡಿಗಳಿರಬಹುದಾದ ಸಾಧ್ಯತೆಯನ್ನು ತಿಳಿಸುತ್ತಿವೆ. ಮೇಲಕ್ಕೆ ಹತ್ತಿಹೋಗೋ ಮೆಟ್ಟಿಲುಗಳು ಎಲ್ಲೂ ಕಾಣದಿದ್ದರೂ ಎರಡನೇ ಮಹಡಿಯಲ್ಲಿ ದೇಗುಲದ ಸೌಂದರ್ಯವನ್ನು ಇಮ್ಮಡಿಗೊಳಿಸುವಂತಹ ಸುಂದರ ರಚನೆಗಳ ಹೊರಾಂಗಣವಿದ್ದಿರಬಹುದಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.  
One of the entrace to Achutaraya temple

ಅಚ್ಯುತರಾಯ ದೇಗುಲದ ಗರ್ಭಗೃಹ, ಅಂತರಾಳಗಳನ್ನು ಸದ್ಯ ಸರಳುಗಳಿರೋ ಬಾಗಿಲಿಂದ ಮುಚ್ಚಲಾಗಿದ್ದರೂ ಅದರ ಸುತ್ತಲಿನ ಶುಕನಾಸಿ, ರಂಗಮಂಟಪ, ಮಹಾರಂಗಮಂಟಪಗಳಲ್ಲಿನ ಕೆತ್ತನೆಗಳ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳಬಹುದು. ಮುಂದೊಮ್ಮೆ ದೇಗುಲದ ಜೀರ್ಣೋದ್ದಾರವಾಗಿ ಸಾರ್ವಜನಿಕರ ದರ್ಶನಕ್ಕೆ ತೆರೆಯಲ್ಪಡಬಹುದೆಂಬ ಭರವಸೆಯಲ್ಲಿ ದೇಗುಲದ ಪ್ರದಕ್ಷಿಣೆಯಲ್ಲಿ ತೊಡಗಿದೆವು. ಸದ್ಯ ದೇಗುಲದ ಹೊರಭಾಗದಲ್ಲಿ ತ್ರಿಕೋನಾಕೃತಿಯಲ್ಲಿ ಆಧಾರಕೊಟ್ಟು ಬಿದ್ದಿರಬಹುದಾದ ದೇಗುಲವನ್ನು ಎತ್ತಿ ನಿಲ್ಲಿಸಿರಬಹುದಾದ ಕುರುಹುಗಳಿದೆಯಾದರೂ,ಅಚ್ಚುಕಟ್ಟಾಗಿ ಹುಲ್ಲು ಕತ್ತರಿಸಿ ಪ್ರದಕ್ಷಿಣಾ ಪಥವನ್ನು, ಹೊರಾಂಗಣದಾಚೆಗೆ ರಕ್ಷಣಾಬೇಲಿಯನ್ನು ನಿರ್ಮಿಸಲಾಗಿದೆಯಾದರೂ ಗರ್ಭಗೃಹವಿಲ್ಲದ ದೇಗುಲದ ಜೀರ್ಣೋದ್ದಾರ ಅಪೂರ್ಣವೆಂದೇ ಅನಿಸುತ್ತಿತ್ತು ಯಾಕೋ. ದೇಗುಲದ ಎಡಕ್ಕೆ ದೇವಿ ಮಂದಿರವಿದ್ದರೆ ಸುತ್ತಲೂ ಕಂಬಗಳ ಪಡಸಾಲೆಯಿದೆ.ಅಚ್ಯುತರಾಯನ ಪ್ರವೇಶದ್ವಾರಕ್ಕೆ ಜಯ ವಿಜಯರ ಸ್ವಾಗತವಿದ್ದರೆ ಸುತ್ತಲಿನ ಕಂಬಗಳಲ್ಲಿ ಸಿಂಹಗಳ, ಯುದ್ದಾಶ್ವಗಳ ಕೆತ್ತನೆ. ಪ್ರದಕ್ಷಿಣಾ ಪಥದಲ್ಲಿನ ಗೂಡುಗಳೆಲ್ಲಾ ಖಾಲಿಯಿದ್ದಿದ್ದು ಯಾಕೋ ಆಭಾಸವೆನಿಸಿತು. ಯಾವ ಮೂರ್ತಿಯೂ ಇಲ್ಲದೇ ಖಾಲಿ ಗೂಡನ್ನು ಯಾರೂ ಮಾಡಿರಲಾರರು !. ಅಲ್ಲಿದ್ದ ಮೂರ್ತಿಗಳು ಯಾವ ಕಳ್ಳಕಾಕರ ಮನೆ ಸೇರಿದೆಯೋ ಆ ಮೂರ್ತಿಗಳೇ ಹೇಳಬೇಕು. ಹಂಪಿಯ ಕಲ್ಲುಗಳಿಗೆ ಮಾತು ಬರುತ್ತಿದ್ದರೆ ಅವುಗಳ ಕಾಪಾಡಿ ಕಾಪಾಡಿ ಎಂಬ ಆರ್ತನಾದ ಅದೆಷ್ಟು ಶತಮಾನಗಳ ಕಾಲ ಗುಂಯ್ಗುಡುತ್ತಿತ್ತೋ ಎಂದೆನಿಸಿ ಕರುಳು ಚುರುಕ್ಕೆನಿಸಿತೊಮ್ಮೆ 


ಇಲ್ಲಿರೋ ಬಾಲಗೋಪಾಲ, ನರಸಿಂಹ ಮುಂತಾದ ಪೌರಾಣಿಕ ಶಿಲ್ಪಗಳ ಜೊತೆಗೆ ಹೆಸರೇ ಗೊತ್ತಿರದ ಇದುವರೆಗೆ ಎಲ್ಲೂ ಕಂಡಿರದ ಶಿಲ್ಪಗಳು ಅದೆಷ್ಟೋ. ಅವುಗಳ ಚಿತ್ರ ತೆಗೆದು ನಂತರ ತಿಳಿದಿರಬಹುದಾದ ಜನರ ಬಳಿ ಕೇಳೋಣವೆಂದರೆ ಎಷ್ಟು ಅಂತ ತೆಗೆಯೋದು ?! ಇದನ್ನೆಲ್ಲಾ ನೋಡಿ ಕೌತುಕಪಡಬೇಕಷ್ಟೇ. ಇತಿಹಾಸ, ಸಂಸ್ಕೃತಿಯನ್ನ ಪೂರ್ಣವಾಗಿ ಅರಿಯದ ನನ್ನ ಬಗ್ಗೆ ಅವಮಾನ ಪಡಬೇಕೋ, ಹಂಪಿಯಲ್ಲೆಲ್ಲಾ ಗಿಜಿಗಿಜಿಗುಡೋ ಒಬ್ಬೇ ಒಬ್ಬ ಗೈಡೂ ಇತ್ತ ಬಂದು ಇಲ್ಲಿನ ಶಿಲ್ಪಗಳ ಬಗ್ಗೆ ವಿವರಿಸೋಕೆ ಪ್ರಯತ್ನ ಪಡದ ಬಗ್ಗೆ ಬೇಸರ ವ್ಯಕ್ತಪಡಿಸಬೇಕೋ ಅರ್ಥವಾಗದ ದ್ವಂದ್ವದಲ್ಲಿ ದೇಗುಲದಿಂದ ಹೊರಬರುವಷ್ಟರಲ್ಲಿ ಎಲ್ಲಿಂದಲೋ ಒಂದಿಬ್ಬರನ್ನು ಕರೆತಂದ ಆಟೋವಾಲ ಸಿಕ್ಕಿದ. ಅವನತ್ರ ಇದರ ಬಗ್ಗೆ ಕೇಳಿದ್ರೆ, ಹೌದು ಸಾರ್, ಇಲ್ಲಿ ಬರೋರು ತುಂಬಾನೇ ಕಮ್ಮಿ ಅಂತ ಅವನೂ ಬೇಸರ ವ್ಯಕ್ತಪಡಿಸಿದ. ಹೀಗೇ ಮುಂದೆ ಹೋದ್ರೆ ವಿಠಲ ದೇವಸ್ಥಾನ ಸಿಗುತ್ತಲ್ವಾ ಅಂತ ಅವನತ್ರನೂ ಖಚಿತಪಡಿಸಿಕೊಂಡ ನಾವು ಮುಂದೆ ಸಾಗಿದೆವು. ಹೊರ ಪ್ರಾಂಗಣದಲ್ಲಿ ಬಲಮೂಲೆಯಲ್ಲಿದ್ದ ಬನ್ನಿ ಮಂಟಪದಂತಹ ಮಂಟಪ ಏನೆಂದು ತಿಳಿಯಲಿಲ್ಲ. ಉತ್ಸವಗಳ ಸಂದರ್ಭದಲ್ಲಿ ಮೂರ್ತಿಯನ್ನು ಇಲ್ಲಿಟ್ಟು ಪೂಜಿಸುತ್ತಿರಬಹುದು. ದ್ವಾರಪಾಲಕ, ನವಿಲು, ನರಸಿಂಹ ಮುಂತಾದ ಕೆತ್ತನೆಗಳಿರೋ ಮಂಟಪದ ಬಗ್ಗೆ ಇನ್ನಷ್ಟು ತಿಳಿಯೋ ಆಸಕ್ತಿಯಿದ್ದರೂ ಅಲ್ಲಿನ ಮಾಹಿತಿ ಫಲಕದಲ್ಲಿ ಅದರ ಬಗ್ಗೆ ಮಾಹಿತಿಯಿರಲಿಲ್ಲ. ಆ ಬಗ್ಗೆ ಮತ್ತೊಮ್ಮೆ ಮಾಹಿತಿ ಕಲೆಹಾಕಬೇಕಷ್ಟೆ. ದೇವಿ ದೇಗುಲದ ಆವರಣ, ಮಂಟಪಗಳ ರಚನೆಗಳನ್ನು ಗಮನಿಸಿ ಮೂರಂತಸ್ತಿನ ಉತ್ತರದ ಹೊರಪ್ರವೇಶ ದ್ವಾರದ ಮೂಲಕ ಹೊರಬಂದೆವು.

ಅಚ್ಯುತಪೇಟೆ:
ಸೈಕಲ್ ತಗೊಂಡಿದ್ದೇನೋ ಹೌದು. ಆದ್ರೆ ಕಾಲ್ನಡಿಗೆಯಲ್ಲೇ ಸುತ್ತುತ್ತಾ ತಗೊಂಡಿದ್ದು ವೇಸ್ಟ್ ಮಾಡ್ತಾ ಇದ್ದೀವಲ್ಲ. ಸೈಕಲ್ಲಿದ್ದಲ್ಲಿ ವಾಪಾಸ್ ಹೋಗಿ ಉಳಿದ ಸ್ಥಳಗಳನ್ನ ನೋಡೋಣ್ವಾ ಅಂದ ಗೆಳೆಯನೊಬ್ಬ. ಏ, ಬರೋದು ಬಂದಿದೀವಿ. ಇಲ್ಲಿರೋದನ್ನೆಲ್ಲಾ ನೋಡೇ ವಾಪಾಸ್ ಹೋದ್ರಾಯ್ತು ಬಿಡು. ಮತ್ತೆ ಇಲ್ಲಿವರೆಗೆ ಸೈಕಲ್ಲಲ್ಲಿ ಬರೋಕೆ ಅದೆಲ್ಲೆಲ್ಲಿ ಸುತ್ತಿ ಬರಬೇಕೋ ? ಬಂದಾಗ ನೋಡೋ ಬಿಡೋಣ ಬಿಡು ಅಂತ ಮುಂದೆ ಸಾಗಿದ್ವಿ. ಮುಂದೆ ರಾಜಬೀದಿಯಲ್ಲಿ ಸಾಗಿದಂತಹ ಅನುಭವ. ಇಕ್ಕೆಲಗಳಲ್ಲಿ ಮಂಟಪದಂತಹ ರಚನೆಗಳು. ಕಂಬಗಳ ಸಾಲಿನ ಈ ಬೀದಿಗೆ ಅಚ್ಯುತಪೇಟೆ ಎಂದು ಹೆಸರಂತೆ. ಅಚ್ಯುತಪೇಟೆಯ ಮೂಲಕವೇ ಸಾಗಿದರೆ ಒಂದು ಪುಷ್ಕರಿಣಿ ಸಿಗುತ್ತೆ. 

ಅಚ್ಯುತಪೇಟೆಯ ಪುಷ್ಕರಿಣಿ:
ಪೇಟೆಯ ಪಕ್ಕದಲ್ಲಿರೋ ಪುಷ್ಕರಿಣಿಗೆ ಎಲ್ಲಾ ದಿಕ್ಕುಗಳಿಂದಲೂ ಇಳಿಯೋ ಜಾಗಗಳಿವೆ. ಮಧ್ಯದಲ್ಲೊಂದು ಮಂಟಪವಿರೋ ಪುಷ್ಕರಿಣಿಯ ಸ್ವಚ್ಛ ತಿಳಿ ನೀರಿನಲ್ಲಿ ಸುತ್ತಣ ಬಂಡೆಗಳ, ಮಂಟಪದ ಪ್ರತಿಬಿಂಬವನ್ನು ನೋಡೋದೇ ಒಂದು ಆನಂದ. ಇಲ್ಲಿನ ಪುಷ್ಕರಿಣಿಯ ಇನ್ನೊಂದು ವೈಶಿಷ್ಟ್ಯ ಅಂದ್ರೆ ಈಗಿನ ಸ್ವಿಮ್ಮಿಂಗ್ ಪೂಲ್ಗಳಲ್ಲಿ ನೀರಿಗೆ ಡೈವ್ ಮಾಡಲು ಇರೋ ಡೈವಿಂಗ್ ಬೋರ್ಡ್ ತರಹದ ರಚನೆ !! ಪುಷ್ಕರಿಣಿಯ ಒಂದು ಮೂಲೆಯಲ್ಲಿರೋ ಈ ಬಂಡೆಯ ಮೇಲೆ ಹತ್ತಿ ಹೋಗಲು ಮೆಟ್ಟಿಲುಗಳೂ ಇವೆ. ಇದು ಆ ಕಾಲದ ಡೈವಿಂಗ್ ಬೋರ್ಡ್ ಆಗಿತ್ತೋ ಇಲ್ಲವೋ ಅನ್ನೋದನ್ನ ಅವರೇ ಅಥವಾ ಇಲ್ಲಿಂದ ಹಾರಿದ ಸಾಹಸಿಗಳೇ ನಿರೂಪಿಸಬೇಕಾದರೂ ಅಂಥಹಾ ಸಾಹಸಕ್ಕೆ ಕೈ ಹಾಕಲಿಲ್ಲ. ಮೆಟ್ಟಿಲುಗಳ ಹತ್ತಿ ಅಲ್ಲಿನ ವಿಹಂಗಮ ನೋಟವನ್ನು ಆಸ್ವಾದಿಸಿ ಕೆಳಗಿಳಿದು ಬಂದೆ. ಈ ಪುಷ್ಕರಿಣಿಯ ಸುತ್ತಲಿನ ಕಂಬಗಳಲ್ಲಿ ನಾಗಮಂಡಲ, ನರಸಿಂಹ, ಸಿಂಹ, ಮೇಕೆ ಮುಂತಾದ ಪ್ರಾಣಿಗಳ ಕೆತ್ತನೆಗಳಿವೆ. 
Puskarini near Achuta Bazar


ವರಾಹ ದೇವಸ್ಥಾನ:
ಪುಷ್ಕರಿಣಿಯಿಂದ ಮುಂದೆ ಸಾಗುತ್ತಿತ್ತಂತೆ ಸುಮಾರಷ್ಟು ದೇಗುಲಗಳು ಗೋಚರಿಸತೊಡಗುತ್ವೆ. ಅದರಲ್ಲಿ ಮೊದಲನೆಯದು ವರಾಹ ದೇವಸ್ಥಾನ. ಒಂದಂತಸ್ತಿನ ವರಾಹದೇಗುಲದ ಪ್ರವೇಶದ್ವಾರ ಒಂದೆಡೆ ಪೂರ್ಣ ಸೀಳುಬಿಟ್ಟು ಆತಂಕ ಹುಟ್ಟಿಸುತ್ತಿತ್ತು ! ಅದನ್ನು ದಾಟಿ ಮುನ್ನಡೆದರೆ ವರಾಹದೇಗುಲ. ಇಲ್ಲಿ ಗರ್ಭಗೃಹವಿದ್ದು ಅದರಲ್ಲಿ ಮೂರ್ತಿಯಿದ್ದರೂ ಅಲ್ಲಿದ್ದಿದು ಶಿವಲಿಂಗ ಮತ್ತು ಎದುರಿಗಿದ್ದುದು ನಂದಿ. ಅಂದರೆ ಇದು ಶಿವದೇಗುಲ, ವಿಷ್ಣುವಿನದಲ್ಲ ! ಅದರ ಹಿಂದೆ ಕಾಣುತ್ತಿದ್ದ ಮತ್ತೊಂದು ದೇಗುಲ ವರಾಹದೇಗುಲವಾಗಿರಬಹುದೇ ? ಎರಡಕ್ಕೂ ಸೇರಿಸಿ ವರಾಹ ದೇಗುಲ ಅಂತ ಬೋರ್ಡ್ ಹಾಕಿರಬಹುದೇ ಪುಣ್ಯಾತ್ಮರು ಅನಿಸಿತೊಮ್ಮೆ. ಹಿಂದಿದ್ದ ದೇಗುಲ ಕಾಣುತ್ತಿದ್ದರೂ ಅದರತ್ತ ಹೋಗದಂತೆ ತಡೆಯುತ್ತಿದ್ದು ಈ ದೇಗುಲದ ಪ್ರಾಗಂಣವನ್ನು ದಾಟೋ ದಾರಿ ಕಾಣದೇ, ಹಿಂದಿದ್ದ ದೇಗುಲಕ್ಕೆ ಮತ್ತೆಲ್ಲಿಂದಾದರೂ ಮತ್ತೆ ದಾರಿ ಸಿಗಬಹುದೇನೋ ಎಂದೆಣಿಸಿ ಮುಂದೆ ಸಾಗಿದೆವು .
Varaha temple, hampi

ಮುಂದೆಂತೂ ಕಣ್ಣು ಹಾಯಿಸಿದತ್ತೆಲ್ಲಾ ದೇಗುಲಗಳು, ಮಂಟಪಗಳು. ಒಂದಕ್ಕೂ ಬೋರ್ಡಿಲ್ಲ, ಮಾಹಿತಿಫಲಕವಿಲ್ಲ! ಕಲ್ಲುಗಳ ಕಟ್ಟಿ ಮಿನಿ ಬೆಟ್ಟವನ್ನೇ ನಿರ್ಮಿಸಿದ್ದ ದೇಗುಲವೊಂದರ ಮೆಟ್ಟಿಲುಗಳ ಹತ್ತಿ ಅದರಲ್ಲಿರೋ ಅನಂತಶಯನನ ದರ್ಶನ ಪಡೆದೆವು. ಪಕ್ಕದಲ್ಲಿದ್ದ ಮಂಟಪದ ಖಾಲಿ ಗರ್ಭಗೃಹದಿಂದ ಅದ್ಯಾವುದೆಂದು ತಿಳಿಯಲಿಲ್ಲ. ದೇಗುಲಗಳ ಬಿಡಿ ನಡೆಯೋ ಹಾದಿಯಲ್ಲೂ ಶಿಲ್ಪಗಳು. ಅಲ್ಲಿದ್ದ ಬಂಡೆಗಳ ಮೇಲಿನ ಹಾದಿಯಲ್ಲಿ ನಡೆಯುತ್ತಿದ್ದರೆ ಕೈಮುಗಿದು ಸ್ವಾಗತ ಕೋರೋ ಅದೆಷ್ಟೋ ಕೆತ್ತನೆಗಳು ನಡೆವ ಹಾದಿಯ ಮೇಲೆ. ಹಾದಿಯಲ್ಲಿ ನಿಲ್ಲಿಸಿದ ಕೆತ್ತನೆಗಳಲ್ಲಿ ಸ್ಮಶಾನ ಭೈರವಿಯಂತಹ ಕೆಲವು ಶಿಲ್ಪಗಳು ಏನೆಂದು ಗೊತ್ತಾದರೆ ಗೊತ್ತಾಗದ ಶಿಲ್ಪಗಳು ಅದೆಷ್ಟೋ. ಎಡಭಾಗದಲ್ಲಿ ಹರಿಯುತ್ತಿರೋ ತುಂಗಭದ್ರೆ. ಅದರಾಚೆ ದಡದಲ್ಲಿ ಮತ್ತದೆಷ್ಟೋ ದೇಗುಲಗಳು ! ಬಲಭಾಗದಲ್ಲೊಂದು ದೇಗುಲದಂತಹ ರಚನೆ ಕಂಡು ಅದರ ಮಂಟಪವನ್ನು ದಾಟಿ ಮುಂದೆ ಸಾಗಿದೆ. ಮೇಲ್ಛಾವಣಿ ಕಿತ್ತು ಹೋಗಿರೋ ಅಥವಾ ಮೇಲ್ಛಾವಣಿಯೇ ಇಲ್ಲದಿದ್ದ ಆ ರಚನೆಯ ಮಧ್ಯದಲ್ಲಿ ಬುದ್ದನಂತಹ ರಚನೆ !! ವಿಜಯನಗರದಲ್ಲಿ ಬುದ್ದನೆಲ್ಲಿ ಬರಬೇಕು ಅಂದಿರಾ ? ಹಿಂದೂ ಮಹರ್ಷಿಗಳಾದರೆ ಜಟೆ, ಗಡ್ಡಗಳ ಕೆತ್ತನೆಯಿರುತ್ತಿತ್ತು. ತಪಸ್ಸಿಗೆ ಕೂತ ಭರತನೋ, ಮಹಾವೀರನೋ, ವಿಜಯನಗರ ಆಸ್ಥಾನದಲ್ಲಿದ್ದ ಯಾವುದೋ ತಪಸ್ವಿಯೋ, ಬುದ್ದನೋ, ಅಥವಾ ಇನ್ಯಾರೋ ಇದು ನಿರ್ಣಯಿಸಬೇಕಾದರೆ ಬೇಕಾಗುವಂತಹ ಆ ಮೂರ್ತಿಯ ತಲೆಯೇ ಇರಲಿಲ್ಲ ! ಇಲ್ಲಿ ದಾಳಿ ಮಾಡಿದ ಪಾಪಿಗಳು ಅದನ್ನೂ ತುಂಡರಿಸಿದ್ದರು ! ಇದೇ ಬೇಸರದಲ್ಲಿ ಮುಂದೆ ಸಾಗಿದಾಗ ಕೆಳಕ್ಕೊಂದು ಗುಹೆ ಮತ್ತೆ ಮೇಲೊಂದು ದೇಗುಲದ ಧರ್ಮಧ್ವಜ, ಎರಡಂತಸ್ತಿನ ಕಲ್ಲ ಮಂಟಪ ಕಾಣಿಸಿತು. ಕೆಳಗಿನ ಗುಹೆಯವರೆಗೆ ಹೋದರೂ ಅಲ್ಲಿನ ಕಿರಿದಾದ ಪ್ರವೇಶದ್ವಾರದ ಒಳಗೆ ಜಾಸ್ತಿ ದೂರ ಹೋಗೋಕೆ ಏನೂ ಕಾಣಲಿಲ್ಲ. ಅಲ್ಲಿನ ಡೆಡ್ ಎಂಡ್ ನೋಡಿ ವಾಪಾಸ್ ಬಂದ ನಾವು ಮೇಲೆ ಕಂಡ ಧ್ವಜಸ್ಥಂಭದ ದೇಗುಲದತ್ತ ಸಾಗಿದೆವು..

 ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ

No comments:

Post a Comment