Saturday, January 7, 2017

ನೂರ್ನಳ್ಳೀಲಿ ಅವ-೬

(ಹಿಂದಿನ ಭಾಗ:)
ಅಲ್ಪಚಂದ್ರನನ್ನು ಮುಚ್ಚೋಕೆ ಹೊರಟಿದ್ದ ಮೋಡಗಳೂ ಉಳಿದ ಹಳ್ಳಿಗರಂತೆ ತಮ್ಮ ಕೆಲಸ ಮರೆತು ಮೇಷ್ಟ್ರ ಮಾತನ್ನು ಕೇಳ್ತಾ ಕೂತಿದ್ದರಿಂದ ನೂರ್ನಳ್ಳಿಯ ಭವಿಷ್ಯದ ಮೇಲಿದ್ದ ಕಾರ್ಮೋಡ ಕೊನೆಗೂ ಸರಿಯೋಕೆ ಶುರುವಾಯ್ತಾ ಅನ್ನುವಂತೆ ಕೃಷ್ಣಪಕ್ಷದ ಕಗ್ಗತ್ತಲ ರಾತ್ರಿಯಲ್ಲೂ ಒಂಚೂರು ಬೆಳದಿಂಗಳಿತ್ತು. ಎಲ್ಲೋ ಒಂದೆರಡು ಬಾವಲಿಗಳು ಅತ್ತಿಂದಿತ್ತ ಹಾರಾಡ್ತಿದ್ದಿದ್ದು ಬಿಟ್ರೆ ಊರಲ್ಯಾರ ಸಂಚಾರವೂ ಇಲ್ಲ. ಬಂದಿದ್ರೂ ಹೋಗಿದ್ರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳೋ ಮೂಡಲ್ಲೂ ಯಾರೂ ಇಲ್ಲ. ಎಲ್ಲರ ಗಮನವೀಗ ಚಂದ್ರೇ ಮೇಷ್ಟರ ಮಾತಿನ ಮೇಲೇ.

ಗೌಡ್ರೆ , ನಾನೆಷ್ಟೇ ಬೇಡ ಅಂದ್ಕೊಂಡ್ರೂ ಒಂದು ಸತ್ಯನ ಹೇಳಲೇಬೇಕಾಗಿದೆ. ದಯವಿಟ್ಟು ತಡೀಬೇಡಿ ನನ್ನನ್ನಿಂದು ಅಂತ ಹೇಳ್ತಾ ಇದ್ರೆ ಗೌಡ್ರಿನ್ನ ಸೇರಿಸಿ ಊರವರೆಲ್ಲರ ಕಣ್ಣುಗಳು ಇನ್ನೂ ಆಶ್ಚರ್ಯ, ಗಾಬರಿಗಳಿಂದ ಮೇಷ್ಟರತ್ತ ನೋಡ್ತಿದ್ವು. ಮೇಷ್ಟರೇ, ನೀವು ಈ ಊರಿಗೆ ಬಂದಾಗಿಂದ ಯಾವತ್ತೂ ಈ ರೀತಿ ಬೇಡಿಕೊಂಡಿದ್ದು ನೋಡಿಲ್ಲ. ಆದರೂ ಈ ರೀತಿ ಕೇಳ್ತಿದ್ದೀರ ಅಂದ್ರೆ ಆ ವಿಷಯ ಏನೋ ಮಹತ್ವದ್ದೇ ಆಗಿರಬೇಕು. ಅದೇನೇ ಇರ್ಲಿ, ಯಾವುದೇ ಭಯವಿಲ್ಲದೇ ಹೇಳಿ ಮೇಷ್ಟರೇ. ಅದು ಈಗಿನ ಸಂದರ್ಭಕ್ಕೆ, ಊರಿಗೆ ಸಂಬಂಧಿಸಿದ್ದಾದರೆ ಅದಕ್ಕೆ ನನ್ನ ಅಭಿಪ್ರಾಯ ಕೇಳೋ ಯಾವ ಅವಶ್ಯಕತೆಯೂ ಇಲ್ಲ. ದಯವಿಟ್ಟು ಮುಂದುವರೆಸಿ ಅಂದ್ರು ಗೌಡ್ರು. ಆದರೆ ಅದು ನಂಬೋ ಶಿಖರದ ವಿಷಯ, ನಂಬೋ ಶಂಕರ, ಸತ್ಯನಾರಾಯಣ ಪೂಜಾರಿ ಮತ್ತು ದೇವಿಯ ವಿಷಯ, ಶಂಖರ, ಅಂಬಿಕಜ್ಜಿಯ ವಿಷಯ.. ಅನ್ನುತ್ತಿದ್ದಂತೆ ಗೌಡರ ಮುಖದಲ್ಲಿದ್ದ ನಗು ನಿಧಾನವಾಗಿ ಮಾಯವಾಗೋಕೆ ಶುರುವಾಯ್ತು.  ಗೌಡ್ರು ತಮ್ಮ ಕೈ ಮೇಲೆತ್ತೋಕೂ ಮೇಷ್ಟರು ಮಾತು ನಿಲ್ಲಿಸೋಕೂ , ಪಂಚಾಯ್ತೀಲಿ ಕೂತವರೊಬ್ಬರ ಮೊಬೈಲು ರಿಂಗಾಗೋಕೂ ಸರಿಯಾಯ್ತು!

*****
ಯಾರೂ ಇಲ್ಲದೆ ಒಂಟಿಯಾಗಿ ಬಾಳೋ ಬದಲು ಸಾವಾದ್ರೂ ನನ್ನ ಕರೆಸಿಕೊಳ್ಳಬಾರದೇ ಅಂತ ಊರ ಮೂಲೆಯಲ್ಲಿರೋ ಅಂಬಿಕಜ್ಜಿ ಕೊರಗ್ತಿದ್ದ ಮಳೆಗಾಲದ ದಿನವೊಂದರಲ್ಲಿ ಅಚಾನಕ್ಕಾಗಿ ಬಂದಿದ್ದವ ಶಂಖರ. ಮಗಳು ದೇವಿ ಬಾರದೇ ಯಾವ ಕಾಲವಾಗಿದ್ರೂ ಅಳಿಯ ಸತ್ಯನಾರಾಯಣ ಅವಾಗವಾಗ ಬರ್ತಿದ್ದ ಊರಿಗೆ. ಅದೆಂತದೋ ಗಣಿಗಾರಿಕೆಯಂತೆ. ಅದಕ್ಕೆ ಊರ ಗೌಡ್ರು, ತನ್ನ ತಂದೆ ಪೂಜಾರಿಗಳು ಮಸಲತ್ತು ಮಾಡ್ತಿರೋದು, ಅದ್ರಿಂದ ಊರಿಗೆ, ಬಾವಿಹೊಳೆಗೆ ಎಷ್ಟು ಅಪಾಯವಾಗತ್ತೆ ಅಂತ ನಾನು, ದೇವಿ ಎಷ್ಟು ಹೇಳಿದ್ರೂ ಕೇಳದೇ ಇರೋದು ಮುಂತಾದ ವಿಷಯಗಳ ಬಗ್ಗೆ ಮಾತಾಡ್ತಿದ್ದ. ಈ ಬಗ್ಗೆ ಒಮ್ಮೆ ಊರ ಪಂಚಾಯ್ತಿಯಲ್ಲೂ ಮಾತಾಡಿ ಅಲ್ಲಿ ಊರವರೆಲ್ಲರ ಎದ್ರಿಗೆ ಗೌಡರು, ಪೂಜಾರಿಗಳು ಅವಮಾನ ಮಾಡಿದ ಮೇಲೆ ಊರು ಏನು ಹಾಳಾದ್ರೂ ನಾನು ಈ ಕಡೆ ತಲೆ ಹಾಕಲ್ಲ ಅಂತ ಬೇಜಾರು ಮಾಡ್ಕೊಂಡ ದೇವಿ ಇಲ್ಲೀವರೆಗೂ ಊರಿಗೆ ಕಾಲಿಟ್ಟಿಲ್ಲ. ಸಣ್ಣಕ್ಕಿದ್ದಾಗ ಅಪ್ಪನ ಜೊತೆ ಬರ್ತಿದ್ದ ಶಂಖರ ಇಲ್ಲಿದ್ದಷ್ಟು ದಿನಗಳಾದ್ರೂ ಖುಷಿಯಿರ್ತಿತ್ತು. ಅವ್ನಿಗೆ ಮುಂದಿನ ರಜ ಯಾವಾಗ ಸಿಗತ್ತೆ ಅಂತ ಕಾಯ್ತಿರುವ ಹಾಗಾಗ್ತಿತ್ತು. ಆದ್ರೆ ಇದ್ದಕ್ಕಿದ್ದ ಹಾಗೆ ಅಳಿಯ, ಮೊಮ್ಮಗ ಬರೋದೂ ನಿಂತು ಹೋಗಿತ್ತು. ಆಮೇಲೆ ಒಂದೆರಡು ಸಲ ಅಳಿಯನಾದ್ರೂ ಬಂದಿರಬಹುದೇನೋ. ಆದ್ರೆ ಮೊಮ್ಮಗನ ಸುದ್ದಿಯಿಲ್ಲ. ಅವನಿಗೂ ಈ ಅಂಬಿಕಜ್ಜಿ ಬೇಡವಾದಳೇ ಅಂದ್ಕೊಳೊ ಹೊತ್ತಿಗೆ ಶಂಖರನೇ ಪ್ರತ್ಯಕ್ಷನಾಗಿದ್ದ. ಎರಡೇ ರಾತ್ರಿ ಮನೆಗೆ ಬಂದಿದ್ರೂ ಅವನ ಜೊತೆ ಮಾತಾಡಿದ್ದು ಎಷ್ಟು ಖುಷಿ ಕೊಟ್ಟಿತ್ತು. ಅವನೂ ಈ ಗಣಿಗಾರಿಕೆ ಬಗ್ಗೆನೇ ಮಾತಾಡ್ತಿದ್ನಪ. ಅಂದಂಗೆ ನಿನ್ನೆ ರಾತ್ರೆ ಇಂದ ಹೇಳದೇ ಕೇಳದೇ ಎಲ್ಲಿ ಹೋದ ಇವ ಅಂತ ? ಊರ ಕಡೆ ಹೋದ್ರಾದ್ರೂ ಯಾರಿಗಾದ್ರೂ ಕೇಳ್ಬೋದೇನೋ. ಹಂಗೇ ಮಾಡನ. ಇವತ್ತು ಸೋಮವಾರ ಬೇರೆ. ಊರ ದೇವಸ್ಥಾನಕ್ಕಾದ್ರೂ ಹೋಗ್ಬರನ ಅಂತ ಸಂಜೆ ಹೊತ್ತಿಗೆ ಅಂಬಿಕಜ್ಜಿ ಊರ ಗುಡಿಯತ್ರ ಹೊರಟ್ರು.

****

ಬಸಣ್ಣ ಆರಾಮಾಗಿದ್ದಾನಂತೆ. ಗಣಿಗಾರಿಕೆಯ ಕ್ವಾರಿ ಹತ್ರ ಹೋಗ್ತಿದ್ದಾಗ ಅಲ್ಲಿಂದ ಸಿಡಿದ ಕಲ್ಲೊಂದು  ತಲೆಗೆ ಬಿದ್ದಿತ್ತಂತೆ. ಪ್ರಜ್ಞೆ ತಪ್ತಾ ಇದ್ದ ಅವನನ್ನ ನಮ್ಮೂರಿಗೆ ಬಂದ ಹೊಸಬ ಈ ಕಡೆ ಎಳೀಲಿಲ್ಲ ಅಂದಿಂದ್ರೆ ಮೇಲಿಂದ ಬೀಳ್ತಿದ್ದ ಇನ್ನೊಂದಿಷ್ಟು ಕಲ್ಲುಗಳು ಬಿದ್ದು ಜೀವಕ್ಕೇ ಅಪಾಯ ಆಗ್ತಿತ್ತಂತೆ . ದೇವರ ದಯ, ಹೆಚ್ಗೆ ಏನೂ ಅಪಾಯ ಆಗಿಲ್ವಂತೆ ಅಂತ ಬಸಣ್ಣನ ಅಮ್ಮ  ಫೋನ್ ಮಾಡಿದ್ರು ಅಂದ ಆಗಷ್ಟೇ ಫೋನ್ ಬಂದ ಬಸಣ್ಣನ ಪಕ್ಕದ ಮನೆಯವ. ಈ ಗಣಿಗಾರಿಕೆ ತುಂಬಾ ಅಪಾಯನಪ್ಪ.  ಮೊನ್ನೆಯಷ್ಟೇ ಊರ ರಸ್ತೆ ಪಕ್ಕ ಒಂದಿಷ್ಟು ಕಲ್ಲು ಜರಿದು ಬಿದ್ದಿತ್ತು. ಬಾವಿಹೊಳೆ ನೀರು ನೋಡಿದ್ರೆ ರಕ್ತ ನೋಡ್ದಂಗಾಗ್ತದೆ  ಅಂತ ನಮ್ಮ ಮನೆ ಹೆಂಗಸ್ರು ಹೇಳ್ತಿದ್ರು ಅಂದ ಒಬ್ಬ. ಇದು ಸರಿ ಇಲ್ಲ ಅಂತ ನಮ್ಮೂರ ದೇವಿ ಮತ್ತು ಸತ್ಯ ಪೂಜಾರಿಗಳು ಎಷ್ಟು ಹೇಳಿದ್ರು. ಯಾರೂ ಕೇಳಿಲ್ಲ. ಅದ್ಯಾರೋ ಸ್ಟೇ ತಂದಿದ್ರಂತೆ. ಅದಕ್ಕೂ ಕಲ್ಲು ಹಾಕಿದ್ರು ಈ ಗೌಡ್ರು ಮತ್ತು ಪೂಜಾರಿಗಳು. ಈಗ ನೋಡಿ. ಈ ನರ ಮನುಷ್ಯರ ಕೈಲಿ ಏನೂ ಆಗಲ್ಲ ಅಂತ ಊರ ಮಾರಮ್ಮ ದೇವಿನೇ ರೊಚ್ಚಿಗೆದ್ದು ಒಬ್ಬೊಬ್ರನ್ನೇ ಬಲಿ ತೆಗೆದುಕೊಳ್ತಿರ್ಬೇಕು ಅಂದ ಮತ್ತೊಬ್ಬ. ದೇವಮ್ಮನ ಊರ ಪಂಚಾಯ್ತಿ ಮುಂದೆ ಅವಮಾನ ಮಾಡಿ, ಕಣ್ಣೀರು ಹಾಕ್ಸಿ ಅವ್ರು ಊರ್ಕಡೆಗೇ ತಲೆ ಹಾಕಕ್ಕಿಲ್ಲ ಅನ್ನಂಗೆ ಮಾಡಿದ್ರಿ. ಆ ಹೆಣ್ಮಗು ಶಾಪ ತಟ್ದೇ ಬಿಡ್ತದಾ ಅಂದ್ರು ಊರ ಹೆಂಗಸೊಬ್ಬರು. ಅದ್ಕೇ ಊರ ಜಾಫರ್ರು, ಪೂಜಾರಿಗಳು ಮಾಯ ಆಗಿರ್ಬೇಕು. ಅದ್ರಲ್ಲಿರೋ ಉಳಿದೋರು ಅಂದ್ರೆ ಗೌಡ್ರೆ. ಮುಂದೈತೆ ಮಾರಿಹಬ್ಬ ಅಂದ. ಹೇ. ತಡೀರಪ್ಪ. ಬಸಣ್ಣನ ನೋಡೋಕೆ ಅಂತ ಪೂಜಾರಿಗಳು, ಜಾಫರ್ ಸಾಹೇಬ್ರೂ ಬಂದಿದ್ರಂತೆ. ಅವ್ರೆಲ್ಲ ಆ ಹೊಸಬನ ಜೊತೆಗೆ ಊರಿಗೆ ಬರ್ತಿದಾರಂತೆ ಅಂದ. ಓ ಹೌದಾ ? ಅವ್ರೆಲ್ಲ ಸತ್ತೋದ್ರು , ಅದ್ಕೆಲ್ಲ ಆ ಹೊಸಬನೇ ಕಾರಣ ಅಂತ ಸುದ್ದಿ ಹರಡಿಸಿದ್ರಲ್ಲಪ್ಪ ಯಾರೋ. ಅವ್ರು ಬದ್ಕಿದಾರಾ ? ಹೇಳ್ದೇ ಕೇಳ್ದೇ ಮಾಯ ಆಗಿದ್ಯಾಕಂತೆ ಅವ್ರು ಅಂದ ಮಗದೊಬ್ಬ. ಅದ್ನೆಲ್ಲ ಫೋನಲ್ಲಿ ಕೇಳಕ್ಕಾಗಿಲ್ಲ. ನಾಳೆ ಬೆಳಗ್ಗೆ ಅವ್ರೆಲ್ಲ ಊರಿಗೆ ಬರ್ತಾರಂತೆ. ಅವಾಗ್ಲೇ ಮಾತಾಡೋಣ ಅಂದ್ಲು ಅವಳು ಅಂದ ಮೊದಲಿನವ. ಹೂಂ , ಮೇಷ್ಟ್ರು ಆ ಹೊಸಬನ ಬಗ್ಗೆ ಏನೋ ಹೇಳೋಕೆ ಹೊರಟಿದ್ರು. ಅದ್ಕೂ ಬಿಡ್ಲಿಲ್ಲ ಗೌಡ್ರು. ತಾವು ಮಾಡಿದ ಕೆಲಸನೆಲ್ಲ ಅವನ ಮೇಲೆ ಹಾಕಿ, ಊರಿಗೆ ಏನೋ ಒಳ್ಳೇದನ್ನ ಮಾಡೋಕೆ ಬಂದಿರೋನ ಬಗ್ಗೆ ಏನೋನೋ ಸುಳ್ಳು ಸುದ್ದಿ ಹಬ್ಸಿ ಅವ್ನಿಗೆ ಕೆಟ್ಟ ಹೆಸ್ರು ತರೋಕೆ ಹೊರಟಿದ್ದಾರೆ. ಇದಕ್ಕೆಲ್ಲ ನಾವು ಬಿಡಕ್ಕಿಲ್ಲ. ಮೇಷ್ಟ್ರೆ , ಅವ್ನು ಯಾರು, ಇಲ್ಲಿಗೆ ಬಂದಿದ್ಯಾಕೆ ಅಂತ ನೀವು ಹೇಳ್ಲೇ ಬೇಕು ಅಂತಂದ ಒಬ್ಬ. ಹೌದು, ಹೇಳ್ಲೇ ಬೇಕು, ಹೇಳ್ಲೇ ಬೇಕು ಅಂತ ಜನ ಒತ್ತಾಯ ಕೂಗೋಕೆ ಶುರು ಮಾಡಿದ್ರು.

ಸದ್ದು ಸದ್ದು ಅಂತ ಗೌಡ್ರು ಮತ್ತು ಮೇಷ್ಟ್ರು ಎಲ್ರನ್ನೂ ಸಮಾಧಾನ ಮಾಡೋ ಹೊತ್ತಿಗೆ ಮತ್ತೊಂದಿಷ್ಟು ಸಮಯ ಆಯ್ತು. ಸದ್ದು ಕಮ್ಮಿ ಆದ್ಮೇಲೆ ಗೌಡ್ರೇ ಮಾತಿಗೆ ಶುರು ಮಾಡಿದ್ರು. ನೋಡ್ರಪ್ಪ, ಇದ್ರ ಬಗ್ಗೆ ಮಾತಾಡದೇ ನಾನು ನಿಮ್ಮೆಲ್ಲರ ದೃಷ್ಟೀಲಿ ಅಪರಾಧಿ ಆಗ್ತಾ ಇದ್ದೀನಿ. ಆಗೋದೇನು. ನಾನು ಅಪರಾಧಿನೇ ಅಂದ್ರು ಗೌಡ್ರು. ಗೌಡರಿಂದ ಈ ತರದ ಮಾತುಗಳನ್ನ ಯಾವತ್ತೂ ಕೇಳದ ಜನ ಆಶ್ಚರ್ಯದಿಂದ ಅವರ ಮಾತುಗಳನ್ನು ಕೇಳೋಕೆ ಶುರು ಮಾಡಿದ್ರು. ನಿಶ್ಯಬ್ದ ಇನ್ನೂ ಜಾಸ್ತಿ ಆಯ್ತು.  ಇನ್ನು ನಿಮ್ಮಿಂದ ಸತ್ಯ ಮುಚ್ಚಿಟ್ಟು ಯಾವ ಪ್ರಯೋಜನವೂ ಇಲ್ಲ. ನಾ ಹೇಳ್ಬೇಕು ಅಂತಿದ್ದನ್ನ ನನ್ಜೊತೆನೇ ಇಟ್ಕೊಂಡು ಸಾಯಕ್ಕಿಂತ ನಿಮ್ಮುಂದೆ ಹೇಳೋದೇ ಮೇಲು ಅನಿಸುತ್ತೆ.ಸತ್ಯ ಯಾವತ್ತಿದ್ರೂ ನಿಮ್ಮುಂದೆ ಬಂದೇ ಬರತ್ತೆ. ಆದ್ರೆ ಊರ ಗೌಡನಾಗಿ ನಾ ಇವತ್ತೂ ನಿಮ್ಮುಂದೆ ಇದ್ರ ಬಗ್ಗೆ ಹೇಳ್ಲಿಲ್ಲ ಅಂದ್ರೆ ನೀವು ನನ್ನ ಮೇಲಿಟ್ಟ ಗೌರವಕ್ಕೆ ದ್ರೋಹ ಮಾಡಿದಂಗಾತ್ತೆ. ನಾ ಹೇಳೋದ್ನೆಲ್ಲ ಹೇಳಿ ಬಿಡ್ತೀನಿ. ಆಮೇಲೆ ಅದಕ್ಕೆ ಯಾವ ಶಿಕ್ಷೆ ಕೊಡ್ಬೇಕು ಅಂತ ನೀವೆಲ್ಲಾ ನಿರ್ಧರಿಸ್ತೀರೋ ಅದನ್ನ ಸ್ವೀಕರಿಸೋಕೆ ನಾನು ಸಿದ್ದ ಅಂದ್ರು ಗೌಡ್ರು. ಜನ ಕೇಳ್ತಾ ಇದ್ರು..ಗಣಿಗಾರಿಕೆ ಅವ್ರು ಏನೋ ಒಂದಿಷ್ಟು ದುಡ್ಡು ಕೊಡ್ತಾರೆ ಅಂತ ಇಲ್ಲಿವರೆಗೆ ಮಣ್ಣು ತಿನ್ನೋ ಕೆಲ್ಸ ಮಾಡ್ತಿದ್ವಿ. ಇದ್ರಿಂದ ನಮ್ಮ ನಂಬೋಶಿಖರದ ಮೇಲೆ, ಬಾವಿಹೊಳೆ ಮೇಲೆ , ಊರಿಗೆ ಊರಿನ ಮೇಲೆ ಕೆಡುಕಾಗತ್ತೆ ಅಂತ ದೇವಿ, ಸತ್ಯ ಪೂಜಾರಿಗಳು ಗಿಳಿಗೆ ಹೇಳ್ದಂಗೆ ಹೇಳಿದ್ರೂ ಕೇಳ್ಲಿಲ್ಲ. ಗಣಿಗಾರಿಕೆಗೆ ಸಹಾಯ ಆಗ್ಲಿ ಅಂತ ಪೂಜಾರಿಗಳ ಜೊತೆ ಸೇರಿ ಮಾರಮ್ಮನ ದೇವಸ್ಥಾನನೇ ಸ್ಥಳಾಂತರ ಮಾಡಿದ್ವಿ. ಅದ್ಯಾರೋ ಶಂಕರ ಅನ್ನೋರು ಇದಕ್ಕೆ ಸ್ಟೇ ತರೋಕೆ ಪ್ರಯತ್ನ ಮಾಡಿದ್ರಂತೆ ಅನ್ನೋ ಹೊತ್ತಿಗೆ "ಅದ್ಯಾರೋ ಶಂಕರ ಅಲ್ಲ. ನನ್ನ ಮೊಮ್ಮಗ ಶಂಕರ" ಅನ್ನೋ ಧ್ವನಿ ಹಿಂದಿಂದ ಕೇಳಿ ಬಂತು. ತಿರುಗಿ ನೋಡಿದ್ರೆ ಅಂಬಿಕಜ್ಜಿ ! ಸ್ವಲ್ಪ ಹೊತ್ತಿನ ಮುಂಚೆಯಷ್ಟೇ ದೇವಸ್ಥಾನಕ್ಕೆ ಅಂತ ಬಂದೋರು ಇಲ್ಲಿ ನಡೀತಿದ್ದ ಸಭೆ ನೋಡಿ ಇಲ್ಲಿಗೆ ಬಂದಿದ್ರು. ಹೂಂ. ನನ್ನ ಮೊಮ್ಮಗ ಶಂಕರನೇ ಅನಿಸುತ್ತೆ ಹಿಂದಿನ ಸಲ ಸ್ಟೇ ತರೋಕೆ ಪ್ರಯತ್ನ ಮಾಡಿದ್ದು. ಊರ ಜನರಿಗೆ ಮಸಲತ್ತು ಮಾಡಿ, ಊರಿಗೆ ಗಣಿಗಾರಿಕೆಯಿಂದ ಯಾವ ನಷ್ಟವೂ ಇಲ್ಲ. ಅದಕ್ಕೆ ನಮ್ಮ ಒಪ್ಪಿಗೆ ಇದೆ ಅಂತ ಸಹಿ ಹಾಕಿಸಿದ್ರಲ್ಲ ಗೌಡ್ರೆ ಅಂದ್ರು ಅಂಬಿಕಜ್ಜಿ. ನಾವು ಆ ತರದ ಪತ್ರಕ್ಕೆ ಸಹಿ ಹಾಕಿಲ್ವಲ್ಲ ಅಂದ್ರು ಕೆಲೋರು. ಗೌಡ್ರು ಕೊಟ್ಟ ಪತ್ರ ಅಂತ ಕಣ್ಣು ಮುಚ್ಕೊಂಡು ಸಹಿ ಹಾಕಿದ್ರಲ್ಲಪ್ಪ. ಅದ್ರಲ್ಲೇನಿದೆ ಅಂತ ಓದಿ ಓದಿ ಅಂತ ಎಷ್ಟು ಬಡ್ಕೊಂಡ್ವಿ. ನಾವೆಂತೂ ಹೆಬ್ಬೆಟ್ಟು. ನೀವೆಲ್ಲಾ ಓದಿದ್ರೂ ಹೆಬ್ಬೆಟ್ಟುಗಳಾದ್ರಲ್ಲೋ ಅಂದ್ರು ಅಲ್ಲೇ ಕೂತಿದ್ದ ಹೆಂಗಸೊಬ್ಬರು. ಗೌಡರ ಮೋಸಗಳು ಒಂದೊಂದೇ ಹೊರಗೆ ಬರ್ತಿದ್ದ ಹಾಗೆ ಜನರಿಗೆ ಗೌಡರ ಮೇಲಿನ ಗೌರವಗಳು ಇಳಿದು ಹೋಗಿ ಯದ್ವಾತದ್ವಾ ಸಿಟ್ಟು ಬರತೊಡಗಿತು. ತಲೆಗೊಂದೊಂದು ಧಿಕ್ಕಾರದ ಘೋಷಣೆಗಳನ್ನ ಕೂಗತೊಡಗಿದರು.

ಈಗ ಜನರನ್ನ ಸಮಾಧಾನ ಪಡಿಸೋ ಸರದಿ ಮೇಷ್ಟ್ರುದ್ದಾಗಿತ್ತು. ಗೌಡರು ಏನೂ ಹೇಳಲಾಗದೇ ಅಪರಾಧಿ ಪ್ರಜ್ಞೆಯಿಂದ ತಲೆ ತಗ್ಗಿಸಿ ಕುಳಿತಿದ್ರು. ಅವ್ರು ಹೇಳ್ತಿದ್ದನ್ನ ಮುಗಿಸೋಕೆ ಬಿಡ್ರಪ್ಪ. ಆಮೇಲೆ ಏನು ಮಾಡ್ಬೇಕು ಅನ್ನೋದನ್ನ ಆಮೇಲೆ ನೋಡಣ ಅಂದ್ರು ಮೇಷ್ಟು. ಸರಿ ಮೇಷ್ಟ್ರೆ. ನೀವು ಹೇಳ್ತಿದೀರಿ ಅಂತ ಬೆಲೆ ಕೊಟ್ಟು ಇಲ್ಲಿಗೆ ಸುಮ್ನಾಗ್ತಿದ್ದೀವಿ. ಇಲ್ಲಾಂದ್ರೆ ಇವ್ರನ್ನ ಇಲ್ಲೇ ಒಂದು ಕೈ ನೋಡ್ಕೋತಿದ್ವಿ ಅಂತ ಜನ ಸುಮ್ಮನಾದ್ರು. ಗೌಡ್ರು ಮಾತು ಮುಂದುವರೆಸಿದ್ರು. ನಮ್ಮ ಶಂಕರ, ಅದೇ ಸತ್ಯನಾರಾಯಣ ಪೂಜಾರಿ ಮತ್ತು ದೇವಮ್ಮನ ಮಗ, ಅದೇ ನಮ್ಮ ಅಂಬಿಕಜ್ಜಿಯ ಮೊಮ್ಮಗ ಶಂಕರನಿಗೆ ನಮ್ಮೂರ ಬಗ್ಗೆ ಅದೆಷ್ಟು ಪ್ರೀತಿ. ತಾಯಿಗೆ ಅವಮಾನ ಮಾಡಿದ್ರೂ, ತಂದೆಯ ಮಾತಿಗೆ ಬೆಲೆ ಕೊಡದಿದ್ರೂ ಈ ಊರನ್ನ ಗಣಿಗಾರಿಕೆಯಿಂದ ರಕ್ಷಿಸೋಕೆ ಅಂತ ಪಾಪ ಅದೆಷ್ಟು ಓಡಾಡ್ತಿದ್ದಾನೆ. ಅವನೇ ಸ್ಟೇ ತಂದಿರ್ಬೇಕು ಅಂತ ನನಗೀಗ ಗೊತ್ತಾಯ್ತು. ಗಣಿಗಾರಿಕೆಯವ್ರು ಅವನನ್ನ ಕೊಲೆನೇ ಮಾಡ್ತೀವಿ ಅಂತ ಹೆದರಿಸಿದ್ರೂ ಆತ ಹೆದರ್ಲಿಲ್ವಂತೆ ಅನ್ನೋ ಹೊತ್ತಿಗೆ. ಕೊಲೆನಾ ಅಯ್ಯೋ ದೇವ್ರೆ ಅಂತ ಅಂಬಿಕಜ್ಜಿ ಗಾಬರಿ ಬಿದ್ರು. ಅವ್ರ ಪಕ್ಕ ಕೂತಿದ್ದ ಹೆಂಗಸ್ರು , ಹಂಗೇನಾಗಲ್ಲ ಅಜ್ಜಿ, ನಾವಿಲ್ವಾ ಅಂತ ಅವ್ರನ್ನ ಸಮಾಧಾನ ಪಡಿಸೋಕೆ ಶುರು ಮಾಡಿದ್ರು. ಹೂಂ. ನಂಬೋಶಿಖರದತ್ರ ಡೈನಮೈಟ್ ಇಡ್ಬೇಡಿ ಅಂತ ಅವ ಹೇಳಿದ್ದಕ್ಕೆ ಅವ್ರು ಕೇಳದೇ ಇದ್ದಿದ್ದು, ಅವನ್ನ ಹೆದ್ರಿಸೋಕೆ ಅಂತ ಅವ್ರು ಗುಂಡು ಹಾರ್ಸಿದ್ದು ಎಲ್ಲಾ ಆಯ್ತು ಅಂತ ಅವ್ರು ನಿನ್ನೆ ಹೇಳ್ತಾ ಇದ್ರು. ಯಾರೋ ಹೊಸಬ ಬಂದು ತೊಂದ್ರೆ ಕೊಡ್ತಿದ್ದಾನೆ ಅವ್ನ ಹೆಂಗಾದ್ರೂ ಮಾಡಿ ಓಡ್ಸಿ ಊರಿಂದ ಅಂತ ಕೇಳ್ತಾ ಇದ್ರು ಅವ್ರು. ದುಡ್ಡಿನ ಪ್ರಶ್ನೆ. ಬಂದವ ನಮ್ಮವನೇ ಅನ್ನೋದ್ನೂ ವಿಚಾರ ಮಾಡ್ದೇ ಅವನ ಬಗ್ಗೆ ಅಪಪ್ರಚಾರ ಮಾಡ್ಸಿದೆ . ನನ್ನ ಕ್ಷಮಿಸಿ ಬಿಡ್ರಪ್ಪ. ಆದ್ರೆ ಈಗ ಆಗಿರೋ ತಪ್ಪಿನ ಅರಿವಾಗಿದೆ. ಗಣಿಗಾರಿಕೆಗೆ ಮತ್ತೆ ಸ್ಟೇ ತರಿಸಿ, ಆಗಿರೋ ತಪ್ಪನ್ನ ಸರಿ ಮಾಡ್ಕೊಳ್ಳೋಕೆ ಒಂದು ಅವಕಾಶ ಕೊಡ್ರಪ್ಪ ಅಂತ ಗೌಡ್ರು ಕೈ ಮುಗಿದು ಮಾತು ನಿಲ್ಸಿದ್ರು. ಊರವರಿಗೆ ನೋಡಿ ಸಾಮಾನ್ಯವಾಗಿದ್ದ ಕೆಂಡವುಗುಳೋ ಕಣ್ಣಂಚಲ್ಲಿ ಇಂದು ನೀರು ತುಂಬಿತ್ತು.

ನೀವೇನೋ ಮಾಡಿರೋ ತಪ್ಪನ್ನ ಒಪ್ಕೊಂಡ್ರಿ ಕೊನೆಗೂ. ಮೊಮ್ಮಗನ ಮೇಲಿನ ಮಮಕಾರಕ್ಕೋ, ದೇವರ ಮೇಲಿನ ಪಾಪಪ್ರಜ್ಞೆಗೋ ಪೂಜಾರಿಗಳೂ ತಪ್ಪು ಒಪ್ಕೊಬೋದು. ಆದ್ರೆ ಇದಕ್ಕೂ ಜಾಫರ್ ಸಾಹೇಬ್ರಿಗೂ ಏನು ಸಂಬಂಧ ಅಂದ ಒಬ್ರು. ಇದೆ ಸಂಬಂಧ ಇದೆ. ಊರ ರಸ್ತೇಲೇ ಇರೋ ಅಂಗಡಿಯ ಜಾಫರ್ ಸಾಹೇಬ್ರಿಗೆ ಈ ಊರಿಗೆ ಯಾರು ಬರ್ತಾರೆ, ಹೋಗ್ತಾರೆ ಅನ್ನೋದನ್ನ ನೋಡೋದು ಕಷ್ಟದ ಕೆಲಸವೇನಲ್ಲ. ಅವ್ರೂ ಈ ಗಣಿಗಾರಿಕೆ ಮೇಲೆ ಕಣ್ಣಿಟ್ಟಿದ್ರು ಅನ್ಸತ್ತೆ. ಈ ಗಣಿಗಾರಿಕೆ ಅವ್ರು ಯಾವುದಕ್ಕೋ ಪರ್ಮಿಟ್ ತಗೊಂಡು ಇನ್ನೇನೋ ಮಾಡ್ತಿದ್ರಾ ಅಥವಾ ಈ ತರದ್ದು ಇನ್ನೇನೋ ಮಾಡ್ತಿದ್ರಾ ಅಂತ ಅವ್ರಂಗಡಿಗೆ ಚಾ ಕುಡಿಯೋಕೆ ಬಂದ ಗಣಿಗಾರಿಕೆ ಕೆಲಸದವ್ರಿಂದನೋ, ಲಾರಿಯವ್ರಿಂದನೋ ಗೊತ್ತಾಗಿರ್ಬೇಕು. ಅವ್ರು ಒಬ್ಬೊಬ್ರೆ ಗಣಿಗಾರಿಕೆ ಕಡೆ ಹೋಗಿದ್ದನ್ನೂ ನೋಡಿದ್ದೀನಿ. ಯಾಕೆ ಅಂದಾಗ ಸದ್ಯಕ್ಕೇನೋ ಕೇಳ್ಬೇಡಿ ಗೌಡ್ರೆ. ಇದ್ರಿಂದ ನಮಗಿಬ್ರಿಗೂ ಅಪಾಯ ಅಂತಿದ್ರು ಜಾಫರ್ ಸಾಹೇಬ್ರು ಅಂತ ಮೇಷ್ಟ್ರು ಹೇಳೋ ಹೊತ್ತಿಗೆ ಅವ್ರತ್ರ ಏನಾದ್ರೂ ಸಾಕ್ಷ್ಯ ಇರಬಹುದು ಅಂತ ಗೌಡ್ರೇ ಅವ್ರನ್ನ ಮಾಯ ಮಾಡೋಕೆ ಪ್ರಯತ್ನ ಮಾಡಿರ್ಬೇಕು ಅಂದ ಒಬ್ಬ.  ಅಥವಾ ಗೌಡ್ರು ಏನಾದ್ರೂ ಮಾಡೋ ಮೊದಲೇ ಅವರನ್ನ ಉಳಿಸ್ಕೊಳ್ಳೋಣ ಅಂತ ನಮ್ಮ ಶಂಕರ ಅವ್ರನ್ನ ಪಟ್ಟಣಕ್ಕೆ ಕಳ್ಸಿರ್ಬೇಕು ಅಂದ ಮತ್ತೊಬ್ಬ.  ಹೂಂ. ಹಂಗಾಗಿರ್ಬೋದು , ಹಿಂಗಾಗಿರ್ಬೋದು ಅಂತ ಊಹಿಸೋದೇ ಆಗೋಯ್ತಲ್ಲಪ್ಪ. ನಾಳೆ ಬೆಳಿಗ್ಗೆ ಹೆಂಗಿದ್ರೂ ಅವ್ರೆಲ್ಲಾ ಬರ್ತಿದ್ದಾರೆ. ಏನಾಯ್ತು ಅಂತ ಅವ್ರನ್ನೇ ಕೇಳೋಣ ಬಿಡಿ ಅಂದ್ರು ಮೇಷ್ಟ್ರು. ಹೂಂ. ಹೂಂ. ಅಂದ್ರು ಜನರೆಲ್ಲಾ. ಹಾಗೇ ನಾಳೆ ಬೆಳಿಗ್ಗೆ ಅವ್ರೆಲ್ಲಾ ಬಂದಾಗ ಮತ್ತೊಂದು ಸಲ ಸಭೆ ಸೇರೋಣ. ಈ ಗಣಿಗಾರಿಕೆನ ನಿಲ್ಸೋದು ಹೇಗೆ ಅಂತ ಶಂಕರನತ್ರ ಮಾತಾಡಿ ಅದಕ್ಕೆ ಬೇಕಾದ ಕ್ರಮ ಕೈಗೊಳ್ಳೋಣ ಏನಂತೀರಪ್ಪಾ ಅಂದ್ರು ಮೇಷ್ಟ್ರು. ಹೂಂ. ತಪ್ಪು ಮಾಡಿದ ಗೌಡ್ರಿಗೆ, ಪೂಜಾರಿಗಳಿಗೆ ಏನು ಶಿಕ್ಷೆ ಕೊಡ್ಬೇಕು ಅಂತಾನು ನೋಡ್ಬೇಕು ಅಂದ ಒಬ್ಬ. ಸತ್ಯಪ್ಪ, ದೇವಮ್ಮ, ಶಂಕ್ರನ್ನ ಕರೆಸಿ ಅವ್ರನ್ನ ಇಷ್ಟು ದಿನಾನು ಸರಿಯಾಗಿ ನಡೆಸಿಕೊಳ್ದೇ ಇರೋದಕ್ಕೆ ಕ್ಷಮೇನೂ ಕೇಳ್ಬೇಕು ಅಂದ್ರು ಇನ್ನೊಬ್ರು. ಹೂಂ. ಸರಿ ಸರಿ. ಅದ್ನೆಲ್ಲ ನಾಳೆ ನೋಡೋಣ. ಹೊತ್ತು ಸುಮಾರಾಯ್ತೀಗ . ಸಂಜೆ ಕಳೆದು ಮಧ್ಯರಾತ್ರಿ ಆಗ್ತಾ ಬಂತು. ಬೆಳಗ್ಗೆ ಹತ್ತರೊತ್ತಿಗೆ ಎಲ್ರೂ ಇಲ್ಲೇ ಸಿಗನ ಬಿಡ್ರಪ್ಪ. ಸರಿನಾ ಅಂದ್ರು. ಸರಿ ಮೇಷ್ಟೇ ಅಂತ ಊರವರೆಲ್ಲಾ ಮನೆಗಳ ಕಡೆಗೆ ಹೊರಡೋಕೆ ದೊಂದಿ, ಬ್ಯಾಟರಿಗಳನ್ನ ಸಿದ್ಧ ಮಾಡತೊಡಗಿದರು..

****
ನೂರ್ನಳ್ಳಿಗೇನೋ ಬಂದ ಶಂಕರ
ಗಣಿಗಾರಿಕೆ ತಡ್ಯೋಕೆ, ಕಾಡನ್ನ ಉಳ್ಸೋಕೆ
ಸಾಯ್ತಿರೋ ಬಾವಿಹೊಳೆ, ಕರಗ್ತಿರೋ ನಂಬೋಶಿಖರ
ಸದ್ದಿಲ್ಲದೆ ಮಾಯವಾಗ್ತಿದ್ದ ಅದೆಷ್ಟೋ ಜೀವಿಗಳ ಕಾಯೋಕೆ

ಸಾಯಹೊರಟಿದ್ದು ಕಾಡಲ್ಲವಿಲ್ಲಿ , ನಾಡ ಜನರ ನಂಬಿಕೆ, ಸ್ವಂತಿಕೆ
ಅಂಧವಿಶ್ವಾಸಕ್ಕೆ, ಕುರುಡು ಕಾಂಚಾಣಕ್ಕೆ, ಗಾಳಿಮಾತನ ನಂಬೋ
ನೂರ್ನಳ್ಳಿಯ ಜನರ ಮೌಢ್ಯತೆ
ಬಂದ ಶಂಕರನಿಲ್ಲಿ , ಬರಲಾರನೆಲ್ಲೆಡೆಗು
ಮುಗ್ಧ ಮನಗಳ ಬದಲಿಸೋಕೆ

ಸತ್ಯ, ದೇವಿಯ ತಾಣ, ಶಂಕರನ ಅಂಗಣವು
ಬಸವ ವಾಹನನಾಗೆ, ಚಂದ್ರ ತಲೆಗೆ
ಸುಡುವ ಬಿಸಿ ಜಾಫರನು , ಸಾವಿರದ ಗಣಗಳಲಿ
ನಿಂತಿಹರು ಲಯಕರ್ತನಂಕಣದಲಿ

ನೀ ಬದುಕೆ ಕೊಲ್ಲದಿರು ಕಾಡನ್ನು ಓ ಮನುಜ
ಸಹಬಾಳ್ವೆಯೇ ಜೀವ , ಅರಿತು ಬಾಳು
ಬಾಳೊಂದು ಬೆಳಕಾಗೆ,ನೂರೊಂದು ಮನಗಳಿಗೆ
ಪ್ರಕೃತಿಯ ದೀಪ ಬೇಕೆನುತ  ಬಾಳು

*** ಸಮಾಪ್ತಿ **
ಸೂ: ಜಾಫರ್ ಅನ್ನೋ ಪದಕ್ಕೆ ಏಪ್ರಿಲ್, ಮೇ, ಜೂನ್ಗಳನ್ನು ಒಳಗೊಳ್ಳೋ spring , ಧೃಡಕಾಯ ಅನ್ನೋ ಅರ್ಥಗಳೂ ಇವೆ.

No comments:

Post a Comment